ಬೆಂಗಳೂರು: ಮೂರನೇ ದಿನವೂ ತುಪ್ಪದ ಬೆಡಗಿ ರಾಗಿಣಿ ಸಿಸಿಬಿ ಪೊಲೀಸರ ವಿಚಾರಣೆ ವೇಳೆ ಕಿರಿಕ್ ಮುಂದುವರೆಸಿದ್ದಾರೆ. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆ ಪಕ್ಕದಲ್ಲಿರುವ ಮಹಿಳಾ ಸಾಂತ್ವನ ಕೇಂದ್ರದಲ್ಲಿರುವ ನಟಿ ರಾಗಿಣಿ ದ್ವಿವೇದಿಯನ್ನು ಸಿಸಿಬಿ ಅಧಿಕಾರಿಗಳಾದ ಅಂಜುಮಾಲಾ ನಾಯಕ್ ನೇತೃತ್ವದ ತಂಡ ಸತತ 3 ಗಂಟೆ ವಿಚಾರಣೆ ನಡೆಸಿತು. ಆದರೆ ವಿಚಾರಣೆಗೆ ರಾಗಿಣಿ ಸ್ಪಂದಿಸಲೇ ಇಲ್ಲ.
ಏನೇ ಕೇಳಿದ್ರು ಗೊತ್ತಿಲ್ಲ ಎನ್ನುತ್ತಿದ್ದಾಳೆ ಎಂದು ಸಿಸಿಬಿ ಉನ್ನತ ಮೂಲಗಳು ಮಾಹಿತಿ ನೀಡಿವೆ. ಈ ಹಿನ್ನೆಲೆಯಲ್ಲಿ ಅಂಜುಮಾಲಾ ನೇತೃತ್ವದ ತಂಡ ಸಾಂತ್ವನ ಕೇಂದ್ರದಿಂದ ಸಿಸಿಬಿ ಕಚೇರಿಗೆ ವಾಪಸ್ಸಾಗಿದೆ.
ಸಿಸಿಬಿ ಅಧಿಕಾರಿಗಳಿಂದ ಮಾಸ್ಟರ್ ಪ್ಲ್ಯಾನ್..!
ಸ್ಯಾಂಡಲ್ವುಡ್ ಡ್ರಗ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 12 ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಈಗಾಗಲೇ ರಾಗಿಣಿ ಸೇರಿದಂತೆ ಕೆಲವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಆದರೆ, ರಾಗಿಣಿ ವಿಚಾರಣೆಗೆ ಸಹಕಾರ ನೀಡದೇ ಇರುವುದು ಹಾಗೂ ನಾಳೆ ಕಸ್ಟಡಿ ಅಂತ್ಯವಾಗುತ್ತಿರುವ ಹಿನ್ನೆಲೆಯಲ್ಲಿ ಅಧಿಕಾರಿಗಳು ಮಾಸ್ಟರ್ ಪ್ಲ್ಯಾನ್ಗೆ ಸಿದ್ಧತೆ ನಡೆಸಿದ್ದಾರೆ.
ರಾಗಿಣಿಯನ್ನು ಮತ್ತೆ ಕಸ್ಟಡಿಗೆ ಪಡೆಯುವ ನಿಟ್ಟಿನಲ್ಲಿ ಈಗಾಗಲೇ ಆರೋಪಿಗಳ ಒಂದಷ್ಟು ಹೇಳಿಕೆ ದಾಖಲಿಸಿಕೊಂಡಿರುವ ಸಿಸಿಬಿ ಅಧಿಕಾರಿಗಳು ಎಲ್ಲರ ಹೇಳಿಕೆ ಅಧರಿಸಿ ಮುಂದಿನ ಕಾರ್ಯತಂತ್ರ ರೂಪಿಸಲು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಇಂದು ತಡರಾತ್ರಿವರೆಗೆ ಎಲ್ಲರ ಹೇಳಿಕೆ ಆಧಾರದ ಮೇಲೆ ಸಭೆ ನಡೆಸಿ ರಾಗಿಣಿಯನ್ನು ಮತ್ತೆ ಕಸ್ಟಡಿಗೆ ಪಡೆಯುವ ನಿಟ್ಟಿನಲ್ಲಿ ಕಾರ್ಯತಂತ್ರ ರೂಪಿಸಲಿದ್ದಾರೆ ಎನ್ನಲಾಗಿದೆ.
ರಾಗಿಣಿ ವಿರುದ್ಧ ಡ್ರಗ್ಸ್ ಸೇವನೆ ಹಾಗೂ ಮಾರಾಟದಂತಹ ಎನ್ಡಿಎಂಎ ಪ್ರಕರಣ ಪ್ರಕರಣಗಳು ದಾಖಲಾಗಿರುವ ಹಿನ್ನೆಲೆಯಲ್ಲಿ ನಾಳೆ ರಾಗಿಣಿಗೆ ಜಾಮೀನು ಸಿಗುವುದು ಅನುಮಾನ. ಜೊತೆಗೆ ರಾಗಿಣಿ ವಿಚಾರಣೆಗೆ ಸಹಕಾರ ನೀಡುತ್ತಿಲ್ಲ ಎಂಬುದನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ಮಂಡಿಸಿ ಮತ್ತೆ ಹೆಚ್ಚಿನ ದಿನಗಳ ಕಾಲ ಕಸ್ಟಡಿಗೆ ನೀಡುವಂತೆ ಮನವಿ ಮಾಡಲು ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.
ಹೀಗಾಗಿ ರಾಗಿಣಿ ಕಿರಿಕ್ ತಂತ್ರಕ್ಕೆ ಪ್ರತಿತಂತ್ರ ರೂಪಿಸಿ ಆಕೆಗೆ ಜಾಮೀನು ಸಿಗದಂತೆ ಮಾಡಲು ಸಿಸಿಬಿ ಅಧಿಕಾರಿಗಳು ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.