ಮನೆಗೋಡೆ ಕುಸಿದು ಗುಡಿಸಲಿನಲ್ಲಿದ್ದ ದಂಪತಿ ಜೀವಂತ ಸಮಾಧಿ
ಮೂರು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಮನೆ ಗೋಡೆ ಕುಸಿದು ಯುವ ದಂಪತಿಗಳಿಬ್ಬರು ಮೃತಪಟ್ಟಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೋಕಿನಲ್ಲಿ ನಡೆದಿದೆ.
ತಾಲ್ಲೂಕಿನ ಚಿಕ್ಕ ಸಿದ್ದವ್ವನಹಳ್ಳಿಯ ಗ್ರಾಮದ ಹೋ. ಚಿ. ಬೋರಯ್ಯನಹಟ್ಟಿಯಲ್ಲಿ ಈ ಘಟನೆ ನಡೆದಿದೆ. ದಂಪತಿಗಳಾದ ಚೆನ್ನಕೇಶವ (26), ಸೌಮ್ಯ (20) ಮೃತ ಪಟ್ಟ ದುರ್ದೈವಿಗಳು. ಚೆನ್ನಕೇಶವ ಅವರ ತಂದೆ ಕ್ಯಾತಣ್ಣ (55) ಎಂಬುವವರು ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಚಿತ್ರದುರ್ಗ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕ್ಯಾತಣ್ಣ ದಂಪತಿಗೆ ಇಬ್ಬರು ಪುತ್ರರಿದ್ದು ಚಿಕ್ಕಮಗನೊಂದಿಗೆ ಕ್ಯಾತಣ್ಣ ವಾಸ ಮಾಡುತ್ತಿದ್ದರು. ಮನೆ ಪಕ್ಕದ ಗುಡಿಸಲಿನಲ್ಲಿ ಚೆನ್ನಕೇಶವ ಹಾಗೂ ಸೌಮ್ಯ ಜೀವನ ಕಟ್ಟಿಕೊಂಡಿದ್ದರು. ಭಾನುವಾರ ನಸುಕಿನ ಜಾವ ಮನೆ ಗೋಡೆ ಕುಸಿದು ಗುಡಿಸಲಿನ ಮೇಲೆ ಬಿದ್ದ ಕಾರಣ ದಂಪತಿಗಳು ಜೀವಂತ ಸಮಾಧಿಯಾಗಿರುವ ಅವಘಡ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಐಮಂಗಲ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೋಲಿಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು..