ಟಿ- 20 ಕ್ರಿಕೆಟ್ -ಗುಡುಗಿದ ಸೂರ್ಯ.. ಮಿಂಚಿದ ಭುವಿ.. ಟೀಮ್ ಇಂಡಿಯಾಗೆ ತಲೆಬಾಗಿದ ಶ್ರೀಲಂಕಾ
ಸಂಘಟಿತ ಆಟವನ್ನಾಡಿದ ಟೀಮ್ ಇಂಡಿಯಾ ಮೊದಲ ಟಿ-ಟ್ವೆಂಟಿ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 38 ರನ್ ಗಳಿಂದ ಪರಾಭವಗೊಳಿಸಿತು.
ಟೀಮ್ ಇಂಡಿಯಾ ಪರ ಸೂರ್ಯ ಕುಮಾರ್ ಯಾದವ್ ಆಕರ್ಷಕ 50 ರನ್ ಮತ್ತು ನಾಯಕ ಶಿಖರ್ ಧವನ್ ಅವರ 46 ರನ್ ದಾಖಲಿಸಿದ್ರೆ, ಬೌಲಿಂಗ್ ನಲ್ಲಿ ಭುವನೇಶ್ವರ್ ಕುಮಾರ್ ನಾಲ್ಕು ವಿಕೆಟ್ ಉರುಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಕೊಲೊಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ಟೀಮ್ ಇಂಡಿಯಾವನ್ನು ಮೊದಲು ಬ್ಯಾಟಿಂಗ್ ಗೆ ಆಹ್ವಾನಿಸಿತ್ತು.
ಆದ್ರೆ ಟೀಮ್ ಇಂಡಿಯಾ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಪಂದ್ಯದ ಮೊದಲ ಎಸೆತದಲ್ಲೇ ಪೃಥ್ವಿ ಶಾ ಅವರು ಡಕೌಟಾದ್ರು. ನಂತರ ನಾಯಕ ಧವನ್ ಜೊತೆ ಸೇರಿದ ಸಂಜು ಸಾಮ್ಸನ್ 27 ರನ್ ದಾಖಲಿಸಿ ಪೆವಿಲಿಯನ್ ದಾರಿ ಹಿಡಿದ್ರು. ಅಲ್ಲದೆ ಎರಡನೇ ವಿಕೆಟ್ ಗೆ 51 ರನ್ ಕಲೆ ಹಾಕಿದ್ರು.
ನಂತರ ಧವನ್ ಜೊತೆ ಸೇರಿದ ಸೂರ್ಯಕುಮಾರ್ ಯಾದವ್ ಲಂಕಾ ಬೌಲರ್ ಗಳಿಗೆ ಸವಾಲಿಗೆ ಪರಿಣಮಿಸಿದ್ರು. ಜೊತೆಗೆ ಶಿಖರ್ ಧವನ್ ಜೊತೆ ಮೂರನೇ ವಿಕೆಟ್ ಗೆ 62 ರನ್ ಗಳನ್ನು ಕೂಡ ಕಲೆ ಹಾಕಿದ್ರು. ಈ ಹಂತದಲ್ಲಿ 46 ರನ್ ಗಳಿಸಿದ್ದ ಧವನ್ ನಿರಾಸೆಯೊಂದಿಗೆ ಪೆವಿಲಿಯನ್ ಸೇರಿಕೊಂಡ್ರು.
ನಂತರ 34 ಎಸೆತಗಳಲ್ಲಿ ಐದು ಬೌಂಡರಿ ಮತ್ತು ಎರಡು ಸಿಕ್ಸರ್ ಗಳ ನೆರವಿನಿಂದ ಭರ್ತಿ 50 ರನ್ ಗಳಿಸಿದ್ದ ಸೂರ್ಯ ಹಸರಂಗಗೆ ವಿಕೆಟ್ ಒಪ್ಪಿಸಿದ್ರು. ಹಾಗೇ ಹಾರ್ದಿಕ್ ಪಾಂಡ್ಯ 10 ರನ್ ಗೆ ಸೀಮಿತವಾದ್ರೆ, ಇಶಾನ್ ಕಿಶಾನ್ ಅಜೇಯ 20 ರನ್ ಹಾಗು ಕೃನಾಲ್ ಪಾಂಡ್ಯ ಅಜೇಯ ಮೂರು ರನ್ ಗಳಿಸಿದ್ರು. ಅಂತಿಮವಾಗಿ ಟೀಮ್ ಇಂಡಿಯಾ ನಿಗದಿತ 20 ಓವರ್ ಗಳಲ್ಲಿ ಐದು ವಿಕೆಟ್ ನಷ್ಟಕ್ಕೆ 164 ರನ್ ದಾಖಲಿಸಿತ್ತು.
ಗೆಲ್ಲಲು 165 ರನ್ ಗಳ ಸವಾಲನ್ನು ಬೆನ್ನಟ್ಟಿದ್ದ ಶ್ರೀಲಂಕಾದ ಆರಂಭ ಚೆನ್ನಾಗಿಯೇ ಇತ್ತು. ಆದ್ರೆ 23 ರನ್ ಗಳಿಸುವಷ್ಟರಲ್ಲಿ ಮೊದಲ ವಿಕೆಟ್ ಅನ್ನು ಕೂಡ ಕಳೆದುಕೊಂಡಿತ್ತು. ಮಿನೋದ್ ಭಾನುಕಾ 10 ರನ್, ಆವಿಷ್ಕಾ ಫರ್ನಾಂಡೋ ಹಾಗೂ ಧನಂಜಯ ಡಿ ಸಿಲ್ವಾ 9 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡ್ರು.
ಈ ನಡುವೆ,ಚರಿತ್ ಅಸಲಂಕಾ ಟೀಮ್ ಇಂಡಿಯಾ ಬೌಲರ್ ಗಳನ್ನು ಸ್ವಲ್ಪ ಮಟ್ಟಿಗೆ ಗಲಿಬಿಲಿಗೊಳಿಸಿದ್ರು. 25 ಎಸೆತಗಳಲ್ಲಿ ಮೂರು ಬೌಂಡರಿ ಮತ್ತು ಮೂರು ಸಿಕ್ಸರ್ ಸಹಾಯದಿಂದ 44 ರನ್ ಗಳಿಸಿದ್ದ ಚರಿತ್ ಅವರಿಗೆ ಚಾಹಲ್ ಪೆವಿಲಿಯನ್ ದಾರಿ ತೋರಿಸಿದ್ರು. ಏತನ್ಮಧ್ಯೆ ಆಶೇನ್ ಬಂಡಾರ 9 ರನ್ ಗಳಿಸಿ ಹಾರ್ದಿಕ್ ಗೆ ವಿಕೆಟ್ ಒಪ್ಪಿಸಿದ್ರು. ಹೀಗೆ ನಿಗದಿತ ಅಂತರದಲ್ಲಿ 115 ರನ್ ಗಳಿಗೆಐದು ವಿಕೆಟ್ ಕಳೆದುಕೊಂಡಿದ್ದ ಶ್ರೀಲಂಕಾ 11 ರನ್ ಗಳಿಗೆ ಅಂತಿಮ ಐದು ವಿಕೆಟ್ ಗಳನ್ನು ಕಳೆದುಕೊಂಡಿತು. ಪರಿಣಾಮ ಶ್ರೀಲಂಕಾ 18.3 ಓವರ್ ಗಳಲ್ಲಿ 126 ರನ್ ಗಳಿಗೆ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡಿತು.
ಟೀಮ್ ಇಂಡಿಯಾ ಪರ ಭುವನೇಶ್ವರ್ ಕುಮರ್ 22ಕ್ಕೆ ನಾಲ್ಕು ವಿಕೆಟ್ ಪಡೆದ್ರೆ, ದೀಪಕ್ ಚಾಹರ್ 24ಕ್ಕೆ 2 ವಿಕೆಟ್ ಕಬಳಿಸಿದ್ರು. ಇನ್ನುಳಿದಂತೆ ಚೊಚ್ಚಲ ಪಂದ್ಯವನ್ನಾಡಿದ್ದ ವರುಣ್ ಚಕ್ರವರ್ತಿ ಸೇರಿದಂತೆ ಕೃನಾಲ್ ಪಾಂಡ್ಯ, ಚಾಹಲ್ ಮತ್ತು ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದ್ರು.
ಅದ್ಭುತ ಬೌಲಿಂಗ್ ಪ್ರದರ್ಶನ ನೀಡಿದ ಟೀಮ್ ಇಂಡಿಯಾದ ಉಪ ನಾಯಕ ಭುವನೇಶ್ವರ್ ಕುಮಾರ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಒಲಿದು ಬಂತು.