ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಸದಾ ಸಂಚಲನ ಮೂಡಿಸುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ರಾಜಕೀಯ ಭವಿಷ್ಯದ ಬಗ್ಗೆ ಅವರ ಆಪ್ತ ಸಲಹೆಗಾರರೂ ಆಗಿರುವ ರಾಜಗುರು ದ್ವಾರಕನಾಥ್ ಗುರೂಜಿ ಮತ್ತೊಮ್ಮೆ ಮಹತ್ವದ ಭವಿಷ್ಯ ನುಡಿದಿದ್ದಾರೆ. ಬೆಂಗಳೂರಿನ ಲಿಂಗಧೀರನಹಳ್ಳಿಯಲ್ಲಿ ಹಮ್ಮಿಕೊಳ್ಳಲಾಗಿದ್ದ ಸುಬ್ರಮಣ್ಯ ದೇವಾಲಯದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಅವರು ಪೂರ್ಣ ಐದು ವರ್ಷಗಳ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಲಿದ್ದಾರೆ ಎಂದು ಹೇಳಿದ್ದಾರೆ.
ರಾಮ ಅಯೋಧ್ಯೆ ಗೆದ್ದಂತೆ ಡಿಕೆಶಿ ಕರ್ನಾಟಕ ಗೆದ್ದಿದ್ದಾರೆ
ಈ ಹಿಂದೆ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗುತ್ತಾರೆ ಎಂದು ಭವಿಷ್ಯ ನುಡಿದಿದ್ದ ದ್ವಾರಕನಾಥ್ ಗುರೂಜಿ, ಈಗ ಅವರ ಆಡಳಿತಾವಧಿಯ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಕೇವಲ ಒಬ್ಬ ಸಾಮಾನ್ಯ ಮನುಷ್ಯ, ಎಲ್ಲವನ್ನೂ ದೇವರೇ ನಡೆಸಿಕೊಡುತ್ತಾನೆ. ಹಿಂದೆ ನಾನು ನುಡಿದಿದ್ದ ಭವಿಷ್ಯದಂತೆಯೇ ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿದ್ದಾರೆ. ತ್ರೇತಾಯುಗದಲ್ಲಿ ಶ್ರೀರಾಮನು ಅಯೋಧ್ಯೆಯನ್ನು ತನ್ನ ಕಠಿಣ ಪರಿಶ್ರಮದಿಂದ ಸಂಪಾದಿಸಿದಂತೆ, ಡಿ.ಕೆ. ಶಿವಕುಮಾರ್ ಅವರು ಕೂಡ ಅತ್ಯಂತ ಕಷ್ಟಪಟ್ಟು ಕರ್ನಾಟಕವನ್ನು ಸಂಪಾದಿಸಿದ್ದಾರೆ. ಅವರು ಕೇವಲ ಅಧಿಕಾರಕ್ಕಾಗಿ ಬಂದವರಲ್ಲ, ಜನಸೇವೆ ಮಾಡುವ ಉದ್ದೇಶದಿಂದ ಬಂದವರು ಎಂದು ಗುರೂಜಿ ಬಣ್ಣಿಸಿದರು.
ಐದು ವರ್ಷಗಳ ಕಾಲ ಡಿಕೆಶಿ ಅವರೇ ಸಿಎಂ
ಈಗಿನ ರಾಜಕೀಯ ಬೆಳವಣಿಗೆಗಳ ನಡುವೆಯೇ ಗುರೂಜಿ ನೀಡಿರುವ ಈ ಹೇಳಿಕೆ ರಾಜ್ಯ ರಾಜಕಾರಣದಲ್ಲಿ ಭಾರೀ ಕುತೂಹಲ ಮೂಡಿಸಿದೆ. ಸುಬ್ರಹ್ಮಣ್ಯ ದೇವರೇ ಡಿ.ಕೆ. ಶಿವಕುಮಾರ್ ಅವರ ಹೆಸರಿನಲ್ಲಿ ಬಂದು ಈ ದೇವಸ್ಥಾನದ ಜಾಗವನ್ನು ಕೊಡಿಸಿದ್ದಾನೆ. ಮುಂದಿನ ಐದು ವರ್ಷಗಳ ಪೂರ್ಣ ಅವಧಿಗೆ ಶಿವಕುಮಾರ್ ಅವರೇ ಮುಖ್ಯಮಂತ್ರಿಯಾಗಿ ರಾಜ್ಯದ ಜನರ ಸೇವೆ ಮಾಡಲಿ ಎಂಬುದು ದೇವರ ಇಚ್ಛೆಯಾಗಿದೆ. ಹಿಂದೆ ಮಾಜಿ ಮುಖ್ಯಮಂತ್ರಿ ದೇವರಾಜ್ ಅರಸು ಅವರು ಹೇಗೆ ಸಮಾಜದ ಎಲ್ಲ ವರ್ಗದ ಜನರನ್ನು ಒಳಗೊಂಡು ಆಡಳಿತ ನಡೆಸಿದ್ದರೋ, ಅದೇ ಮಾದರಿಯಲ್ಲಿ ಡಿಕೆಶಿ ಕೂಡ ಎಲ್ಲರನ್ನೂ ಪ್ರೀತಿ ಮತ್ತು ಆದರದಿಂದ ಕಂಡು ಸೇವೆ ಮಾಡುತ್ತಿದ್ದಾರೆ ಎಂದು ಗುರೂಜಿ ಭಾವುಕರಾಗಿ ನುಡಿದರು.
35 ವರ್ಷಗಳ ದೀರ್ಘ ಕಾಲದ ಗುರು ಶಿಷ್ಯರ ಸಂಬಂಧ
ಇದೇ ಸಂದರ್ಭದಲ್ಲಿ ಮಾತನಾಡಿದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದ್ವಾರಕನಾಥ್ ಗುರೂಜಿ ಅವರೊಂದಿಗಿನ ತಮ್ಮ ಸುದೀರ್ಘ ಸಂಬಂಧವನ್ನು ಸ್ಮರಿಸಿಕೊಂಡರು. ನಾನು ರಾಜಕೀಯಕ್ಕೆ ಬರುವ ಮೊದಲೇ ಅಂದರೆ ಸುಮಾರು 35 ವರ್ಷಗಳ ಹಿಂದೆಯೇ ಗುರೂಜಿ ನನಗೆ ಮಾರ್ಗದರ್ಶನ ನೀಡಲು ಆರಂಭಿಸಿದ್ದರು. ಅಂದೇ ನೀನು ಮುಂದೊಂದು ದಿನ ಮುಖ್ಯಮಂತ್ರಿಯಾಗುತ್ತೀಯಾ ಎಂದು ಅವರು ಭವಿಷ್ಯ ನುಡಿದಿದ್ದರು. ಕಳೆದ ಐದಾರು ವರ್ಷಗಳಿಂದ ನಮ್ಮ ಮನೆದೇವರಾದ ತಿರುಪತಿಗೆ ಹೋಗಲು ಸಾಧ್ಯವಾಗಿರಲಿಲ್ಲ, ಆಗ ಅವರೇ ನನಗೆ ಅಲ್ಲಿಗೆ ಹೋಗಿ ಬರುವಂತೆ ಸೂಚಿಸಿದ್ದರು ಎಂದು ಡಿ.ಕೆ. ಶಿವಕುಮಾರ್ ತಿಳಿಸಿದರು.
ಅನೇಕ ಬಾರಿ ಮಾಧ್ಯಮದವರು ಗುರೂಜಿ ಅವರಿಗೆ ಮುಜುಗರ ತರುವಂತಹ ಪ್ರಶ್ನೆಗಳನ್ನು ಕೇಳಿದ್ದರು. ನೀವು ಡಿಕೆಶಿ ಸಿಎಂ ಆಗ್ತಾರೆ ಅಂದಿದ್ರಿ, ಆದರೆ ಅವರು ಆಗಿಲ್ಲವಲ್ಲ ಎಂದು ಹಂಗಿಸಿದ್ದರು. ಅದಕ್ಕಾಗಿ ಗುರೂಜಿ ಅವರು ಅನೇಕ ಬೆದರಿಕೆ ಹಾಗೂ ಒತ್ತಡಗಳನ್ನು ಎದುರಿಸಿದ್ದಾರೆ. ಆದರೆ ಯಾವುದಕ್ಕೂ ಅಂಜದ ಅವರು ತಮ್ಮ ಜ್ಞಾನದ ಮೇಲೆ ವಿಶ್ವಾಸವಿಟ್ಟಿದ್ದರು. ದೇವರಾಜ ಅರಸು, ಎಸ್.ಎಂ. ಕೃಷ್ಣ ಹಾಗೂ ವಿಲಾಸ್ ರಾವ್ ದೇಶಮುಖ್ ಅಂತಹ ದೈತ್ಯ ನಾಯಕರಿಗೆ ಮಾರ್ಗದರ್ಶನ ನೀಡಿದ್ದ ದ್ವಾರಕನಾಥ್ ಗುರೂಜಿ ಅವರು ಜ್ಞಾನದ ಗಣಿ ಎಂದು ಶಿವಕುಮಾರ್ ಕೊಂಡಾಡಿದರು.








