ಒಂದು ವೋಟಿಗಾಗಿ 2 ಸಾವಿರ : ಬಿಜೆಪಿ ವಿರುದ್ಧ ಸಿದ್ದು ಆರೋಪ
ಬೆಂಗಳೂರು : ಹಾನಗಲ್ ಹಾಗೂ ಸಿಂದಗಿ ಉಪಚುನಾವಣೆಯಲ್ಲಿ ಬಿಜೆಪಿಯವರು ಹಣದ ಹೊಳೆ ಹರಿಸುತ್ತಿದ್ದಾರೆ.
ಬಿಜೆಪಿಯವರು ವೋಟಿಗಾಗಿ 2000 ರುಪಾಯಿ ಕೊಡುತ್ತಿದ್ದಾರೆ ಎಂದು ಮಾಹಿತಿ ಬಂದಿದೆ.
ಸ್ವತಃ ಕ್ಷೇತ್ರದ ಜನರು ಮಾತನಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಅಭಿವೃದ್ಧಿ ಕೆಲಸಗಳಿಗಾಗಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿಲ್ಲ.
ಹಣದ ಬಲದಿಂದ, ಅಧಿಕಾರದ ಆಸೆಗಾಗಿ ಅಧಿಕಾರಕ್ಕೆ ಬಂದಿದೆ. ಅವರಿಗೆ ಜನರ ಸಂಕಷ್ಟಕ್ಕೆ ಸ್ಪಂದಿಸುವುದು, ಸಮಸ್ಯೆ ಬಗೆಹರಿಸುವುದು ಯಾವುದೂ ಬೇಕಿಲ್ಲ.
ಕೊರೊನಾ ಸೋಂಕಿನಿಂದ ಮಡಿದವರಿಗೆ ಪರಿಹಾರ ಘೋಷಿಸಿದರು. ಆದರೆ ಪರಿಹಾರ ನೀಡಿದರೇ ಎಂದು ಪ್ರಶ್ನಿಸಿದ್ದಾರೆ.
ಇನ್ನು ಬಿಜೆಪಿಯವರು ಎರಡು ವರ್ಷದಿಂದ ಆಡಳಿತ ನಡೆಸುತ್ತಿದ್ದಾರೆ, ಆದ್ರೆ ಈವರೆಗೂ ಒಂದೇ ಒಂದು ಯೋಜನೆಯನ್ನು, ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆಯೇ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ರು.
ಇದೇ ವೇಳೆ ಬಿಜೆಪಿ ಏನೇ ಕಸರತ್ತು ಮಾಡಿದರೂ ಉಪಚುನಾವಣೆಯಲ್ಲಿ ಎರಡೂ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.