ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರಿದಿದ್ದು, ಸಿಕ್ಕ ಸಿಕ್ಕವರ ದೇಹ ಹೊಕ್ಕುತ್ತಿದೆ. ಇಷ್ಟು ದಿನ ಕೊರೊನಾ ನಿಯಂತ್ರಣಕ್ಕಾಗಿ ಕೆಲಸ ಮಾಡಿದ ಕೊರೊನಾ ವಾರಿಯರ್ಸ್ ಗೂ ಈಗ ಸೋಂಕು ತಗುಲುತ್ತಿದ್ದು, ಇದುವರೆಗೆ ರಾಜ್ಯದಲ್ಲಿ 226 ಪೊಲೀಸ್ ಸಿಬ್ಬಂದಿ ಕೊರೊನಾಗೆ ತುತ್ತಾಗಿದ್ದಾರೆ.
ಬೆಂಗಳೂರಿನಲ್ಲಿ 190 ಪೊಲೀಸ್ ಸಿಬ್ಬಂದಿಯಲ್ಲಿ ಸೋಂಕು ಕಾಣಿಸಿದೆ. ಇವರಲ್ಲಿ 76 ಮಂದಿ ಚಿಕಿತ್ಸೆ ಪಡೆದು ಕೊರೊನಾದಿಂದ ಗುಣಮುಖರಾಗಿದ್ದಾರೆ. ಐವರು ಮೃತಪಟ್ಟಿದ್ದಾರೆ.
ಇನ್ನು ರಾಜ್ಯದಾದ್ಯಂತ ಇದುವರೆಗೆ ಒಟ್ಟು 9,378 ಪೊಲೀಸ್ ಸಿಬ್ಬಂದಿಯ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. 56 ಪೊಲೀಸ್ ಠಾಣೆಗಳನ್ನು ಸೀಲ್ ಡೌನ್ ಮಾಡಲಾಗಿದೆ. ಈ ಬೆಳವಣಿಗೆಯಿಂದ ಕೊರೊನಾ ವಾರಿಯರ್ ಗಳಾದ ಪೊಲೀಸರಲ್ಲಿ ಭೀತಿ ಶುರುವಾಗಿದೆ.
ಕೊರೊನಾ ಪಸರಿಸುವಿಕೆ ನಿಯಂತ್ರಿಸಲು ರಾಜ್ಯ ಸರ್ಕಾರ ರಾತ್ರಿ ಹೊತ್ತು ಕರ್ಫ್ಯೂ ಜಾರಿಗೊಳಿಸಿದೆ. ಭದ್ರತೆ ಮತ್ತು ಮಾಸ್ಕ್ ಹಾಕದೆ ನಿಯಮ ಉಲ್ಲಂಘಿಸುವವರ ಮೇಲೆ ಕ್ರಮ ಕೈಗೊಳ್ಳುವುದು. ಜೊತೆಗೆ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಪೊಲೀಸರಿಗೆ ಸವಾಲಾಗಿದೆ. ಹೀಗಾಗಿ, ಠಾಣೆಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿ ವಿನಾಕಾರಣ ಸಾರ್ವಜನಿಕರನ್ನು ಭೇಟಿಯಾಗುವುದು ಬೇಡ ಎಂದು ರಾಜ್ಯ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಸೂಚಿಸಿದ್ದಾರೆ.