ಬೆಂಗಳೂರು : ಮುಂದಿನ ದಿನದಲ್ಲಿ ಕೆಂಪು ಕೋಟೆಯಲ್ಲಿ ನಾವು ಭಾಷಣ ಮಾಡುತ್ತೇವೆ. ನಮ್ಮ ಪಕ್ಷವೇ ಅಧಿಕಾರ ಹಿಡಿಯಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಇಂದು 74 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಕಾಂಗ್ರೆಸ್ ಭವನದಲ್ಲಿ ಪಕ್ಷದ ವತಿಯಿಂದ 200 ಅಡಿ ಉದ್ದದ ರಾಷ್ಟ್ರಧ್ವಜ ಪ್ರದರ್ಶನ ಮಾಡುವ ಮೂಲಕ ಆಚರಿಸಲಾಯಿತು.
ಕಾಂಗ್ರೆಸ್ ಭವನದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಶಿವಕುಮಾರ್, ಇಂದು ಸಂವಿಧಾನದ ಅಪಚಾರ ಹೆಚ್ಚಾಗುತ್ತಿದೆ. ಅಂಬೇಡ್ಕರ್ ಬಗ್ಗೆ ಬಿಜೆಪಿಯವರಿಗೆ ಕಿಂಚಿತ್ತೂ ಗೌರವ ಇಲ್ಲ. ಅಂಬೇಡ್ಕರ್ ಸಂವಿಧಾನ ಬದಲಿಸಲು ಬಿಜೆಪಿ ಮುಂದಾಗಿದೆ. ದೇಶ ತುಂಡು ತುಂಡು ಮಾಡುವ ಸಂಚು ನಡೆಯುತ್ತಿದೆ. ಕೋಮುವಾದದ ವಿಷ ಬೀಜ ಬಿತ್ತಲಾಗುತ್ತಿದೆ ಎಂದು ಬಿಜೆಪಿ ವಿರುದ್ಧ ಗಂಭೀರ ಆರೋಪ ಮಾಡಿದರು.
ಮುಂದುವರಿದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ ಶಿವಕುಮಾರ್, ನಮಗೆ ಮತಾಂತರ, ಕೋಮುದ್ವೇಷಗಳಿಂದ ಸ್ವಾತಂತ್ರ್ಯ ಬೇಕಾಗಿದೆ. ಇಂದು ಸಂವಿಧಾನಕ್ಕೆ ಅಪಚಾರವಾಗುತ್ತಿದೆ. ಸಂವಿಧಾನ ಅಳಿಸುವ ಮೇಲಾಟ ನಡೆದಿದೆ. ಸಂವಿಧಾನದ ಮೇಲೆ ಬಿಜೆಪಿಯವರಿಗೆ ಕನಿಷ್ಠ ಬೆಲೆಯಿಲ್ಲ. ಸಂವಿಧಾನ ಸುಡಲು ಹೊರಟವರು ಅವರು. ಕೋಮುವಾದಿಗಳಿಂದ ಸ್ವಾತಂತ್ರ್ಯ ಪಡೆಯಬೇಕಿದೆ. ಕೋಮುವಾದ, ದ್ವೇಷ ಬೀಜ ಬಿತ್ತುತ್ತಿದ್ದಾರೆ. ಇಂತ ವಾತಾವರಣವನ್ನ ಬಿಜೆಪಿ ಸೃಷ್ಟಿಸುತ್ತಿದೆ. ಈ ವಿಷ ಬೀಜವನ್ನ ನಾವು ಕಿತ್ತು ಹಾಕಬೇಕಿದೆ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಕರೆಕೊಟ್ಟರು.
ನಾವು ಹೋರಾಟದ ಮೂಲಕವೇ ಸ್ವಾತಂತ್ರ್ಯ ಪಡೆಯಬೇಕಿದೆ. ದೇಶದಲ್ಲಿನ ತಿಕ್ಕಾಟವನ್ನ ತೊಡೆಯಬೇಕಿದೆ. ರಾಷ್ಟ್ರದಲ್ಲಿ ಮತ್ತೊಂದು ಬದಲಾವಣೆ ತರಬೇಕಿದೆ. ಮುಂದಿನ ದಿನದಲ್ಲಿ ಕೆಂಪುಕೋಟೆಯಲ್ಲಿ ನಾವು ಭಾಷಣ ಮಾಡ್ತೇವೆ. ನಮ್ಮ ಪಕ್ಷವೇ ಅಧಿಕಾರ ಹಿಡಿಯಲಿದೆ. ಅದಕ್ಕೆ ನಾವು ಇಲ್ಲಿಂದಲೇ ಧ್ವನಿ ನೀಡಬೇಕಿದೆ. ಯುವಜನತೆಯ ಮೂಲಕ ಹೋರಾಟ ಮಾಡಬೇಕಿದೆ. ಗಾಂಧಿಯವರ ತತ್ವಗಳನ್ನ ನಾವು ಅನುಸರಿಸಬೇಕು. ಸ್ವಾತಂತ್ರ್ಯಕ್ಕಾಗಿ ಪ್ರಾಣ ಕೊಟ್ಟವರನ್ನ ಸ್ಮರಿಸಿಕೊಳ್ಳಬೇಕು. ಅಸಮಾನತೆ ನಿವಾರಿಸಿ ಸಮಾನತೆ ಸಾಧಿಸಬೇಕು. ಪ್ರಜಾಪ್ರಭುತ್ವದ ಮೌಲ್ಯಗಳನ್ನ ಎತ್ತಿಹಿಡಿಯಬೇಕು. ಕಾಂಗ್ರೆಸ್ ಜನ್ಮತಾಳಿದ್ದೇ ಸ್ವಾತಂತ್ರ್ಯಕ್ಕಾಗಿ. ದೇಶದ ಐಕ್ಯತೆಯನ್ನ ನಾವು ಇಂದು ಉಳಿಸಬೇಕಿದೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.








