ಈ ಬಾರಿ ಸಾಹಿತ್ಯ ಸಮ್ಮೇಳನದಲ್ಲಿ ಒಂದೇ ವೇದಿಕೆ | ಸಮಾನಾಂತರ ವೇದಿಕೆಗಳಿಲ್ಲ
ಬೆಂಗಳೂರು: ಈ ಬಾರಿ ಜರಗುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪ್ರಧಾನ ವೇದಿಕೆಯಲ್ಲಿ ಮಾತ್ರ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ. ಮಹೇಶ್ ಜೋಶಿ ಹೇಳಿದ್ದಾರೆ.
86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕುರಿತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸೆಪ್ಟೆಂಬರ್ 23, 24 ಹಾಗೂ 25ರಂದು ಹಾವೇರಿಯ ಜಿ.ಎಚ್. ಕಾಲೇಜು ಸಮೀಪ ಇರುವ ಸುವರ್ಣ ಪತ್ತಿನ ಸಹಕಾರಿ ಸಂಘದ ನಿವೇಶನದಲ್ಲಿ ಸಾಹಿತ್ಯ ಸಮ್ಮೇಳನ ನಡೆಯಲಿದೆ. ಈ ಸಮ್ಮೇಳನ ದಲ್ಲಿ ಕೇವಲ ಒಂದೇ ವೇದಿಕೆಯಲ್ಲಿ ವಿಚಾರಗೋಷ್ಠಿ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಜೋಶಿ ಹೇಳಿದ್ದಾರೆ.
ಮುಂಚೆ ನಡೆದ ಸಮ್ಮೇಳನಗಳಲ್ಲಿ ಪ್ರಧಾನ ವೇದಿಕೆಯ ಜೊತೆಗೆ 2 ಸಮಾನಾಂತರ ವೇದಿಕೆಗಳನ್ನು ನಿರ್ಮಿಸಿ ಅಲ್ಲಿ ವಿಚಾರ ಗೋಷ್ಠಿಗಳನ್ನು ಮಾಡಲಾಗುತ್ತಿತ್ತು.
ಇನ್ನೂ ಸೆ. 24ರಂದು ನಡೆಯಲಿರುವ ಕನ್ನಡ, ಕನ್ನಡಿಗ, ಕರ್ನಾಟಕ ಎನ್ನುವ ವಿಚಾರ ಗೋಷ್ಠಿಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಪಾಲ್ಗೊಳ್ಳಲಿದ್ದಾರೆ. ಈ ಗೋಷ್ಠಿಗೆ ಸಾರ್ವಜನಿಕರಿಗೂ ಅವಕಾಶವಿದ್ದು, ಜನರು ನೇರವಾಗಿ ಮುಖ್ಯಮಂತ್ರಿಗಳೊಂದಿಗೆ ಸಂವಾದ ನಡೆಸಬಹುದು. ಈ ಬಾರಿಯ ಸಮ್ಮೇಳನದಲ್ಲಿ ಮಹತ್ವದ ವಿಷಯವಸ್ತುಗಳನ್ನು ಮಾತ್ರ ಗೋಷ್ಠಿಯಲ್ಲಿ ಚರ್ಚಿಸಲಾಗಿದ್ದು, ಹೊಸದಾಗಿ ಯಕ್ಷಗಾನ, ವೈದ್ಯಕೀಯ, ಚಲನಚಿತ್ರ, ಸಾಹಿತ್ಯಗಳ ಕುರಿತು ಚರ್ಚಿಸಲಾಗುವುದು ಎಂದು ಹೇಳಿದರು.
ಸಾಹಿತ್ಯ ಸಮ್ಮೇಳನದ ಅಂತ್ಯದಲ್ಲಿ ಬರುವ ನಿರ್ಣಯಗಳನ್ನು ಸರ್ಕಾರಕ್ಕೆ ಸಲ್ಲಿಸಿದ ನಂತರ ಅದನ್ನು ಅನುಷ್ಠಾನಕ್ಕೆ ತರುವವರೆಗೂ ಈ ಬಗ್ಗೆ ಮೇಲ್ವಿಚಾರಣೆ ನಡೆಸಲು ಸಮಿತಿ ರಚಿಸಲಾಗುವುದು. ಇನ್ನು ಸಂಪೂರ್ಣ ಸಮ್ಮೇಳನವನ್ನು ಉತ್ತಮ ರೀತಿಯಲ್ಲಿ ನಿಭಾಯಿಸಲು ಒಟ್ಟು 19 ಸಮಿತಿಗಳನ್ನು ರಚಿಸಲಾಗುವುದು.
ಈ ಬಾರಿ 3 ರಿಂದ 5 ಲಕ್ಷ ಜನರನ್ನು ಸಮ್ಮೇಳನಕ್ಕೆ ಅಪೇಕ್ಷಿಸಲಾಗಿದೆ. ಇನ್ನು ಸಮ್ಮೇಳನಕ್ಕಾಗಿ 20 ಕೋಟಿ ರೂ ಅನುದಾನ ಸರ್ಕಾರದಿಂದ ಸಿಗುತ್ತಿದ್ದು, ಜೊತೆಗೆ ರಾಜ್ಯದ ಸರ್ಕಾರಿ ನೌಕರರು ತಮ್ಮ ಒಂದು ದಿನದ ಸಂಬಳವನ್ನು ಪ್ರತೀ ಬಾರಿಯಂತೆ ಸಮ್ಮೇಳನಕ್ಕೆ ನೀಡುತ್ತಿದ್ದಾರೆ ಎಂದು ಹೇಳಿದರು.
86ನೇ ಸಾಹಿತ್ಯ ಸಮ್ಮೇಳನದ ನಿಮಿತ್ತ 86 ಕೃತಿಗಳನ್ನು ಲೋಕಾರ್ಪಣೆ ಮಾಡಲಾಗುವುದು. ಅದರಲ್ಲಿ ತಾಲೂಕು ದರ್ಶನಗಳ ಕುರಿತು 9 ಪುಸ್ತಕ, ಮರೆಯಲಾಗದವರು ಮಾಲಿಕೆಯಡಿ – 9 ಪುಸ್ತಕ, ದಾರಿ ತೋರಿದ ದಾರ್ಶನಿಕರು -4 ಪುಸ್ತಕ, ನಾಡು ಕಟ್ಟಿದವರು- 6 ಪುಸ್ತಕ, ಸಾಂದರ್ಭಿಕ ಹೆಚ್ಚುವರಿ ಪುಸ್ತಕ 2, ಇನ್ನು ಉಳಿದಂತೆ ಸ್ಮರಣ ಸಂಚಿಕೆಗೆ ಸಂಬಂಧಿಸಿದ ಆಯ್ದ ಪುಸ್ತಕಗಳನ್ನು ಪ್ರಕಟಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.