ಲೇಹ್ : ಭಾರತೀಯ ಸೇನಾ ವಾಹನ ಕಂದಕಕ್ಕೆ ಉರುಳಿದ ಪರಿಣಾಮ ಯೋಧರು ಹುತಾತ್ಮರಾಗಿರುವ ಘಟನೆ ದಕ್ಷಿಣ ಲಡಾಖ್ನ (Ladakh) ನ್ಯೋಮಾದಲ್ಲಿ ನಡೆದಿದೆ.
ಘಟನೆಯಲ್ಲಿ 9 ಜನ ಯೋಧರು ಹುತಾತ್ಮರಾಗಿದ್ದಾರೆ. ಮತ್ತೊಬ್ಬ ಅಧಿಕಾರಿ ಗಾಯಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ. ಮೃತರಲ್ಲಿ 8 ಜನ ಯೋಧರು ಮತ್ತು ಒಬ್ಬರು ಕಮಿಷನ್ಡ್ ಆಫೀಸರ್ (ಜೆಸಿಒ) ಆಗಿದ್ದರು. ಸೇನಾ ಟ್ರಕ್ (Army Vehicle) ಗ್ಯಾರಿಸನ್ನಿಂದ ಲೇಹ್ ಬಳಿಯ ಕ್ಯಾರಿಗೆ ಚಲಿಸುತ್ತಿದ್ದ ವೇಳೆ ಕಮರಿಗೆ ಬಿದ್ದಿದೆ.
ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajanath Singh) ಸಾಮಾಜಿಕ ಜಾಲತಾಣದಲ್ಲಿ ಮೃತ ಯೋಧರಿಗೆ ಸಂತಾಪ ಸೂಚಿಸಿದ್ದಾರೆ. ಲಡಾಖ್ ನ ಲೇಹ್ ಹತ್ತಿರ ಅಪಘಾತದಿಂದಾಗಿ ಭಾರತೀಯ ಸೇನಾ ಸಿಬ್ಬಂದಿ ಕಳೆದುಕೊಂಡಿರುವುದು ಬಹಳ ದುಃಖವನ್ನುಂಟುಮಾಡಿದೆ. ನಮ್ಮ ದೇಶಕ್ಕೆ ಅವರ ಆದರ್ಶ ಸೇವೆಯನ್ನು ಎಂದಿಗೂ ಮರೆಯುವುದಿಲ್ಲ. ಗಾಯಗೊಂಡ ಸಿಬ್ಬಂದಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಕುರಿತು ಟ್ವೀಟ್ ಮಾಡಿರುವ ರಾಜನಾಥ್ ಸಿಂಗ್ ಅವರು, ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.