ಸೂರ್ಯಕುಮಾರ್, ರೋಹಿತ್ ಅಬ್ಬರದ ಆಟ, ಜೈಪುರದಲ್ಲಿ ತಿಣುಕಾಡಿ ಗೆದ್ದ ಭಾರತ
ಪಿಂಕ್ ಸಿಟಿ ಜೈಪುರದಲ್ಲಿ ಟೀಮ್ ಇಂಡಿಯಾ ನ್ಯೂಜಿಲೆಂಡ್ ವಿರುದ್ಧ ಕೊನೆ ಕೊನೆಯಲ್ಲಿ ರನ್ಗಾಗಿ ತಿಣುಕಾಡಿತು.
ಅನನುಭವದ ಪರಿಣಾಮ ಫಲಿತಾಂಶದ ಮೇಲೆ ಆಗುತ್ತಿತ್ತು. ಆದರೆ ರಿಷಬ್ ಪಂತ್ ಕೊನೆಯಲ್ಲಿ ಬೌಂಡರಿ ಬಾರಿಸಿ ಟೀಮ್ ಇಂಡಿಯಾಕ್ಕೆ ಗೆಲುವು ತಂಡದುಕೊಟ್ಟರು.
ಪೂರ್ಣ ಪ್ರಮಾಣದ ನಾಯಕನಾದ ಮೇಲೆ ರೋಹಿತ್ ಮೊದಲ ಪಂದ್ಯದಲ್ಲಿ ಗೆಲವು ಕಂಡರೆ, ರಾಹುಲ್ ದ್ರಾವಿಡ್ ಕೋಚಿಂಗ್ ವೃತ್ತಿ ಕೂಡ ಶುಭಾರಂಭ ಕಂಡಿದೆ.
ಸವಾಯ್ ಮಾನ್ ಸಿಂಗ್ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ಟೀಮ್ ಇಂಡಿಯಾ ಫೀಲ್ಡಿಂಗ್ ಆರಿಸಿಕೊಂಡಿತು.
ಮೊದಲ ಓವರ್ನಲ್ಲೇ ಭುನವೇಶ್ವರ್ ಕುಮಾರ್ ಡೆರಿಲ್ ಮಿಚೆಲ್ರನ್ನು ಕ್ಲೀನ್ ಬೌಲ್ಡ್ ಮಾಡಿದರು.
ಆದರೆ ಮಾರ್ಟಿನ್ ಗಪ್ಟಿಲ್ ಮತ್ತು ಮಾರ್ಕ್ ಚಾಪ್ಮನ್ ಜೋಡಿ ಟೀಮ್ ಇಂಡಿಯಾ ಬೌಲರ್ಗಳ ನೀರಿಳಿಸಿತು.
ಚಾಪ್ಮನ್ 50 ಎಸೆತಗಳಲ್ಲಿ 63 ರನ್ಗಳಿಸಿ ಅಶ್ವಿನ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಗ್ಲೆನ್ ಫಿಲಿಫ್ಸ್ಗೆ ಖಾತೆ ತೆರೆಯುವ ಅವಕಾಶವನ್ನೇ ಅಶ್ವಿನ್ ನೀಡಲಿಲ್ಲ.
ಅರ್ಧಶತಕದ ಬಳಿಕ ಗಪ್ಟಿಲ್ ಬಿರುಸಿನ ಆಟಕ್ಕೆ ಇಳಿದರು. 3 ಫೋರ್ ಮತ್ತು 4 ಸಿಕ್ಸರ್ ಬಾರಿಸಿದ ಗಪ್ಟಿಲ್ ಕೇವಲ 42 ಎಸೆತಗಳಲ್ಲಿ 70 ರನ್ ಬಾರಿಸಿ ದೀಪಕ್ ಚಹರ್ ಗೆ ವಿಕೆಟ್ ಒಪ್ಪಿಸಿದರು.
ಟಿಮ್ ಸೀಫರ್ಟ್, ರಚಿನ್ ರವೀಂದ್ರ ಹೆಚ್ಚು ಕೊಡುಗೆ ನೀಡಲಿಲ್ಲ. 20 ಓವರುಗಳಲ್ಲಿ ಕಿವೀಸ್ 5 ವಿಕೆಟ್ ಕಳೆದುಕೊಂಡು 164 ರನ್ಗಳಷ್ಟೇ ಗಳಿಸಿತು.
ಚೇಸಿಂಗ್ ಆರಂಭಿಸಿದ ರಾಹುಲ್ ಮತ್ತು ರೋಹಿತ್ ಜೋಡಿ ಮೊದಲ ವಿಕೆಟ್ಗೆ ಸ್ಪೋಟಕ 50 ರನ್ಗಳನ್ನು ಸೇರಿತು.
ಆದರೆ ರಾಹುಲ್ 15 ರನ್ಗಳಿಸಿದ್ದಾಗ ಸ್ಯಾಂಟ್ನರ್ಗೆ ವಿಕೆಟ್ ಒಪ್ಪಿಸಿದರು. ರೋಹಿತ್ ಜೊತೆ ಸೇರಿದ ಸೂರ್ಯ ಕುಮಾರ್ ಯಾದವ್ ಬಿರುಸಿನ ಆಟಕ್ಕೆ ಇಳಿದರು.
ನ್ಯೂಜಿಲೆಂಡ್ ಬೌಲರ್ಗಳು ಸುಸ್ತು ಹೊಡೆದರು. 36 ಎಸೆತಗಳಲ್ಲಿ 48 ರನ್ಗಳಿಸಿ ರೋಹಿತ್ ಔಟಾದರು. ಈ ಮಧ್ಯೆ ಸೂರ್ಯ ಕುಮಾರ್ ಅರ್ಧಶತಕವನ್ನೂ ಪೂರೈಸಿದರು.
40 ಎಸೆತಗಳಲ್ಲಿ 62 ರನ್ಗಳಿಸಿದ ಸೂರ್ಯ ಬೋಲ್ಟ್ ಎಸೆತದಲ್ಲಿ ಕ್ಲೀನ್ ಬೌಲ್ಡ್ ಆದರು. ಇಲ್ಲಿಂದ ಪಂದ್ಯ ಬೇರೆಯದ್ದೇ ತಿರುವು ಪಡೆಯಿತು.
ಟೀಮ್ ಇಂಡಿಯಾ ರನ್ಗಾಗಿ ಪರದಾಡಿತು. ಶ್ರೇಯಸ್ ಅಯ್ಯರ್ 5 ರನ್ಗಳಿಸಿದರೆ, ವೆಂಕಟೇಶ್ ಅಯ್ಯರ್ 4 ರನ್ಗೆ ತೃಪ್ತಿ ಪಟ್ಟುಕೊಂಡರು.
ಪಂದ್ಯ ಕೊನೆಯ ಓವರ್ಗೆ ತಲುಪಿತು. ಆದರೆ ಅಂತಿಮ ಓವರ್ನ 4ನೇ ಎಸೆತವನ್ನು ಬೌಂಡರಿಗಟ್ಟಿದ ರಿಷಬ್ ಪಂತ್ ಟೀಮ್ ಇಂಡಿಯಾಕ್ಕೆ ಗೆಲುವು ತಂದುಕೊಟರು. ಈ ಮೂಲಕ 3 ಟಿ20 ಪಂದ್ಯಗಳ ಸರಣಿಯಲ್ಲಿ ಭಾರತ ಮುನ್ನಡೆ ಸಾಧಿಸಿತು.