Karnataka Rajyotsava – ಕನ್ನಡದ ಕುಲಪುರೋಹಿತ ಆಲೂರು ವೆಂಕಟರಾವ್ ಬಗ್ಗೆ ನಿಮಗೆಷ್ಟು ಗೊತ್ತು ?
ಆಲೂರು ವೆಂಕಟರಾವ್..!! ಕರ್ನಾಟಕದ ಹುಟ್ಟಿಗೆ ಕಾರಣರಾದ ಕನ್ನಡದ ಕುಲಪುರೋಹಿತ ಎಂದೇ ಪ್ರಖ್ಯಾತಿ ಪಡೆದರು. ಆಲೂರು ವೆಂಕಟರಾವ್ ಅವರು ಮೊದಲಿಗೆ ಕರ್ನಾಟಕ ಏಕೀಕರಣ ಚಳುವಳಿಯನ್ನು ಸ್ವಾತಂತ್ರ್ಯ ಪೂರ್ವವೇ 1905ರಲ್ಲಿ ಪ್ರಾರಂಭಿಸಿದರು.
ಆಲೂರು ವೆಂಕಟರಾಯರು ಜೀವನವನ್ನು ಸಂಪೂರ್ಣವಾಗಿ ಏಕೀಕರಣಕ್ಕಾಗಿಯೇ ಮುಡಿಪಾಗಿಟ್ಟವರು. ಕನ್ನಡಿಗರಲ್ಲಿ ಏಕೋಭಾವನೆ ಮೂಡಿಸುವುದಕ್ಕೆ ವಿದಾಯಕ ಕಾರ್ಯಕ್ರಮ ನಡೆಸಿದವರು. ಕರ್ನಾಟಕದ ಇತಿಹಾಸವನ್ನು ವಿಜಯನಗರದ ಸಾಮ್ರಾಜ್ಯದ ಮೂಲಕ ಪ್ರೇರಣೆ ಪಡೆದು ಕನ್ನಡಾಂಬೆಯು ಪ್ರತಿ ಕನ್ನಡಿಗನ ಅತ್ಮದಲ್ಲಿ ಸ್ಥಾಪನೆ ಆದಾಗ ಮಾತ್ರ ನವ ಕರ್ನಾಟಕದ ನಿರ್ಮಾಣ ಸಾಧ್ಯ ಎಂಬುದು ಆಲೂರು ಅವರ ವಿಚಾರವಾಗಿತ್ತು. ಕರ್ನಾಟಕ ವಿದ್ಯಾವರ್ಧಕ ಸಂಘ, ಕಸಾಪ ಸೇರಿದಂತೆ ಇನ್ನಿತರ ಸಂಸ್ಥೆಗಳನ್ನು ಹುಟ್ಟು ಹಾಕಿದ ಕೀರ್ತಿ ವೆಂಕಟರಾಯರಿಗೆ ಸಲ್ಲಬೇಕು
ಮಾತನಾಡುವ ಭಾಷೆ ಬೇರೆ ಇದ್ದರೂ, ಗ್ರಾಂಥಿಕ ಭಾಷೆ ಒಂದೇ ಆಗಿರಬೇಕು. ವೆಂಕಟರಾಯರು ರಾಷ್ಟ್ರೀಯ ಶಾಲೆ ಪ್ರಾರಂಭಿಸಿ ಕನ್ನಡಿಗರಿಗೆ ಸ್ವ ಉದ್ಯೋಗ ಮಾಡುವ ಅವಕಾಶ ಮಾಡಿಕೊಟ್ಟಿದ್ದರು. ಕರ್ನಾಟಕ ಏಕೀಕರಣ ಪರಿಷತ್ ಮೂಲಕ ಕರ್ನಾಟಕದ ಏಕೀಕರಣ ಮಾಡುವ ಮಹತ್ಕಾರ್ಯ ಮಾಡಿದ್ದರು. ಆಲೂರು ವೆಂಕಟರಾಯರ ಮೇಲೆ ಟ್ಯಾಗೋರ್, ತಿಲಕರು, ಅರವಿಂದರ ಪ್ರಭಾವ ಹೆಚ್ಚಿನದು. ತಮ್ಮ ಬಹುಮುಖ ವ್ಯಕ್ತಿತ್ವದ ಮೂಲಕ ಕನ್ನಡಿಗರನ್ನು ಒಂದುಗೂಡಿಸುವ ಕೆಲಸವನ್ನು ಮಾಡಿದ್ದಾರೆ. ಸಾಹಿತ್ಯ, ಸಂಶೋಧನೆ, ಇತಿಹಾಸ, ಪತ್ರಿಕೋದ್ಯಮ ಹೀಗೆ ವಿವಿಧ ಮಜಲುಗಳಲ್ಲಿ ಅವರು ಕೆಲಸ ಮಾಡಿದ್ದರು
ಕನ್ನಡಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡುಪಾಗಿಟ್ಟ ಆಲೂರು ವೆಂಕಟರಾಯರು ಜನಸಿದ್ದು, ಜುಲೈ 12, 1880ರಂದು ಬಿಜಾಪುರದಲ್ಲಿ. ತಂದೆ ಭೀಮರಾಯರು ಶಿರಸ್ತೇದಾರರು, ತಾಯಿ ಭಾಗೀರಥಿ ಭಾಯಿ. ವೆಂಕಟರಾಯರು ತಮ್ಮ ಆರಂಭಿಕ ಶಿಕ್ಷಣವನ್ನು ಧಾರವಾಡದಲ್ಲಿ ಮುಗಿಸಿದರು.
ಬಳಿಕ 1903ರಲ್ಲಿ ಪುಣೆಯ ಫರ್ಗೂಸನ್ ಕಾಲೇಜಿಲನಲ್ಲಿ ಬಿ ಎ ಪದವಿ ಪಡೆದು ಮುಂಬೈನಲ್ಲಿ ಕಾನೂನಿನ ಅಭ್ಯಾಸ ಮಾಡಿ 1905ರಲ್ಲಿ ವಕೀಲರಾದರು. ಒಮ್ಮೆ ಇವರು ಹಂಪಿಗೆ ಭೇಟಿ ನೀಡಿದ್ದರು. ಅಲ್ಲಿನ ಅವಶೇಷಗಳು ಆಲೂರು ಅವರ ಮೇಲೆ ಅಪೂರ್ಣ ಪರಿಣಾಮ ಬೀರಿದ್ದವು. ಇದೇ ಅವರ ಜೀವನದ ಕ್ರಮದಲ್ಲಿ ಕ್ರಾಂತಿಯನ್ನು ಮಾಡಲಿಕ್ಕೆ ಕಾರಣವಾಯಿತು ಎಂದು ಸ್ವತಃ ವೆಂಕಟರಾಯರೇ ಹೇಳಿಕೊಂಡಿದ್ದಾರೆ.

ಇದಾದ ಬಳೀಕ ಕರ್ನಾಟಕ ವಿದ್ಯಾವರ್ಧಕ ಸಂಘವನ್ನು ಪ್ರವೇಶಿಸಿದ ವೆಂಕಟರಾಯರು ವಾಗ್ಬೂಷಣ ಪತ್ರಿಕೆಯ ಸಂಪಾದಕರಾದರು. ಕರ್ನಾಟಕದ ವಿದ್ಯಾವರ್ಧಕರ ಸಂಘದ ಆಶ್ರಯದಲ್ಲಿ ಇವರು ನಡೆಸಿದ ಗ್ರಂಥಕರ್ತರ ಸಮಾವೇಶ 1915ರಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ತಿಗೆ ನಾಂದಿಹಾಡಿತು. ಸಾಹಿತ್ಯ ರಚನೆಯನ್ನು ಗಂಭೀರವಾಗಿ ಸ್ವೀಕರಿಸಿದ ಆಲೂರರು ಶಿಕ್ಷಣ ಮೀಮಾಂಸೆ, ಶ್ರೀ ವಿದ್ಯಾರಣ್ಯರ ಚರಿತ್ರೆ, ಕರ್ನಾಟಕ ಗತವೈಭವ, ಸಂಸಾರ ಸುಖ, ಕರ್ನಾಟಕದ ವೀರರತ್ನಗಳು, ಕರ್ನಾಟಕತ್ವದ ಸೂತ್ರಗಳು, ಕರ್ನಾಟಕತ್ವದ ವಿಕಾಸ, ರಾಷ್ಟ್ರೀಯತ್ವ ಮೀಮಾಂಸೆ, ಗೀತಾ ರಹಸ್ಯ, ನಾವು ಈಗ ಬೇಡುವ ಸ್ವರಾಜ್ಯ, ಸ್ವರಾಜ್ಯವೆಂದರೇನು? ಸುಖವೂ ಶಾಂತಿಯೂ, ಸ್ವಾತಂತ್ರ್ಯ ಸಂಗ್ರಾಮ, ಗೀತಾಪ್ರಕಾಶ, ಗೀತಾ ಪರಿಮಳಾ ಸೇರಿದಂತೆ ಮುಂತಾದವುಗಳನ್ನು ಪ್ರಕಟಿಸಿದರು. 1922ರಲ್ಲಿ ಜಯಕರ್ನಾಟಕ ಪತ್ರಿಕೆಯನ್ನು ಸ್ಥಾಪಿಸಿದರು. ಅವರ ಸಂಪಾದಕೀಯ “ ಕಚ್ಚಾ ಲೇಖಕರಿಗೂ, ಕಚ್ಚಾ ಕವಿಗಳಿಗೂ, ಅಶುದ್ಧ ಬರಹಗಳಿಗೂ ಆಸ್ಪದಕೊಟ್ಟಿರುವೆ. ಕರ್ನಾಟಕದ ಸಕಲ ಭಾಗಗಳಲ್ಲಿಯೂ ಲೇಖಕರು ಕವಿಗಳು ಹುಟ್ಟಬೇಕೆಂಬುದೇ ನನ್ನ ಉದ್ದೇಶ.
ಈ ನಡುವೆ ಅವರು ಮಹಾತ್ಮ ಗಾಂಧಿಜೀ, ಬಾಲಗಂಗಾಧರ ತಿಲಕ, ವೀರ ಸಾವರ್ಕರ್ ಇಂತಹ ಮಹಾರಾಷ್ಟ್ರೀಯ ನಾಯಕರೊಡನೆ ತೀರ ನಿಕಟ ಸಂಪರ್ಕ ಹೊಂದಿದ್ದರು. 1931ರಲ್ಲಿ ಬ್ರಿಟಿಷ್ ಸರ್ಕಾರ ಅವರಿಗಾಗಿ ಸರ್ಚ್ ವಾರೆಂಟ್ ಅನ್ನು ಹೊರಡಿಸಿತು. ಹಾಗೆ ಅವರನ್ನು ಸೆರೆ ಹಿಡಿದು ಕಲಘಟಗಿಯಲ್ಲಿ ದಿಗ್ಭಂದದಲ್ಲಿ ಇರಿಸಲಾಗಿತ್ತು. ವರ ಕವಿ ದ.ರಾ.ಬ್ರೇಂದ್ರೆ ಅವರು ಆಲೂರು ಅವರನ್ನು ಕರ್ನಾಟಕದ ಪ್ರಾಣೋಪಾಸಕರು ಎಂದು ಕರೆದಿದ್ದರು.
ಅಂತಿಮವಾಗಿ ಆಲೂರರು ಫೆಬ್ರವರಿ 25, 1964ರಲ್ಲಿ ನಿಧನರಾದರು. ನಾವು ಇಂದು ಕನ್ನಡದ ಅಮೃತಸುಧೆಯನ್ನು ಸವಿದಿದ್ದರೆ ಅದು ಆಲೂರು ವೆಂಕಟರಾಯರಂತಹ ಮಹನೀಯರಯ ನಮಗೆ ನೀಡಿದ ತೀರ್ಥಪ್ರಸಾದ.







