ಹೊಳಲ್ಕೆರೆಯಲ್ಲಿ ಮಾಜಿ – ಹಾಲಿ ಶಾಸಕರ ಕಿತ್ತಾಟ
ಚಿತ್ರದುರ್ಗ : ಕೋಟೆ ನಾಡು ಚಿತ್ರದುರ್ಗದ ಹೊಳಲ್ಕೆರೆ ವಿಧಾನ ಸಭಾ ಕ್ಷೇತ್ರದ ರಾಜಕೀಯ ಬದ್ಧ ವೈರಿಗಳ ನಡುವೆ ಇದೀಗ ಅಸಲಿ ರಾಜಕಾರಣ ಶುರುವಾಗಿದೆ. ಅದೇನಪ್ಪ ಅಂದ್ರೆ ಹೊಳಲ್ಕೆರೆ ತಾಲೂಕಿನಲ್ಲಿ ಬಡ ರೈತರಿಗೆ ಗಂಗಾ ಕಲ್ಯಾಣ ಯೋಜನೆಯಡಿಯಲ್ಲಿ ಹೆಚ್.ಆಂಜನೇಯ ಸಮಾಜ ಕಲ್ಯಾಣ ಸಚಿವರಾಗಿದ್ದಾಗ 800ಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಮಂಜೂರು ಮಾಡಿದ್ದರು, ಆದರೆ ಅವರ ಕಾಲದಲ್ಲಿ ಮಂಜೂರಾಗಿರುವ ಕೊಳವೆ ಬಾವಿಗಳನ್ನು ಕೊರೆಯಿಸಿಕೊಡುವ ವಿಚಾರದಲ್ಲಿ ಹಾಲಿ ಶಾಸಕ ಎಂ. ಚಂದ್ರಪ್ಪ ರಾಜಕೀಯ ಮಾಡುತ್ತಿದ್ದಾರೆ ಎಂದು ಆರೋಪ ಕೇಳಿಬಂದಿದೆ.
ಚಂದ್ರಪ್ಪ ಅವರ ಈ ನಡೆಯನ್ನು ಖಂಡಿಸಿ ತಾಲೂಕಿನ ರೈತರು ಪ್ರತಿಭಟನೆ ನಡೆಸುತ್ತಿದ್ದು, ಕೂಡಲೇ ಕೊಳವೆ ಬಾವಿ ಕೊರೆಸುವ ಕೆಲಸಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದ್ದಾರೆ.
ಈ ಮಧ್ಯೆ ರೈತರ ಪ್ರತಿಭಟನಾ ಸ್ಥಳಕ್ಕೆ ಹೆಚ್ ಆಂಜನೇಯ ಭೇಟಿ ಕೊಟ್ಟಿದ್ದು, ಚಂದ್ರಪ್ಪ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಹಾನ್ ಸುಳ್ಳುಗಾರ ಚಂದ್ರಪ್ಪ, ಕೊಟ್ಟ ಅನ್ನ ಕಸಿದುಕೊಳ್ಳುವ ನೀಚ ರಾಜಕಾರಣಿ. ಸುಳ್ಳು ಹೇಳಿಕೊಂಡು ಇಂದು ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ. ನಾನು ಹೊಳಲ್ಕೆರೆ ಕ್ಷೇತ್ರದ ಜನರ ಋಣ ತೀರಿಸಲು ಜಾತಿ ಬೇಧ ಮಾಡದೆ ಪ್ರತಿಯೊಬ್ಬರಿಗೂ ಗಂಗಾ ಕಲ್ಯಾಣ ಯೋಜನೆಯಲ್ಲಿ ಕೊಳವೆ ಬಾವಿ ಮಂಜೂರು ಮಾಡಿದ್ದೆ ಆದರೆ ಚಂದ್ರಪ್ಪ ಅದನ್ನು ತಡೆ ಹಿಡಿದಿದ್ದಾರೆ ಎಂದು ಗುಡುಗಿದರು.