ಗದಗ | ಬಿಂದಿಗೆ, ಚೊಂಬು, ಹಿಡಿದು ನಗರಸಭೆಗೆ ಮುತ್ತಿಗೆ
ಗದಗ: ಸಮರ್ಪಕ ಕುಡಿಯುವ ನೀರಿಗಾಗಿ ಆಗ್ರಹಿಸಿ ನಗರದ ಶಹಪೂರಪೇಟೆ ಬಡಾವಣೆಯ ಜನರು ವಿನೂತನ ಪ್ರತಿಭಟನೆ ನಡೆಸಿದ್ದಾರೆ. ನೀರಿಗಾಗಿ ಆಗ್ರಹಿಸಿ ಬಿಂದಿಗೆ, ಚೊಂಬು, ಪೊರಕೆ ಹಿಡಿದು ನಗರಸಭೆಗೆ ಮುತ್ತಿಗೆ ಹಾಕಿದ್ದಾರೆ.
ಕಳೆದ 6 ತಿಂಗಳಿನಿಂದ ಶಹಪೂರಪೇಟೆ ಬಡಾವಣೆಗೆ ನೀರು ಸರಬರಾಜು ಆಗಿಲ್ಲ. ಈ ಬಗ್ಗೆ ದೂರು ನೀಡಿದರೂ ಯಾವುದೇ ಪ್ರಯೋಜನೆ ಆಗುತ್ತಿಲ್ಲ. ಇದರಿಂದ ರೋಸಿ ಹೋದ ಸಾರ್ವಜನಿಕರು ತಮಟೆ ಬಾರಿಸುತ್ತ, ಖಾಲಿ ಬಿಂದಿಗೆ, ಚೊಂಬು, ಬಕೆಟ್, ಪೊರಕೆಯೊಂದಿಗೆ ಬಾಯಿ ಬಡೆದುಕೊಳ್ಳುತ್ತ ನಗರಸಭೆಗೆ ಮುತ್ತಿಗೆ ಹಾಕಿದರು.
ಇದಕ್ಕೂ ಮುನ್ನ ಶಹಪೂರಪೇಟೆಯಿಂದ ಮಹಾತ್ಮ ಗಾಂಧಿ ವೃತ್ತದ ಮಾರ್ಗವಾಗಿ ನಗರಸಭೆ ವರೆಗೂ ಜನರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಪ್ರತಿಭಟನೆಯಲ್ಲಿ ಮಹಿಳೆಯರು, ಮಕ್ಕಳು ಸೇರಿ ಅನೇಕರು ಪಾಲ್ಗೊಂಡಿದ್ದರು.