ಬರ್ಬರವಾಗಿ ಕೊಲೆ ಮಾಡಿ ರುಂಡವನ್ನ ಹೂತು ಹಾಕಿದ ವ್ಯಕ್ತಿ
ತನ್ನ ಮೇಲೆ ವಾಮಾಚಾರ ಮಾಡಿಸಿದ್ದನೆಂದು ಧಾರಾವಾಹಿ ನಟನೊಬ್ಬ ವ್ಯಕ್ತಿಯೊಬ್ಬನನ್ನ ಬರ್ಬರವಾಗಿ ಕೊಂದು ರುಂಡವನ್ನ ಬೇರ್ಪಡಿಸಿ ಹೊಲದಲ್ಲಿ ಹೂತಿಟ್ಟಿರುವ ಘಟನೆ ಹಿರಿಯೂರು ತಾಲೂಕಿನ ಶ್ರವಣಗೆರೆ ಗೊಲ್ಲರಹಟ್ಟಿಯಲ್ಲಿ ನಡೆದಿದೆ. 45 ವರ್ಷದ ರಮೇಶ್ ಎಂಬಾತ ಕೊಲೆಯಾದ ವ್ಯಕ್ತಿ ಎಂದು ತಿಳಿದು ಬಂದಿದೆ.
ಇನ್ನು ಕೊಲೆ ಮಾಡಿರುವ ಆರೋಪಿ ಶ್ರೀನಿವಾಸ್ (40) ಎಂಬಾತ ತಲೆಮರೆಸಿಕೊಂಡಿದ್ದಾನೆ. ಶ್ರೀನಿವಾಸ್ ಬೆಂಗಳೂರಿನ ಅಡುಗೆ ಭಟ್ಟರೊಬ್ಬರ ಬಳಿ ಕೆಲಸ ಕೆಲಸ ಮಾಡಿಕೊಂಡಿದ್ದರು, ಈತ ಸಂತ ಸಿನಿಮಾದಲ್ಲಿ ಮತ್ತು ರಂಗೋಲಿ ಧಾರಾವಾಹಿಯಲ್ಲಿ ನಟಿಸಿದ್ದಾನೆ ಎನ್ನಲಾಗಿದೆ. ರಮೇಶ್ ಎಂಬಾತ ತನ್ನ ಮೇಲೆ ವಾಮಾಚಾರ ಮಾಡಿದ್ದ ಎಂದು ಶ್ರೀನಿವಾಸ್ ಆತನ ವಿರುದ್ಧ ಕೋಪಗೊಂಡಿದ್ದ.
ಯುಗಾದಿ ಹಬ್ಬಕ್ಕೆ ಊರಿಗೆ ಬಂದಾಗ ಕೊಲೆಗೆ ಹೊಂಚು ಹಾಕಿ ಕಾಯುತ್ತಿದ್ದ ಶ್ರೀನಿವಾಸ್ ಗೆ ರಮೇಶ್ ಒಂಟಿಯಾಗಿರುವುದು ಗೊತ್ತಾಗಿದೆ. ರಮೇಶ್ ಮನೆಯಲ್ಲಿ ಒಬ್ಬನೆ ಮಲಗಿದ್ದಾಗ ಶ್ರೀನಿವಾಸ್ ಚಾಕುವಿನಿಂದ ದಾಳಿ ಮಾಡಿದ್ದಾನೆ. ಆತನನ್ನ ಬರ್ಬರವಾಗಿ ಕೊಂದು ದೇಹದಿಂದ ರುಂಡವನ್ನ ಬೇರ್ಪಡಿಸಿ ಹೊಲದಲ್ಲಿ ಊತಿಟ್ಟು ಪರಾರಿಯಾಗಿದ್ದಾನೆ.
ಘಟನಾ ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಕುಮಾರಸ್ವಾಮಿ, ಡಿವೈಎಸ್ಪಿ ರೋಷನ್ ಜಮೀರ್, ಸಿಪಿಐ ರಾಘವೇಂದ್ರ, ಪಿಎಸ್ಐ ಪರುಶುರಾಮ ಎನ್. ಲಮಾಣಿ ಭೇಟಿ ನೀಡಿ ಪರಿಶೀಲಿಸಿದರು. ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಅಬ್ಬಿನಹೊಳೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.