ನವದೆಹಲಿ: ಲಾಕ್ಡೌನ್ನಿಂದಾಗಿ ತವರಿಗೆ ತೆರಳಲಾಗದೇ ಪರಿತಪಿಸುತ್ತಿರುವ ವಲಸೆ ಕಾರ್ಮಿಕರನ್ನು ೧೫ ದಿನದೊಳಗೆ ಅವರವರ ರಾಜ್ಯಗಳಿಗೆ ಕಳಿಸಿಕೊಡುವಂತೆ ಕೇಂದ್ರ ಸರ್ಕಾರ, ಎಲ್ಲಾ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಸುಪ್ರೀಂಕೋರ್ಟ್ ಕಟ್ಟುನಿಟ್ಟಿನ ಸೂಚನೆ ನೀಡಿದೆ. ನ್ಯಾಯಮೂರ್ತಿ ಅಶೋಕ್ ಭೂಷಷ್ ನೇತೃತ್ವದ ಪೀಠ ಈ ಆದೇಶ ನೀಡಿದ್ದು, ವಲಸೆ ಕಾರ್ಮಿಕರು ಊರು ತಲುಪಿದ ಕೂಡಲೇ ಅಲ್ಲಿಯೇ ಉದ್ಯೋಗಾವಕಾಶಗಳನ್ನು ಕಲ್ಪಿಸುವಂತೆ ತಿಳಿಸಿದೆ.
ದೇಶಾದ್ಯಂತ ಒಂದು ಕೋಟಿಗೂ ಅಧಿಕ ಇರುವ ವಲಸೆ ಕಾರ್ಮಿಕರಲ್ಲಿ ಈಗಾಗಗಲೇ ಕೆಲವರು ಹುಟ್ಟೂರುಗಳಿಗೆ ತೆರಳಿದ್ದಾರೆ. ಗ್ರಾಮಗಳಲ್ಲಿರುವ ವಲಸೆ ಕಾರ್ಮಿಕರು ಹಾಗೂ ಈಗ ಊರುಗಳಿಗೆ ಹೋಗಲು ಸಜ್ಜಾಗಿರುವ ಕಾರ್ಮಿಕರ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಕಾರ್ಮಿಕರ ಹೆಸರು, ಊರು, ರಾಜ್ಯ, ಯಾವ ರಾಜ್ಯದಲ್ಲಿ ವಾಪಸ್ ಆಗಿದ್ದಾರೆ, ಏನು ಕೆಲಸ ಮಾಡುತ್ತಿದ್ದರು, ಯಾವಾಗ ಮತ್ತೆ ಕೆಲಸಕ್ಕೆ ವಾಪಸ್ ಬರುತ್ತೀರಿ ಎಂಬ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು. ಜೊತೆಗೆ ಈ ಕಾರ್ಮಿಕರು ಮಾಡುತ್ತಿದ್ದ ಕೆಲಸ ಹಾಗೂ ಅವರಿಗಿರುವ ಕೌಶಲ್ಯದ ಸಂಪೂರ್ಣ ನೀಲನಕ್ಷೆ ಸಿದ್ದಪಡಿಸುವಂತೆಯೂ ಸುಪ್ರೀಂಕೋರ್ಟ್ ತಾಕೀತು ಮಾಡಿದೆ.
ಅಫಿಡವಿಟ್ ಕೊಡಿ
ಹುಟ್ಟೂರುಗಳಿಗೆ ತೆರಳಿರುವ ವಲಸೆ ಕಾರ್ಮಿಕರು ಮತ್ತೆ ತಾವು ಮಾಡುತ್ತಿದ್ದ ಕೆಲಸಗಳಲ್ಲಿ ವಾಪಸ್ ಆಗಲು ಹಾಗೂ ಸ್ಥಳೀಯ ಮಟ್ಟದಲ್ಲಿ ಯಾವ ಯಾವ ಹಂತದ ಕೆಲಸಗಳ ಲಭ್ಯತೆ ಇದೆ ಎಂಬುದರ ಸಂಪೂರ್ಣ ಅಫಿಡವಿಟ್ನ್ನು ಜುಲೈ ೮ರೊಳಗೆ ಸಲ್ಲಿಸುವಂತೆಯೂ ಸುಪ್ರೀಂಕೋರ್ಟ್ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಖಡಕ್ ಸೂಚನೆ ನೀಡಿದೆ.
ಕೈಕಟ್ಟಿ ಕೂರುವಂತಿಲ್ಲ
ಬಡ ಕಾರ್ಮಿಕರ ವಿಚಾರದಲ್ಲಿ ನಮ್ಮ ದೇಶದ ರಾಜಕಾರಣಿಗಳು, ಸರ್ಕಾರಗಳು, ಅಧಿಕಾರ ವರ್ಗ ಸೇರಿದಂತೆ ಆಡಳಿತ ವ್ಯವಸ್ಥೆಯ ದೌರ್ಬಲ್ಯಗಳನ್ನು ಅರಿತಿರುವ ಸುಪ್ರೀಂಕೋರ್ಟ್, ಕೋವಿಡ್-೧೯ನಿಂದಾಗಿ ಲಾಕ್ಡೌನ್ನಲ್ಲಿ ಸಿಲುಕಿದ್ದ ಕಾರ್ಮಿಕರನ್ನು ಊರುಗಳಿಗೆ ಕಳಿಸಿದರೆ ನಿಮ್ಮ ಕೆಲಸ ಮುಗಿಯುವುದಿಲ್ಲ. ಅಷ್ಟು ಹೇಳಿದರೆ ನಮಗೂ, ಕಾರ್ಮಿಕರಿಗೂ ಸಂಬAಧವೇ ಇಲ್ಲ ಎಂದು ಅಧಿಕಾರಿ ವರ್ಗ ಮರೆತು ಬಿಡುತ್ತೆ. ಹೀಗಾಗಿ ವಲಸೆ ಕಾರ್ಮಿಕರು ಮತ್ತೆ ಕೆಲಸಕ್ಕೆ ಹಾಜರಾಗಬೇಕು, ಅವರಿಗೆ ಉದ್ಯೋಗ ಕಲ್ಪಿಸಿಕೊಡಲೇಬೇಕು. ಅದಕ್ಕೆ ಸರ್ಕಾರಗಳು ಕೈಗೊಂಡ ಕ್ರಮಗಳ ಬಗ್ಗೆ ಅಫಿಡವಿಟ್ ಸಲ್ಲಿಸುವಂತೆ ಹೇಳಿರುವುದೇ ಈ ಕಾರಣಕ್ಕೆ ಎನ್ನಲಾಗಿದೆ.
ಕೇಸ್ ರದ್ದು
ಲಾಕ್ಡೌನ್ ನಿಯಮ ಉಲ್ಲಂಘಿಸಿ ಹುಟ್ಟೂರತ್ತ ಬರಿಗಾಲು, ಸೈಕಲ್, ಬೈಕ್ಗಳಲ್ಲಿ ಹೋಗುತ್ತಿದ್ದ ಕಾರ್ಮಿಕರ ಮೇಲೆ ರಾಜ್ಯ ಸರ್ಕಾರಗಳು ಹಾಕಿರುವ ಕ್ರಿಮಿನಲ್ ಪ್ರಕರಣ(ಕೇಸ್)ಗಳನ್ನು ರದ್ದು ಮಾಡಿರುವ ಸುಪ್ರೀಂಕೋರ್ಟ್, ಕಾರ್ಮಿಕರ ವಿರುದ್ಧ ಇರುವ ಎಲ್ಲಾ ದೂರು ಹಾಗೂ ವಿಚಾರಣೆಯನ್ನು ರದ್ದು ಮಾಡುವಂತೆ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶಗಳಿಗೆ ಆದೇಶ ಮಾಡಿದೆ.








