ಶಿವಮೊಗ್ಗ : ಚುನಾಚುನಾವಣೆ ಸಮಯದಲ್ಲಿ ಪಕ್ಷಾಂತರಗಳು ಸರ್ವೇ ಸಾಮಾನ್ಯ. ಹಲವರು ಈಗಾಗಲೇ ಶಾಸಕರ ಸ್ಥಾನಕ್ಕೆ ರಾಜೀನಾಮೆ ನೀಡಿ ಬೇರೆ ಬೇರೆ ಪಕ್ಷ ಸೇರಿದ್ದಾರೆ. ಸದ್ಯ ವಿಧಾನ ಪರಿಷತ್ ನ ಬಿಜೆಪಿಯ ಸದಸ್ಯ ಆಯನೂರು ಮಂಜುನಾಥ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಘೋಷಿಸಿದ್ದಾರೆ.
ನಗರದಲ್ಲಿ ಸುದ್ದಿಘೋಷ್ಠಿಯಲ್ಲಿ ಮಾತನಾಡಿದ ಅವರು, ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಿ, ವಿಧಾನಸಭೆಯಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಹೇಳಿದ್ದಾರೆ.
ಶಿವಮೊಗ್ಗ ನಗರ ವಿಧಾನಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಯಲೇಬೇಕು ಎಂಬ ಇಚ್ಛೆ ಹೊಂದಿದ್ದೇನೆ. ಈಗಾಗಲೇ ನನ್ನ ನಿಲುವು, ಭಾವನೆ ಪ್ರಕಟಿಸಿದ್ದೇನೆ. ಪಕ್ಷದ ವೇದಿಕೆಯಲ್ಲಿಯೂ ನನ್ನ ವಿನಂತಿ ಸಲ್ಲಿಸಿದ್ದೇನೆ. ನನ್ನ ಆಸೆಗೆ ಪೂರಕವಾಗಿ ಬಿಜೆಪಿಯಿಂದ ಟಿಕೆಟ್ ಸಿಗುವ ಲಕ್ಷಣ ಕಂಡುಬಂದಿಲ್ಲ. ಅವರವರ ಮಕ್ಕಳ ಹೆಸರು ಓಡಾಡುತ್ತಿವೆ. ಈ ಹಿನ್ನೆಲೆಯಲ್ಲಿ ಈಶ್ವರಪ್ಪ ಅವರ ಮಾತನ್ನು ಸವಾಲಾಗಿ ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾರೆ.
ಈಶ್ವರಪ್ಪ ಆಗಲಿ, ಅವರ ಮಗನಾಗಲಿ ಚುನಾವಣಾ ಕಣಕ್ಕೆ ಬರಲಿ ಎಂದು ಸವಾಲು ಹಾಕಿದ ಅವರು, ಎಲ್ಲಿಯೂ ನೀವು ಗೌರವದಿಂದ ನಡೆದುಕೊಂಡಿಲ್ಲ. ನೀವು ಮಂತ್ರಿ ಸ್ಥಾನಕ್ಕೆ ಸ್ಪರ್ಧೆ ಮಾಡುವವರು. ಅಧಿಕಾರದ ಹಪಾಹಪಿ ಇದೆ ನಿಮಗೆ. ಮಂತ್ರಿ ಸ್ಥಾನಕ್ಕಾಗಿ ಸದನಕ್ಕೆ ಹೋಗಲಿಲ್ಲ. ಜಿಲ್ಲಾ ಮಂತ್ರಿಯಾಗಿದ್ದವರು ನೀವು ಅದಕ್ಕೆ ತಕ್ಕ ಗೌರವ ಉಳಿಸಿಕೊಂಡಿದ್ದೀರಾ ಎಂದು ಪ್ರಶ್ನೆ ಮಾಡಿದ್ದಾರೆ.
ಶಿವಮೊಗ್ಗದಲ್ಲಿ ನಾಲ್ಕೂವರೆ ಕೋಟಿ ರೂಪಾಯಿ ಸೀರೆ ಸಿಕ್ಕಿದೆ. ಒಂದೂವರೆ ಕೋಟಿ ಹಣ ಸಿಕ್ಕಿದೆ. ಇಷ್ಟೊಂದು ಹಣ, ಇಷ್ಟೊಂದು ಸೀರೆ ತರಿಸುವಂತಹ ವ್ಯಾಪಾರಿ ಶಿವಮೊಗ್ಗದಲ್ಲಿ ಯಾರು ಇಲ್ಲ. ಯಡಿಯೂರಪ್ಪ, ರಾಘವೇಂದ್ರ ಅವರಿಂದ ಶಿವಮೊಗ್ಗ ಅಭಿವೃದ್ಧಿ ಹೊಂದಿದೆ. ಆದರೆ, ಈಶ್ವರಪ್ಪ ಅವರಿಂದ ಏನೂ ಆಗಿಲ್ಲ. ಈಗ ನಾನೂ ಅಖಾಡಕ್ಕೆ ಸಿದ್ಧವಾಗಿದ್ದೇನೆ. ನೀವು ಬನ್ನಿ ಎಂದು ಸವಾಲು ಹಾಕಿದ್ದಾರೆ.








