ಭುವನೇಶ್ವರ: ಒಡಿಶಾದಲ್ಲಿನ ಬಾಲಸೋರ್ ಭೀಕರ ರೈಲು ಅಪಘಾತದ (Odisha Train Accident) ಕಹಿ ಮರೆಯುವ ಮುನ್ನವೇ ಮತ್ತೊಂದು ದುರಂತ ಸಂಭವಿಸಿದೆ.
ಒಡಿಶಾದ ಜಾಜ್ಪುರ ರೈಲು ನಿಲ್ದಾಣದ ಹತ್ತಿರ ಗೂಡ್ಸ್ ರೈಲಿನಡಿ ಸಿಲುಕಿ 6 ಜನ ಕಾರ್ಮಿಕರು ಸಾವನ್ನಪ್ಪಿದ್ದಾರೆ. ಅಲ್ಲದೇ, ಓರ್ವ ಕಾರ್ಮಿಕ ಗಾಯಗೊಂಡಿದ್ದಾನೆ. ಈ ಕಾರ್ಮಿಕರು ಗೂಡ್ಸ್ ರೈಲಿನ ಕೆಳಗೆ ವಿಶ್ರಾಂತಿ ಪಡೆಯುತ್ತಿದ್ದರು. ಅಷ್ಟರಲ್ಲಿ ರೈಲು ಚಲಿಸಿದ್ದು ಈ ಅವಘಡ ಸಂಭವಿಸಿದೆ ಎನ್ನಲಾಗಿದೆ. ಒಡಿಶಾದ ಬಾಲಸೋರ್ನಲ್ಲಿ ಸರಣಿ ರೈಲು ಅಪಘಾತ ಸಂಭವಿಸಿದ 5 ದಿನಗಳ ನಂತರ ಈ ಘಟನೆ ನಡೆದಿದೆ.
ಕಾರ್ಮಿಕರು ಸಮೀಪದಲ್ಲಿ ಕೆಲಸ ಮಾಡುತ್ತಿದ್ದರು. ಆ ಸಮಯದಲ್ಲಿ ಭಾರೀ ಮಳೆ ಪ್ರಾರಂಭವಾಯಿತು. ಮಳೆಯಿಂದ ರಕ್ಷಣೆ ಪಡೆಯಲು, ಗೂಡ್ಸ್ ರೈಲಿನ ಬಿಡ್ ಅಡಿ ಆಶ್ರಯ ಪಡೆದಿದ್ದಾರೆ. ಕೂಲಿ ಕಾರ್ಮಿಕರು ರೈಲಿನ ಬೋಗಿಯ ಕೆಳಗೆ ಕುಳಿತಿದ್ದ ಅದೇ ಸಮಯಕ್ಕೆ ರೈಲು ಮತ್ತೆ ಸಂಚರಿಸಲು ಆರಂಭಿಸಿತು. ಇದರಿಂದ 6 ಜನ ಕೂಲಿ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುರಿತು ಇನ್ನು ಹೆಚ್ಚಿನ ಮಾಹಿತಿ ಸಿಕ್ಕಿಲ್ಲ.
ಒಡಿಶಾದ ಬಾಲಸೋರ್ನಲ್ಲಿ ಕಳೆದ ಶುಕ್ರವಾರ ಕೋರಮಂಡಲ್ ಎಕ್ಸ್ಪ್ರೆಸ್, ಗೂಡ್ಸ್ ರೈಲು ಮತ್ತು ಯಶವಂತಪುರ-ಹೌರಾ ರೈಲು ಡಿಕ್ಕಿ ಹೊಡೆದ ಪರಿಣಾಮ 288 ಜನರು ಸಾವನ್ನಪ್ಪಿದ್ದು, ಸಾವಿರಕ್ಕೂ ಅಧಿಕ ಜನ ಗಾಯಗೊಂಡಿದ್ದಾರೆ.