ವೈದ್ಯೋ ದೇವೋಭವ
ಇಂದು ರಾಷ್ಟ್ರೀಯ ವೈದ್ಯರ ದಿನ. ವೈದ್ಯರ ಸೇವೆಗೆ ಕೃತಜ್ಞತೆಯನ್ನು ಸಲ್ಲಿಸುವ ದಿನ. ಕೊರೊನಾ ಸಂಕಷ್ಟದ ಸಂದರ್ಭದಲ್ಲಿ ತಮ್ಮ ಮನೆ ಸಂಸಾರವನ್ನು ಮರೆತು ಜನರ ಸಂರಕ್ಷಣೆಗಾಗಿ ದುಡಿಯುತ್ತಿರುವ ಅಸಂಖ್ಯಾತ ವೈದ್ಯ ಸಮೂಹದ ಸೇವೆಯನ್ನು ನೆನಪಿಸಿಕೊಳ್ಳುವ ದಿನ.
ಭಾರತದಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ಸಲ್ಲಿಸಿರುವ ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಡಾ ಬಿಧಾನ್ ಚಂದ್ರ ರಾಯ್ ಅವರ ಸ್ಮರಣಾರ್ಥವಾಗಿ ಜುಲೈ 1 1991 ರಂದು ರಾಷ್ಟ್ರೀಯ ವೈದ್ಯರ ದಿನವನ್ನು ಆಚರಿಸಲಾಗುತ್ತಿದೆ. ಕೋವಿಡ್-19 ನಿಂದ ಉಂಟಾಗುವ ಸಾವಿನ ಸಂಖ್ಯೆ ತಗ್ಗಿಸೋಣ ಎನ್ನುವುದು ಈ ಬಾರಿ ವೈದ್ಯ ದಿನಾಚರಣೆ ಸಂದರ್ಭದಲ್ಲಿ ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ ರೂಪಿಸಿರುವ ಧ್ಯೇಯ ವಾಕ್ಯ.

ಕೊರೊನಾ ವೈರಸ್ ಜಗತ್ತಿನಲ್ಲಿ ತಾಂಡವವಾಡುತ್ತಿರುವ ಸಂದರ್ಭದಲ್ಲಿ ವೈದ್ಯಕೀಯ ಕ್ಷೇತ್ರದಲ್ಲಿ ಅಸಂಖ್ಯಾತ ವೈದ್ಯರುಗಳು ಸೇವೆ ಸಲ್ಲಿಸುತ್ತಿದ್ದಾರೆ. ಬದುಕಿನ ಬಗ್ಗೆ ಭರವಸೆ ಕಳೆದುಕೊಂಡ ವ್ಯಕ್ತಿಗೆ ಅಚ್ಚರಿಯ ರೀತಿಯಲ್ಲಿ ಮತ್ತೆ ಚೈತನ್ಯ ತುಂಬಿ ಕಳೆದುಕೊಂಡ ಆರೋಗ್ಯ, ಬದುಕಿನ ಭರವಸೆಯನ್ನು ಮರಳಿ ಕೊಡುವ ವೈದ್ಯರು ಅದ್ಭುತವಾದ ಶಕ್ತಿಯೇ ಸರಿ. ಕೊರೋನಾ ವೈರಸ್ ಸಂಕಷ್ಟದ ಈ ಕಾಲದಲ್ಲಿ ಹಗಲು – ರಾತ್ರಿ ಎನ್ನದೆ ತಮ್ಮ ಆರೋಗ್ಯವನ್ನು ಒತ್ತೆ ಇಟ್ಟು ದಿನದ 24 ಗಂಟೆಯೂ ಜನರ ಆರೋಗ್ಯದ ದೃಷ್ಟಿಯಿಂದ ನಿದ್ರೆ ಇಲ್ಲದೆ, ವಿಶ್ರಾಂತಿ ಇಲ್ಲದೆ ದುಡಿಯುತ್ತಿರುವ ವೈದ್ಯರ ಕೆಲಸ ನಿಜಕ್ಕೂ ಅದ್ಭುತ ಹಾಗೂ ಅವಿಸ್ಮರಣೀಯ.
ವೈದ್ಯೋ ನಾರಾಯಣೋ ಹರಿಃ ಎನ್ನುವ ಮಾತಿನಲ್ಲಿ ವೈದ್ಯರನ್ನು ಭಗವಂತನಿಗೆ ಹೋಲಿಸಲಾಗಿದೆ. ಕಣ್ಣಿಗೆ ಕಾಣುವ ದೇವರ ರೂಪವಾಗಿ ವೈದ್ಯರು ಅಭಯವನ್ನು ರೋಗಿಗಳ ಪಾಲಿಗೆ ನೀಡುವವರಾಗಿದ್ದಾರೆ. ಈ ಸಂದರ್ಭದಲ್ಲಿ ಅವರ ಸೇವೆಗೆ ಬೆಲೆಕಟ್ಟಲಾಗದು. ಸಮಾಜದ ಸ್ವಾಸ್ಥ್ಯ ಸಂರಕ್ಷಣೆ, ಎಲ್ಲರ ಆರೋಗ್ಯ ರಕ್ಷಣೆಗಾಗಿ ಹಗಲಿರುಳು ಶ್ರಮಿಸುತ್ತಿರುವ ವೈದ್ಯರಿಗೆ ಇಂದು ನಾವೆಲ್ಲರೂ ಧನ್ಯವಾದಗಳನ್ನು ಸಮರ್ಪಿಸೋಣ








