ಅಯ್ಯರ್ ನೀರು ದೋಸೆ… ಚೀಕೂ ಮಸ್ರೂಮ್ ಬಿರಿಯಾನಿ…! ಇದು ಉಲ್ಟಾಪಲ್ಟಾ ಆದಾಗ…!
ನೀರು ದೋಸಾ… ಕರಾವಳಿಗರ ನೆಚ್ಚಿನ ಮತ್ತು ಸುಲಭವಾಗಿ ಮಾಡಬಹುದಾದ ದೋಸೆ. ಬಹುತೇಕ ಕರಾವಳಿ ರೆಸ್ಟೋರೆಂಟ್ಗಳಲ್ಲಿ ಈ ನೀರು ದೋಸೆಯನ್ನು ತಿನ್ನಬಹುದು. ಇದೀಗ ಈ ನೀರು ದೋಸೆ ಟೀಮ್ ಇಂಡಿಯಾದ ಡ್ರೆಸಿಂಗ್ ರೂಮ್ ನಲ್ಲೂ ಪ್ರಸಿದ್ದಿಯಾದ್ರೂ ಅಚ್ಚರಿ ಏನಿಲ್ಲ.
ಯಾಕಂದ್ರೆ ಈ ನೀರು ದೋಸೆಯನ್ನು ಈಗ ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಸವಿದಿದ್ದಾರೆ. ಹೀಗಾಗಿ ಮುಂದಿನ ದಿನಗಳಲ್ಲಿ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದ ಬ್ರೇಕ್ ಫಾಸ್ಟ್ ಮೆನ್ ನಲ್ಲೂ ಸೇರಿಸಿದ್ರೂ ಅಚ್ಚರಿ ಏನಿಲ್ಲ.
ಅಂದ ಹಾಗೇ ವಿರಾಟ್ ಕೊಹ್ಲಿಗೆ ಮಂಗಳೂರಿನ ನೀರು ದೋಸೆಯನ್ನು ತಿನ್ನಲು ಕೊಟ್ಟಿದ್ದು ಯಾರು ? ವಿರಾಟ್ ಮತ್ತು ಅನುಷ್ಕಾ ಶರ್ಮಾ ನೀರ್ ದೋಸೆ ತಿಂದು ಹೇಳಿದ್ದೇನು ? ಇದಕ್ಕೆ ಉತ್ತರ ನೀಡಬೇಕಾಗಿದ್ದು ಟೀಮ್ ಇಂಡಿಯಾದ ಭರವಸೆಯ ಆಟಗಾರ ಶ್ರೇಯಸ್ ಅಯ್ಯರ್.
ಅರೇ ಶ್ರೇಯಸ್ ಅಯ್ಯರ್ಗೂ ಈ ನೀರು ದೋಸೆಗೂ ಏನು ಸಂಬಂಧ ಅಂತೀರಾ…ಹೌದು, ಶ್ರೇಯಸ್ ಅಯ್ಯರ್ ಅವರ ತಾಯಿ ರೋಹಿಣಿ ಅಯ್ಯರ್ ಮೂಲತಃ ಮಂಗಳೂರಿನವರು. ಹೀಗಾಗಿ ಶ್ರೇಯಸ್ ಅಯ್ಯರ್ಗೆ ಕರಾವಳಿಯ ನಾನಾ ಶೈಲಿಯ ತಿಂಡಿ, ಭೋಜನಗಳು ಮನೆಯಲ್ಲೇ ರೆಡಿಯಾಗುತ್ತವೆ. ಹಾಗೇ ಶ್ರೇಯಸ್ ಅಯ್ಯರ್ ಅವರ ಸಂತೋಷ್ ಅಯ್ಯರ್ ಅವರು ಮೂಲತಃ ತಮಿಳುನಾಡಿನವರು. ಆದ್ರೆ ಇವರ ಕುಟುಂಬ ಕೇರಳದ ತ್ರಿಶೂರ್ನಲ್ಲಿದ್ದಾರೆ. ಆದ್ರೆ ಸಂತೋಷ್ ಅಯ್ಯರ್ ಮಾತ್ರ ಬೆಳೆದಿರೋದು ಮುಂಬೈನಲ್ಲಿ. ಹೀಗಾಗಿ ಶ್ರೇಯಸ್ ಅಯ್ಯರ್ಗೆ ಕರಾವಳಿ, ಕೇರಳ ಹಾಗೂ ತಮಿಳುನಾಡಿನ ಒಟ್ಟಾರೆ ದಕ್ಷಿಣ ಭಾರತದ ಆಹಾರಗಳು ಮಾಮೂಲಿಯಾಗಿಬಿಟ್ಟಿವೆ.
ಇದೀಗ ಲಾಕ್ ಡೌನ್ ಟೈಮ್ ನಲ್ಲಿ ಎಲ್ಲಾ ಕ್ರಿಕೆಟಿಗರು ಮನೆಯಲ್ಲೇ ಲಾಕ್ ಆಗಿದ್ದಾರೆ. ಮುಂಬೈನಲ್ಲಿರುವ ಶ್ರೇಯಸ್ ಅಯ್ಯರ್ಗೂ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮನೆಗೂ ಕೇವಲ 500 ಮೀಟರ್ ದೂರವಷ್ಟೇ. ಹೀಗಾಗಿ ಶ್ರೇಯಸ್ ಅಯ್ಯರ್ ತನ್ನ ಅಮ್ಮ ರೋಹಿಣಿ ಮಾಡಿರುವಂತಹ ನೀರು ದೋಸೆಯನ್ನು ಚೀಕೂ ಮನೆಗೆ ಪಾರ್ಸೆಲ್ ತೆಗೆದುಕೊಂಡಿದ್ದಾರೆ. ಈ ವಿಚಾರವನ್ನು ಸ್ವತಃ ವಿರಾಟ್ ಕೊಹ್ಲಿ ತನ್ನ ಟ್ವಿಟರ್ನಲ್ಲಿ ಹೇಳಿಕೊಂಡಿದ್ದಾರೆ.
ಹಾಗಂತ ಚೀಕೂ ಮತ್ತು ಅನುಷ್ಕಾ ಶ್ರೇಯಸ್ ಅಯ್ಯರ್ ಅವರನ್ನು ಬರೀ ಕೈಯಲ್ಲಿ ಕಳಿಸಲಿಲ್ಲ. ಬದಲಾಗಿ ಶ್ರೇಯಸ್, ಅಪ್ಪ – ಅಮ್ಮ ಹಾಗೂ ತಂಗಿಗೆ ಚೀಕೂ ಮನೆಯಿಂದ ಮಸ್ರೂಮ್ ಬಿರಿಯಾನಿ ರವಾನೆಯಾಗಿದೆ.
ಮುಂಬೈನ ಇದೇ ಏರಿಯಾದಲ್ಲಿ ರವಿಶಾಸ್ತ್ರಿಯವರ ಮನೆ ಕೂಡ ಇದೆ. ರವಿಶಾಸ್ತ್ರಿ ಅವರ ಮೂಲ ಮನೆ ಇರೋದು ಕರಾವಳಿಯಲ್ಲೇ. ಇನ್ನು ರವಿಶಾಸ್ತ್ರಿ ಮತ್ತು ವಿರಾಟ್ ಕೊಹ್ಲಿ ಇಬ್ಬರು ಆತ್ಮೀಯರು. ಈಗ ವಿರಾಟ್ ಕೊಹ್ಲಿ ನೀರು ದೋಸೆಯ ಟೇಸ್ಟ್ ಅನುಭವಿಸಿದ್ದಾರೆ. ರವಿಶಾಸ್ತ್ರಿಗೂ ನೀರು ದೋಸೆ ಗೊತ್ತು. ಒಟ್ಟಿನಲ್ಲಿ ಟೀಮ್ ಇಂಡಿಯಾದ ಬ್ರೇಕ್ ಫಾಸ್ಟ್ ಮೆನ್ ನಲ್ಲಿ ನೀರು ದೋಸೆ ಸೇರಿಕೊಂಡ್ರೂ ಅಚ್ಚರಿ ಏನಿಲ್ಲ..!