ಅಂದೊಂದು ಕಾಲವಿತ್ತು.. ಭಾರತ ಕ್ರಿಕೆಟ್ ತಂಡಲ್ಲಿ ಆಡಬೇಕಾದ್ರೆ ರಣಜಿ ಪಂದ್ಯಗಳಲ್ಲಿ ಬೆವರಿನ ಹನಿಗಳಂತೆ ರನ್ಗಳ ಮಳೆಯನ್ನೇ ಸುರಿಸಬೇಕಾಗಿತ್ತು. ಆಯ್ಕೆಗಾರರು.. ಭಾರತ ಕ್ರಿಕೆಟ್ ತಂಡದ ನಾಯಕ ಯುವ ಆಟಗಾರರ ಪಂದ್ಯವನ್ನು ನೋಡಿದ ಬಳಿಕವಷ್ಟೇ ಭಾರತ ಕ್ರಿಕೆಟ್ ತಂಡಕ್ಕೆ ಎಂಟ್ರಿ. ಅಷ್ಟೇ ಅಲ್ಲ, ಪ್ರತಿಭೆಯ ಜೊತೆಗೆ ಅದೃಷ್ಟವೂ ಬೇಕಾಗಿತ್ತು ಎಂಬುದು ಸಹ ಸುಳ್ಳಲ್ಲ.
ಆಲ್ ಮೋಸ್ಟ್ 2000ದ ಹಿಂದೆ ರಣಜಿ ಪಂದ್ಯಗಳೇ ಆಟಗಾರರ ಪ್ರತಿಭೆಗಳಿಗೆ ಮಾನದಂಡವಾಗುತ್ತಿತ್ತು. ಆದ್ರೂ ಆಗಿನ ಸಮಯದಲ್ಲಿ ಮುಂಬೈ ಲಾಬಿ ಕೂಡ ಜೋರಾಗಿ ನಡೆಯುತ್ತಿತ್ತು. ಇದರ ನಡುವೆಯೂ ಜಿ.ಆರ್. ವಿಶ್ವನಾಥ್, ಚಂದ್ರಶೇಖರ್, ಬಿಷನ್ ಸಿಂಗ್ ನಂತಹ ಆಟಗಾರರು ಭಾರತ ಕ್ರಿಕೆಟ್ ತಂಡದಲ್ಲಿ ಪ್ರವೇಶ ಗಿಟ್ಟಿಸಿಕೊಂಡಿರುವುದು ಟ್ಯಾಲೆಂಟ್ನಿಂದಲೇ ಹೊರತು ಯಾವುದೇ ಲಾಬಿಯಿಂದಲ್ಲ.
ಇನ್ನು 90ರ ದಶಕದಲ್ಲಿ ಭಾರತೀಯ ಕ್ರಿಕೆಟ್ ತಂಡವನ್ನು ಆಳಿದವರು ದಕ್ಷಿಣ ಭಾರತೀಯರು ಎಂಬುದರಲ್ಲಿ ಎರಡು ಮಾತಿಲ್ಲ. ಅದರಲ್ಲೂ ಕರ್ನಾಟಕದ ಆಟಗಾರರು ಭಾರತ ಕ್ರಿಕೆಟ್ ತಂಡದಲ್ಲಿ ಪ್ರಭುತ್ವ ಸಾಧಿಸಿದ್ದು ಈಗ ಇತಿಹಾಸ. ಮುಂಬೈ ಲಾಬಿಯ ನಡುವೆಯೂ ನಮ್ಮ ರಾಹುಲ್ ದ್ರಾವಿಡ್, ಸುಜಿತ್ ಸೋಮಸುಂದರ್, ವಿಜಯ್ ಭಾರದ್ವಾಜ್, ಅನಿಲ್ ಕುಂಬ್ಳೆ, ಜಾವಗಲ್ ಶ್ರೀನಾಥ್, ವೆಂಕಟೇಶ್ ಪ್ರಸಾದ್, ಸುನೀಲ್ ಜೋಷಿ, ಡೇವಿಡ್ ಜಾನ್ಸನ್ ನಂತಹ ಆmಗಾರರು ಅಂದಿನ ನಾಯಕ ಮಹಮ್ಮದ್ ಅಜರುದ್ದೀನ್ ಕಣ್ಣಿಗೆ ಬೀಳದೇ ಇರುತ್ತಿದ್ರೆ ಇವತ್ತಿಗೂ ಇವರೆಲ್ಲಾ ರಣಜಿ ಕ್ರಿಕೆಟಿಗರಾಗುತ್ತಿದ್ದರು.
ಅಜರುದ್ದೀನ್ ವಿರುದ್ಧ ಮ್ಯಾಚ್ ಫಿಕ್ಸಿಂಗ್ ಆರೋಪ ಬಂದಿರಬಹುದು.. ಆದ್ರೂ ದಕ್ಷಿಣ ಭಾರತೀಯ ಆಟಗಾರರಿಗೆ ಮುಖ್ಯವಾಗಿ ಕನ್ನಡಿಗರ ಪ್ರತಿಭೆಗಳಿಗೆ ಸೂಕ್ತ ಸ್ಥಾನಮಾನ ನೀಡಿದ್ದಾರೆ ಎಂಬುದನ್ನು ಮರೆಯುವ ಹಾಗಿಲ್ಲ. ತಮಿಳುನಾಡಿನ ವೆಂಕಟಪತಿ ರಾಜು, ಡಬ್ಲ್ಯೂ ವಿ ರಾಮನ್, ವಿವಿಎಸ್ ಲಕ್ಷ್ಮಣ್ನಂತಹ ಪ್ರತಿಭೆಗಳನ್ನು ಗುರುತಿಸಿದ್ದು ಕೂಡ ಅಜರುದ್ದೀನ್ ಎಂಬುದರಲ್ಲಿ ಯಾವುದೇ ಸಂದೇಹವಿಲ್ಲ.
ಬಳಿಕ ತೆಂಡುಲ್ಕರ್ ನಾಯಕತ್ವದಲ್ಲೂ ಮುಂಬೈ ಲಾಬಿ ನಡೆಯುತ್ತಿದೆ ಎಂಬ ಟೀಕೆಗಳು ಕೇಳಿಬಂದಿದ್ದವು. ಆದ್ರೆ ಭಾರತೀಯ ಕ್ರಿಕೆಟ್ ಚರಿತ್ರೆಯನ್ನೇ ಬದಲಾಯಿಸಿದ್ದು ಸೌರವ್ ಗಂಗೂಲಿ ನಾಯಕತ್ವ. ದಕ್ಷಿಣ ಭಾರತ.. ಉತ್ತರ ಭಾರತ ಎಂಬ ಲಾಬಿಯನ್ನು ಬದಿಗಿಟ್ಟು ತನ್ನದೇ ಆದ ಟೀಮ್ ಇಂಡಿಯಾವನ್ನು ಕಟ್ಟಿದ್ದ ಶ್ರೇಯ ದಾದಾನಿಗೆ ಸಲ್ಲಲೇಬೇಕು.
ಹಾಗೇ ನೋಡಿದ್ರೆ, ಜಾತಿ, ಧರ್ಮ ಅನ್ನೋದು ಭಾರತೀಯ ಕ್ರಿಕೆಟ್ನಲ್ಲಿ ಎಂದಿಗೂ ಪರಿಗಣನೆಗೆ ಬಂದಿಲ್ಲ. ಆದ್ರೆ ಉತ್ತರ ದಕ್ಷಿಣ, ಮುಂಬೈ ಅನ್ನೋ ಲಾಬಿ ಮಾತ್ರ ಇತ್ತು. ಇದನ್ನೆಲ್ಲಾ ಅರಿತುಕೊಂಡ ಗಂಗೂಲಿ ಬಲಿಷ್ಠ ಟೀಮ್ ಇಂಡಿಯಾವನ್ನು ಕಟ್ಟಲು ಮುಂದಾದ್ರು. ಜೊತೆಗೆ ಮ್ಯಾಚ್ ಫಿಕ್ಸಿಂಗ್ ಆರೋಪ ಬೇರೆ ಟೀಮ್ ಇಂಡಿಯಾದ ಕೆಲವು ಆಟಗಾರರ ಮೇಲೆ ಬಂದಿತ್ತು. ಇಂತಹ ಕ್ಲಿಷ್ಟಕರ ಸಂದರ್ಭದಲ್ಲಿ ಯಂಗ್ ಟೀಮ್ ಇಂಡಿಯಾವನ್ನು ಕಟ್ಟಲು ಮುಂದಾದ ಗಂಗೂಲಿಗೆ ಸಾಥ್ ನೀಡಿದ್ದು ಕೂಡ ಕರ್ನಾಟಕದವರೇ. ಅದರಲ್ಲೂ ರಾಹುಲ್ ದ್ರಾವಿಡ್, ಕುಂಬ್ಳೆ ಮತ್ತು ಜಾವಗಲ್ ಶ್ರೀನಾಥ್ ಮೈದಾನದಲ್ಲಿ ಗಂಗೂಲಿ ಬತ್ತಳಿಕೆಯ ಪ್ರಮುಖ ಅಸ್ತ್ರಗಳಾಗಿದ್ದರು.
ತಂಡದ ಒಳಿತಿಗಾಗಿ ಆರಂಭಿಕ ಸ್ಥಾನವನ್ನೇ ಸೆಹ್ವಾಗ್ಗೆ ಬಿಟ್ಟುಕೊಟ್ಟಿದ್ದರು. 2003ರ ವಿಶ್ವಕಪ್ನಲ್ಲಿ ಹೆಚ್ಚುವರಿ ಬ್ಯಾಟ್ಸ್ಮೆನ್ಗಾಗಿ ದ್ರಾವಿಡ್ರನ್ನು ವಿಕೆಟ್ ಕೀಪಿಂಗ್ ಮಾಡಿಸಿದ್ರು. ನಿವೃತ್ತಿ ಹೊಂದಿದ್ದ ಜಾವಗಲ್ ಶ್ರೀನಾಥ್ ಮನವೋಲಿಸಿ 2003ರ ವಿಶ್ವಕಪ್ನಲ್ಲಿ ಆಡುವಂತೆ ಮಾಡಿದ್ದರು. ಸೆಹ್ವಾಗ್, ಗಂಭೀರ್, ಯುವರಾಜ್ ಸಿಂಗ್, ಜಹೀರ್ ಖಾನ್, ಹರ್ಭಜನ್ ಸಿಂಗ್, ಮಹಮ್ಮದ್ ಕೈಫ್, ಆಶೀಶ್ ನೆಹ್ರಾ, ಧೋನಿಯಂತಹ ಆಟಗಾರರನ್ನು ಕ್ರಿಕೆಟ್ ಜಗತ್ತಿಗೆ ಪರಿಚಯಿಸಿದ್ರು. ಆದ್ರೆ ಕಳಪೆ ಫಾರ್ಮ್ ಹಾಗೂ ಗ್ರೆಗ್ ಚಾಪೆಲ್ ಕುತಂತ್ರದಿಂದ ನಾಯಕತ್ವವನ್ನು ಕಳೆದುಕೊಂಡ ಗಂಗೂಲಿ ಮತ್ತೆ ತಂಡವನ್ನು ಸೇರಿಕೊಳ್ಳಲು ಹರಸಾಹಸಪಟ್ಟಿದ್ದು ದುರಂತವೇ ಸರಿ.
ಬಳಿಕ ರಾಹುಲ್ ದ್ರಾವಿಡ್ ಗಂಗೂಲಿಯ ಉತ್ತರಾಧಿಕಾರಿಯಾದ್ರು. ಸುರೇಶ್ ರೈನಾ, ರೋಹಿತ್ ಶರ್ಮಾನಂತಹ ಆಟಗಾರರ ಪ್ರತಿಭೆಗಳನ್ನು ಗುರುತಿಸಿದ್ರು. ಆದ್ರೆ 2007ರ ಕೆರೆಬಿಯನ್ ವಿಶ್ವಕಪ್ ರಾಹುಲ್ ದ್ರಾವಿಡ್ ಕ್ರಿಕೆಟ್ ಬದುಕಿಗೆ ಕಪ್ಪುಚುಕ್ಕೆಯಾಗಿದ್ದು ಮಾತ್ರ ವಿಪರ್ಯಾಸ.
ಅಲ್ಲದೆ ಕೆರೆಬಿಯನ್ ವಿಶ್ವಕಪ್ ಟೂರ್ನಿ, ವಿಶ್ವ ಕ್ರಿಕೆಟ್ನಲ್ಲಿ ಆಸ್ಟ್ರೇಲಿಯಾಗೆ ಸರಿಸಾಟಿಯಾಗಿ ಬೆಳೆಯುತ್ತಿದ್ದ ಟೀಮ್ ಇಂಡಿಯಾದ ಸಾಮಥ್ರ್ಯವನ್ನೇ ಪ್ರಶ್ನೆ ಮಾಡುವಂತೆ ಆಯ್ತು. ಆದ್ರೆ ಗಂಗೂಲಿ, ರಾಹುಲ್, ತೆಂಡುಲ್ಕರ್ ಅನ್ನೋ ತ್ರಿಮೂರ್ತಿಗಳು ಭವಿಷ್ಯದ ಟೀಮ್ ಇಂಡಿಯಾವನ್ನು ಕಟ್ಟಲು ಮುಂದಾದ್ರು. ಯುವ ಆಟಗಾರರಿಗೆ ಗಂಗೂಲಿ ಪ್ರೇರಣೆ ನೀಡಿದ್ರೆ, ದ್ರಾವಿಡ್ ಸ್ಫೂರ್ತಿಯ ಚಿಲುಮೆಯಾದ್ರು. ಚೊಚ್ಚಲ ಟಿ-20ಯಲ್ಲಿ ಹಿರಿಯ ಆಟಗಾರರು ಆಡುವುದು ಬೇಡ ಎಂದು ಬಿಸಿಸಿಐಗೆ ಸಲಹೆ ನೀಡಿದ್ರು. ಇನ್ನೊಂದೆಡೆ ಯುವರಾಜ್ ಸಿಂಗ್, ಸೆಹ್ವಾಗ್ ಆಪ್ತನಾಗಿದ್ರೂ ಧೋನಿಗೆ ಟೀಮ್ ಇಂಡಿಯಾದ ಪಟ್ಟಕಟ್ಟಲು ತೆಂಡುಲ್ಕರ್ ಶಿಫಾರಾಸು ಮಾಡಿದ್ರು.
ಮುಂದಿನ ದಿನಗಳಲ್ಲಿ ನಡೆದಿದ್ದು ವಿಶ್ವಕಪ್ ಕ್ರಿಕೆಟ್ನಲ್ಲಿ ಟೀಮ್ ಇಂಡಿಯಾದ ಕಲರವ. ಧೋನಿ ನಾಯಕತ್ವದಲ್ಲಿ ಚೊಚ್ಚಲ ಟಿ-20 ವಿಶ್ವಕಪ್ ಗೆದ್ದ ನಂತರ ಟೀಮ್ ಇಂಡಿಯಾ ವಿಶ್ವ ಕ್ರಿಕೆಟ್ನಲ್ಲಿ ಒಡ್ಡೋಲಗವನ್ನೇ ನಡೆಸಿತ್ತು. ಅದಕ್ಕೆ ತಕ್ಕಂತೆ ಐಪಿಎಲ್ ಅನ್ನೋ ಚಿನ್ನದ ಮೊಟ್ಟೆಯ ಕೋಳಿಯ ಕೂಗು ಇಡೀ ಕ್ರಿಕೆಟ್ ಜಗತ್ತನ್ನು ಆಕರ್ಷಿಸಿತ್ತು. ವಿಶ್ವ ಕ್ರಿಕೆಟ್ನಲ್ಲಿ ಹೊಡಿಬಡಿ ಆಟ ರಸದೌತಣವನ್ನೇ ಉಣಬಡಿಸಿತ್ತು. ಅದರಲ್ಲೂ ಭಾರತದ ಯುವ ಆಟಗಾರರಿಗೆ ಐಪಿಎಲ್ ಅನ್ನೋದು ಪ್ರತಿಭಾನ್ವೇಷಣೆಗೆ ವೇದಿಕೆಯಾಯ್ತು. ಹೊಡಿಬಡಿ ಆಟವನ್ನೇ ಮೂಲಮಂತ್ರವನ್ನಾಗಿಸಿಕೊಂಡ ಯುವ ಆಟಗಾರರು ಕ್ರಿಕೆಟ್ನ ಶಾಸ್ತ್ರೀಯ ಶೈಲಿಗಳನ್ನು ಮರೆತು, ಅಬ್ಬರದ ಪಾಪ್ ಸಂಗೀತದಂತೆ ರನ್ ಗಳಿಸುವತ್ತ್ತ ಮುಖಮಾಡಿದ್ರು. ಪರಿಣಾಮ, ಯುವ ಆಟಗಾರರು ಗಾವಸ್ಕರ್, ಅಜರುದ್ದೀನ್, ತೆಂಡುಲ್ಕರ್, ವಿನೋದ್ ಕಾಂಬ್ಳಿ, ಗಂಗೂಲಿ, ರಾಹುಲ್, ವಿವಿಎಸ್ನಂತೆ ದಿನಪೂರ್ತಿ ಮೈದಾನದಲ್ಲಿ ಬೌಲರ್ಗಳ ತಾಳ್ಮೆಯನ್ನು ಪರೀಕ್ಷೆ ಮಾಡಿಕೊಂಡು, ದಾಖಲೆಗಳನ್ನು ಬರೆದಿರುವುದನ್ನು ನಾವು ಇತ್ತೀಚಿನ ದಿನಗಳಲ್ಲಿ ನೋಡುವುದೇ ಅಪರೂಪ. ಆದ್ರೂ ್ರ ವಿರಾಟ್ ಕೊಹ್ಲಿ, ಅಜಿಂಕ್ಯಾ ರಹಾನೆ, ಚೇತೇಶ್ವರ್ ಪೂಜಾರನಂತಹ ಆಟಗಾರರು ಟೆಸ್ಟ್ ಕ್ರಿಕೆಟ್ನ ಅಗ್ನಿಪರೀಕ್ಷೆಯಲ್ಲಿ ಪಾಸಾಗಿದ್ದಾರೆ. ಇನ್ನುಳಿದಂತೆ ಟೆಸ್ಟ್ ಕ್ರಿಕೆಟ್ನಲ್ಲಿ ಸೆಹ್ವಾಗ್, ಗಂಭೀರ್ನಂತೆ ಹೊಡಿಬಡಿ ಆಟದಲ್ಲೂ ಸಂಯಮದಿಂದ ರನ್ ದಾಖಲಿಸಿದ್ದು ರೋಹಿತ್ ಶರ್ಮಾ ಮತ್ತು ಶಿಖರ್ ಧವನ್. ಅದು ಕೂಡ ಕೊಂಚ ಮಟ್ಟಿಗೆ ಮಾತ್ರ. ಸದ್ಯದ ಮಟ್ಟಿಗೆ ಟೀಮ್ ಇಂಡಿಯಾದ ಟೆಸ್ಟ್ ಕ್ರಿಕೆಟ್ನ ಶಾಸ್ತ್ರೀಯ ಶಾಟ್ಸ್ಗಳನ್ನು ಕೆ.ಎಲ್, ರಾಹುಲ್, ಶ್ರೇಯಸ್ ಅಯ್ಯರ್ ಅವರಲ್ಲಿ ಕಾಣಬಹುದು. ಅದನ್ನು ಬಿಟ್ಟು ಈ ಪೀಳಿಗೆಯಲ್ಲಿ ಶುಭ್ಮನ್ ಗಿಲ್, ಸಾಯಿ ಸುದರ್ಶನ್, ಜೈಸ್ವಾಲ್ನಲ್ಲಿ ಬ್ಯಾಟಿಂಗ್ನಲ್ಲಿ ನೋಡಬಹುದು. ಇನ್ನುಳಿಂದತೆ ಎಲ್ಲರೂ ಕೂಡ ಹೊಡಿಬಡಿ ಆಟವನ್ನೇ ತನ್ನ ಬತ್ತಳಿಕೆಯಲ್ಲಿಟ್ಟುಕೊಂಡಿದ್ದಾರೆ.
ಕಾರಣ ಇಷ್ಟೇ.. ರಣಜಿ ಟೂರ್ನಿಯಲ್ಲಿ ತಾಳ್ಮೆಯಿಂದ ಆಡುವ ಇರಾದೆ ಈಗಿನ ಕ್ರಿಕೆಟಿಗರಲ್ಲಿ ಇಲ್ಲ. ಈ ಹಿಂದೆ ಫಾರ್ಮು ಕೈಕೊಟ್ಟಾಗ ಎಂಥಾ ಹಿರಿಯ ಆಟಗಾರನಾಗಿದ್ರೂ ಆತ ಆಡುತ್ತಿದ್ದದ್ದು ರಣಜಿ ಕ್ರಿಕೆಟ್ ಟೂರ್ನಿಯಲ್ಲಿ. ರಣಜಿ ಕ್ರಿಕೆಟ್ ಅನ್ನೋದು ಕ್ರಿಕೆಟಿಗರಿಗೆ ಗುರುಕುಲ. ರಣಜಿ ಟೂರ್ನಿಯಲ್ಲಿ ಕ್ಲಿಕ್ ಆದ್ರೆ ಭಾರತ ತಂಡದ ಬಾಗಿಲು ತೆರೆಯುತ್ತದೆ ಎಂಬ ಮಾತಿತ್ತು. ಆದ್ರೆ ರಣಜಿ ಕ್ರಿಕೆಟ್ ತನ್ನ ಘನತೆಯನ್ನು ಕಳೆದುಕೊಂಡಿದೆ.
ಈ ಹಿಂದಿನ ಆಟಗಾರರ ರಣಜಿ ಸ್ಕೋರ್ಗಳನ್ನು ನೋಡಿದ್ರೆ ಅಚ್ಚರಿಯಾಗುತ್ತದೆ. ಯಾವಾಗ ಇವರು ಇಷ್ಟೊಂದು ರನ್ ದಾಖಲಿಸಿದ್ದು ಅಂತ. ಅದಕ್ಕಾಗಿಯೇ ಅವರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಸಾವಿರ ಸಾವಿರ ಲೆಕ್ಕದಲ್ಲಿ ರನ್ ಗಳಿಸಲು ಸಾಧ್ಯವಾಗಿರುವುದು.
ಆದ್ರೆ ಈಗೀನ ಆಟಗಾರರ ರನ್ ನೋಡಿದ್ರೆ ರಣಜಿ ಸ್ಕೋರ್ಗಿಂತ ಹೆಚ್ಚು ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚಿನ ರನ್ ದಾಖಲಿಸಿರುತ್ತಾರೆ. ಇದಕ್ಕೆ ಇನ್ನೊಂದು ಕಾರಣ ಬಿಡುವಿಲ್ಲದ ಅಂತಾರಾಷ್ಟ್ರೀಯ ಪಂದ್ಯಗಳು.. ಮತ್ತೊಂದೆಡೆ ರಣಜಿ ಮ್ಯಾಚ್ಗಳನ್ನು ಯಾಕೆ ಆಡಬೇಕು ಅನ್ನೋ ಅಸಡ್ಡೆ. ಆದ್ರೆ ಈ ಹಿಂದಿನ ಆಟಗಾರರು ಫಾಮುರ್À ಕಳೆದುಕೊಂಡಾಗ, ಬಿಡುವಿದ್ದಾಗ ಕಡ್ಡಾಯವಾಗಿ ರಣಜಿ ಪಂದ್ಯಗಳನ್ನು ಆಡುತ್ತಿದ್ದರು. ಆದ್ರೆ ಈಗ ಆ ಪದ್ಧತಿಯೇ ಇಲ್ಲ. ಹೀಗಾಗಿಯೇ ನಾವು ಇಂದು ವಿರಾಟ್ ಸ್ಥಾನಕ್ಕೆ ಯಾರು..? ರೋಹಿತ್ ಸ್ಥಾನಕ್ಕೆ ಯಾರು..? ಮೂರನೇ ಕ್ರಮಾಂಕ, ನಾಲ್ಕನೇ ಕ್ರಮಾಂಕದಲ್ಲಿ ಯಾರು ಆಡ್ತಾರೆ..? ಇನಿಂಗ್ಸ್ ಯಾರು ಶುರು ಮಾಡ್ತಾರೆ ಅನ್ನೋ ಪ್ರಶ್ನೆ ಮಾಡುತ್ತಿದ್ದೇವೆ. ಹಾಗೇ ಬೌಲರ್ಗಳ ಸಮಸ್ಯೆ ಕೂಡ ಕಾಡುತ್ತಿದೆ. ಹಾಗಂತ ಪ್ಲೇಯರ್ಸ್ ಇಲ್ಲ ಅಂತಲ್ಲ. ಖಂಡಿತವಾಗಿಯೂ ಇದ್ದಾರೆ.. ಅದಕ್ಕಾಗಿ ಕಾಯಬೇಕು. ಹುಡುಕಬೇಕು.. ಶಿಸ್ತು, ಬದ್ಧತೆಯನ್ನು ಕಾಪಾಡಿಕೊಳ್ಳಬೇಕು.
ಒಟ್ಟಿನಲ್ಲಿ ಟಿ-20 ಕ್ರಿಕೆಟ್ ಕ್ರಿಕೆಟ್ ಅಭಿಮಾನಿಗಳಿಗೆ ರಸದೌತಣವನ್ನು ನೀಡಿದ್ರೂ ಟೆಸ್ಟ್ ಕ್ರಿಕೆಟ್ನ ಕಲಾತ್ಮಕತೆಯ ಕ್ಲಾಸ್ ಆಟವನ್ನು ಕಣ್ತುಂಬಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಅಷ್ಟೇ ಸತ್ಯ.
ಸನತ್ ರೈ








