ಬೆಂಗಳೂರು : ಅನ್ಯ ರಾಜ್ಯದ ವ್ಯಕ್ತಿಗಳಿಂದ ಬೆಂಗಳೂರು ಮತ್ತು ಕನ್ನಡಿಗರ ಬಗ್ಗೆ ಅವಹೇಳನಕಾರಿ ಹೇಳಿಕೆಗಳು ಪದೇ ಪದೇ ವರದಿಯಾಗುತ್ತಿವೆ. ಇತ್ತೀಚೆಗೆ ಒಡಿಶಾ ಮೂಲದ ಯುವತಿ ನೇಹಾ ಬಿಸ್ವಾಲ್, ಬೆಂಗಳೂರಿನ ಜನರ ಕುರಿತು ಅವಹೇಳನಕಾರಿ ಹೇಳಿಕೆಗಳನ್ನು ನೀಡಿ, ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಹಂಚಿಕೊಂಡಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. “ಬೆಂಗಳೂರಿಗರ ತಲೆಯಲ್ಲಿ ಬುದ್ಧಿ ಇಲ್ಲ” ಎಂದು ಆಕೆ ನಾಲಿಗೆ ಹರಿಬಿಟ್ಟಿದ್ದಾಳೆ.
ಬೆಂಗಳೂರಿನ ಆತಿಥ್ಯಕ್ಕೆ ಅವಮಾನ: ನೇಹಾ ಬಿಸ್ವಾಲ್ ವಿವಾದಿತ ಹೇಳಿಕೆ
ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಾ, ಪಿಜಿಯಲ್ಲಿ ವಾಸಿಸುತ್ತಿದ್ದ ನೇಹಾ ಬಿಸ್ವಾಲ್, ಬೆಂಗಳೂರಿನ ರಸ್ತೆಗಳಲ್ಲಿ ವಾಹನ ಚಾಲನೆಯ ಕುರಿತು ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಮಳೆ ನೀರು ತಮ್ಮ ಮೇಲೆ ಚಿಮ್ಮಿದ ಘಟನೆಯನ್ನು ವಿವರಿಸುತ್ತಾ, ಬೆಂಗಳೂರಿಗರು “ಅನಕ್ಷರಸ್ಥರು” ಮತ್ತು “ಚೂ*** ಥೂ” ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ಕನ್ನಡಿಗರಿಂದ ತೀವ್ರ ಟೀಕೆಗೆ ಗುರಿಯಾಗಿದೆ.
ಬೆಂಗಳೂರಿನ ಸಹಬಾಳ್ವೆಗೆ ಸವಾಲು: ಪದೇ ಪದೇ ಏಕೆ ಈ ಅವಹೇಳನ?
ಕನ್ನಡಿಗರ ಮೇಲೆ ಅನ್ಯ ರಾಜ್ಯದವರ ಅವಹೇಳನಕಾರಿ ವರ್ತನೆ ಇದೇ ಮೊದಲಲ್ಲ. ಈ ಹಿಂದೆ ಬ್ಯಾಂಕ್ ಸಿಬ್ಬಂದಿಯೊಬ್ಬರು ಕನ್ನಡ ಮಾತನಾಡುವುದಿಲ್ಲ ಎಂದು ದುರಹಂಕಾರ ತೋರಿಸಿದ್ದರೆ, ಓಲಾ ಬುಕ್ಕಿಂಗ್ ಸಂಬಂಧ ಆಟೋ ಚಾಲಕ ಮತ್ತು ಯುವತಿ ನಡುವೆ ವಾಗ್ವಾದ ನಡೆದಿತ್ತು. ಉತ್ತರ ಭಾರತದ ಟೆಕ್ಕಿ ಮಹಿಳೆಯೊಬ್ಬರು ಆಟೋ ಚಾಲಕನಿಗೆ ಚಪ್ಪಲಿಯಿಂದ ಹೊಡೆದ ಘಟನೆಯೂ ವರದಿಯಾಗಿತ್ತು. ಈಗ ನೇಹಾ ಬಿಸ್ವಾಲ್ ಅವರ ಹೇಳಿಕೆ, ಬೆಂಗಳೂರಿನ ಸಹಿಷ್ಣುತೆಗೆ ಮತ್ತೆ ಸವಾಲೆಸಗಿದೆ. ಈ ಘಟನೆಗಳು ಬೆಂಗಳೂರಿನ ಸಾಮಾಜಿಕ ಸೌಹಾರ್ದತೆಗೆ ಧಕ್ಕೆ ತರುತ್ತವೆಯೇ ಎಂಬ ಪ್ರಶ್ನೆ ಎದ್ದಿದೆ.








