ಬೆಂಗಳೂರು: ನಗರದ ಪ್ರತಿಷ್ಠಿತ ಅಲೈಯನ್ಸ್ ವಿಶ್ವವಿದ್ಯಾಲಯದ 14ನೇ ವಾರ್ಷಿಕ ಪದವಿ ಪ್ರದಾನ ಸಮಾರಂಭವು ಆನೇಕಲ್ನಲ್ಲಿರುವ ವಿವಿ ಆವರಣದಲ್ಲಿ ಶನಿವಾರ ಅತ್ಯಂತ ಅದ್ದೂರಿಯಾಗಿ ನೆರವೇರಿತು. ಕನಸುಗಳಿಗೆ ರೆಕ್ಕೆಗಳು ಎಂಬ ಅರ್ಥಪೂರ್ಣ ಶೀರ್ಷಿಕೆಯಡಿ ನಡೆದ ಈ ಸಮಾರಂಭದಲ್ಲಿ ಸುಮಾರು ಎರಡು ಸಾವಿರ ವಿದ್ಯಾರ್ಥಿಗಳು ಪದವಿ ಸ್ವೀಕರಿಸಿ ವೃತ್ತಿಜೀವನಕ್ಕೆ ಅಡಿಯಿಟ್ಟರು.

ವಿಶ್ವವಿದ್ಯಾಲಯದ ಸುಂದರ ಆವರಣದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಒಟ್ಟು 1,962 ವಿದ್ಯಾರ್ಥಿಗಳಿಗೆ ಪದವಿ ಪ್ರಮಾಣಪತ್ರಗಳನ್ನು ವಿತರಿಸಲಾಯಿತು. ಇದರಲ್ಲಿ 960 ಪದವಿ (Degree), 887 ಸ್ನಾತಕೋತ್ತರ (Masters), 10 ಪಿಎಚ್ಡಿ (PhD) ಹಾಗೂ ವಿವಿಧ ಡಿಪ್ಲೊಮಾ ವಿದ್ಯಾರ್ಥಿಗಳು ಸೇರಿದ್ದಾರೆ. ಇದು ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟಕ್ಕೆ ಸಾಕ್ಷಿಯಾಯಿತು.
ಜವಾಬ್ದಾರಿ ಮರೆಯಬೇಡಿ: ನ್ಯಾಯಮೂರ್ತಿಗಳ ಕಿವಿಮಾತು
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಕಲ್ಕತ್ತಾ ಹೈಕೋರ್ಟ್ನ ನ್ಯಾಯಮೂರ್ತಿ ಅನನ್ಯಾ ಬ್ಯಾನರ್ಜಿ ಅವರು ವಿದ್ಯಾರ್ಥಿಗಳಿಗೆ ಪ್ರಮಾಣಪತ್ರ ವಿತರಿಸಿ ಮಾತನಾಡಿದರು.
ಪದವಿ ಸಮಾರಂಭ ಎಂದರೆ ಕೇವಲ ಸಂಭ್ರಮ ಪಡುವ ದಿನವಷ್ಟೇ ಅಲ್ಲ. ಇದು ಒಂದು ಶಿಕ್ಷಣ ಸಂಸ್ಥೆಯು ತನ್ನ ವಿದ್ಯಾರ್ಥಿಗಳನ್ನು ಸಮಾಜದ ಒಳಿತಿಗಾಗಿ ಹಸ್ತಾಂತರಿಸುವ ಕ್ಷಣವಾಗಿದೆ. ಇಂದು ನೀವು ಇಲ್ಲಿಂದ ಕೇವಲ ಪದವಿ ಪಡೆದು ಹೋಗುತ್ತಿಲ್ಲ, ಅದರೊಂದಿಗೆ ಜ್ಞಾನ ಮತ್ತು ಸಮಾಜದ ಬಗೆಗಿನ ಜವಾಬ್ದಾರಿಯನ್ನೂ ಹೊತ್ತುಕೊಂಡು ಹೋಗುತ್ತಿದ್ದೀರಿ ಎಂದು ಹೇಳಿದರು.

ಶಿಕ್ಷಣ ಎಂದರೆ ಕೇವಲ ನೌಕರಿ ಪಡೆಯುವುದು ಅಥವಾ ಉದ್ಯೋಗದ ಅಂಕಿಅಂಶವಲ್ಲ. ನಮ್ಮ ಮನಸ್ಸು ಸರಿಯಾಗಿ ಯೋಚಿಸುವಂತೆ ಮಾಡುವುದು ಮತ್ತು ಕಷ್ಟದಲ್ಲಿರುವವರಿಗೆ ಮಿಡಿಯುವ ಗುಣ ಬೆಳೆಸಿಕೊಳ್ಳುವುದೇ ನಿಜವಾದ ಶಿಕ್ಷಣ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿದ್ದ ಐಐಎಂ ಬೆಂಗಳೂರಿನ ಹಿರಿಯ ಪ್ರಾಧ್ಯಾಪಕ ಡಾ. ರಿಷಿಕೇಶ ಟಿ. ಕೃಷ್ಣನ್ ಮತ್ತು ಸೆಮಿಕಂಡಕ್ಟರ್ ಉದ್ಯಮದ ಪ್ರಮುಖರಾದ ಡಾ. ವೀರಪ್ಪನ್ ವಿ ಅವರು ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಹೊಸತನವನ್ನು ಕಲಿಯುವ ಅಗತ್ಯದ ಬಗ್ಗೆ ತಿಳಿಸಿದರು. ಭಾರತವು ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿದ್ದು, ಇದರಲ್ಲಿ ಯುವಕರ ಪಾತ್ರ ದೊಡ್ಡದಿದೆ ಎಂದರು.
ವಿಶ್ವವಿದ್ಯಾಲಯದ ಕುಲಾಧಿಪತಿ ಪ್ರೊ. ಪ್ರೇಮಾನಂದ ಶೆಟ್ಟಿ, ಪ್ರೋ-ಚಾನ್ಸಲರ್ ಅಭಯ್ ಜಿ. ಚೆಬ್ಬಿ ಮತ್ತು ಉಪಕುಲಪತಿ ಡಾ. ಬಿ. ಪ್ರಿಸ್ಲಿ ಶಾನ್ ಅವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿ ಪದವಿ ಪ್ರದಾನ ಮಾಡಿದರು. ಕಾರ್ಪೊರೇಟ್, ನ್ಯಾಯಾಂಗ ಮತ್ತು ಸರ್ಕಾರಿ ಸೇವೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಕಾಲಿಡುತ್ತಿರುವ ವಿದ್ಯಾರ್ಥಿಗಳಿಗೆ ಶುಭ ಕೋರಲಾಯಿತು.








