ಬೆಂಗಳೂರು : ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ 80 ಲಕ್ಷ ರೂ. ಲಂಚದ ಆರೋಪ ಕೇಳಿಬಂದಿರುವುದರಿಂದ ಕೆಪಿಎಸ್ಸಿಯ ಆಂತರಿಕ ತನಿಖೆ ರದ್ದುಗೊಳಿಸಿ, ಸಿಬಿಐ ಅಥವಾ ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಯವರ ನೇತೃತ್ವದಲ್ಲಿ ನ್ಯಾಯಾಂಗ ತನಿಖೆ ನಡೆಸಬೇಕೆಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಆಗ್ರಹಿಸಿದ್ದಾರೆ.
ಈ ಕುರಿತು ಅವರು ಕರ್ನಾಟಕ ಲೋಕಸೇವಾ ಆಯೋಗದ ಅಧ್ಯಕ್ಷರಿಗೆ ಪತ್ರ ಬರೆದಿದ್ದಾರೆ.
ಜತೆಗೆ ವಿಧಾನ ಪರಿಷತ್ತಿನ ಪ್ರತಿಪಕ್ಷದ ನಾಯಕ ಚಲವಾದಿ ನಾರಾಯಣ ಸ್ವಾಮಿ, ಮಾಜಿ ಸಚಿವ ಸುರೇಶ್ ಕುಮಾರ್ ಮತ್ತು ಅಭ್ಯರ್ಥಿಗಳ ಪ್ರತಿನಿಧಿ ಜತೆ ಆಯೋಗಕ್ಕೆ ತೆರಳಿ ಅಧ್ಯಕ್ಷ ಮತ್ತು ಕಾರ್ಯದರ್ಶಿ ಜತೆ ಈ ಕುರಿತು ಚರ್ಚೆ ನಡೆಸಿದರು.
ಪಶು ವೈದ್ಯಾಧಿಕಾರಿಗಳ ನೇಮಕಾತಿಯಲ್ಲಿ ಅಭ್ಯರ್ಥಿಗಳಿಂದ ₹80 ಲಕ್ಷದವರೆಗೆ ಲಂಚ ಪಡೆಯಲಾಗಿದೆ ಎಂಬ ಅತ್ಯಂತ ಗಂಭೀರ ಆರೋಪ ರಾಜ್ಯದ ಜನತೆ ಹಾಗೂ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳನ್ನು ಬೆಚ್ಚಿ ಬೀಳುವಂತೆ ಮಾಡಿವೆ. ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಗಳ ಪ್ರಕಾರ, ಈ ಪ್ರಕರಣದಲ್ಲಿ ನೂರಾರು ಅಭ್ಯರ್ಥಿಗಳಿಗೆ ನೋಟಿಸ್ ಜಾರಿಯಾಗಿದ್ದು, ಕೋಟ್ಯಂತರ ರೂಪಾಯಿ ಹಣದ ಅಕ್ರಮ ವ್ಯವಹಾರ ನಡೆದಿರುವ ಶಂಕೆ ವ್ಯಕ್ತವಾಗಿದೆ. ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ಇತರ ಪ್ರಭಾವಿ ವ್ಯಕ್ತಿಗಳ ಪಾತ್ರದ ಬಗ್ಗೆಯೂ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಈ ಬೆಳವಣಿಗೆಗಳು. ಕರ್ನಾಟಕ ಲೋಕಸೇವಾ ಆಯೋಗದ ವಿಶ್ವಾಸಾರ್ಹತೆಯನ್ನೇ ಪ್ರಶ್ನಿಸುವಂತಿವೆ. ಇಂತಹ ಸಂದರ್ಭದಲ್ಲಿ ಕೆಪಿಎಸ್ಸಿಯೇ ತನ್ನ ಅಧಿಕಾರಿಗಳ ಮೂಲಕ ಆಂತರಿಕ ತನಿಖೆ ನಡೆಸಲು ಮುಂದಾಗಿರುವುದು ಅತ್ಯಂತ ಅಸಂಬದ್ಧ ಹಾಗೂ ಅಸಮಂಜಸ ನಡೆ. ತನ್ನದೇ ಸಂಸ್ಥೆಯ ಮೇಲೆ ಗಂಭೀರ ಭ್ರಷ್ಟಾಚಾರದ ಆರೋಪಗಳಿರುವಾಗ, ಅದೇ ಸಂಸ್ಥೆ ತನ್ನ ವಿರುದ್ಧದ ಆರೋಪಗಳನ್ನು ತನಿಖೆ ನಡೆಸುವುದು ನೈಸರ್ಗಿಕ ನ್ಯಾಯದ ಮೂಲಭೂತ ತತ್ವಗಳಿಗೆ ವಿರುದ್ಧವಾಗಿದೆ. ವಿಶ್ವಾಸಾರ್ಹತೆ ಕಳೆದುಕೊಂಡಿರುವ ಕೆಪಿಎಸ್ಸಿಯ ಆಂತರಿಕ ತನಿಖೆಯ ಮೇಲೆ ಜನತೆಗೆ ಹಾಗೂ ಲಕ್ಷಾಂತರ ಉದ್ಯೋಗಾಕಾಂಕ್ಷಿಗಳಿಗೆ ಯಾವುದೇ ನಂಬಿಕೆ ಉಳಿದಿಲ್ಲ. ಬದಲಾಗಿ, ಇದು ಪ್ರಕರಣವನ್ನು ಮುಚ್ಚಿಹಾಕುವ ಮತ್ತೊಂದು ಕಣ್ಣೂರೆಸುವ ತಂತ್ರವೇ ಎಂಬ ಬಲವಾದ ಅನುಮಾನಗಳು ಉದ್ಯೋಗಾಕಾಂಕ್ಷಿಗಳಲ್ಲಿ ಮತ್ತು ಸಾರ್ವಜನಿಕರಲ್ಲಿ ಮೂಡಿವೆ. ಆರೋಪಗಳ ಗಂಭೀರತೆಯನ್ನು ಗಮನಿಸಿದರೆ, ಕೆಪಿಎಸ್ಸಿ ನಡೆಸುವ ಯಾವುದೇ ಆಂತರಿಕ ತನಿಖೆಗೆ ಸಾರ್ವಜನಿಕ ವಿಶ್ವಾಸ ದೊರೆಯುವುದು ಅಸಾಧ್ಯ ಎಂದು ಅವರು ಹೇಳಿದ್ದಾರೆ.
ಈ ಪ್ರಕರಣವು ಕೇವಲ ಒಂದು ನೇಮಕಾತಿಗೆ ಸೀಮಿತವಾದ ವಿಚಾರವಲ್ಲ. ಇದು ತಮ್ಮ ಜೀವನದ ಅಮೂಲ್ಯ ವರ್ಷಗಳನ್ನು ಕಠಿಣ ಪರಿಶ್ರಮದೊಂದಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ ಮೀಸಲಿಟ್ಟಿರುವ ಲಕ್ನ್ಮಾಂತರ ಯುವಕರ ಕನಸು, ಪರಿಶ್ರಮ ಮತ್ತು ನ್ಯಾಯಯುತ ಹಕ್ಕಿನ ಪ್ರಶ್ನೆಯಾಗಿದೆ. ಸಾರ್ವಜನಿಕ ಸೇವೆಯ ನೇಮಕಾತಿಗಳು ಪ್ರತಿಭೆ ಮತ್ತು ಅರ್ಹತೆಯ ಬದಲಿಗೆ ಹಣ ಮತ್ತು ಪ್ರಭಾವದ ಆಧಾರದ ಮೇಲೆ ನಡೆಯುತ್ತಿವೆ ಎಂಬ ಅನುಮಾನವೇ ಪ್ರಜಾಪ್ರಭುತ್ವದ ಆಡಳಿತ ವ್ಯವಸ್ಥೆಗೆ ದೊಡ್ಡ ಕಳಂಕವಾಗಿದೆ. ಹೀಗಾಗಿ ಈ ಕ್ರಮಗಳನ್ನು ತಕ್ಷಣ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.
1) ಕೆಪಿಎಸ್ಸಿ ಆದೇಶಿಸಿರುವ ಆಂತರಿಕ ತನಿಖೆಯನ್ನು ತಕ್ಷಣವೇ ರದ್ದುಗೊಳಿಸಬೇಕು.
2) ಪ್ರಕರಣವನ್ನು ಕೇಂದ್ರೀಯ ತನಿಖಾ ದಳ (ಸಿಬಿಐ) ಅಥವಾ ಕರ್ನಾಟಕ ಹೈಕೋರ್ಟ್ನ ಹಾಲಿ ನ್ಯಾಯಮೂರ್ತಿಯವರ ನೇತೃತ್ವದ ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು.
3) ಪಶುವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯ ಸಂಪೂರ್ಣ ತನಿಖೆ ನಡೆಸಿ, ಅಧಿಕಾರಿಗಳು, ಮಧ್ಯವರ್ತಿಗಳು, ಫಲಾನುಭವಿಗಳು ಹಾಗೂ ಇತರೆ ಎಲ್ಲ ಸಂಬಂಧಪಟ್ಟವರ ಪಾತ್ರವನ್ನು ತನಿಖೆಯ ವ್ಯಾಪ್ತಿಗೆ ಒಳಪಡಿಸಬೇಕು.
4) ಇದೇ ರೀತಿಯ ಅಕ್ರಮಗಳು ಕೆಪಿಎಸ್ಸಿ ನಡೆಸಿರುವ ಇತ್ತೀಚಿನ ಇತರೆ ನೇಮಕಾತಿ ಪ್ರಕ್ರಿಯೆಗಳಲ್ಲಿಯೂ ನಡೆದಿವೆಯೇ ಎಂಬುದನ್ನೂ ತನಿಖೆಯ ವ್ಯಾಪ್ತಿಗೆ ಒಳಪಡಿಸಬೇಕು.
5) ತನಿಖಾ ವರದಿಯನ್ನು ಸಾರ್ವಜನಿಕಗೊಳಿಸಿ, ತಪ್ಪಿತಸ್ಥರ ವಿರುದ್ಧ ಯಾವುದೇ ಪ್ರಭಾವಕ್ಕೂ ಮಣಿಯದೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.
6) ಪಶುವೈದ್ಯಾಧಿಕಾರಿ ಹುದ್ದೆಯ ಆಕಾಂಕ್ಷಿಗಳ ಮನವಿಯ ಮೇರೆಗೆ ಮರು ಪರೀಕ್ಷೆ ನಡೆಸಲು ಕ್ರಮ ಕೈಗೊಳ್ಳುವುದು.
ಪತ್ರ ಸಲ್ಲಿಸಿದ ಬಳಿಕ ಈ ಕುರಿತು ಮಾತನಾಡಿದ ಅವರು, ಹಣ ಕೊಟ್ಟವರನ್ನು ಬೆಂಗಳೂರಿಂದ ಆಚೆಗೆ, ಹೊರರಾಜ್ಯಕ್ಕೆ ಕರೆದೊಯ್ದು ಪ್ರಶ್ನೆಪತ್ರಿಕೆ ಕೊಟ್ಟು ತಯಾರಿ ಮಾಡಿಸಿದ್ದಾರೆ. ಪ್ರತಿಭಾವಂತರಿಗೆ ಕಡಿಮೆ ಅಂಕ ಬಂದಿದೆ ಎಂಬ ಆರೋಪ ಬಂದಿದೆ. ಕೆಪಿಎಸ್ಸಿಯಲ್ಲಿ ಹಣವಿಲ್ಲದೆ ಯಾವ ಕೆಲಸವೂ ಆಗಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಮೆರಿಟ್ ಆಧಾರದಲ್ಲಿ ಮಾತ್ರ ಇಲ್ಲಿ ನೇಮಕಾತಿ ನಡೆಯುತ್ತದೆ ಎಂಬ ನಂಬಿಕೆ ಜನರಲ್ಲಿ ಮೂಡಬೇಕಿದೆ. ಕೆಪಿಎಸ್ಸಿಯಿಂದ ಈವರೆಗೆ ನಾಲ್ಕು ದೂರು ಸಲ್ಲಿಸಿದ್ದು, ಅದರ ವಿರುದ್ಧ ಪೊಲೀಸರು ಸರಿಯಾಗಿ ತನಿಖೆ ಮಾಡುವುದಿಲ್ಲ. ತಪ್ಪಿತಸ್ಥರಿಗೆ ಸರಿಯಾಗಿ ಶಿಕ್ಷೆಯೇ ಆಗುವುದಿಲ್ಲ. ಇದರ ವಿರುದ್ಧ ಕ್ರಮ ವಹಿಸದೇ ಇದ್ದಲ್ಲಿ ಬೀದಿಗಿಳಿದು ಹೋರಾಟ ಮಾಡುತ್ತೇವೆ. ರಾಜ್ಯದಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾದರೆ ಅಧಿಕಾರಿಗಳು ಹೊಣೆ ಹೊರಬೇಕು, ಕೇಂದ್ರದಲ್ಲಿ ನಡೆದರೆ ಸಚಿವರು ಹೊಣೆ ಹೊರಬೇಕು ಎನ್ನುವುದು ಕಾಂಗ್ರೆಸ್ನ ಚಾಳಿ ಎಂದರು.
ಕಳೆದ ವಿಧಾನಸಭೆಯಲ್ಲಿ ಕೂಡ ಕೆಪಿಎಸ್ಸಿ ಹಗರಣದ ಬಗ್ಗೆ ಮಾತಾಡಿದಾಗ ಅದನ್ನು ಮಾಜಿ ಸಿಎಂ ಸಿದ್ದರಾಮಯ್ಯ ಒಪ್ಪಿಕೊಂಡಿದ್ದರು. ಕೆಪಿಎಸ್ಸಿಯಲ್ಲಿ 8 ಸದಸ್ಯರು ಸಾಕೆಂದು ನಾನು ಆಗ್ರಹ ಮಾಡಿದ್ದು, ಆ ಕುರಿತು ಸರ್ಕಾರ ಕ್ರಮ ವಹಿಸುತ್ತಿದೆ. ಪಶು ಸಂಗೋಪನಾ ಇಲಾಖೆಯ 400 ಹುದ್ದೆಗಳ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಒಂದು ಆಡಿಯೋ ಬಿಡುಗಡೆಯಾಗಿದೆ. 80 ಲಕ್ಷ ರೂ. ಕೊಟ್ಟರೆ ಹುದ್ದೆ ಕೊಡಿಸುತ್ತೇನೆ ಎಂದು ಭರವಸೆ ನೀಡುತ್ತಿರುವುದು ಕಂಡುಬಂದಿದೆ. ಎಲ್ಲ ಸೇರಿದರೆ ಒಂದು ಹುದ್ದೆಗೆ ಸುಮಾರು 2 ಕೋಟಿ ರೂ. ಆಗುತ್ತದೆ. ಒಬ್ಬ ಐಎಎಸ್ ಅಧಿಕಾರಿ ಮಾಡಿಕೊಡುತ್ತಾನೆ ಎನ್ನಲಾಗಿದೆ. ಈಗಾಗಲೇ ಇಬ್ಬರಿಗೆ ಕೆಲಸ ಕೊಡಿಸಲಾಗಿದೆ. ಈ ಅಧಿಕಾರಿ ಯಾರೆಂದು ಸರ್ಕಾರ ತಿಳಿಸಬೇಕು. ಇದರಲ್ಲಿ ಸರ್ಕಾರವೇ ಭಾಗಿಯಾಗಿದೆ ಎಂಬ ಅನುಮಾನವಿದೆ ಎಂದರು.
800 ಕೋಟಿ ರೂ. ಅಕ್ರಮ
ಕೆಪಿಎಸ್ಸಿ ಅಧ್ಯಕ್ಷರು ಕೂಡ ಅಕ್ರಮ ಮಾಡಿ ಅಮಾನತು ಆಗಿದ್ದಾರೆ. ನೀಟ್ ಬಗ್ಗೆ ರಾಹುಲ್ ಗಾಂಧಿ ಹೋರಾಟ ಮಾಡಿದ್ದರು. ಆದರೆ ಇಲ್ಲಿ ಇಷ್ಟೆಲ್ಲ ಆದರೂ ಹೋರಾಟ ಮಾಡಿಲ್ಲ. ಈ ಬಗ್ಗೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕೂಡ ಮಾತಾಡಿಲ್ಲ. 400 ಹುದ್ದೆಯಲ್ಲಿ ಅಕ್ರಮ ನಡೆದಿದೆ ಎಂದರೆ ಒಟ್ಟು 800 ಕೋಟಿ ರೂ. ಡೀಲ್ ನಡೆದಿದೆ ಎಂದರ್ಥ. ಪ್ರತಿಭಾವಂತರು 350 ಅಂಕ ಪಡೆಯಲು ಕಷ್ಟಪಟ್ಟರೆ, ಸಾಮಾನ್ಯ ವಿದ್ಯಾರ್ಥಿಗಳು 400 ಅಂಕ ಗಳಿಸಿದ್ದಾರೆ ಎಂದರು.
ನಿವೃತ್ತಿ ಎನ್ನುತ್ತಿದ್ದಾರೆ. ಚುನಾವಣೆ ಸಮೀಪ ಬಂದಾಗ ಮತ್ತೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ. ಹಿರಿಯ ನಾಯಕರಿಗೆ ಬೆದರಿಕೆ ಹಾಕಲು ಅವರು ಈ ರೀತಿ ನಾಟಕ ಮಾಡುತ್ತಿದ್ದಾರೆ. ಯಾವುದೇ ನಾಯಕರು ಶಾಶ್ವತವಲ್ಲ. ಯಾವ ನಾಯಕರು ಹೋದರೂ ಮತ್ತೊಬ್ಬರು ಬೆಳೆಯುತ್ತಾರೆ ಎಂದರು








