ಕರುನಾಡಿನ ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಕನ್ನಡ ಸೀಸನ್ 12ಕ್ಕೆ ಅದ್ದೂರಿ ತೆರೆಬಿದ್ದಿದೆ. ಕೋಟ್ಯಂತರ ಕನ್ನಡಿಗರ ನಿರೀಕ್ಷೆಯಂತೆಯೇ ಅಂತಿಮವಾಗಿ ಗೆಲುವಿನ ನಗೆ ಬೀರಿದ್ದು ಕಾಮಿಡಿ ಕಿಂಗ್ ಗಿಲ್ಲಿ ನಟ. ಹೌದು, ಆರಂಭದಿಂದಲೂ ಈ ಬಾರಿಯ ಕಪ್ ಗಿಲ್ಲಿ ನಟನದ್ದೇ ಎಂದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿತ್ತು. ಇದೀಗ ಆ ಭವಿಷ್ಯ ನಿಜವಾಗಿದ್ದು, ವ್ಯಕ್ತಿತ್ವದ ಈ ಮಹಾ ಸಮರದಲ್ಲಿ ಗಿಲ್ಲಿ ನಟ ಜಯಭೇರಿ ಬಾರಿಸಿದ್ದಾರೆ. ಆದರೆ ಈ ಗೆಲುವಿನ ಸಂಭ್ರಮದ ನಡುವೆ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದು ಕಿಚ್ಚ ಸುದೀಪ್ ಅವರು ನೀಡಿದ ಆ ವಿಶೇಷ ಬಹುಮಾನ!
ಒನ್ ಸೈಡೆಡ್ ಮ್ಯಾಚ್ ಆಡಿದ ಗಿಲ್ಲಿ
ಬಿಗ್ ಬಾಸ್ ಮನೆಯೊಳಗೆ ಕಾವ್ಯ ಜೊತೆ ಜಂಟಿಯಾಗಿ ಎಂಟ್ರಿ ಕೊಟ್ಟಿದ್ದ ಗಿಲ್ಲಿ ನಟ, ಆಟ ಶುರುವಾಗುತ್ತಿದ್ದಂತೆಯೇ ತಮ್ಮ ಪರ್ಫಾರ್ಮೆನ್ಸ್ ಮೂಲಕ ಎಲ್ಲರ ಗಮನ ಸೆಳೆದರು. ಜೋಡಿಯಾಗಿ ಬಂದರೂ ಸಿಂಗಲ್ ಆಗಿಯೇ ಘರ್ಜಿಸಿದರು. ಇಡೀ ಸೀಸನ್ ಅನ್ನು ತಮ್ಮದಾಗಿಸಿಕೊಂಡು ಒನ್ ಸೈಡೆಡ್ ಆಗಿ ಡಾಮಿನೇಟ್ ಮಾಡಿದರು. ಇವರ ಕಾಮಿಡಿ ಟೈಮಿಂಗ್, ಸಮಯ ಪ್ರಜ್ಞೆ ಮತ್ತು ಪಂಚಿಂಗ್ ಡೈಲಾಗ್ಸ್ ವೀಕ್ಷಕರಿಗೆ ಪಕ್ಕಾ ಪೈಸಾ ವಸೂಲ್ ಮನರಂಜನೆ ನೀಡಿತು.
ಅಶ್ಲೀಲತೆ ಇಲ್ಲದ ಸ್ವಚ್ಛ ಹಾಸ್ಯ
ಗಿಲ್ಲಿ ನಟನ ಗೆಲುವಿಗೆ ಪ್ರಮುಖ ಕಾರಣ ಅವರ ಸ್ವಚ್ಛ ಹಾಸ್ಯ. ಎಲ್ಲೂ ಕೂಡ ಡಬಲ್ ಮೀನಿಂಗ್ ಡೈಲಾಗ್ ಬಳಸದೆ, ಅಶ್ಲೀಲತೆಯ ಸೋಂಕಿಲ್ಲದೆ, ಇಡೀ ಕುಟುಂಬ ಒಟ್ಟಿಗೆ ಕುಳಿತು ನೋಡುವಂತಹ ಕಾಮಿಡಿ ಮಾಡಿದರು. ಸಿಲ್ಲಿ ಜೋಕ್ಸ್ ಕೂಡ ಗಿಲ್ಲಿ ಎನಿಸುವಂತೆ ಮಾಡಿ ನೋಡುಗರ ಹೊಟ್ಟೆ ಹುಣ್ಣಾಗಿಸಿದರು. ಇದೇ ಕಾರಣಕ್ಕೆ ವೀಕ್ಷಕರು ಗಿಲ್ಲಿ ಗೆಲ್ಲಲೇಬೇಕು ಎಂದು ಪಣತೊಟ್ಟಿದ್ದರು.
ಸ್ವಯಂಘೋಷಿತ ಪಟ್ಟದಿಂದ ವಿನ್ನರ್ ಪಟ್ಟಕ್ಕೆ
ಮನೆಯೊಳಗೆ ಕೆಲವರು ಗಿಲ್ಲಿ ನಟನನ್ನು ಸ್ವಯಂಘೋಷಿತ ವಿನ್ನರ್ ಎಂದು ವ್ಯಂಗ್ಯವಾಡುತ್ತಿದ್ದರು. ಅಂತಹವರಿಗೆ ಡಮಾಲ್ ಡಿಮಿಲ್ ಡಕ್ಕ.. ಗಿಲ್ಲಿ ಗೆಲ್ಲೋದು ಪಕ್ಕಾ.. ಟಕರ ಟಕರ ತಮಟೆ ಏಟು.. ಗಿಲ್ಲಿ ನಟ ಅಲ್ಟಿಮೇಟು ಎಂದು ತಮ್ಮದೇ ಸ್ಟೈಲ್ ನಲ್ಲಿ ತಿರುಗೇಟು ನೀಡಿದ್ದರು. ಇದೀಗ ವೀಕ್ಷಕರು ಅತಿ ಹೆಚ್ಚು ವೋಟ್ ಮಾಡುವ ಮೂಲಕ ಅವರನ್ನು ನಿಜವಾದ ವಿನ್ನರ್ ಮಾಡಿದ್ದಾರೆ.
5 ಬಾರಿ ಸೋತವನಿಗೆ ಒಲಿದ ಮಹಾ ಗೆಲುವು!
ಈ ಹಿಂದೆ ಬರೋಬ್ಬರಿ 5 ರಿಯಾಲಿಟಿ ಶೋಗಳಲ್ಲಿ ಸ್ಪರ್ಧಿಸಿದ್ದ ಗಿಲ್ಲಿ ನಟ, ಕೆಲವ್ರಲ್ಲಿ ಫೈನಲಿಸ್ಟ್ ಆದರೆ, ಇನ್ನು ಕೆಲವ್ರಲ್ಲಿ ರನ್ನರ್ ಅಪ್ ಆಗಿದ್ದರು. ಆದರೆ ಗೆಲುವಿನ ರುಚಿ ಕಂಡಿರಲಿಲ್ಲ. ಆದರೆ 5 ಬಾರಿ ಸೋತವನಿಗೆ 6ನೇ ಬಾರಿ ಬಿಗ್ ಬಾಸ್ ಎಂಬ ದೊಡ್ಡ ವೇದಿಕೆ ಅದೃಷ್ಟ ದೇವತೆಯಾಗಿ ಒಲಿದು ಬಂದಿದೆ. ಸ್ವತಃ ಕಿಚ್ಚ ಸುದೀಪ್ ಅವರೇ ಇದು ವೆಲ್ ಡಿಸರ್ವ್ಡ್ ಗೆಲುವು ಎಂದು ಬೆನ್ನು ತಟ್ಟಿದ್ದಾರೆ.
ಗಿಲ್ಲಿಗೆ ಹರಿದು ಬಂತು ಲಕ್ಷ ಲಕ್ಷ ಹಣ!
ಬಿಗ್ ಬಾಸ್ ಕನ್ನಡ 12ರ ವಿಜೇತ ಪಟ್ಟದೊಂದಿಗೆ ಗಿಲ್ಲಿ ನಟನಿಗೆ ಪ್ರಾಯೋಜಕರ ಕಡೆಯಿಂದ ಬರೋಬ್ಬರಿ 50 ಲಕ್ಷ ರೂಪಾಯಿ ಬಹುಮಾನ ಸಿಕ್ಕಿದೆ. ಇದರ ಜೊತೆಗೆ ಅರಮನೆ ಮಾದರಿಯ ಆಕರ್ಷಕ ಟ್ರೋಫಿ ಹಾಗೂ ಮಾರುತಿ ಸುಜುಕಿ ಕಡೆಯಿಂದ ಐಷಾರಾಮಿ ವಿಕ್ಟೋರಿಸ್ ಕಾರು ಕೂಡ ಉಡುಗೊರೆಯಾಗಿ ಲಭಿಸಿದೆ.
ಕಿಚ್ಚ ಸುದೀಪ್ ಕಡೆಯಿಂದ ಬಿಗ್ ಸರ್ಪ್ರೈಸ್!
ಎಲ್ಲದಕ್ಕಿಂತ ಮುಖ್ಯವಾಗಿ ನಿರೂಪಕ ಕಿಚ್ಚ ಸುದೀಪ್ ಅವರು ಗಿಲ್ಲಿ ನಟನ ಆಟಕ್ಕೆ ಫಿದಾ ಆಗಿದ್ದಾರೆ. ಪ್ರಾಯೋಜಕರ ಬಹುಮಾನದ ಹೊರತಾಗಿ, ವೇದಿಕೆಯ ಮೇಲೆಯೇ ಕಿಚ್ಚ ಸುದೀಪ್ ತಮ್ಮ ವೈಯಕ್ತಿಕ ನೆಲೆಯಲ್ಲಿ ಗಿಲ್ಲಿ ನಟನಿಗೆ ಬರೋಬ್ಬರಿ 10 ಲಕ್ಷ ರೂಪಾಯಿ ಬಹುಮಾನ ಘೋಷಣೆ ಮಾಡಿದರು. ಗಿಲ್ಲಿ ಅದ್ಭುತವಾಗಿ ಆಡಿದ್ದಾರೆ, ಅವರಿಗೆ ನನ್ನ ಕಡೆಯಿಂದ ಈ ಪುಟ್ಟ ಕಾಣಿಕೆ ಎಂದು ಸುದೀಪ್ ಹೇಳಿದಾಗ ಇಡೀ ವೇದಿಕೆ ಚಪ್ಪಾಳೆಯಿಂದ ಮೊಳಗಿತು. ಒಟ್ಟಾರೆ 50 ಲಕ್ಷ ಪ್ರೈಜ್ ಮನಿ ಜೊತೆಗೆ ಸುದೀಪ್ ಅವರ 10 ಲಕ್ಷ ಸೇರಿ ಗಿಲ್ಲಿ ನಟ ಜಾಕ್ ಪಾಟ್ ಹೊಡೆದಿದ್ದಾರೆ.
14 ವರ್ಷದ ವನವಾಸ ಅಂತ್ಯ
ಗೆಲುವಿನ ನಂತರ ಮಾತನಾಡಿದ ಗಿಲ್ಲಿ ತಂದೆ, ಬೆಂಗಳೂರಿಗೆ ಬಂದು ತಿನ್ನೋಕೆ ಅನ್ನವಿಲ್ಲದೆ, ಮಲಗೋಕೆ ಜಾಗವಿಲ್ಲದೆ ನನ್ನ ಮಗ ಪರದಾಡಿದ್ದ. 14 ವರ್ಷ ವನವಾಸ ಮಾಡಿ ಶ್ರೀರಾಮ ರಾಜ್ಯ ಕಟ್ಟಿದಂತೆ ನನ್ನ ಮಗ ಇಂದು ಗೆದ್ದು ಬಂದಿದ್ದಾನೆ ಎಂದು ಭಾವುಕರಾದರು. ಒಟ್ಟಿನಲ್ಲಿ ಕಷ್ಟಪಟ್ಟು ಬೆಳೆದ ಕಲಾವಿದನಿಗೆ ಕರುನಾಡು ಕೈಹಿಡಿದು ನಡೆಸಿದೆ.








