ದೇಶದ ರಾಜಕಾರಣದಲ್ಲಿ ಇಂದು ಸಂಚಲನ ಸೃಷ್ಟಿಸುವಂತಹ ಮಹತ್ವದ ಬೆಳವಣಿಗೆಯೊಂದು ನಡೆದಿದೆ. ಆಮ್ ಆದ್ಮಿ ಪಕ್ಷದ ಪ್ರಭಾವಿ ನಾಯಕ ಮತ್ತು ಅರವಿಂದ್ ಕೇಜ್ರಿವಾಲ್ ಅವರ ಅತ್ಯಂತ ಆಪ್ತರಲ್ಲಿ ಒಬ್ಬರಾಗಿದ್ದ ರಾಜ್ಯಸಭಾ ಸಂಸದ ರಾಘವ್ ಚಡ್ಡಾ ಆಪ್ ಗೆ ಗುಡ್ ಬೈ ಹೇಳಿದ್ದಾರೆ. ಅವರೊಂದಿಗೆ ಸಂದೀಪ್ ಪಾಠಕ್ ಮತ್ತು ಅಶೋಕ್ ಮಿತ್ತಲ್ ಕೂಡ ಪಕ್ಷಕ್ಕೆ ರಾಜೀನಾಮೆ ನೀಡಿ ಬಿಜೆಪಿಯತ್ತ ಮುಖ ಮಾಡಿದ್ದಾರೆ. ಈ ಬೆಳವಣಿಗೆಯಿಂದಾಗಿ ದೆಹಲಿ ಮತ್ತು ಪಂಜಾಬ್ ರಾಜಕಾರಣದಲ್ಲಿ ಅಕ್ಷರಶಃ ಭೂಕಂಪ ಉಂಟಾಗಿದೆ.
ಬಿಜೆಪಿಯೊಂದಿಗೆ ವಿಲೀನಕ್ಕೆ ಸಂಸದರ ನಿರ್ಧಾರ
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ರಾಘವ್ ಚಡ್ಡಾ ಅವರು ಕೇವಲ ಮೂವರು ಮಾತ್ರವಲ್ಲದೆ, ಆಪ್ ನ ಒಟ್ಟು 10 ರಾಜ್ಯಸಭಾ ಸದಸ್ಯರಲ್ಲಿ ಮೂರನೇ ಎರಡರಷ್ಟು ಅಂದರೆ 7 ಮಂದಿ ಸಂಸದರು ಬಿಜೆಪಿಯೊಂದಿಗೆ ವಿಲೀನಗೊಳ್ಳಲು ನಿರ್ಧರಿಸಿದ್ದಾರೆ ಎಂಬ ಸ್ಪೋಟಕ ಮಾಹಿತಿ ನೀಡಿದ್ದಾರೆ. ಸಂವಿಧಾನದ ನಿಬಂಧನೆಗಳ ಪ್ರಕಾರ ಪಕ್ಷವೊಂದರ 2/3 ಸದಸ್ಯರು ಮತ್ತೊಂದು ಪಕ್ಷದೊಂದಿಗೆ ವಿಲೀನಗೊಂಡರೆ ಅಲ್ಲಿ ಪಕ್ಷಾಂತರ ನಿರೋಧಕ ಕಾಯಿದೆ ಅನ್ವಯವಾಗುವುದಿಲ್ಲ. ಇದೇ ತಂತ್ರವನ್ನು ಬಳಸಿಕೊಂಡಿರುವ ಚಡ್ಡಾ ತಂಡ ಈಗಾಗಲೇ ರಾಜ್ಯಸಭಾ ಅಧ್ಯಕ್ಷರಿಗೆ ಪತ್ರ ಸಲ್ಲಿಸಿದೆ.
ತತ್ವ ಸಿದ್ಧಾಂತಗಳಿಂದ ದೂರಾದ ಆಪ್: ರಾಘವ್ ಚಡ್ಡಾ ಆಕ್ರೋಶ
ನಾನು ನನ್ನ ಯೌವನದ 15 ವರ್ಷಗಳನ್ನು ಈ ಪಕ್ಷಕ್ಕಾಗಿ ರಕ್ತ ಮತ್ತು ಬೆವರಿನ ರೂಪದಲ್ಲಿ ನೀಡಿದ್ದೇನೆ. ಆದರೆ ಇಂದು ಆಮ್ ಆದ್ಮಿ ಪಕ್ಷವು ತನ್ನ ಮೂಲ ತತ್ವ ಮತ್ತು ನೈತಿಕತೆಯಿಂದ ಬಹುದೂರ ಸಾಗಿದೆ. ದೇಶದ ಹಿತಾಸಕ್ತಿಗಿಂತ ವೈಯಕ್ತಿಕ ಲಾಭವೇ ಪಕ್ಷಕ್ಕೆ ಮುಖ್ಯವಾಗಿದೆ. ನಾನು ಕಳೆದ ಕೆಲವು ವರ್ಷಗಳಿಂದ ತಪ್ಪು ಪಕ್ಷದಲ್ಲಿರುವ ಸರಿಯಾದ ವ್ಯಕ್ತಿಯಾಗಿದ್ದೆ. ಇನ್ನು ಮುಂದೆ ಈ ಅಪರಾಧಗಳಲ್ಲಿ ಪಾಲುದಾರನಾಗಲು ನನಗೆ ಇಷ್ಟವಿಲ್ಲ. ಹಾಗಾಗಿ ಸಾರ್ವಜನಿಕರ ಹಿತಕ್ಕಾಗಿ ಆಪ್ ತೊರೆದು ಬಿಜೆಪಿಯೊಂದಿಗೆ ಕೈಜೋಡಿಸುತ್ತಿದ್ದೇನೆ ಎಂದು ರಾಘವ್ ಚಡ್ಡಾ ಭಾವನಾತ್ಮಕವಾಗಿ ಮತ್ತು ಆಕ್ರೋಶದಿಂದ ನುಡಿದರು.
ಬಂಡಾಯದ ಪಟ್ಟಿಯಲ್ಲಿ ಪ್ರಮುಖ ನಾಯಕರು
ರಾಘವ್ ಚಡ್ಡಾ ನೀಡಿದ ಮಾಹಿತಿ ಪ್ರಕಾರ ಕ್ರಿಕೆಟ್ ದಿಗ್ಗಜ ಹರ್ಭಜನ್ ಸಿಂಗ್, ದೆಹಲಿ ಮಹಿಳಾ ಆಯೋಗದ ಮಾಜಿ ಅಧ್ಯಕ್ಷೆ ಸ್ವಾತಿ ಮಲಿವಾಲ್, ರಾಜೇಂದ್ರ ಗುಪ್ತಾ ಮತ್ತು ವಿಕ್ರಮ್ ಸಾಹ್ನಿ ಕೂಡ ಬಿಜೆಪಿಯೊಂದಿಗೆ ವಿಲೀನಗೊಳ್ಳಲು ಸಹಿ ಮಾಡಿದ್ದಾರೆ. ಆಪ್ ನೊಳಗಿನ ಆಂತರಿಕ ಭಿನ್ನಮತ ಮತ್ತು ನಾಯಕತ್ವದ ಮೇಲಿನ ಅಸಮಾಧಾನವೇ ಈ ದೊಡ್ಡ ಮಟ್ಟದ ಬಂಡಾಯಕ್ಕೆ ಕಾರಣವಾಗಿದೆ ಎನ್ನಲಾಗಿದೆ. ರಾಘವ್ ಚಡ್ಡಾ ಅವರನ್ನು ಈ ಹಿಂದೆ ಸಂಸದೀಯ ಹುದ್ದೆಯಿಂದ ತೆಗೆದುಹಾಕಿದ್ದು ಕೂಡ ಈ ಬೆಂಕಿಗೆ ತುಪ್ಪ ಸುರಿದಂತಾಗಿತ್ತು.
ಆಪರೇಷನ್ ಕಮಲ ಎಂದು ಕಿಡಿಕಾರಿದ ಆಪ್ ನಾಯಕರು
ಈ ಬೆಳವಣಿಗೆಯನ್ನು ಆಮ್ ಆದ್ಮಿ ಪಕ್ಷವು ತೀವ್ರವಾಗಿ ಖಂಡಿಸಿದೆ. ಸಂಸದ ಸಂಜಯ್ ಸಿಂಗ್ ಪ್ರತಿಕ್ರಿಯಿಸಿ, ಇದು ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಆಪರೇಷನ್ ಕಮಲದ ಭಾಗವಾಗಿದೆ. ಪಂಜಾಬ್ ನ ಭಗವಂತ್ ಮಾನ್ ಸರ್ಕಾರದ ಜನಪ್ರಿಯತೆಯನ್ನು ಕಂಡು ಸಹಿಸದ ಬಿಜೆಪಿ ಕುತಂತ್ರದ ರಾಜಕಾರಣ ಮಾಡುತ್ತಿದೆ. ಪಕ್ಷ ತೊರೆದ ಈ ಏಳು ಮಂದಿಯನ್ನು ಪಂಜಾಬ್ ಮತ್ತು ದೇಶದ ಜನತೆ ಎಂದಿಗೂ ಕ್ಷಮಿಸುವುದಿಲ್ಲ ಎಂದು ಗುಡುಗಿದ್ದಾರೆ.
ಬಿಜೆಪಿಯ ವ್ಯಂಗ್ಯ
ಬಿಜೆಪಿ ನಾಯಕ ಅಮಿತ್ ಮಾಳವೀಯ ಅವರು ಆಪ್ ಸ್ಥಿತಿಯನ್ನು ನೋಡಿ ವ್ಯಂಗ್ಯವಾಡಿದ್ದಾರೆ. ಆಮ್ ಆದ್ಮಿ ಪಕ್ಷವು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ ಮತ್ತು ಕೇಜ್ರಿವಾಲ್ ಅವರ ಸರ್ವಾಧಿಕಾರಿ ಧೋರಣೆಯಿಂದಾಗಿ ನಾಯಕರು ಪಕ್ಷ ಬಿಡುತ್ತಿದ್ದಾರೆ. ಈ ವಲಸೆ ಇಲ್ಲಿಗೆ ನಿಲ್ಲುವುದಿಲ್ಲ, ಮುಂದಿನ ದಿನಗಳಲ್ಲಿ ಆಪ್ ಪೂರ್ಣವಾಗಿ ನಾಮಾವಶೇಷವಾಗಲಿದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ.
ಒಟ್ಟಾರೆಯಾಗಿ ರಾಘವ್ ಚಡ್ಡಾ ಅವರ ಈ ದಿಢೀರ್ ನಡೆ ಅರವಿಂದ್ ಕೇಜ್ರಿವಾಲ್ ಅವರಿಗೆ ಚೇತರಿಸಿಕೊಳ್ಳಲಾಗದ ಪೆಟ್ಟು ನೀಡಿದೆ. ರಾಜ್ಯಸಭೆಯಲ್ಲಿ ಆಪ್ ಬಲ ಕುಸಿದಿರುವುದು ರಾಷ್ಟ್ರ ರಾಜಕಾರಣದಲ್ಲಿ ಬಿಜೆಪಿಯ ಕೈಯನ್ನು ಮತ್ತಷ್ಟು ಬಲಪಡಿಸಿದೆ.








