ಬೆಂಗಳೂರು: ನಟ ಹಾಗೂ ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಮತ್ತು ಕನ್ನಡ ಪರ ಸಂಘಟನೆಗಳ ನಡುವಿನ ಸಂಘರ್ಷ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವರನಟ ಡಾ. ರಾಜ್ ಕುಮಾರ್ ಅವರ ಸ್ಮಾರಕದ ಜಾಗಕ್ಕೆ ಸಂಬಂಧಿಸಿದಂತೆ ಚೇತನ್ ನೀಡಿದ್ದ ಹೇಳಿಕೆ ದೊಡ್ಡ ವಿವಾದಕ್ಕೆ ಕಾರಣವಾಗಿದ್ದು, ಅದರ ಬೆನ್ನಲ್ಲೇ ಈಗ ಕಾನೂನು ಸಮರ ಆರಂಭವಾಗಿದೆ.
ಕಳೆದ ಕೆಲವು ದಿನಗಳ ಹಿಂದೆ ಚೇತನ್ ಅವರ ಪೋಸ್ಟ್ ಗೆ ಆಕ್ರೋಶ ವ್ಯಕ್ತಪಡಿಸಿ ಅವರ ಮನೆಗೆ ಮುತ್ತಿಗೆ ಹಾಕಿದ್ದ ಸಾ ರಾ ಗೋವಿಂದು ಮತ್ತು ಅವರ ತಂಡದ ವಿರುದ್ಧ ಚೇತನ್ ಈಗ ಅಧಿಕೃತವಾಗಿ ದೂರು ನೀಡಿದ್ದಾರೆ. ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುವ ಚೇತನ್, ತಮ್ಮ ಮನೆಗೆ ಅಕ್ರಮವಾಗಿ ನುಗ್ಗಿ ದಾಂಧಲೆ ನಡೆಸಿದವರ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದ್ದಾರೆ.
ದೂರು ನೀಡಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಚೇತನ್, ಸಾ ರಾ ಗೋವಿಂದು ಅವರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ. ಸಾ ರಾ ಗೋವಿಂದು ಅವರು ಡಾ. ರಾಜ್ ಕುಮಾರ್ ಅವರ ಹೆಸರು ಕೆಡಿಸುತ್ತಿದ್ದಾರೆ. ಅವರಿಗೆ ಅಣ್ಣಾವ್ರ ಅಭಿಮಾನಿ ಎಂದು ಹೇಳಿಕೊಳ್ಳುವ ಯಾವುದೇ ಯೋಗ್ಯತೆ ಇಲ್ಲ. ಚಿತ್ರರಂಗದಲ್ಲಿ ದಬ್ಬಾಳಿಕೆ ಮತ್ತು ಗೂಂಡಾಗಿರಿ ನಡೆಸುತ್ತಾ ಎಲ್ಲರನ್ನೂ ಹೆದರಿಸುವ ಕೆಲಸ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಘಟನೆಯ ದಿನ ಸಾ ರಾ ಗೋವಿಂದು, ಶಿವರಾಮೇಗೌಡ ಮತ್ತು ಶಿವಕುಮಾರ್ ನಾಯ್ಕ್ ನೇತೃತ್ವದಲ್ಲಿ ಗುಂಪೊಂದು ಮನೆ ಬಳಿ ಬಂದು ಅಶ್ಲೀಲ ಪದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದೆ ಎಂದು ಚೇತನ್ ದೂರಿದ್ದಾರೆ. ಈ ಹಿಂದೆ ಲಂಕೇಶ್ ಪತ್ರಿಕೆ ಕಚೇರಿಗೆ ನುಗ್ಗಿ ಹಲ್ಲೆ ಮಾಡಿದ್ದ ಉದಾಹರಣೆಯನ್ನು ನೀಡಿದ ಚೇತನ್, ಇವರ ಇತಿಹಾಸವೇ ಇಂತಹ ದೌರ್ಜನ್ಯಗಳಿಂದ ಕೂಡಿದೆ. ಪೊಲೀಸರ ಮುಂದೆಯೇ ಇವರು ದಾದಾಗಿರಿ ನಡೆಸಿದ್ದಾರೆ ಎಂದು ಗುಡುಗಿದ್ದಾರೆ.
ಸದ್ಯ ಪೊಲೀಸರು ದೂರಿನ ಅಕ್ನಾಲೆಜ್ ಮೆಂಟ್ ನೀಡಿದ್ದು, ಕಾನೂನು ತಜ್ಞರ ಸಲಹೆ ಪಡೆದು ಎಫ್ಐಆರ್ ದಾಖಲಿಸುವ ಬಗ್ಗೆ ನಿರ್ಧಾರ ಮಾಡಲಿದ್ದಾರೆ. ಇದರ ಜೊತೆಗೆ ಸಾ ರಾ ಗೋವಿಂದು ಅವರು ದಲಿತರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂಬ ಆರೋಪದ ಬಗ್ಗೆಯೂ ಸಂಘಟನೆಗಳ ಜೊತೆಗೂಡಿ ಹೋರಾಟ ಮುಂದುವರಿಸುವುದಾಗಿ ಚೇತನ್ ಎಚ್ಚರಿಕೆ ನೀಡಿದ್ದಾರೆ. ಈ ಬೆಳವಣಿಗೆಯಿಂದಾಗಿ ಕನ್ನಡ ಚಿತ್ರರಂಗ ಮತ್ತು ಸಾಮಾಜಿಕ ವಲಯದಲ್ಲಿ ಪರ ವಿರೋಧದ ಚರ್ಚೆಗಳು ಮತ್ತಷ್ಟು ತೀವ್ರಗೊಂಡಿವೆ.








