ಬಾಯಲ್ಲಿ ಪರಿಸರ ಕಾಳಜಿಯ ಪಾಠ, ವಾಸ್ತವದಲ್ಲಿ ಹದಗೆಟ್ಟ ಮೂಲಸೌಕರ್ಯ. ಇದು ನಮ್ಮ ಆಡಳಿತ ವ್ಯವಸ್ಥೆಯ ಕಾರ್ಯವೈಖರಿಗೆ ಹಿಡಿದ ಕನ್ನಡಿ. ಗ್ರೇಟರ್ ಬೆಂಗಳೂರು ಪ್ರಾಧಿಕಾರ ಇದೀಗ ಇಂಥದ್ದೇ ಒಂದು ಎಡವಟ್ಟು ಮಾಡಿಕೊಂಡು ಸಾಮಾಜಿಕ ಜಾಲತಾಣಗಳಲ್ಲಿ ಸಾರ್ವಜನಿಕರಿಂದ ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದೆ.
ಪರಿಸರ ಉಳಿಸುವ ಹಾಗೂ ಸಂಚಾರ ದಟ್ಟಣೆ ಕಡಿಮೆ ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಜಿಬಿಎ ತನ್ನ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಒಂದು ಕಿಲೋಮೀಟರ್ ಚಾಲೆಂಜ್ ಎಂಬ ಅಭಿಯಾನವನ್ನು ಶುರು ಮಾಡಿತ್ತು. ಕನಿಷ್ಠ ಒಂದು ಕಿಲೋಮೀಟರ್ ವರೆಗಿನ ಅಂತರಕ್ಕೆ ದ್ವಿಚಕ್ರ ಅಥವಾ ನಾಲ್ಕು ಚಕ್ರದ ವಾಹನಗಳನ್ನು ಬಳಸುವ ಬದಲು ಪಾದಚಾರಿ ಮಾರ್ಗಗಳ ಮೂಲಕ ಕಾಲ್ನಡಿಗೆಯಲ್ಲೇ ಸಾಗಿ, ಪರಿಸರ ಸ್ನೇಹಿಯಾಗಿ ಎಂಬುದು ಈ ಪೋಸ್ಟ್ ನ ಸಾರಾಂಶವಾಗಿತ್ತು. ಆದರೆ ಪರಿಸರ ಜಾಗೃತಿಯ ಈ ಸಂದೇಶ ಅಧಿಕಾರಿಗಳಿಗೆ ತೀವ್ರ ಮುಜುಗರ ತಂದೊಡ್ಡಿದೆ.
ಈ ಪೋಸ್ಟ್ ನೋಡಿದ್ದೇ ತಡ, ದಿನನಿತ್ಯ ಹದಗೆಟ್ಟ ರಸ್ತೆಗಳು ಹಾಗೂ ಮೂಲಸೌಕರ್ಯಗಳ ಕೊರತೆಯಿಂದ ಹೈರಾಣಾಗಿರುವ ಬೆಂಗಳೂರಿನ ಜನತೆ ಅಧಿಕಾರಿಗಳ ವಿರುದ್ಧ ಮುಗಿಬಿದ್ದಿದ್ದಾರೆ. ಸ್ವಾಮಿ, ನೀವು ಹೇಳುವ ಹಾಗೆ ನಡೆಯಲು ಮೊದಲು ನಗರದಲ್ಲಿ ಫುಟ್ ಪಾತ್ ಎಲ್ಲಿದೆ ತೋರಿಸಿ ಎಂದು ಕಟುವಾಗಿ ಪ್ರಶ್ನಿಸಿದ್ದಾರೆ. ಮೊದಲು ಜನರಿಗೆ ನಡೆಯಲು ಯೋಗ್ಯವಾದ, ಅಡೆತಡೆ ಇಲ್ಲದ ಪಾದಚಾರಿ ಮಾರ್ಗಗಳನ್ನು ನಿರ್ಮಿಸಿ ಕೊಡಿ. ಆನಂತರ ಇಂಥಹ ಚಾಲೆಂಜ್ ಗಳನ್ನು ನೀಡಿ ಎಂದು ಆಕ್ರೋಶ ಹೊರಹಾಕಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರಿನ ಬಹುತೇಕ ಬಡಾವಣೆಗಳಲ್ಲಿ ಪಾದಚಾರಿ ಮಾರ್ಗಗಳ ಸ್ಥಿತಿ ಶೋಚನೀಯವಾಗಿದೆ. ಕೋಟ್ಯಂತರ ರೂಪಾಯಿ ಖರ್ಚು ಮಾಡಿ ನಿರ್ಮಿಸಿದ ಫುಟ್ ಪಾತ್ ಗಳು ಕೆಲವೇ ದಿನಗಳಲ್ಲಿ ಕಿತ್ತು ಬರುತ್ತವೆ. ಇನ್ನು ವಾಹನ ಸವಾರರು ಟ್ರಾಫಿಕ್ ತಪ್ಪಿಸಿಕೊಳ್ಳಲು ಫುಟ್ ಪಾತ್ ಮೇಲೆಯೇ ಬೈಕ್ ನುಗ್ಗಿಸುತ್ತಾರೆ. ಉಳಿದ ಜಾಗವನ್ನು ಬೀದಿಬದಿ ವ್ಯಾಪಾರಿಗಳು ಹಾಗೂ ಕಟ್ಟಡ ನಿರ್ಮಾಣದ ವಸ್ತುಗಳು ಆಕ್ರಮಿಸಿಕೊಂಡಿವೆ.
ಮರಗಳ ಬೇರುಗಳು, ರಸ್ತೆಯ ಮಧ್ಯೆ ಎಲ್ಲೆಂದರಲ್ಲಿ ನಿಲ್ಲಿಸಿರುವ ವಿದ್ಯುತ್ ಕಂಬಗಳು, ಮುಚ್ಚಳವೇ ಇಲ್ಲದೆ ಬಾಯಿ ತೆರೆದುಕೊಂಡಿರುವ ಚರಂಡಿಗಳು ಜನರನ್ನು ಸಾವಿನ ಕೂಪದಂತೆ ಕಾಡುತ್ತಿವೆ. ಇಂಥಹ ಅಪಾಯಕಾರಿ ಪರಿಸ್ಥಿತಿಯಲ್ಲಿ ಮಕ್ಕಳು ಹಾಗೂ ವಯಸ್ಸಾದವರು ಫುಟ್ ಪಾತ್ ಮೇಲೆ ಹೆಜ್ಜೆ ಇಡುವುದೇ ಒಂದು ಸಾಹಸವಾಗಿದೆ. ಅನೇಕ ಕಡೆ ಫುಟ್ ಪಾತ್ ಇಲ್ಲದ ಕಾರಣ ಪಾದಚಾರಿಗಳು ವಾಹನಗಳು ಓಡಾಡುವ ರಸ್ತೆಯಲ್ಲೇ ಜೀವ ಕೈಯಲ್ಲಿಡಿದು ನಡೆಯುವ ಅನಿವಾರ್ಯತೆ ಇದೆ.
ಸಾಮಾಜಿಕ ಜಾಲತಾಣದಲ್ಲಿ ಕಮೆಂಟ್ ಮಾಡಿರುವ ಅನೇಕರು, ಬೆಂಗಳೂರಿನ ಯಾವುದೇ ಮೂಲೆಯಲ್ಲಾದರೂ ಸರಿ, ನೆಟ್ಟಗೆ ನೂರು ಮೀಟರ್ ಅಡೆತಡೆ ಇಲ್ಲದೆ ನಡೆಯುವಂತಹ ಒಂದು ಫುಟ್ ಪಾತ್ ತೋರಿಸಿ ಎಂದು ಅಧಿಕಾರಿಗಳಿಗೆ ಸವಾಲು ಹಾಕಿದ್ದಾರೆ. ಫುಟ್ ಪಾತ್ ಮೇಲೆ ಕಾಲಿಟ್ಟರೆ ಜೀವಕ್ಕೆ ಗ್ಯಾರಂಟಿ ಇಲ್ಲ, ಹೀಗಿರುವಾಗ ನೀವು ಹೇಳುವ ಒಂದು ಕಿಲೋಮೀಟರ್ ನಡೆಯುವುದು ವಾಸ್ತವಕ್ಕೆ ತೀರ ದೂರವಾದ ಮಾತು ಎಂದು ಅಧಿಕಾರಿಗಳ ಕಣ್ಣು ತೆರೆಸುವ ಪ್ರಯತ್ನ ಮಾಡಿದ್ದಾರೆ.
ನಗರದ ಮೂಲಸೌಕರ್ಯಗಳ ನೈಜ ಸ್ಥಿತಿಯನ್ನು ಅರಿಯದೆ, ಕೇವಲ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಸಾಮಾಜಿಕ ಜಾಲತಾಣಗಳಲ್ಲಿ ಜಾಗೃತಿ ಪೋಸ್ಟ್ ಹಾಕಿದರೆ ಜನರಿಂದ ಛೀಮಾರಿ ಬೀಳುತ್ತದೆ ಎಂಬುದಕ್ಕೆ ಈ ಘಟನೆ ತಾಜಾ ಉದಾಹರಣೆ. ಪಾದಚಾರಿ ಸ್ನೇಹಿ ನಗರ ನಿರ್ಮಾಣ ಮಾಡುವುದು ಕೇವಲ ಭಾಷಣ ಅಥವಾ ಪೋಸ್ಟ್ ಗಳಿಗೆ ಸೀಮಿತವಾಗದೆ, ಮೊದಲು ಸುರಕ್ಷಿತ, ನಿರಂತರ ಮತ್ತು ಗುಣಮಟ್ಟದ ಫುಟ್ ಪಾತ್ ಗಳನ್ನು ಒದಗಿಸುವ ಮೂಲಕ ಕಾರ್ಯರೂಪಕ್ಕೆ ಬರಬೇಕಿದೆ. ಇಲ್ಲದಿದ್ದರೆ ಇಂತಹ ಅಭಿಯಾನಗಳು ಟ್ರೋಲ್ ಗಳಿಗೆ ಮಾತ್ರ ಸೀಮಿತವಾಗುತ್ತವೆ ಎಂಬುದು ಪ್ರಜ್ಞಾವಂತ ನಾಗರಿಕರ ಒಕ್ಕೊರಲಿನ ಆಗ್ರಹವಾಗಿದೆ.








