ಬೆಂಗಳೂರು: ರಾಜ್ಯ ರಾಜಕಾರಣದ ಇತ್ತೀಚಿನ ಮಹತ್ವದ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಚಿವ ಕೆ ಎನ್ ರಾಜಣ್ಣ ಅವರು, ಕಾಂಗ್ರೆಸ್ ಹೈಕಮಾಂಡ್ ತೆಗೆದುಕೊಂಡಿರುವ ನಿರ್ಧಾರಕ್ಕೆ ಎಲ್ಲರೂ ಬದ್ಧರಾಗಿರಬೇಕು ಎಂದು ತಿಳಿಸಿದ್ದಾರೆ. ಮುಖ್ಯಮಂತ್ರಿ ಬದಲಾವಣೆ ಮತ್ತು ಹೊಸ ನೇಮಕಾತಿಗಳ ಕುರಿತು ಕೇಳಲಾದ ಪ್ರಶ್ನೆಗಳಿಗೆ ಉತ್ತರಿಸಿದ ಅವರು, ಹೈಕಮಾಂಡ್ ಅಂತಿಮವಾಗಿ ಒಂದು ತೀರ್ಮಾನಕ್ಕೆ ಬಂದ ನಂತರ ಅಲ್ಲಿ ವೈಯಕ್ತಿಕ ಇಷ್ಟಾನಿಷ್ಟಗಳಿಗೆ ಜಾಗವಿರುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಹೈಕಮಾಂಡ್ ನಿರ್ಧಾರಕ್ಕೆ ಗೌರವ
ಈ ಹಿಂದೆ ಮುಖ್ಯಮಂತ್ರಿಗಳ ಬದಲಾವಣೆ ಆಗುವುದಿಲ್ಲ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿತ್ತು. ಸಿದ್ದರಾಮಯ್ಯ ಅವರು ಕೂಡ ಹೈಕಮಾಂಡ್ ನಿರ್ಧಾರಕ್ಕೆ ಬದ್ಧ ಎಂದು ಹೇಳಿದ್ದರು. ಈಗ ದೆಹಲಿ ನಾಯಕರು ಒಂದು ಮಹತ್ವದ ತೀರ್ಮಾನ ಕೈಗೊಂಡಿದ್ದಾರೆ. ಒಮ್ಮೆ ಆದೇಶ ಹೊರಬಿದ್ದ ಮೇಲೆ ಅದು ಒಳ್ಳೆಯ ಆಯ್ಕೆಯೋ ಅಥವಾ ಕೆಟ್ಟ ಆಯ್ಕೆಯೋ ಎಂದು ವಿಶ್ಲೇಷಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. ಪಕ್ಷದ ಶಿಸ್ತಿನ ದೃಷ್ಟಿಯಿಂದ ನಾಯಕತ್ವದ ತೀರ್ಮಾನವನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು ಎಂದು ರಾಜಣ್ಣ ಹೇಳಿದರು.
ಅಹಿಂದ ವರ್ಗಗಳೇ ಪಕ್ಷದ ಜೀವಾಳ
ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷದ ಬಲವರ್ಧನೆಯಲ್ಲಿ ಅಹಿಂದ ವರ್ಗಗಳ ಪಾತ್ರ ಬಹಳ ದೊಡ್ಡದಿದೆ. ಈ ಸಮುದಾಯಗಳನ್ನು ಸರ್ಕಾರ ಮತ್ತು ಪಕ್ಷವು ಎಷ್ಟು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತದೆ ಎಂಬ ಅಂಶದ ಮೇಲೆ ಮುಂದಿನ ಭವಿಷ್ಯ ನಿರ್ಧಾರವಾಗಲಿದೆ. ಹಿಂದುಳಿದ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರ ಹಿತರಕ್ಷಣೆಗೆ ಆದ್ಯತೆ ನೀಡಿದಾಗ ಮಾತ್ರ ಪಕ್ಷಕ್ಕೆ ಜನಬೆಂಬಲ ಮುಂದುವರಿಯಲಿದೆ ಎಂದು ಅವರು ಅಭಿಪ್ರಾಯಪಟ್ಟರು.
ಹರಿಪ್ರಸಾದ್ ನೇಮಕಕ್ಕೆ ಮೆಚ್ಚುಗೆ
ಬಿ ಕೆ ಹರಿಪ್ರಸಾದ್ ಅವರನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ನೇಮಿಸಿರುವುದನ್ನು ಸ್ವಾಗತಿಸಿದ ರಾಜಣ್ಣ, ಹರಿಪ್ರಸಾದ್ ಅವರು ಹೋರಾಟದ ಹಾದಿಯಿಂದ ಬಂದ ಅನುಭವಿ ನಾಯಕರು. ಯುವ ಕಾಂಗ್ರೆಸ್ ಕಾಲದಿಂದಲೂ ನಾವು ಒಟ್ಟಾಗಿ ಕೆಲಸ ಮಾಡಿದ್ದೇವೆ. ಎಐಸಿಸಿ ಮಟ್ಟದಲ್ಲಿ ದೀರ್ಘಕಾಲ ಕೆಲಸ ಮಾಡಿದ ಅನುಭವ ಅವರಿಗಿದೆ. ಹಿಂದುಳಿದ ವರ್ಗದ ನಾಯಕನಿಗೆ ಇಂತಹ ಜವಾಬ್ದಾರಿ ನೀಡಿರುವುದು ಪಕ್ಷಕ್ಕೆ ಶಕ್ತಿ ತುಂಬಲಿದೆ. ಡಿ ಕೆ ಶಿವಕುಮಾರ್ ಮತ್ತು ಹರಿಪ್ರಸಾದ್ ಅವರ ಜೋಡಿ ಪಕ್ಷವನ್ನು ಹೇಗೆ ಮುನ್ನಡೆಸುತ್ತದೆ ಎಂಬುದು ಮುಖ್ಯ. ಇಲ್ಲಿ ವ್ಯಕ್ತಿಗಳಿಗಿಂತ ಅವರ ಕಾರ್ಯಕ್ಷಮತೆ ಮತ್ತು ಜನಪರ ಕೆಲಸಗಳು ಮುಖ್ಯವಾಗುತ್ತವೆ ಎಂದು ತಿಳಿಸಿದರು.
ಸರ್ಕಾರ ಘೋಷಿಸುವ ಹೊಸ ಯೋಜನೆಗಳ ಬಗ್ಗೆ ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೇರಿದಂತೆ ಹಲವು ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಆದರೆ ಯಾವುದೇ ಹೊಸ ಯೋಜನೆ ಜಾರಿಗೆ ತರುವ ಮೊದಲು ಹಣಕಾಸು ಇಲಾಖೆಯ ಅನುಮೋದನೆ ಅತ್ಯಗತ್ಯ. ರಾಜ್ಯದ ಇಂದಿನ ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಸಮತೋಲಿತ ನಿರ್ಧಾರಗಳನ್ನು ಕೈಗೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.
ನನ್ನ ಅನುಭವದ ಆಧಾರದ ಮೇಲೆ ಸಲಹೆ ಕೇಳಿದರೆ ಮಾತ್ರ ನಾನು ನೀಡುತ್ತೇನೆ. ಕೇಳದಿದ್ದಾಗ ಅನಗತ್ಯವಾಗಿ ಸಲಹೆ ನೀಡುವ ಅಭ್ಯಾಸ ನನಗಿಲ್ಲ. ಸಲಹೆಗಳನ್ನು ಸ್ವೀಕರಿಸುವ ಮನಸ್ಥಿತಿ ಇರುವವರಿಗೆ ಮಾತ್ರ ನನ್ನ ಮಾರ್ಗದರ್ಶನ ಇರುತ್ತದೆ. ಇನ್ನು ಡಿ ಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ. ಸಹಜವಾಗಿಯೇ ಮುಂದಿನ ದಿನಗಳಲ್ಲಿ ಅವರನ್ನು ಭೇಟಿ ಮಾಡಿ ರಾಜ್ಯದ ಅಭಿವೃದ್ಧಿ ವಿಚಾರಗಳ ಬಗ್ಗೆ ಚರ್ಚಿಸುತ್ತೇನೆ ಎಂದು ಕೆ ಎನ್ ರಾಜಣ್ಣ ಮಾಹಿತಿ ನೀಡಿದರು.








