ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಈಗ ಹೊಸ ಸಂಚಲನ ಸೃಷ್ಟಿಯಾಗಿದೆ. ಡಿ.ಕೆ. ಶಿವಕುಮಾರ್ ಸಾರಥ್ಯದ ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಈಗ ಬಹಿರಂಗವಾಗುತ್ತಿದೆ. ಸಚಿವ ಸ್ಥಾನಕ್ಕಾಗಿ ಹಿರಿಯ ಶಾಸಕರು ನಡೆಸುತ್ತಿರುವ ಹಠ, ರಾಜೀನಾಮೆ ಬೆದರಿಕೆ ಮತ್ತು ಹೈಕಮಾಂಡ್ ನಡೆಸುತ್ತಿರುವ ಮನವೊಲಿಕೆಯ ಪ್ರಹಸನಗಳು ಸದ್ಯದ ರಾಜಕೀಯ ಹೈಲೈಟ್ಸ್ ಆಗಿವೆ.
ಹಿರಿಯರಿಗೆ ಸಚಿವ ಸ್ಥಾನದ ದಾಹ ತೀರಲ್ವಾ?
ರಾಜ್ಯ ಕಾಂಗ್ರೆಸ್ ನಲ್ಲಿ ಈಗ ಕೇಳಿ ಬರುತ್ತಿರುವ ಅತಿದೊಡ್ಡ ಪ್ರಶ್ನೆ ಎಂದರೆ ಈ ಹಿರಿಯ ಶಾಸಕರಿಗೆ ಎಷ್ಟೇ ಬಾರಿ ಮಂತ್ರಿಯಾದರೂ ತೃಪ್ತಿ ಇಲ್ವಾ ಎಂಬುದು. ಅನೇಕ ಬಾರಿ ಅಧಿಕಾರ ಅನುಭವಿಸಿದರೂ ಮತ್ತೆ ಸಚಿವ ಸ್ಥಾನ ಬೇಕೆಂದು ಹಠ ಹಿಡಿಯುತ್ತಿರುವುದು ಪಕ್ಷದ ಶಿಸ್ತಿಗೆ ಧಕ್ಕೆ ತರುತ್ತಿದೆ. ಒಂದು ವೇಳೆ ಇವರಿಗೆ ಸಚಿವ ಸ್ಥಾನ ಬೇಡ ಎಂದಾದಲ್ಲಿ, ಆ ಸ್ಥಾನಗಳನ್ನು ಹೊಸಬರಿಗೆ ಅಥವಾ ಯುವ ಶಾಸಕರಿಗೆ ಬಿಟ್ಟುಕೊಟ್ಟು ಮಾರ್ಗದರ್ಶಕರಾಗಿ ಇರಬಾರದೇ ಎಂಬ ಆಕ್ರೋಶ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ. ಅಸಮಾಧಾನ ಹೊಂದಿರುವವರು ಶಾಸಕರಾಗಿಯೇ ಮುಂದುವರಿಯಲಿ, ಅದನ್ನು ಬಿಟ್ಟು ಅಧಿಕಾರಕ್ಕಾಗಿ ಸರ್ಕಾರಕ್ಕೆ ಮುಜುಗರ ತರುವುದು ಸರಿಯಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.
ಪಕ್ಷ ಬಿಡುವ ಧೈರ್ಯ ಯಾರಿಗೂ ಇಲ್ಲ
ಈಗ ನಡೆಯುತ್ತಿರುವ ರಾಜೀನಾಮೆ ಬೆದರಿಕೆ ಕೇವಲ ಒಂದು ನಾಟಕ ಎನ್ನಲಾಗುತ್ತಿದೆ. ಏಕೆಂದರೆ, ಈಗಿನ ಪರಿಸ್ಥಿತಿಯಲ್ಲಿ ಯಾರೂ ಕೂಡ ಪಕ್ಷ ಬಿಡುವ ಸಾಹಸ ಮಾಡುವುದಿಲ್ಲ. ಪಕ್ಷ ಬಿಟ್ಟರೆ ಮುಂದಿನ ದಿನಗಳಲ್ಲಿ ಅಧಿಕಾರವೂ ಸಿಗಲ್ಲ ಮತ್ತು ಮತ್ತೆ ಶಾಸಕರಾಗಿ ಆಯ್ಕೆಯಾಗುವುದು ಎಷ್ಟು ಕಷ್ಟ ಎಂಬ ಅರಿವು ಎಲ್ಲರಿಗೂ ಇದೆ. ಹೀಗಾಗಿಯೇ ಈ ಹಿರಿಯ ಶಾಸಕರು ಕೇವಲ ಬೆದರಿಕೆ ತಂತ್ರ ಬಳಸಿ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ. ಈ ರೀತಿಯ ನಾಟಕೀಯ ಪ್ರಹಸನಗಳನ್ನು ಬಿಟ್ಟು ಉತ್ತಮ ಆಡಳಿತ ನೀಡುವತ್ತ ಗಮನ ಹರಿಸುವುದು ಉತ್ತಮ.
ಜನ ಸಾಮಾನ್ಯರ ಸಮಸ್ಯೆ ಮುಖ್ಯವಾಗಲಿ
ಸೀನಿಯರ್ ಮತ್ತು ಜೂನಿಯರ್ ಎಂಬ ಅಹಂಕಾರವನ್ನು ಬದಿಗಿಟ್ಟು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸಬೇಕಾದ ಜವಾಬ್ದಾರಿ ಆಡಳಿತ ಪಕ್ಷದ ಮೇಲಿದೆ. ಹಾಲಿ ಮುಖ್ಯಮಂತ್ರಿಗಳು ಹಿಂದಿನವರಂತಲ್ಲ, ಅವರ ಕಾರ್ಯವೈಖರಿ ಭಿನ್ನವಾಗಿದೆ. ಆದರೆ ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಈ ಸಂಪುಟದಲ್ಲಿ ಬಹುತೇಕ ಸಚಿವರು ಸಿದ್ದರಾಮಯ್ಯನವರ ಬೆಂಬಲಿಗರಾಗಿದ್ದಾರೆ. ಅಂದ ಮೇಲೆ ಡಿ.ಕೆ. ಶಿವಕುಮಾರ್ ಅವರಿಗೆ ಆಡಳಿತ ನಡೆಸುವುದು ಅಂದುಕೊಂಡಷ್ಟು ಸುಲಭವಿಲ್ಲ. ಸಿದ್ದರಾಮಯ್ಯನವರ ಪ್ರಭಾವಳಿ ಮತ್ತು ಅವರ ಬೆಂಬಲಿಗರ ಹಿಡಿತವು ಟ್ರಬಲ್ ಶೂಟರ್ ಎಂದೇ ಹೆಸರಾದ ಡಿ.ಕೆ. ಶಿವಕುಮಾರ್ ಅವರಿಗೆ ಹೊಸ ತಲೆನೋವಾಗಿ ಪರಿಣಮಿಸಿದೆ.
ವಿರೋಧ ಪಕ್ಷಕ್ಕಿಂತ ಸ್ವಪಕ್ಷೀಯರೇ ಸವಾಲು
ರಾಜ್ಯದಲ್ಲಿ ಬಿಜೆಪಿ ಅಥವಾ ಜೆಡಿಎಸ್ ಪಕ್ಷಗಳು ಡಿ.ಕೆ. ಶಿವಕುಮಾರ್ ಅವರಿಗೆ ಅಷ್ಟಾಗಿ ತೊಂದರೆ ಕೊಡುತ್ತಿಲ್ಲ. ಬದಲಾಗಿ ಅವರದೇ ಪಕ್ಷದ ಶಾಸಕರು ಮತ್ತು ಸಚಿವರು ವಿರೋಧ ಪಕ್ಷದಂತೆ ವರ್ತಿಸುತ್ತಿರುವುದು ವಿಪರ್ಯಾಸ. ಶಾಶ್ವತ ಮುಖ್ಯಮಂತ್ರಿ ಎಂಬ ವರ್ಚಸ್ಸು ಹೊಂದಿರುವವರ ಪ್ರಭಾವದಿಂದ ಹೊರಬಂದು, ಸ್ವಪಕ್ಷದ ಶಾಸಕರನ್ನು ನಿಭಾಯಿಸುವುದು ಡಿ.ಕೆ. ಶಿವಕುಮಾರ್ ಅವರಿಗೆ ಈಗ ಬೆಟ್ಟದಂತಹ ಸವಾಲಾಗಿದೆ.
ಒಟ್ಟಿನಲ್ಲಿ ಕರ್ನಾಟಕ ಕಾಂಗ್ರೆಸ್ ನಲ್ಲಿ ನಡೆಯುತ್ತಿರುವ ಈ ಒಳಜಗಳಗಳು ಸರ್ಕಾರದ ಅಭಿವೃದ್ಧಿ ಕೆಲಸಗಳಿಗೆ ಅಡ್ಡಿಯಾಗಬಾರದು ಎಂಬುದೇ ಜನರ ಆಶಯ
ಸನತ್ ರೈ







