ಎದೆತುಂಬಿ ಹೇಳಿರುವೆ…ಪ್ರೀತಿಯಿಂದ ಬರೆದಿರುವೆ… ಮನವಿಟ್ಟು ಓದಿ… ಇದು ನನ್ನ ಅಂತರಾಳದ ಮಾತು..!
ಬಹುಶಃ ಅಂದು ನನಗೆ ನಾಲ್ಕೈದು ವರ್ಷ. ಎಲ್ಲ ಮಕ್ಕಳಂತೆ ಓಡಾಡಿಕೊಂಡು ನಾನು ಆಟವಾಡುತ್ತಿದ್ದೆ. ಆದ್ರೆ ಏಕಾಏಕಿ ನನ್ನ ಕಾಲುಗಳು ಸ್ವಾಧೀನ ಕಳೆದುಕೊಂಡಿದ್ದವು. ಅವತ್ತೇ ನನ್ನ ಬದುಕಿಗೆ ಕತ್ತಲು ಆವರಿಸಿಕೊಂಡಿತ್ತು. ಎದ್ದು ನಡೆಯಲು ಆಗದ ಪರಿಸ್ಥಿತಿ. ಕೊನೆಗೆ ಶಾಶ್ವತವಾಗಿ ವಿಶೇಷ ವಿಕಲಚೇತನನಾದೆ.
ಮೊದಲೇ ನಮ್ಮ ಕುಟುಂಬ ತರಕಾರಿ ಮಾರಾಟ ಮಾಡಿ ಜೀವನ ಸಾಗಿಸುತ್ತಿತ್ತು. ಬಡತನ ನಮ್ಮ ಕುಟುಂಬಕ್ಕೆ ಶಾಪವಾಗಿ ಕಾಡುತ್ತಿತ್ತು. ಅಂತಹ ದುಸ್ಥಿತಿಯಲ್ಲಿದ್ದ ನನ್ನ ಹೆತ್ತವರಿಗೆ ಇದು ಬರಸಿಡಿಲಿನಂತಹ ಆಘಾತ. ಮನೆಗೆ ಆಧಾರವಾಗಬೇಕಿದ್ದ ನಾನು ಪೋಲಿಯೊ ಪೀಡಿತನಾಗಿದ್ದೆ. ನನ್ನ ಚಿಕಿತ್ಸೆಗಾಗಿ ಹೆತ್ತವರು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ನಮ್ಮ ಕುಟುಂಬದ ಪರಿಸ್ಥಿತಿ ಅಯೋಮಯವಾಗಿತ್ತು.
ಚಿಕಿತ್ಸೆಯ ವೆಚ್ಚಕ್ಕಾಗಿ ಎಲ್ಲವನ್ನು ಕಳೆದುಕೊಂಡು ನಾವು ದಿವಾಳಿಯಾಗಿದ್ದೇವು. ಆಗ ನಮ್ಮೂರಿನ ಜನರು, ಬಂಧುಗಳು ಅಪಹಾಸ್ಯ ಮಾಡುತ್ತಿದ್ದರು. ಜಂಡು ಹೋ ಗಯಾ (ದಿವಾಳಿಯಾದ್ರಿ) ಅಂತ ಹೀಯಾಳಿಸುತ್ತಿದ್ದರು. ಎಲ್ಲರೂ ನನ್ನನ್ನು ಝಂಡು ಎಂದು ಲೇವಡಿ ಮಾಡಿ ಕರೆಯುತ್ತಿದ್ದರು. ಕೊನೆಗೆ ನನ್ನ ನೇಮ್ ಪ್ಲೇಟ್ ಕೂಡ ಝಂಡು ಕುಮಾರ್ ಆಯ್ತು
ಇದರಿಂದ ನನಗೆ ತುಂಬಾನೇ ವೇದನೆಯಾಗುತ್ತಿತ್ತು. ಈ ಅಡ್ಡ ಹೆಸರನ್ನು ಅಳಿಸಿ ಹಾಕಲು ಸಾಕಷ್ಟು ಪ್ರಯತ್ನಪಟ್ಟಿದ್ದೆ. ನನ್ನ ಹೆಸರನ್ನು ಅವಿನಾಶ್ ಕುಮಾರ್ ಎಂದು ಬದಲಾಯಿಸಲು ತೀರ್ಮಾನಿಸಿದ್ದೆ. ಇದಕ್ಕಾಗಿ ಸರ್ಕಾರಿ ಕಚೇರಿಗೆ ಸಾಕಷ್ಟು ಬಾರಿ ಅಲೆದಾಡಿದ್ದೆ. ಆದ್ರೆ ಅಲ್ಲಿನ ಅಧಿಕಾರಿಗಳು ಕೂಡ ಪದೇ ಪದೇ ಝಂಡು ಅಂತ ಕರೆದು ನಗುತ್ತಿದ್ದರು. ಕೊನೆಗೆ ಝಂಡು ಕುಮಾರ್ ಅನ್ನೋ ಹೆಸರೇ ನನ್ನ ಬದುಕಿನ ಐಡೆಂಟಿಯಾಯ್ತು.
ಎಲ್ಲರೂ ನನ್ನ ಹೆಸರು ಕೇಳಿ ನಗುತ್ತಿದ್ರೆ, ನನಗೆ ಮಾತ್ರ ನನ್ನ ಹೆಸರಿನ ಮೇಲೆ ಕೀಳರಿಮೆ ಇರಲಿಲ್ಲ. ಒಂದು ದಿನ ನನ್ನ ಹೆಸರೇ ನನಗೆ ಒಳಿತನ್ನೇ ಮಾಡುತ್ತೆ ಎಂಬ ಆಶಾಭಾವನೆಯಲ್ಲಿದ್ದೆ. ಅದು ಈಗ ಸುಳ್ಳಾಗಲಿಲ್ಲ.
ನಡೆದಾಡಲು ಆಗದಿದ್ರೂ ಸುಮ್ಮನೆ ಮನೆಯಲ್ಲಿ ಕೂರಲಿಲ್ಲ. ಅಪ್ಪ -ಅಮ್ಮನ ತರಕಾರಿ ವ್ಯಾಪಾರಕ್ಕೆ ಸಹಾಯ ಮಾಡುತ್ತಿದ್ದೆ. ಪ್ರತಿ ದಿನದ ನಮ್ಮ ಸಂಪಾದನೆ 500 ರೂ. ಅದರಲ್ಲಿ 300 ರೂ. ದಿನನಿತ್ಯದ ಖರ್ಚಿಗೆ ವೆಚ್ಚಾವಾಗುತ್ತಿತ್ತು. ಇನ್ನುಳಿದ 200ರೂ., ಇತರೆ ಖರ್ಚಿಗೂ ಸಾಕಾಗುತ್ತಿರಲಿಲ್ಲ. ಅಲ್ಲದೆ ದಿನ 20ಕಿಲೋ ಮೀಟರ್ ದೂರ ಸಂಚರಿಸಿ, ತರಕಾರಿ ಖರೀದಿಸಿ ಮಾರಾಟ ಮಾಡುತ್ತಿದ್ದೇವು.
ಆದ್ರೆ ಕೊವಿಡ್ ಸಮಯದಲ್ಲಿ ನಮ್ಮ ತರಕಾರಿ ವ್ಯಾಪಾರಕ್ಕೆ ತೀವ್ರ ಹೊಡೆತ ಬಿತ್ತು. ಆಗ ಸಾಲ ಮಾಡಿ ವಿದ್ಯುತ್ ಚಾಲಿತ ಆಟೋ ಖರೀದಿಸಿ ಕುಟುಂಬದ ಜೀವನ ಸಾಗಿಸಲು ನೆರವಾಗುತ್ತಿದ್ದೆ.
ಹೋ.. ಹೋ..! ನಾನು ಹೇಳುವುದನ್ನೇ ಮರೆತುಬಿಟ್ಟಿದ್ದೆ ನೋಡಿ.., ವಿಶೇಷ ಚೇತನನಾಗಿದ್ರೂ ನನಗೆ ಕ್ರೀಡೆಯಲ್ಲಿ ತುಂಬಾ ಆಸಕ್ತಿ ಇತ್ತು. ವಿಶೇಷ ಚೇತನರ ಶಾಟ್ಪುಟ್, ಡಿಸ್ಕಸ್ ತ್ರೋ ಸ್ಪರ್ಧೆಗಳಲ್ಲಿ ಜಿಲ್ಲೆ ಹಾಗೂ ರಾಜ್ಯ ಮಟ್ಟದಲ್ಲಿ ಪದಕಗಳನ್ನು ಗೆದ್ದಿದ್ದೆ. ಕಾಲಿನಲ್ಲಿ ಬಲವಿಲ್ಲದಿದ್ರೂ ಕೈಯ ರಟ್ಟೆಗಳನ್ನು ಬಲಪಡಿಸಲು ಜಿಮ್ಗೆ ಹೋಗುತ್ತಿದ್ದೆ.
ಆದ್ರೆ ನಾನು ಯಾವತ್ತೂ ಪ್ಯಾರಾ ಪವರ್ ಲಿಫ್ಟರ್ ಆಗಬೇಕು ಎಂದು ಯೋಚನೆ ಕೂಡ ಮಾಡಿರಲಿಲ್ಲ. ಅದರ ಬಗ್ಗೆ ಜ್ಞಾನವೂ ಇರಲಿಲ್ಲ. ರಿಕ್ಷಾ ಚಾಲನೆ ಮಾಡಿಕೊಂಡು, ಪ್ರತಿ ದಿನ ಜಿಮ್ನಲ್ಲಿ ಕಸರತ್ತು ನಡೆಸುವುದನ್ನು ಬಿಡುತ್ತಿರಲಿಲ್ಲ. ನನ್ನ ದೇಹದ ಸಾಮಥ್ರ್ಯವನ್ನು ನೋಡಿದ್ದ ಬಿಹಾರದ ಕೋಚ್ ಕುಂದನ್ ಪಾಂಡೆ ಅವರು, ಪ್ಯಾರಾ ಪವರ್ ಲಿಫ್ಟಿಂಗ್ ಕಡೆಗೆ ಗಮನ ಹರಿಸುವಂತೆ ಸಲಹೆ ನೀಡಿದ್ದರು. ಈ ನಡುವೆ ರಿಕ್ಷಾ ಓಡಿಸಲು ಕೂಡ ಕಷ್ಟವಾಗುತ್ತಿತ್ತು. ಆದ್ರಿಂದ ಆಟೋ ಮಾರಿ ಸಾಲ ತೀರಿಸಿದೆ. ಉಳಿದ ಹಣವನ್ನಿಟ್ಟುಕೊಂಡು, ನನ್ನ ಭವಿಷ್ಯ ರೂಪಿಸುವತ್ತ ಹೆಜ್ಜೆ ಹಾಕಿದ್ದೆ.
ಕೇವಲ ನಾಲ್ಕು ವರ್ಷದ ಹಿಂದೆ ನಾನು ಸಾಯಿ ಕೋಚ್ ರಾಜೀಂದರ್ ಸಿಂಗ್ ಸಾಹಿಬ್ ಅವರ ಕಣ್ಣಿಗೆ ಬಿದ್ದೆ. 2023ರಲ್ಲಿ ಗಾಂಧಿನಗರದ ಭಾರತೀಯ ಕ್ರೀಡಾ ಪ್ರಾಧಿಕಾರಿವನ್ನು ಸೇರಿಕೊಂಡಿದ್ದೆ. ಅಲ್ಲಿಂದ ನನ್ನ ಜೀವನವೇ ಬದಲಾಗಿ ಹೋಯ್ತು. ಅಲ್ಲಿನ ಅತ್ಯುತ್ತಮ ಸೌಲಭ್ಯಗಳು ನನ್ನ ಭವಿಷ್ಯದ ಸಾಧನೆಗೆ ಶಕ್ತಿ ನೀಡಿದ್ದವು. ಗುಣ ಮಟ್ಟದ ಆಹಾರಗಳು ನನ್ನ ಬಡತನದ ಹಸಿವನ್ನು ನೀಗಿಸಿದ್ದವು.
ಈ ನಡುವೆ ನನ್ನೂರಿನ ಜಿಮ್À ಮಾಲೀಕರಾಗಿದ್ದ ಸುಧೀರಣ್ಣ, ಕಾಮನ್ವೆಲ್ತ್ ಗೇಮ್ಸ್ ನಲ್ಲಿ 212 ಕೆಜಿ ಭಾರ ಎತ್ತಿ ಚಿನ್ನದ ಪದಕ ಗೆದ್ದಿದ್ದರು. ಇದು ನನಗೆ ಮತ್ತಷ್ಟು ಪ್ರೇರಣೆ ನೀಡಿತ್ತು. ನಾನು ಕೂಡ ನನ್ನ ದೇಶಕ್ಕಾಗಿ ಪದಕ ಗೆಲ್ಲಲೇಬೇಕು ಎಂಬ ಹಠಕ್ಕೆ ಬಿದ್ದೆ. ಅದಕ್ಕಾಗಿ ಸಾಕಷ್ಟು ಶ್ರಮವನ್ನೂ ಪಡುತ್ತಿದ್ದೆ.
ಹಾಗಾಗಿಯೇ ಇವತ್ತು ಗ್ಲಾಸ್ಗೋದ ಪೋಡಿಯಂನಲ್ಲಿ ನಿಂತಿದ್ದೇನೆ. ನನ್ನ ಕೊರಳಿನಲ್ಲಿರೋದು ಕಂಚಿನ ಪದಕವಾದ್ರೂ ಅದು ನನ್ನ ಹೆಸರನ್ನು ಹೊಳೆಯುವಂತೆ ಮಾಡಿದೆ. ದೇಶಕ್ಕೆ ಕೀರ್ತಿ ತಂದ ಹೆಮ್ಮೆ ಇದೆ. ಅದು ಪುರುಷರ ಹೇವಿವೇಟ್ ಪ್ಯಾರಾ ಪವರ್ ಲಿಫ್ಟಿಂಗ್ ಸ್ಪರ್ಧೆ. ಆರಂಭದಲ್ಲೇ 190 ಕೆಜಿ ಭಾರ ಎತ್ತಿ ಪದಕವನ್ನು ಖಚಿತಪಡಿಸಿಕೊಂಡಿದ್ದೆ.
ಆದ್ರೆ ನನ್ನ ಕಣ್ಣಿದ್ದದ್ದು ಚಿನ್ನದ ಮೇಲೆ. ಹಾಗಾಗಿ 196 ಕೆಜಿ ಎತ್ತುವ ಪ್ರಯತ್ನ ಮಾಡಿದೆ. ಆದ್ರೆ ತಾಂತ್ರಿಕ ದೋಷ ನನ್ನನ್ನು ಎಡವಿ ಬೀಳುವಂತೆ ಮಾಡಿತು. ಹೌದು, ನನಗೆ ಚಿನ್ನ ಗೆಲ್ಲಬಹುದಿತ್ತು. ಆದ್ರೆ ಒಂದು ಸಣ್ಣ ತಪ್ಪು ಕೈಚೆಲ್ಲುವಂತೆ ಮಾಡಿತ್ತು. ಹೀಗಾಗಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟೆ. ಆದ್ರೆ ಇದು ಆರಂಭ ಅಷ್ಟೇ. ಪ್ಯಾರಾ ಒಲಿಂಪಿಕ್ಸ್ನಲ್ಲಿ ಪದಕ ಗೆಲ್ಲುವುದು ನನ್ನ ಮುಂದಿನ ಮುಖ್ಯ ಗುರಿಯಾಗಿದೆ.
ನಿಜ, ಪದಕ ಗೆದ್ದ ಖುಷಿಯಿಂದ ನನಗೆ ನಿದ್ದೆ ಬಂದಿಲ್ಲ. ನನ್ನ ಸಂತಸ, ಸಂಭಮಕ್ಕೆ ಮಿತಿಯೇ ಇಲ್ಲ. ಯಾಕಂದ್ರೆ ಈ ಪದಕದ ಹಿಂದೆ ನನ್ನ ಅಪ್ಪ – ಅಮ್ಮನ ತ್ಯಾಗವಿದೆ. ನನಗಾಗಿ ಅವರು ಸರ್ವಸ್ವವನ್ನು ಕಳೆದುಕೊಂಡಿದ್ದರು. ಇಲ್ಲಿಯ ತನಕ ಕಣ್ಣೀರಿನಲ್ಲೇ ಜೀವನ ಸಾಗಿಸಿದ್ದ ಅವರ, ಮುಖದಲ್ಲಿ ಈಗ ಮಂದಹಾಸದ ನಗು ಮೂಡಿದೆ.
ಇಷ್ಟು ದಿನ ನಮಗೆ ಶಾಪವಾಗಿ ಕಾಡುತ್ತಿದ್ದ ಬಡತನಕ್ಕೆ ಈ ಒಂದು ಪದಕದಿಂದ ಮುಕ್ತಿ ಸಿಗಲಿದೆ. ನನ್ನ ಹೆತ್ತವರು ನೆಮ್ಮದಿಯಾಗಿ ಬದುಕುವುದನ್ನು ನಾನು ನೋಡಬೇಕು. ಅದಕ್ಕಿಂತ ದೊಡ್ಡ ಖುಷಿ, ಅದಕ್ಕಿಂತ ದೊಡ್ಡ ಆಸೆ ನನಗೆ ಬೇರು ಏನೂ ಇಲ್ಲ.
ಹೌದು, ಪದಕ ಗೆದ್ದ ತಕ್ಷಣ ಅಮ್ಮ- ಅಪ್ಪನ ಬಳಿ ಮಾತನಾಡಿದ್ದೇನೆ. ಇಡೀ ಊರಿನಲ್ಲಿ ಹಬ್ಬದ ಸಂಭ್ರಮವಿದೆಯಂತೆ. ಅವತ್ತೂ ಝಂಡು ಎಂದು ಕರೆದು ಅಪಹಾಸ್ಯ ಮಾಡುತ್ತಿದ್ದವರು ಇಂದು ನನ್ನ ಹೆಸರನ್ನು ಕೂಗಿ ಜೈಕಾರ ಹಾಕುತ್ತಿದ್ದಾರಂತೆ. ಜಂಡು ಪದಕ ಗೆದ್ದಿದ್ದಾನೆ ಅಂತ ಊರಿನಲ್ಲಿ ಸಿಹಿ ಹಂಚುತ್ತಿದ್ದಾರಂತೆ. ಊರಿನಲ್ಲಿ ವಿಜಯೋತ್ಸಾಹ ಆಚರಿಸುತ್ತಿದ್ದಾರಂತೆ. ಹಾಗಂತ ಅಮ್ಮ ಫೋನ್ನಲ್ಲಿ ಹೇಳಿದ್ದಳು..!
ಅಂದ ಹಾಗೇ, ಬಿಹಾರದ ನಳಂದಾ ಜಿಲ್ಲೆಯ ಹರ್ನೌತ್ ಬಳಿಯ ಸಬ್ನಹುವಾ ಎಂಬ ಪುಟ್ಟ ಹಳ್ಳಿಯೇ ನನ್ನೂರು. ನೆನಪಿಡಿ, ನನ್ನ ಹೆಸರಿನ ಅರ್ಥ ಝಂಡು (ದಿವಾಳಿ) ಆಗಿರಬಹುದು. ಆದ್ರೆ ಈಗ ನಾನು ಜಂಡು ಅಲ್ಲ. ಕಾಮನ್ವೆಲ್ತ್ ಗೇಮ್ಸ್ನಲ್ಲಿ ಪದಕ ವಿಜೇತ ಜಂಡು ಕುಮಾರ್..!
ಕೊನೆಯದಾಗಿ ಒಂದು ಮಾತು ಹೇಳ್ತಿನಿ, ನನಗೆ ಈಗ 28 ವರ್ಷ. ಹಳೆಯ ಕಷ್ಟದ ದಿನಗಳನ್ನು ಮರೆತಿಲ್ಲ. ಕಠಿಣ ಪರಿಶ್ರಮಕ್ಕೆ ಫಲ ಸಿಗಲೇಬೇಕು ಎಂದು ಯೋಚನೆ ಮಾಡುವುದಿಲ್ಲ. ಬದಲಾಗಿ ನನ್ನ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಸಮಯ ಬಂದಾಗ ಫಲ ಸಿಗುತ್ತದೆ. ಏನೇ ಇರಲಿ, ನಿಮ್ಮ ಪ್ರೀತಿ, ಅಭಿಮಾನಕ್ಕೆ ನಾನು ಚಿರಋಣಿ
ಇಂತಿ ನಿಮ್ಮವ
ಝಂಡು ಕುಮಾರ್..!
—
ಸನತ್ ರೈ








