ಅಂದು ಹೂ ಮಾರುತ್ತಿದ್ದ ಕೈಗಳಿಂದ ಇಂದು ಭಾರತಾಂಬೆಯ ಕೊರಳಿಗೆ ಪದಕಗಳ ಹಾರ..! ವಿಶೇಷ ಚೇತನ ಕ್ರೀಡಾಪಟುಗಳ ಬದುಕಿಗೆ ಬೆಳಕಾದ ” ಸತ್ಯ ” ಸಾಧನೆಯ ಯಶೋಗಾಥೆ..!
ಸರಿ ಸುಮಾರು 25 ವರ್ಷಗಳ ಹಿಂದೆ.
ಅಂದು ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ನಾನು ನೋಡಿದ್ದ ಆ ವ್ಯಕ್ತಿ..!
ಇಂದು ಸ್ಕಾಟ್ಲೆಂಡ್ ನ ಗ್ಲಾಸ್ಗೋ ಅಂಗಣದಲ್ಲಿ ನೋಡುತ್ತಿರುವ ಅದೇ ವ್ಯಕ್ತಿ..!
ಅವತ್ತು, ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಕಾರ್ಯದರ್ಶಿ.
ಇಂದು, ಭಾರತ ಪ್ಯಾರಾಲಿಂಪಿಕ್ ಸಮಿತಿಯ ಮುಖ್ಯ ತರಬೇತುದಾರ.
ಈಗ, ವಯಸ್ಸು, ಹುದ್ದೆ ಬದಲಾಗಿರಬಹುದು. ಆದ್ರೆ ಆ ವ್ಯಕ್ತಿಯ ವ್ಯಕ್ತಿತ್ವ, ಸ್ವಭಾವ ಒಂಚೂರು ಬದಲಾವಣೆಯಾಗಿಲ್ಲ. ಅದೇ ಉತ್ಸಾಹ. ಅದೇ ಲವಲವಿಕೆ. ಅದೇ ನಗು. ಅದೇ ನಡೆ ನುಡಿ. ಅದೇ ಪ್ರೀತಿ. ಅದೇ ಆತ್ಮೀಯತೆ.
ನೀವು ಈ ವ್ಯಕ್ತಿಯ ಬಗ್ಗೆ ಎಷ್ಟು ಬೇಕಾದ್ರೂ ಟೀಕೆ, ಆರೋಪ ಮಾಡಿ. ಬೇಕಾದ್ರೆ ವಿರುದ್ಧವಾಗಿಯೇ ಬರೆಯಿರಿ. ಏನು ಬೇಕಾದ್ರೂ ಬೈಯಿರಿ. ಮೆಚ್ಚುಗೆಯನ್ನೇ ವ್ಯಕ್ತಪಡಿಸಿ. ಆದ್ರೂ ಯಾವುದಕ್ಕೂ ತಲೆಕೆಡಿಸಿಕೊಳ್ಳಲ್ಲ. ಏನು ಆಗಿಲ್ಲ ಅಂತ ನಗು ನಗುತ್ತಲೇ ಮಾತನಾಡುವುದು. ತಪ್ಪುಗಳನ್ನು ಒಪ್ಪಿಕೊಳ್ಳುವುದು, ಮುಂದಿನ ಉದ್ದೇಶಗಳು ಈಡೇರುತ್ತಾ ಇಲ್ವೋ ಗೊತ್ತಿಲ್ಲ. ಆದ್ರೂ ಆಶಾಭಾವನೆಗಳ ಮಾತುಗಳನ್ನಾಡುವುದು ಈ ವ್ಯಕ್ತಿಯ ಸ್ವಭಾವ.
ಹೌದು, ಈ ವ್ಯಕ್ತಿಗೆ ಅಥ್ಲೆಟಿಕ್ಸ್ ಅಂದ್ರೆ ಉಸಿರು. ಅದೇ ಬದುಕು. ಅಥ್ಲೆಟಿಕ್ಸ್ ನಿಂದಲೇ ಜೀವನ ರೂಪಿಸಿಕೊಂಡ ಕ್ರೀಡಾಪಟು. ಯಾರು ಏನು ಬೇಕಾದ್ರೂ ಹೇಳಲಿ, ಆಡಳಿತಗಾರನಾಗಿ ಯುವ ಪ್ರತಿಭೆಗಳಿಗೆ ದಾರಿ ತೋರಿಸಿದ್ದ ಮಾರ್ಗದರ್ಶಕ. ವಿಶೇಷ ಚೇತನ ಕ್ರೀಡಾಪಟುಗಳ ಬಾಳಿಗೆ ಬೆಳಕು ನೀಡುತ್ತಿರುವ ಗುರು. ಭಾರತದ ಪ್ಯಾರಾ ಅಥ್ಲೆಟಿಕ್ಸ್ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಮಹಾ ಪೋಷಕ.
ಹೀಗೆ ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿರುವುದನ್ನು ಪರಿಗಣಿಸಿ 2017ರ ದ್ರೋಣಾಚಾರ್ಯ ಪ್ರಶಸ್ತಿಗೆ ಇವರ ಹೆಸರನ್ನು ಆಯ್ಕೆ ಸಮಿತಿ ಶಿಫಾರಸು ಮಾಡಿತ್ತು. ಆದ್ರೆ ಪ್ಯಾರಾಲಿಂಪಿಕ್ ಸಮಿತಿಯ ಮಾಜಿ ಅಧ್ಯಕ್ಷ ರಾಜೇಶ್ ತೋಮರ್, ಇವರ ವಿರುದ್ದ ದಾಖಲಿಸಿದ್ದ ಮಾನನಷ್ಟ ಪ್ರಕರಣದ ವಿಚಾರಣೆ ಬಾಕಿ ಇದ್ದ ಕಾರಣ, ಪ್ರತಿಷ್ಠಿತ ಪ್ರಶಸ್ತಿ ಕೈತಪ್ಪಿತ್ತು. ಆಗ ಕಣ್ಣೀರು ಹಾಕಿ ನಾನು ತಪ್ಪಿತಸ್ಥನಲ್ಲ ಎಂದು ಹೇಳಿದ್ದರು. ಆದ್ರೂ ಇವರ ಕಣ್ಣೀರಿಗೆ ಬೆಲೆ ಸಿಗಲಿಲ್ಲ. ಆದ್ರೂ ತನ್ನ ಕರ್ತವ್ಯವನ್ನು ನಿಲ್ಲಿಸಲಿಲ್ಲ. ಪ್ರತಿಭಾನ್ವಿತ ಕ್ರೀಡಾಪಟುಗಳ ಏಳಿಗೆಗೆ ಹಗಳಿರು ಶ್ರಮಿಸುತ್ತಿರುವ ಕಾಯಕ ಯೋಗಿ.
ಈ ವ್ಯಕ್ತಿಯ ಹೆಸರು ಸತ್ಯನಾರಾಯಣ. ಪ್ರೀತಿಯ ಸತ್ಯ.
ಮಾಜಿ ಅಥ್ಲೀಟ್, ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಮಾಜಿ ಕಾರ್ಯದರ್ಶಿ. ಭಾರತದ ಪ್ಯಾರಾಲಿಂಪಿಕ್ ಸಮಿತಿಯ ಮುಖ್ಯ ಕೋಚ್.
ಅದು ನನ್ನ ವೃತ್ತಿ ಬದುಕಿನ ಆರಂಭದ ದಿನಗಳು. ವಾರಕ್ಕೆ ಮೂರು ನಾಲ್ಕು ಬಾರಿಯಾದ್ರೂ ಕಂಠೀರವ ಕ್ರೀಡಾಂಗಣಕ್ಕೆ ಭೇಟಿ ನೀಡುವುದು ರೂಢಿಯಾಗಿತ್ತು. ಆಗ ಅಥ್ಲೆಟಿಕ್ಸ್ ಸಂಸ್ಥೆಯ ಖಜಾಂಜಿ ಬಾಲು ನಾಯ್ಡು, ಆನಂದ್ ಶೆಟ್ಟಿ, ಉದಯಪ್ರಭು, ಬಾಬು ಶೆಟ್ಟಿ, ಎಸ್.ಡಿ. ಈಶನ್, ಅಶ್ವಿನಿ ನಾಚಪ್ಪ, ಅಯ್ಯಪ್ಪ, ಪ್ರಮೀಳಾ ಅಯ್ಯಪ್ಪ ಹೀಗೆ ಅನೇಕ ಮಾಜಿ – ಹಾಲಿ ಕ್ರೀಡಾಪಟುಗಳ ಪರಿಚಯ ಮಾಡಿಸಿದ್ದು ಕೂಡ ಇದೇ ಸತ್ಯ ಅವರೇ.
ಆ ದಿನಗಳಲ್ಲಿ ಕಂಠೀರವ ಕ್ರೀಡಾಂಗಣದಲ್ಲಿ ಕರ್ನಾಟಕ ಕ್ರೀಡಾಪ್ರಾಧಿಕಾರದ ಜೊತೆಗೆ ವಿವಿಧ ಖಾಸಗಿ ಅಕಾಡೆಮಿಗಳ ಕ್ರೀಡಾಪಟುಗಳು ಕೂಡ ತರಬೇತಿ ನಡೆಸುತ್ತಿದ್ದರು. ಪ್ರತಿ ದಿನ ಸತ್ಯ ಮಾತ್ರ ದೂರದಿಂದಲೇ ಅಥ್ಲೀಟ್ಗಳ ಸಾಮಥ್ರ್ಯ ಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದರು. ಪ್ರತಿಭಾವಂತ ಕ್ರೀಡಾಪಟುಗಳಿಗೆ ಪೆÇ್ರೀತ್ಸಾಹ ನೀಡುತ್ತಿದ್ದರು. ಕ್ಲಿಫರ್ಡ್, ಬಿಂದುರಾಣಿ, ಮುದಾಸಿರ್, ವಿಲಾಸ್ ನೀಲಗುಂದನಂತಹ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸಿಕೊಟ್ಟಿದ್ದು ಕೂಡ ಸತ್ಯ ಎಂಬುದರಲ್ಲಿ ಎರಡು ಮಾತಿಲ್ಲ.
ಈ ಮಾತು ಯಾಕೆ ಹೇಳುತ್ತಿದ್ದೇನೆ ಅಂದ್ರೆ, ಈಗ ಕಂಠೀರವ ಕ್ರೀಡಾಂಗಣದಲ್ಲಿ ವರ್ಷಕ್ಕೆ ಎಷ್ಟು ಕ್ರೀಡಾಕೂಟಗಳು ನಡೆಯುತ್ತಿವೆ ಎಂಬುದು ಗೊತ್ತಿಲ್ಲ. ಆದ್ರೆ ಸತ್ಯ ಅವರ ಅವಧಿಯಲ್ಲಿ ವರ್ಷಕ್ಕೆ ಕನಿಷ್ಠ ಅಂದ್ರೂ ನಾಲ್ಕೈದು ರಾಜ್ಯ, ರಾಷ್ಟ್ರೀಯ ಹಾಗೂ ಹೊನಲು ಬೆಳಕಿನಲ್ಲಿ ಗ್ರ್ಯಾಂಡ್ ಪ್ರಿಕ್ಸ್ ಕ್ರೀಡಾಕೂಟಗಳನ್ನು ಆಯೋಜನೆ ಮಾಡುತ್ತಿದ್ದರು. ತನ್ನ ಸ್ವಂತ ಬಲದಿಂದ ಪ್ರಾಯೋಜಕರ ಮನವೋಲಿಸಿ ಕ್ರೀಡಾಕೂಟವನ್ನು ಅಷ್ಟೇ ಅಚ್ಚುಕಟ್ಟಾಗಿ ಸಂಫಟಿಸುತ್ತಿದ್ದರು.
ನನಗೆ ಇನ್ನೂ ನೆನಪಿದೆ. ಕ್ರೀಡಾಕೂಟದ ಆಯೋಜನೆಗೆ ಸತ್ಯ ಎಷ್ಟು ಕಷ್ಟಪಡುತ್ತಿದ್ದರು ಎಂಬುದನ್ನು ಕಣ್ಣಾರೆ ನೋಡಿದ್ದೇನೆ. ಒಂದು ಕ್ರೀಡಾಕೂಟವನ್ನು ಆಯೋಜನೆ ಮಾಡುವುದು ಸುಲಭದ ಕೆಲಸವಲ್ಲ. ಇಡೀ ಕ್ರೀಡಾಕೂಟದ ಯಶಸ್ಸಿಗೆ ತನ್ನನ್ನು ತಾನು ಸಮರ್ಪಣೆ ಮಾಡಿಕೊಳ್ಳುತ್ತಿದ್ದರು. ಕ್ರೀಡಾಕೂಟ ಆರಂಭವಾಗುವ ಮುನ್ನ ತನ್ನ ಸಿಬ್ಬಂದಿಗಳ ಜೊತೆ ಸೇರಿಕೊಂಡು ಕ್ರೀಡಾಂಗಣದ ಸುತ್ತ ಬ್ಯಾನರ್ ಕಟ್ಟುತ್ತಿದ್ದರು. ಕ್ರೀಡಾಕೂಟ ಉದ್ಘಾಟನೆಯ ಸಮಯಕ್ಕೆ ಸರಿಯಾಗಿ ಸೂಟ್ ಬೂಟ್ ಹಾಕೊಂಡು ವೇದಿಕೆಯಲ್ಲಿರುತ್ತಿದ್ದರು.
ಹಾಗೇ ವೇದಿಕೆ ಕಾರ್ಯಕ್ರಮ ಮುಗಿದ ನಂತರ ಸ್ವಯಂ ಸೇವಕರಾಗಿ ದುಡಿಯುತ್ತಿದ್ದರು. ಅತ್ಯುತ್ತಮ ಪ್ರದರ್ಶನ ನೀಡಿದ್ದ ಕ್ರೀಡಾಪಟುಗಳಿಗೆ ಬೆನ್ನು ತಟ್ಟಿ ಪೆÇ್ರೀತ್ಸಾಹ ನೀಡುತ್ತಿದ್ದರು. ಇದನ್ನೆಲ್ಲಾ ತುಂಬಾ ಹತ್ತಿರದಿಂದ ಗಮನಿಸಿದ್ದೇನೆ.
ಬಹುಶಃ ಅದು ಯಾವುದೋ ಒಂದು ರಾಷ್ಟ್ರೀಯ ಕ್ರೀಡಾಕೂಟವಾಗಿರಬೇಕು. ಪ್ರೇಕ್ಷಕರೇ ಕ್ರೀಡಾಪಟುಗಳು.. ಕ್ರೀಡಾಪಟುಗಳೇ ಪ್ರೇಕ್ಷಕರು ಎಂಬ ಹೆಡ್ಲೈನ್ನಲ್ಲಿ ಆ ಕ್ರೀಡಾಕೂಟದ ಬಗ್ಗೆ ಲೇಖನ ಬರೆದಿದ್ದೆ. ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯ ಅವ್ಯವಸ್ಥೆಯ ಬಗ್ಗೆಯೂ ವರದಿಯನ್ನು ಮಾಡಿದ್ದೆ. ಆದ್ರೆ ಸತ್ಯನಾರಾಯಣ ಅವರು, ಆ ಲೇಖನವನ್ನು ಓದಿ, ಅದೇ ದಿನ ಸಂಜೆ ಪತ್ರಿಕೆಯ ಕಚೇರಿಗೆ ಬಂದಿದ್ದರು. ನಿಮ್ಮ ಲೇಖನ ಚೆನ್ನಾಗಿದೆ. ವಾಸ್ತವ ಏನಿದೆಯೋ ಅದನ್ನೇ ಬರೆದ್ದೀರಿ. ಆದ್ರೆ ನಮ್ಮ ಸಮಸ್ಯೆಯನ್ನು ನಾವು ಯಾರಲ್ಲೂ ಹೇಳಿಕೊಳ್ಳುವ ಹಾಗಿಲ್ಲ. ಕ್ರೀಡಾಪಟುಗಳಿಗೆ, ಕ್ರೀಡೆಗೆ ಸರ್ಕಾರದಿಂದ ಸರಿಯಾದ ಪೆÇ್ರೀತ್ಸಾಹ, ಸೌಲಭ್ಯಗಳು ಸಿಗುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿ ಹೊರಟು ಹೋಗಿದ್ದರು.
ಆದಾದ ಬಳಿಕ, ಕ್ರೀಡಾಕೂಟವೊಂದರಲ್ಲಿ ಮೈದಾನದ ಹೊರಭಾಗದಲ್ಲಿ ಮತ್ತು ಕ್ರೀಡಾಂಗಣದ ಟಾಯ್ಲೆಟ್ ಗಳಲ್ಲಿ ಸಿರಿಂಜ್ಗಳು ಮತ್ತು ಏನೇನೋ ಪತ್ತೆಯಾಗಿದ್ದವು. ಆಗ ಇದೇ ಸತ್ಯ ಅವರು ಯಾವುದೇ ಮುಜುಗರವಿಲ್ಲದೆ ಮಾತನಾಡಿದ್ದರು. ಇದು ನಿಮಗೆ ಹೊಸತು. ನಮಗೆ ಇದು ರೂಢಿಯಾಗಿದೆ. ಡೋಪಿಂಗ್ ಬಗ್ಗೆ ನಮ್ಮ ಕ್ರೀಡಾಪಟುಗಳಿಗೆ ಜಾಗೃತಿ ಮೂಡಿಸಲು ವಿಫಲರಾಗುತ್ತಿದ್ದೇವೆ ಎಂದಿದ್ದರು.
ಸಾಮಾನ್ಯವಾಗಿ ಕ್ರೀಡಾಕೂಟದ ಆಯೋಜನೆಯ ತಪ್ಪುಗಳನ್ನ ಒಪ್ಪಿಕೊಳ್ಳಲು ಯಾರು ಸಿದ್ಧವಿರುವುದಿಲ್ಲ. ಅಂತಹುದರಲ್ಲಿ ತಪ್ಪು ಆಗಿದೆ. ಅದನ್ನು ಸರಿಪಡಿಸುತ್ತೇವೆ ಎಂದು ಹೇಳಿದ್ದ ರೀತಿ ಒಂದು ಕ್ಷಣ ನನ್ನನ್ನು ಚಕಿತಗೊಳಿಸಿತ್ತು. ಅದಕ್ಕೆ ಸಾಕ್ಷಿಯಾಗಿದ್ದು ಸುನೀಲ್ ಸಿರಸಂಗಿ ಮತ್ತು ಎಂ. ದಿಂಡಲಕೊಪ್ಪ.
ಇನ್ನು ರಾಜ್ಯ ಕ್ರೀಡಾ ವ್ಯವಸ್ಥೆಯಲ್ಲಿ ಆಗುತ್ತಿರುವ ಅನ್ಯಾಯ, ತಾರಾತಮ್ಯದ ವಿರುದ್ಧವೂ ಧ್ವನಿ ಎತ್ತುತ್ತಿದ್ದರು. ಆದ್ರೆ ರಾಜ್ಯ ಕ್ರೀಡಾ ವ್ಯವಸ್ಥೆಯನ್ನು ತನ್ನ ಕೈಯಲ್ಲಿಟ್ಟುಕೊಂಡಿದ್ದ ವ್ಯಕ್ತಿಯ ಮೇಲೆ ಆರಂಭದಲ್ಲಿ ಅಪಸ್ವರ ಎತ್ತಿದ್ರೂ ನಂತರ ಯಾಕೋ ಏನೋ ಸತ್ಯ ಮೌನಕ್ಕೆ ಶರಣಾಗಿದ್ದರು.
ಈ ನಡುವೆ ಸತ್ಯನಾರಾಯಣ ವಿರುದ್ಧ ಅವರ ಆಪ್ತ ಬಳಗವೇ ಟೀಕೆ, ಆರೋಪ ಮಾಡಿತ್ತು. ಹೀಗಾಗಿ ಬೇಸರದಿಂದಲೇ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆಯಿಂದ ಹೊರನಡೆದಿದ್ರು.
ಆದ್ರೆ ಸತ್ಯ ಅಷ್ಟು ಬೇಗ ಸೋಲು ಒಪ್ಪಿಕೊಳ್ಳುವ ಜಾಯಮಾನದವರಲ್ಲ. ಮುಂದೆ ಹೊಸ ದಾರಿ ಕಂಡುಕೊಂಡ್ರು. ಹಾಗಂತ ಅವರು ಪ್ರತಿಭಾವಂತ ಕ್ರೀಡಾಪಟುಗಳ ಬೆನ್ನ ಹಿಂದೆ ಹೋಗಲಿಲ್ಲ. ಬದಲಾಗಿ ವಿಶೇಷ ಚೇತನÀ ಕ್ರೀಡಾಪಟುಗಳ ಸಾಮಥ್ರ್ಯ ಮತ್ತು ಪ್ರತಿಭೆಯ ಅನ್ವೇಷಣೆಗೆ ಮುಂದಾದ್ರು. ಅದಕ್ಕೆ ಬೇಕಾಗಿರುವ ತರಬೇತಿಯನ್ನು ಪಡೆದುಕೊಂಡಿದ್ದರು.
ವಿಶೇಷ ಚೇತನ ಮಕ್ಕಳಿಗೆ ಬೇಕಾಗಿರುವುದು ಬರೀ ತರಬೇತಿ ಅಲ್ಲ. ಆತ್ಮವಿಶ್ವಾಸ, ಮಾನಸಿಕ ಸ್ಥೈರ್ಯ, ಬೆಂಬಲ ಬೇಕು. ಇದನ್ನು ಮನಗಂಡ ಸತ್ಯ, ವಿಶೇಷ ಚೇತನ ಕ್ರೀಡಾಪಟುಗಳ ಬದುಕಿಗೆ ಆಸರೆಯಾಗಿ ನಿಂತರು. ಪ್ಯಾರಾಲಿಂಪಿಕ್ನಲ್ಲಿ ಗಿರೀಶ್, ಮರಿಯಪ್ಪನ್ ತಂಗವೇಲು, ವರುಣ್ ಭಾಟಿಯಾ, ಸುಮಿತ್ ಅಂಟಿಲ್. ಶರ್ಮಿಲಾ ಧನಕರ್, ಶಿಲ್ಪಾ ಶೈಲಾರಂತಹ ಪ್ರತಿಭೆಯನ್ನು ಗುರುತಿಸಿ, ಅವರಿಗೆ ಮಾರ್ಗದರ್ಶನ ನೀಡಿ ಅಂತಾರಾಷ್ಟ್ರೀಯ ಕ್ರೀಡಾಪಟುವನ್ನಾಗಿಸಿದ್ದ ಕೀರ್ತಿ ಸತ್ಯ ಅವರಿಗೆ ಸಲ್ಲುತ್ತದೆ.
ಇವತ್ತು ಭಾರತದ ಪ್ಯಾರಾಲಿಂಪಿಕ್ಸ್ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಅದ್ಭುತ ಸಾಧನೆ ಮಾಡುತ್ತಿದೆ ಅಂದ್ರೆ ಅದರ ಹಿಂದೆ ಸತ್ಯ ಅವರ ಶ್ರಮವಿದೆ. ವಿಶೇಷ ಚೇತನ ಕ್ರೀಡಾಪಟುಗಳಿಗೆ ಅಂತಾರಾಷ್ಟ್ರೀಯ ಮಟ್ಟದ ತರಬೇತಿ, ಕಾರ್ಯಾಗಾರಗಳನ್ನು ನಡೆಸಿ ಅವರನ್ನು ಮಾನಸಿಕವಾಗಿಯೂ ಸಿದ್ಧಗೊಳಿಸುತ್ತಿದ್ದಾರೆ. ಈಗಾಗಲೇ ಸತ್ಯ ಅವರ ಬೆಂಬಲದಿಂದ ಅನೇಕ ವಿಶೇಷ ಚೇತನ ಕ್ರೀಡಾಪಟುಗಳು ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸ್ಪರ್ಧೆಗಳಲ್ಲಿ ಛಾಪು ಮೂಡಿಸುತ್ತಿದ್ದಾರೆ.
ಪದಕ ಗೆಲ್ಲುವುದು ಮುಖ್ಯವಲ್ಲ. ಪೆÇೀಡಿಯಂನಲ್ಲಿ ಭಾರತದ ರಾಷ್ಟ್ರ ಗೀತೆಯನ್ನು ಮೊಳಗಿಸುವುದು ಮುಖ್ಯ. ಇದು ಕ್ರೀಡಾಪಟುಗಳಿಗೆ ಸತ್ಯ ಹೇಳುವ ಸ್ಪೂರ್ತಿಯ ಮಾತುಗಳು. ಇದು ಅವರ ದೇಶ ಪ್ರೇಮ ಮತ್ತು ಕ್ರೀಡೆಯ ಮೇಲಿನ ನಿಷ್ಠೆಯನ್ನು ತೋರಿಸುತ್ತದೆ.
ಅಂದ ಹಾಗೇ ಸತ್ಯ ಅವರು, ವಿಶೇಷ ಚೇತನ ಮಕ್ಕಳ ದೌರ್ಬಲ್ಯಗಳನ್ನೇ ಬಲವನ್ನಾಗಿ ಪರಿರ್ತಿಸಿದ್ದರು. ತನ್ನ ಅನುಭವಗಳನ್ನು ಶಿಷ್ಯಂದಿರಿಗೆ ಧಾರೆ ಎರೆಯುತ್ತಿದ್ದಾರೆ. ಮಹಾ ಗುರುವಿನ ನಂಬಿಕೆಯನ್ನು ಹುಸಿಗೊಳಿಸದ ವಿಶೇಷ ಚೇತನ ಕ್ರೀಡಾಪಟುಗಳು ಭಾರತಾಂಬೆಯ ಕೊರಳಿಗೆ ಪದಕಗಳ ಹಾರವನ್ನು ಹಾಕುತ್ತಿದ್ದಾರೆ. ಇದಕ್ಕಿಂತ ದೊಡ್ಡ ಗುರು ಕಾಣಿಕೆ ಬೇರೆ ಏನು ಬೇಕು..?
ನಿಜ, ಶಿವಮೊಗ್ಗದ ಬೀದಿಗಳಲ್ಲಿ ಹೂ ಮಾರುತ್ತಿದ್ದ ಕೈಗಳು ಇಂದು ವಿಶೇಷ ಚೇತನ ಕ್ರೀಡಾಪಟುಗಳ ಭವಿಷ್ಯವನ್ನು ಬರೆಯುತ್ತಿವೆ. ತಾನು ಅಂದುಕೊಂಡಿರುವುದನ್ನು ಸಾಧಿಸಲು ಸಾಧ್ಯವಾಗಲಿಲ್ಲ. ಆದ್ರೆ ಇವತ್ತು ತನ್ನ ಶಿಷ್ಯರ ಮೂಲಕ ತನ್ನ ಕ್ರೀಡಾ ಬದುಕನ್ನು ಅರ್ಥಪೂರ್ಣವಾಗಿಸಿಕೊಳ್ಳುತ್ತಿದ್ದಾರೆ.
ಅವತ್ತು ನೀವು ಹೇಳುತ್ತಿದ್ದದ್ದು ಒಂದೇ ಮಾತು. ಇವತ್ತು ನೀವು ಹೇಳುತ್ತಿರುವುದು ಒಂದೇ ಮಾತು. ನಮ್ಮ ಕ್ರೀಡಾ ವ್ಯವಸ್ಥೆ ಬದಲಾಗಬೇಕು. ಗೆದ್ದು ಬಂದ ನಂತರ ನಗದು ಬಹುಮಾನ ಕೊಡುವುದು ಅಲ್ಲ. ಯಾವುದೇ ಸೌಲಭ್ಯಗಳಿಲ್ಲದೆ ಹಸಿವಿನಿಂದ ಅಭ್ಯಾಸ ಮಾಡುತ್ತಿರುವಾಗ ಪೆÇ್ರೀತ್ಸಾಹ ನೀಡಿದ್ರೆ ಅದಕ್ಕೆ ಒಂದು ಅರ್ಥವಿರುತ್ತದೆ. ಅತ್ಯುತ್ತಮ ಪ್ರದರ್ಶನದ ನಿರೀಕ್ಷೆ ಕೂಡ ಮಾಡಬಹುದು.
ಅಂದ ಹಾಗೇ, ಇತ್ತೀಚಿನ ವರ್ಷಗಳಲ್ಲಿ ಪ್ಯಾರಾಲಿಂಪಿಕ್ನಲ್ಲಿ ಬದಲಾವಣೆಯ ಪರ್ವ ಶುರುವಾಗಿದೆ. ಆದ್ರೆ ನಮ್ಮ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ಸಂಸ್ಥೆ ನಿಮ್ಮಂತವರು ಇಲ್ಲದೆ ಭಣಗುಡುತ್ತಿದೆ. ಇದು ಸತ್ಯ.. ಇದು ಸತ್ಯ..! ಯಾಕಂದ್ರೆ ಕಂಠೀರವ ಕ್ರೀಡಾಂಗಣದ ಅಥ್ಲೆಟಿಕ್ಸ್ ಸಂಸ್ಥೆಯ ಸಣ್ಣ ಕೊಠಡಿಯಲ್ಲಿ ಆ ದಿನಗಳ ಮಾತುಕತೆ, ವಾದ, ಜಗಳ, ತಮಾಷೆ ಹೀಗೆ ಎಲ್ಲವೂ ಒಂದು ಕ್ಷಣ ಕಣ್ಣ ಮುಂದೆ ಹಾದು ಹೋದಂತೆ ಭಾಸವಾಯ್ತು.
ಸನತ್ ರೈ








