ಮೈಸೂರು: ಟಿ. ನರಸೀಪುರದಲ್ಲಿ ಗಣೇಶ ಮೆರವಣಿಗೆಯ ವಿಚಾರವಾಗಿ ಮಸೀದಿ ಮುಂದೆ ಹೋಗದಂತೆ ಎಚ್ಚರಿಕೆ ನೀಡಿದ್ದ ಇನ್ಸ್ಪೆಕ್ಟರ್ ಧನಂಜಯ್ ಅವರ ಹೇಳಿಕೆಗೆ ಮಾಜಿ ಸಂಸದ ಪ್ರತಾಪ ಸಿಂಹ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇನ್ಸ್ಪೆಕ್ಟರ್ ವರ್ತನೆಯನ್ನು ರೋಡ್ಸೈಡ್ ತರ್ಲೆ ಎಂದು ಟೀಕಿಸಿರುವ ಅವರು, ಅಧಿಕಾರಿಯೊಬ್ಬರಿಗೆ ಇಂತಹ ವೀರಾವೇಷ ಶೋಭಿಸುವುದಿಲ್ಲ ಎಂದು ಗುಡುಗಿದ್ದಾರೆ.
ಶನಿವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರತಾಪ ಸಿಂಹ, ಶಾಂತಿ ಸಭೆಯಲ್ಲಿ ಇನ್ಸ್ಪೆಕ್ಟರ್ ಧನಂಜಯ್ ಅವರು ಬಳಸಿದ ಭಾಷೆ ಮತ್ತು ತೋರಿದ ವರ್ತನೆ ಅಸಂವಿಧಾನಿಕ ಮತ್ತು ಅಸಭ್ಯವಾದುದು. ಗಣೇಶ ಮೆರವಣಿಗೆಗೆ ಅಡ್ಡಿಪಡಿಸುವ ಅಥವಾ ಭಕ್ತರಿಗೆ ಬೆದರಿಕೆ ಹಾಕುವ ಮಾತುಗಳು ಒಬ್ಬ ಪೊಲೀಸ್ ಅಧಿಕಾರಿಯ ಸ್ಥಾನಕ್ಕೆ ತಕ್ಕುದಲ್ಲ. ಆ ಮನುಷ್ಯ ಯಾವುದೋ ರೋಡ್ಸೈಡ್ ತರ್ಲೆ ರೀತಿ ಮಾತನಾಡಿದ್ದಾರೆ, ಇದು ಸರಿಯಾದ ಕ್ರಮವಲ್ಲ ಎಂದು ಕಿಡಿಕಾರಿದರು.
ಇನ್ಸ್ಪೆಕ್ಟರ್ ಧನಂಜಯ್ ತೋರಿದ ವೀರಾವೇಷದ ಬಗ್ಗೆ ವ್ಯಂಗ್ಯವಾಡಿದ ಸಿಂಹ, ಇಂತಹ ಬಹಳಷ್ಟು ಜನರನ್ನು ನಾವು ಈ ಹಿಂದೆ ಅರಗಿಸಿಕೊಂಡಿದ್ದೇವೆ. ಇನ್ಸ್ಪೆಕ್ಟರ್ ಆದವರು ಗೌರವಯುತವಾಗಿ ಮಾತನಾಡಬೇಕು ಮತ್ತು ಆ ಸ್ಥಾನದ ಮರ್ಯಾದೆಯನ್ನು ಉಳಿಸಿಕೊಳ್ಳಬೇಕು. ಸಮಾಜದಲ್ಲಿ ಶಾಂತಿ ಕಾಪಾಡುವವರು ಸಂಯಮದಿಂದ ಇರಬೇಕೇ ಹೊರತು ಈ ರೀತಿ ರೌಡಿಗಳಂತೆ ಬೆದರಿಕೆ ಹಾಕಬಾರದು ಎಂದು ಹರಿಹಾಯ್ದರು.
ಇತ್ತೀಚೆಗಷ್ಟೇ ಟಿ. ನರಸೀಪುರದಲ್ಲಿ ನಡೆದ ಶಾಂತಿ ಸಭೆಯಲ್ಲಿ, ಮಸೀದಿ ಮುಂದೆ ಗಣೇಶನ ಮೆರವಣಿಗೆ ಸಾಗಿದರೆ ಅಥವಾ ಪಟಾಕಿ ಹೊಡೆದರೆ ಗ್ರಹಚಾರ ಬಿಡಿಸುವುದಾಗಿ ಇನ್ಸ್ಪೆಕ್ಟರ್ ಧನಂಜಯ್ ಎಚ್ಚರಿಕೆ ನೀಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿ ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು. ಈಗ ಪ್ರತಾಪ ಸಿಂಹ ಅವರು ನೇರವಾಗಿಯೇ ಇನ್ಸ್ಪೆಕ್ಟರ್ ವಿರುದ್ಧ ವಾಗ್ದಾಳಿ ನಡೆಸುವ ಮೂಲಕ ಈ ವಿವಾದಕ್ಕೆ ಹೊಸ ಆಯಾಮ ನೀಡಿದ್ದಾರೆ.







