ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿರುವ ಸಚಿವ ಸತೀಶ್ ಜಾರಕಿಹೊಳಿ ಮೇಲಿನ ಇಡಿ ದಾಳಿಯ ಪ್ರಕರಣ ಈಗ ಅಂತರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗುತ್ತಿದೆ. ಭಾರತದಿಂದ ಪರಾರಿಯಾಗಿ ಲಂಡನ್ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ, ಈ ವಿಚಾರವಾಗಿ ಜಾರಿ ನಿರ್ದೇಶನಾಲಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಸಚಿವ ಸತೀಶ್ ಜಾರಕಿಹೊಳಿ ಮತ್ತು ಅವರ ಆಪ್ತರ ಮನೆಗಳ ಮೇಲೆ ನಡೆದ ದಾಳಿಯನ್ನು ಖಂಡಿಸಿರುವ ಮಲ್ಯ, ಇಡಿ ಕಾರ್ಯವೈಖರಿಯನ್ನು ಕಡುಭ್ರಷ್ಟ ಮತ್ತು ನಾಚಿಕೆಗೇಡಿನ ಸಂಗತಿ ಎಂದು ಜರೆದಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಬಗ್ಗೆ ಸುದೀರ್ಘ ಪೋಸ್ಟ್ ಹಾಕಿರುವ ಅವರು, ಯಾವುದೇ ಚಾರ್ಜ್ ಶೀಟ್ ಇಲ್ಲದೆ, ನ್ಯಾಯಯುತ ವಿಚಾರಣೆ ನಡೆಸದೆ ಕೇವಲ ಜನರ ಚಾರಿತ್ರ್ಯ ವಧೆ ಮಾಡುವುದೇ ಇಡಿಯ ಕೆಲಸವಾಗಿದೆ. ವಿಶ್ವದ ಯಾವುದೇ ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಇಂತಹ ದಮನಕಾರಿ ನೀತಿಯನ್ನು ಕಾಣಲು ಸಾಧ್ಯವಿಲ್ಲ ಎಂದು ಕಿಡಿಕಾರಿದ್ದಾರೆ.
ತಮ್ಮ ವೈಯಕ್ತಿಕ ಭಾವನೆಗಳನ್ನು ಹಂಚಿಕೊಂಡಿರುವ ಮಲ್ಯ, ನನ್ನನ್ನು ಯಾರು ಬೇಕಾದರೂ ಟೀಕಿಸಬಹುದು ಅಥವಾ ದ್ವೇಷಿಸಬಹುದು, ಆದರೆ ನಾನು ಬದಲಾಗುವುದಿಲ್ಲ. ಸತ್ಯವೇ ಅಂತಿಮವಾಗಿ ಜಯಗಳಿಸಲಿದೆ ಎಂಬ ನಂಬಿಕೆ ನನಗಿದೆ. ಆದರೆ ಭಾರತದಲ್ಲಿರುವ ಪವಿತ್ರ ದೇವಸ್ಥಾನಗಳಿಗೆ ಭೇಟಿ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ನನ್ನನ್ನು ಕಾಡುತ್ತಿರುವ ಅತಿದೊಡ್ಡ ಬೇಸರ. ನಾನು ಆ ಪವಿತ್ರ ಕ್ಷೇತ್ರಗಳನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಭಾವುಕರಾಗಿ ಬರೆದುಕೊಂಡಿದ್ದಾರೆ.
ಸಾಲ ತೀರಿದರೂ ಮುಗಿಯದ ಮಲ್ಯ ಸಂಕಷ್ಟ
ಒಂದೆಡೆ ಮಲ್ಯ ಇಡಿ ವಿರುದ್ಧ ಆಕ್ರೋಶ ಹೊರಹಾಕುತ್ತಿದ್ದರೆ, ಮತ್ತೊಂದೆಡೆ ಜಾರಿ ನಿರ್ದೇಶನಾಲಯ ಅವರಿಗೆ ಕಾನೂನಿನ ಶಾಕ್ ನೀಡಿದೆ. ಬ್ಯಾಂಕ್ಗಳಿಗೆ ನೀಡಬೇಕಾದ 14,131 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ, ಆದ್ದರಿಂದ ನನ್ನ ಮೇಲಿನ ಕ್ರಿಮಿನಲ್ ಪ್ರಕರಣಗಳನ್ನು ರದ್ದುಗೊಳಿಸಬೇಕು ಎಂದು ಮಲ್ಯ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಅರ್ಜಿಗೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಅಫಿಡವಿಟ್ ಸಲ್ಲಿಸಿರುವ ಇಡಿ, ಮಲ್ಯ ಅವರ ಆಸ್ತಿ ಮುಟ್ಟುಗೋಲು ಹಾಕಿಕೊಂಡ ತಕ್ಷಣ ಅವರು ಮಾಡಿರುವ ಅಪರಾಧಗಳು ಇಲ್ಲವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದೆ. ಮಲ್ಯ ಅವರು ಸತತವಾಗಿ ತನಿಖೆಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ. ಕೇವಲ ಹಣಕಾಸಿನ ನಷ್ಟ ತುಂಬಿಕೊಟ್ಟರೆ ಅಕ್ರಮ ಹಣ ವರ್ಗಾವಣೆಯಂತಹ ಗಂಭೀರ ಅಪರಾಧಗಳಿಂದ ಮುಕ್ತಿ ಸಿಗುವುದಿಲ್ಲ. ಹೀಗಾಗಿ ಅವರ ವಿರುದ್ಧದ ಕ್ರಿಮಿನಲ್ ಪ್ರಕರಣಗಳನ್ನು ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಇಡಿ ಹೈಕೋರ್ಟ್ ಮುಂದೆ ವಾದಿಸಿದೆ.
ಸಚಿವ ಜಾರಕಿಹೊಳಿ ಮೇಲಿನ ದಾಳಿಯ ಬೆನ್ನಲ್ಲೇ ಮಲ್ಯ ಅವರ ಈ ಪ್ರತಿಕ್ರಿಯೆ ರಾಜಕೀಯ ವಲಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದ್ದು, ಇತ್ತ ಇಡಿ ಮಾತ್ರ ಮಲ್ಯ ಅವರನ್ನು ಕಾನೂನಿನ ಸುಳಿಗೆ ಸಿಲುಕಿಸಲು ಹಠಕ್ಕೆ ಬಿದ್ದಂತೆ ಕಾಣುತ್ತಿದೆ.







