ಧೋನಿ ವಿದಾಯ ಹೇಳ್ತಾರೋ ಬಿಡ್ತಾರೋ…ಅದು ವೈಯಕ್ತಿಕ ನಿರ್ಧಾರ – ಗೌತಮ್ ಗಂಭೀರ್
ಟೀಮ್ ಇಂಡಿಯಾದ ಮಾಜಿ ಆರಂಭಿಕ ಹಾಗೂ ಹಾಲಿ ಸಂಸದ ಗೌತಮ್ ಗಂಭೀರ್ ಮತ್ತೆ ಮಹೇಂದ್ರ ಸಿಂಗ್ ಧೋನಿಯ ಬಗ್ಗೆ ಮಾತನಾಡಿದ್ದಾರೆ. ಧೋನಿಯ ಬಗ್ಗೆ ಅಷ್ಟಕ್ಕಷ್ಟೇ ಸಂಬಂಧವನ್ನು ಹೊಂದಿರುವ ಗಂಭೀರ್ ಈ ಬಾರಿ ಧೋನಿಯ ಫಿಟ್ನೆಸ್, ವಯಸ್ಸು ಮತ್ತು ಬ್ಯಾಟಿಂಗ್ ಫಾರ್ಮ್ ಬಗ್ಗೆ ಮಾತನಾಡಿದ್ದಾರೆ.
ಎಂ.ಎಸ್. ಧೋನಿ ಫಿಟ್ ಆಗಿದ್ರೆ, ಉತ್ತಮ ಫಾರ್ಮ್ನಲ್ಲಿದ್ರೆ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ಆಡಬೇಕು. ಆಟವನ್ನು ಎಂಜಾಯ್ ಮಾಡಬೇಕು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಗಂಭೀರ್ ಧೋನಿಯ ಜೊತೆ ಅನೇಕ ಪಂದ್ಯಗಳನ್ನು ಆಡಿದ್ದಾರೆ. 2011ರ ವಿಶ್ವಕಪ್ ನಲ್ಲಿ ಧೋನಿ ಮತ್ತು ಗಂಭೀರ್ ಅದ್ಭುತವಾದ ಜೊತೆಯಾಟವನ್ನು ಆಡಿದ್ದರು. ನನ್ನ ಪ್ರಕಾರ ವಯಸ್ಸು ದೊಡ್ಡ ವಿಚಾರವಲ್ಲ. ಅದು ಕೇವಲ ನಂಬರ್ ಅಷ್ಟೇ. ಮುಖ್ಯವಾಗಿ ನೀವು ಅತ್ಯುತ್ತಮ ಫಾರ್ಮ್ನಲ್ಲಿರಬೇಕು. ಚೆಂಡನ್ನು ಹೊಡೆಯುವ ಸಾಮಥ್ರ್ಯವಿರಬೇಕು. ಅದೇ ರೀತಿ ಧೋನಿ ಕೂಡ. ಧೋನಿ ಚೆನ್ನಾಗಿ ಆಡುತ್ತಿದ್ದು, ಉತ್ತಮ ಫಾರ್ಮ್ನಲ್ಲಿದ್ದುಕೊಂಡು, ಆರು ಮತ್ತು ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿಕೊಂಡು ಭಾರತಕ್ಕೆ ಗೆಲುವು
ಸಾಧಿಸುವ ಸಾಮಥ್ರ್ಯವನ್ನು ಹೊಂದಿದ್ರೆ ಅವರು ಆಡಬಹುದು. ಆದ್ರೆ ಕ್ರಿಕೆಟ್ ಬದುಕಿಗೆ ವಿದಾಯ ಹೇಳುವುದು ಅದು ಅವರ ವೈಯಕ್ತಿಕ ನಿರ್ಧಾರ. ಅದನ್ನು ಅವರೇ ನಿರ್ಧಾರ ಮಾಡಬೇಕು ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.
ಎಲ್ಲರಿಗೂ ಗೊತ್ತಿರುವಂತೆ ಧೋನಿ ಕಳೆದ ಒಂದು ವರ್ಷದಿಂದ ಯಾವುದೇ ಅಂತಾರಾಷ್ಟ್ರೀಯ ಮತ್ತು ದೇಶಿ ಪಂದ್ಯಗಳನ್ನು ಆಡಿಲ್ಲ. ಐಪಿಎಲ್ಗೆ ತಯಾರಿ ನಡೆಸುತ್ತಿರುವಾಗ ಲಾಕ್ ಡೌನ್ ಆಗಿತ್ತು. ಇದೀಗ ಯುಎಇನಲ್ಲಿ ನಡೆಯಲಿರುವ ಐಪಿಎಲ್ ಟೂರ್ನಿಯನ್ನು ಧೋನಿ ಎದುರು ನೋಡುತ್ತಿದ್ದಾರೆ. ಧೋನಿ ನಾಯಕತ್ವದಲ್ಲಿ ಟೀಮ್ ಇಂಡಿಯಾ 2007ರ ಚೊಚ್ಚಲ ಟಿ-ಟ್ವೆಂಟಿ ವಿಶ್ವಕಪ್ ಮತ್ತು 2011ರ ಏಕದಿನ ವಿಶ್ವಕಪ್ ಮತ್ತು 2013ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯನ್ನು ಗೆದ್ದುಕೊಂಡಿದೆ.
ಇನ್ನು ಈ ಬಾರಿಯ ಐಪಿಎಲ್ ಬಗ್ಗೆ ಮಾತನಾಡಿದ್ದ ಗಂಭೀರ್, 13ನೇ ಆವೃತ್ತಿಯ ಐಪಿಎಲ್ ಟೂರ್ನಿ ಎಲ್ಲಿ ನಡೆಯುತ್ತೆ ಎಂಬುದು ಮುಖ್ಯವಲ್ಲ. ಯಾರು ಗೆಲ್ತಾರೆ ಅನ್ನೋದು ಮುಖ್ಯವಲ್ಲ. ಯಾರು ಹೆಚ್ಚು ವಿಕೆಟ್ ಗಳಿಸ್ತಾರೆ, ಯಾರು ಹೆಚ್ಚು ರನ್ ಗಳಿಸ್ತಾರೆ ಯಾವುದೂ ಕೂಡ ಮುಖ್ಯವಲ್ಲ. ಬದಲಾಗಿದೆ ಈ ಬಾರಿಯ ಐಪಿಎಲ್ ಇಡೀ ದೇಶದ ವಾತಾವರಣವನ್ನು ಬದಲಾವಣೆ ಮಾಡಲಿದೆ. ಈ ಹಿಂದಿನ ಐಪಿಎಲ್ಗಿಂತ ಈ ಬಾರಿಯ ಐಪಿಎಲ್ ಟೂರ್ನಿ ಹೆಚ್ಚು ಮಹತ್ವ ಪಡೆದುಕೊಂಡಿದೆ. ಈ ಐಪಿಎಲ್ ದೇಶಕ್ಕಾಗಿ ನಡೆಯುತ್ತಿದೆ ಎಂದು ಗಂಭೀರ್ ಅಭಿಪ್ರಾಯಪಟ್ಟಿದ್ದಾರೆ.








