ಕೊರೊನಾ ಹಿನ್ನೆಲೆ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆದಿರುವ ಕುರಿತು ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ವಾಕ್ ಸಮರ ತಾರಕಕ್ಕೇರಿದೆ. ಇದರ ಬೆನ್ನಲ್ಲೇ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಹಾಗೂ ಬಿಜೆಪಿ ಮುಂದೆ ಪಂಚ ಪ್ರಶ್ನೆಗಳನ್ನು ಇಟ್ಟಿದ್ದಾರೆ. ಜನರು ಕೊರೊನಾ ಸೋಂಕಿನಿಂದ ಸಂಕಷ್ಟದಲ್ಲಿದ್ದಾರೆ. ಇಂತಹ ಸಂದಿಗ್ಧ ಸ್ಥಿತಿಯಲ್ಲೂ ಕೋವಿಡ್ ಭ್ರಷ್ಟಾಚಾರದಂತಹ ಆರೋಪಗಳು ಕೇಳಿ ಬಂದಿರುವುದು ನಿಜಕ್ಕೂ ರಾಜ್ಯದ ದುರ್ದೈವ ಎಂದಿರುವ ಕುಮಾರಸ್ವಾಮಿ ಭ್ರಷ್ಟಾಚಾರ ಆರೋಪ ಮಾಡ್ತಿರುವ ಕಾಂಗ್ರೆಸ್ ಪಕ್ಷ ಈ ಕುರಿತು ಇದುವರೆಗೂ ಯಾವುದೇ ತನಿಖಾ ಸಂಸ್ಥೆಗೆ ದೂರು ಸಲ್ಲಿಸದೇ ಪ್ರಚಾರಕಷ್ಟೇ ಸೀಮಿತವಾಗಿದೆ. ಆಡಳಿತ ಪಕ್ಷ ಆರೋಪದಿಂದ
ಮುಕ್ತಿ ಪಡೆಯುವ ಯಾವುದೇ ಕ್ರಮಕ್ಕೂ ಮುಂದಾಗದೇ ಪರೋಕ್ಷವಾಗಿ ಒಪ್ಪಿಕೊಂಡಿದೆ ಎಂದು ಬಿಜೆಪಿ, ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಎದುರು ಇಟ್ಟಿರುವ ಪ್ರಶ್ನೆಗಳು..!
1. ‘ಬಿಜೆಪಿ ನಾಯಕರ ವಿರುದ್ಧ ಕೊರೊನಾ ಹಗರಣದ ದಾಖಲೆಗಳಿದ್ರೂ ಯಾಕೆ ಕಾಂಗ್ರೆಸ್ ನಾಯಕರೂ ಯಾವುದೇ ದೂರು ದಾಖಲಿಸಿಲ್ಲ’..?
2. ‘ಕಾಂಗ್ರೆಸ್ ನ ಸಿಎಲ್ಪಿ ನಾಯಕರು ಲೆಕ್ಕ ಕೊಡಿ ಅಂತಾರೆ, ಪಕ್ಷದ ಅಧ್ಯಕ್ಷರು ಉತ್ತರ ಕೊಡಿ ಬಿಜೆಪಿ ಅಂತಾರೆ. ಕೇವಲ ಲೆಕ್ಕ, ಉತ್ತರವೇ ಸಾಕಾ..? ಹಗರಣವನ್ನು
ಕಾನೂನಾತ್ಮಕ ಹೋರಾಟದ ಹಾದಿಯಲ್ಲಿ ಕೊಂಡೊಯ್ಯುವ ಮಾರ್ಗೋಪಾಯ ಇದೆಯೇ’.?
3. ಕಾಂಗ್ರೆಸ್ ನಾಯಕರು ನಿತ್ಯ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ಇದರ ಹಿಂದೆ ಪ್ರಚಾರದ ಗುರಿ ಇದೆಯೇ, ಅಥವಾ ನಿಜವಾಗಲು
ಸಾರ್ವಜನಿಕರ ಹಣ ವ್ಯರ್ಥವಾಗುತ್ತಿದೆ ಎಂಬ ಕಾಳಜಿ ಇದೆಯೇ’.?
4. ಕೊರೊನಾ ಅಕ್ರಮದ ಆರೋಪ ಮಾಡಿದಾಗಿನಿಂದಲೂ ಕಾಂಗ್ರೆಸ್ ಕೇವಲ ಸುದ್ದಿಗೋಷ್ಠಿ, ಟ್ವೀಟ್ ವಾರ್, ಪತ್ರಚಳುವಳಿಗೆ ಸೀಮಿತವಾಗಿದೆ. ಇದು ಕೇವಲ ಪ್ರಚಾರಕ್ಕಾಗಿ ಅನ್ನುವುದು ಮೇಲ್ನೋಟಕೆ ತಿಳಿಯುತ್ತಿದೆ. ಇದಕ್ಕೆ ನಿಮ್ಮ ( ಕಾಂಗ್ರೆಸ್ ) ಉತ್ತವೇನು’..?
5. ‘ಎಸಿಬಿ ಮೇಲೆ ಕಾಂಗ್ರೆಸ್ ಗೆ ನಂಬಿಕೆ ಇಲ್ಲವೇ..? ರಾಜ್ಯದಲ್ಲಿ ಅಸ್ತಿತ್ವದಲ್ಲಿದ್ದ ಲೋಕಾಯುಕ್ತ ಸಂಸ್ಥೆಯ ರಕ್ತ ಹೀರಿ ಎಸಿಬಿ ರಚನೆ ಮಾಡಿದ್ದು ಇದೇ ಕಾಂಗ್ರೆಸ್ ಸರ್ಕಾರ. ಯಾಕೆ ಎಸಿಬಿಗೆ ದೂರು ಸಲ್ಲಿಸುತ್ತಿಲ್ಲ’..?
ಹೆಚ್ಡಿಕೆ ಆಡಳಿತ ಪಕ್ಷ ಬಿಜೆಪಿ ಮುಂದಿಟ್ಟಿರುವ ಪ್ರಶ್ನೆಗಳು..!
1. ‘ಅಂದಾಜು 2 ಸಾವಿರ ಕೋಟಿ ರೂಪಾಯಿ ಅವ್ಯವಹಾರದ ಆರೋಪಗಳನ್ನು ಕಾಂಗ್ರೆಸ್ ನಾಯಕರು ಮಾಡುತ್ತಿದ್ದರೂ, ಬಿಜೆಪಿ ನಾಯಕರು ತನಿಖೆಯ ಆಗ್ರಹಗಳಿಗೆ
ಕಿವಿಗೊಡದೆ ನಿಂಧನೆಗಳನ್ನು ಹೊತ್ತು ತಿರುಗುತ್ತಿರುವುದಕ್ಕೆ ಕಾರಣವೇನು’…?
2. ‘ಸಚಿವರ ರಾಜೀನಾಮೆ ಪಡೆಯಲು ಸಿಎಂ ಗೆ ರಾಜಕೀಯ ಒತ್ತಡವಿರಬಹುದು. ಆದ್ರೆ ಇಲ್ಲಿಯವರೆಗೂ ಯಾಕೆ ಒಬ್ಬೇ ಒಬ್ಬ ಅಧಿಕಾರಿಗಳ ವಿರುದ್ಧ ಕ್ರಮಕೈಗೊಂಡ ವರದಿ ಇಲ್ಲ. ಅಧಿಕಾರಿಗಳನ್ನು ಅಲ್ಲಲ್ಲಿಯೇ ಬಿಟ್ಟು ಸಾಕ್ಷ್ಯನಾಶಕ್ಕೆ ಪ್ರಯತ್ನ ನಡೆಯುತ್ತಿದೆಯೇ’.?
3. ‘ನಿರ್ದಿಷ್ಟ ಸಚಿವರುಗಳ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪ ಕೇಳಿಬರ್ತಿವೆ. ಆದರೂ ಯಾಕೆ ಸಚಿವರ ರಾಜೀನಾಮೆ ಪಡೆದಿಲ್ಲ’…?
4. ಭ್ರಷ್ಟಾಚಾರದ ಬಗ್ಗೆ ಈ ವರೆಗೂ ಪ್ರತ್ಯುತ್ತರ ನೀಡ್ತಿರುವ ಸರ್ಕಾರ ಯಾಕೆ ತನಿಖೆಗೆ ಹಿಂದೇಟು ಹಾಕ್ತಿದೆ. ಇದನ್ನ ನೊಡಿದರೇ ಆಪರೇಷನ್ ಕಮಲಕ್ಕೆ ಮಾಡಿದ್ದ ಸಾಲ ಮರುಪಾವತಿಸಲು ಹಣ ಕದಿಯಲಾಗಿದೆ ಎನಿಸುತ್ತಿದೆ. ಇದಕ್ಕೆ ನಿಮ್ಮ ಉತ್ತರವೇನು..?
5. ‘ಕೈ ನಾಯಕರ ಆರೋಪಕ್ಕೆ ಪ್ರತಿಯಾಗಿ ಸಚಿವರಿಂದ ಸುದ್ದಿಗೋಷ್ಠಿ ಮೂಲಕವೇ ಪ್ರತ್ಯುತ್ತರ ನೀಡಿಸುತ್ತಿರುವ ಸರ್ಕಾರ ಪ್ರಚಾರ ಪಡೆಯುವ ಪ್ರಯತ್ನದಲ್ಲಿದೆಯಾ..? ಪಂಚ ಸಚಿವರು ಒಟ್ಟಿಗೆ ಮಾಧ್ಯಮಗೋಷ್ಠಿ ನಡೆಸಿದನ್ನು ನೋಡಿದರೇ ಪ್ರಚಾರದ ದಾಹ ತೀವ್ರವಾಗಿರುವಂತೆ ಕಾಣುತ್ತದೆ’..?
ಒಟ್ಟಾರೆ ಕೊರೊನಾ ಹಗರಣದಲ್ಲಿ ರಾಜಕೀಯ ಕೆಸರೆರೆಚಾಟದಲ್ಲಿ ತೊಡಗಿರುವ ಬಿಜೆಪಿ ಹಾಗೂ ಕಾಂಗ್ರೆಸ್ ವಿರುದ್ಧ ತೀಕ್ಷ್ಣವಾಗಿ ವಾಗ್ದಾಳಿ ನಡೆಸಿರುವ ಕುಮಾರಸ್ವಾಮಿ ಆಡಳಿತ ಹಾಗೂ ವಿಪಕ್ಷಗಳ ಮುಂದೆ 5 ಪ್ರಶ್ನೆಗಳನ್ನ ಇಟ್ಟಿದ್ದು, ಉತ್ತರಿಸುವಂತೆ ಒತ್ತಾಯಿಸಿದ್ದಾರೆ. ಅಲ್ಲದೇ ಜನರನ್ನು ರಕ್ಷಿಸಬೇಕಾದವರೇ ಈ ರೀತಿ ರಾಜಕೀಯ ಕೆಸರೆರೆಚಾಟದಿಂದ
ಜನರ ಜೀವದ ಜೊತೆ ಚೆಲ್ಲಾಟ ಆಡುತ್ತಿರುವುದು ಅತ್ಯಂತ ಕ್ರೂರ ನಡವಳಿಕೆ ಎಂದು ಕಿಡಿಕಾರಿದ್ದಾರೆ.