ಸರ್ಕಾರಿ ಕಾಲೇಜುಗೆ ಕನ್ನ ಹಾಕಿದ ದುಷ್ಕರ್ಮಿಗಳು
ಕೃಷ್ಣರಾಜಪೇಟೆ, ಅಗಸ್ಟ್ 8: ಕೃಷ್ಣರಾಜಪೇಟೆ ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಹಾಗೂ ಪ್ರೌಢಶಾಲೆಗೆ ನುಗ್ಗಿರುವ ದುಷ್ಕರ್ಮಿಗಳು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಂಪ್ಯೂಟರ್ ಗಳು, ಸಿಸಿ’ಟಿವಿ ಕ್ಯಾಮರಾಗಳು, ಯುಪಿಎಸ್ ಬ್ಯಾಟರಿಗಳು, ಡೀಕೋಡರ್ ಗಳನ್ನು ಕದ್ದು ಪರಾರಿಯಾಗಿದ್ದಾರೆ.
ಕೆ.ಆರ್.ಪೇಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಲಿಂಗಣ್ಣಸ್ವಾಮಿ, ಪ್ರೌಢಶಾಲಾ ವಿಭಾಗದ ಉಪಪ್ರಾಂಶುಪಾಲ ಎಂ.ಟಿ.ದೇವರಾಜು, ಪ್ರೌಢಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷ ಹೆಚ್.ಆರ್.ವಿಶ್ವನಾಥ ಕಾಲೇಜಿನಲ್ಲಿ ನಡೆದಿರುವ ಕಳ್ಳತನದ ಬಗ್ಗೆ ಪಟ್ಟಣ ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.
ಸಬ್ ಇನ್ಸ್ ಪೆಕ್ಟರ್ ಬಿ.ಪಿ.ಬ್ಯಾಟರಾಯಗೌಡ ಸ್ಥಳಕ್ಕೆ ಭೇಟಿ ನೀಡಿ ಇಪ್ಪತ್ತೈದಕ್ಕೂ ಹೆಚ್ಚು ಕಂಪ್ಯೂಟರ್ ಸಿಪಿಯು ಗಳು, ಸಿಸಿ ಟಿವಿಯ ಡೀಕೋಡರ್ ಗಳು, 30ಕ್ಕೂ ಹೆಚ್ಚು ಯುಪಿಎಸ್ ಬ್ಯಾಟರಿಗಳನ್ನು ಕಳ್ಳತನ ಮಾಡಿರುವುದನ್ನು ಪರಿಶೀಲನೆ ನಡೆಸಿದರು.

ಕಳೆದ 15 ದಿನಗಳ ಹಿಂದೆಯಷ್ಟೇ ಹರಿಹರಪುರ ಗ್ರಾಮದ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಕಳ್ಳತನ ನಡೆಸಿ ಕಂಪ್ಯೂಟರ್ ಗಳು, ಹಾಗೂ ಯುಪಿಎಸ್ ಬ್ಯಾಟರಿಗಳನ್ನು ಕಿಡಿಗೇಡಿಗಳು ಕದ್ದು ಪರಾರಿಯಾಗಿದ್ದರು.
ಕಾಲೇಜು ಹಾಗೂ ಪ್ರೌಢಶಾಲಾ ವಿಭಾಗದ ಕಂಪ್ಯೂಟರ್ ರೂಮಿನ ಕಿಟಕಿಗಳು ಹಾಗೂ ಬಾಗಿಲಿನ ಕಬ್ಬಿಣದ ರಾಡುಗಳನ್ನು ಕತ್ತರಿಸಿ ಒಳನುಗ್ಗಿರುವ ಕಳ್ಳರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಕಂಪ್ಯೂಟರ್ ಸಾಮಗ್ರಿಗಳನ್ನು ದೋಚಿಕೊಂಡು ಪರಾರಿಯಾಗಿದ್ದಾರೆ








