ಎಮ್.ಎಸ್. ಧೋನಿ ಟೀಮ್ ಇಂಡಿಯಾದ ಕಾವಲುಗಾರ.. 22 ಯಾರ್ಡ್ ನಲ್ಲಿ ಮೋಡಿ ಮಾಡೋ ತಂತ್ರಗಾರ.. -ಮಾತಿನಲ್ಲೇ ಛಾಟಿ ಬೀಸುವ ಮಂತ್ರಗಾರ..!

ನಾವು ಹೆಚ್ಚು ಮಾತನಾಡುವವರನ್ನು ಅವನೊಬ್ಬ ದೊಡ್ಡ ಬಿಬಿಸಿ ಮಾರಾಯ ಅನ್ನುವುದು ವಾಡಿಕೆ.. ಹಾಗೇ ಕ್ರಿಕೆಟ್ ಆಟದಲ್ಲೂ ವಿಕೆಟ್ ಕೀಪರ್ ಗಳು ವಿಕೆಟ್ ಹಿಂದುಗಡೆ ನಿಂತುಕೊಂಡು ವಟವಟ ಅಂತ ಏನಾದ್ರೂ ಹೇಳ್ತಾನೆ ಇರುತ್ತಾರೆ. ಇದು ಬ್ಯಾಟ್ಸ್ ಮೆನ್ಗಳು ಏಕಾಗ್ರತೆ ಕಳೆದುಕೊಳ್ಳುವಂತೆ ಮಾಡುವ ಪ್ರಯತ್ನ. ಕೆಲವೊಂದು ಬಾರಿ ಇದು ಅತಿರೇಕಕ್ಕೆ ಹೋಗಿದ್ದು ಉಂಟು.. ಬೌಲರ್ ಗಳಿಗೆ ಮತ್ತು ಫೀಲ್ಡರ್ ಗಳಿಗೆ ಸ್ಪೂರ್ತಿ ತುಂಬುವ ಕೆಲಸವನ್ನು ವಿಕೆಟ್ ಕೀಪರ್ ಗಳು ತಮ್ಮ ಕೀಪಿಂಗ್ ಜೊತೆ ಮಾಡುತ್ತಿರುತ್ತಾರೆ. ಯಾಕಂದ್ರೆ ವಿಕೆಟ್ ಹಿಂದುಗಡೆ ನಿಂತುಕೊಂಡು ಬ್ಯಾಟ್ಸ್ ಮೆನ್ ತಂತ್ರ ಮತ್ತು ಪಿಚ್ ನ ಮರ್ಮಾವನ್ನು ಅವರಿಗೆ ಬೇಗನೇ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
ಹಾಗೇ ಮಹೇಂದ್ರ ಸಿಂಗ್ ಧೋನಿ ಕೂಡ. ಧೋನಿ ಎಲ್ಲ ವಿಕೆಟ್ ಕೀಪರ್ಗಳಿಗಿಂತ ಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಪಂದ್ಯದ ಗತಿಯನ್ನು ತಿಳಿದುಕೊಳ್ಳುವ ಕಲೆಯನ್ನು ಧೋನಿ ಸಿದ್ಧಿಸಿಕೊಂಡಿದ್ದಾರೆ. ಎದುರಾಳಿ ತಂಡ ಪ್ಲಾನ್ಗಳು, ಬ್ಯಾಟ್ಸ್ ಮೆನ್ ಯಾವ ರೀತಿ ಆಡ್ತಾರೆ ಹೀಗೆ ಎಲ್ಲವನ್ನೂ ಕ್ಷಣ ಮಾತ್ರದಲ್ಲಿ ಅರಿತುಕೊಳ್ಳುವ ಧೋನಿಯಂತಹ ವಿಕೆಟ್ ಕೀಪರ್, ಬ್ಯಾಟ್ಸ್ ಮೆನ್ ಹಾಗೂ ನಾಯಕ ಈ ಹಿಂದೆಯೂ ಇರಲಿಲ್ಲ. ಮುಂದೆಯೂ ಬರುವುದಿಲ್ಲ. ಯಾಕಂದ್ರೆ ಧೋನಿ ವಿಶ್ವ ಕ್ರಿಕೆಟ್ ನಲ್ಲಿ ಧೋನಿ ಅಸಾಮಾನ್ಯ ಕ್ರಿಕೆಟಿಗ.
ಹಾಗಂತ ಧೋನಿ ತಾಂತ್ರಿಕವಾಗಿ ಪರಿಪಕ್ವವಾದ ವಿಕೆಟ್ ಕೀಪರ್ ಅಲ್ಲ. ಹಾಗೇ ಕೌಶಲ್ಯಯುತವಾದ ಬ್ಯಾಟ್ಸ್ ಮೆನ್ ಕೂಡ. ಆದ್ರೆ ಬುದ್ಧಿವಂತ ಕ್ರಿಕೆಟಿಗ. ನಾಯಕನಾಗಿ ತೆಗೆದುಕೊಳ್ಳುವ ನಿರ್ಧಾರ ಮತ್ತು ಅದನ್ನು ಕಾರ್ಯರೂಪಕ್ಕೆ ತಂದು ಯಶ ಸಾಧಿಸುವ ಚಾಣಕ್ಯತೆ ಧೋನಿಯಲ್ಲಿತ್ತು.
ಧೋನಿ ನಾಯಕತ್ವದಲ್ಲಿ ಆಟಗಾರರು ಆಡ್ತಾರೆ ಅನ್ನುವುದಕ್ಕಿಂತ ಧೋನಿ ತನ್ನ ಮಾರ್ಗದರ್ಶನದಲ್ಲಿ ಆಟಗಾರರನ್ನು ಆಡಿಸ್ತಾರೆ. ಅದ್ರಲ್ಲೂ ಬೌಲಿಂಗ್ ಮತ್ತು ಫೀಲ್ಡಿಂಗ್ ವಿಭಾಗದಲ್ಲಿ ಧೋನಿ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳನ್ನು ಯಾರೂ ಊಹೆ ಮಾಡಲು ಕೂಡ ಸಾಧ್ಯವಿಲ್ಲ. ಪ್ರೀತಿ-
ವಿಶ್ವಾಸದಿಂದ ಸಲಹೆ ನೀಡುವ ಕೂಲ್ ಕ್ಯಾಪ್ಟನ್, ತನ್ನ ಮಾತನ್ನು ಕೇಳದಿದ್ದಾಗ ತಾಳ್ಮೆಯನ್ನೂ ಕೂಡ ಕಳೆದುಕೊಳ್ಳುತ್ತಾರೆ. ಹಾಗಂತ ಅವರ ಸಿಟ್ಟು ಮುಖದಲ್ಲಿ ಕಾಣುವುದಿಲ್ಲ. ಬದಲಾಗಿ ಮಾತಿನಲ್ಲೇ ಛಾಟಿ ಬೀಸಿ ತನ್ನ ಹಿಡಿತ ಸಾಧಿಸಿಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.
ಈಗಾಗಲೇ ಧೋನಿ ವಿಕೆಟ್ ಹಿಂದುಗಡೆ ನಿಂತುಕೊಂಡು ಬೌಲರ್ ಗಳಿಗೆ ಮತ್ತು ಫೀಲ್ಡರ್ ಗಳಿಗೆ ಯಾವ ರೀತಿ ಸಲಹೆ, ಕ್ಲಾಸ್ಗಳನ್ನು ತೆಗೆದುಕೊಂಡಿದ್ರು ಎಂಬುದನ್ನು ಪಂದ್ಯವನ್ನು ಸೂಕ್ಷ್ಮವಾಗಿ ನೋಡಿದಾಗ ಗೊತ್ತಾಗುತ್ತೆ. ಸ್ಟಂಪ್ ಮೈಕ್ ಗಳಲ್ಲಿ ಧೋನಿ ವಿಕೆಟ್ ಹಿಂದುಗಡೆ ಏನೆಲ್ಲಾ ಹೇಳಿದ್ದರು ಎಂಬುದು ರೇಕಾರ್ಡ್ ಕೂಡ ಆಗಿದೆ. ಧೋನಿಯ ಸಹಾಯ, ಮಾರ್ಗದರ್ಶನ, ಬೈಸಿಕೊಂಡಿರುವುದು ಹಾಗೂ ಧೋನಿ ಹೇಗೆ ಪ್ರೇರಣೆಯಾಗಿದ್ದರು ಎಂಬುದನ್ನೆಲ್ಲಾ ಕುಲದೀಪ್ ಯಾದವ್, ಚಾಹಲ್, ಇಶಾಂತ್ ಶರ್ಮಾ, ಜಡೇಜಾ ಸೇರಿದಂತೆ ಅನೇಕ ಆಟಗಾರರು ಪ್ರೀತಿಯಿಂದಲೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.
ಕುಲ್-ಚಾ ಗ್ಯಾಂಗ್ ನ ಸುದರ್ಶನ ಚಕ್ರ ಅಸ್ತ್ರಕ್ಕೆ ಧೋನಿಯದ್ದೇ ವರ…!
ಕುಲದೀಪ್ ಯಾದವ್ ಮತ್ತು ಯುಜುವೇಂದ್ರ ಚಾಹಲ್ ಅವರನ್ನು ಟೀಮ್ ಇಂಡಿಯಾ ಕುಲ್-ಚಾ ಗ್ಯಾಂಗ್ ಎಂದೇ ಕರೆಯಲಾಗುತ್ತದೆ. ಇಬ್ಬರು ಯುವ ಸ್ಪಿನ್ನರ್ ಗಳು ಧೋನಿ ಕೈಯಿಂದ ಹೆಚ್ಚಾಗಿ ಬೈಸಿಕೊಂಡಿದ್ದಾರೆ. ಹಾಗೇ ಇವರಿಬ್ಬರ ಯಶಸ್ಸಿಗೆ ಧೋನಿ ಪ್ರಮುಖ ಕಾರಣ ಎಂಬುದನ್ನು ಯಾರು ಅಲ್ಲಗಳೆಯುವಂತಿಲ್ಲ. ಬ್ಯಾಟ್ಸ್ ಮೆನ್ ಗಳಿಗೆ ಯಾವ ರೀತಿ ಬೌಲಿಂಗ್ ಮಾಡಬೇಕು ಎಂದು ಧೋನಿ ಸಲಹೆ ನೀಡುತ್ತಾರೆ. ಅನೇಕ ಬಾರಿ ಯಶಸ್ವಿ ಕೂಡ ಆಗಿದ್ದಾರೆ. ಕೆಲವೊಂದು ಬಾರಿ ಧೋನಿಯ ಮಾತಿನಂತೆ ಬೌಲಿಂಗ್ ಮಾಡದಿದ್ದಾಗ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದೂ ಇದೆ.
2017ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಡೇವಿಡ್ ವಾರ್ನರ್ ವಿಕೆಟ್ ಉರುಳಿಸಲು ಧೋನಿ ಪ್ಲಾನ್ ಮಾಡಿಕೊಂಡಿದ್ದರು. ವಾರ್ನರ್ ವಿಕೆಟ್
ಪತನಗೊಳಿಸಲು ಬಳಸಿಕೊಂಡಿದ್ದು ಕುಲದೀಪ್ ಯಾದವ್ ಅವರನ್ನು. ಚೆಂಡನ್ನು ಸ್ವಲ್ಪ ಹಿಂದಕ್ಕೆ ಎಸೆಯುವಂತೆ ಕುಲದೀಪ್ ಗೆ ಧೋನಿ ಹೇಳಿದ್ದರು. ಧೋನಿಯ ಅಣತಿಯಂತೆ ಬೌಲಿಂಗ್ ಮಾಡಿದ್ದ ಕುಲದೀಪ್ ವಿಕೆಟ್ ಕೂಡ ಪಡೆದುಕೊಂಡ್ರು.
ಹಾಗೇ ಕುಲದೀಪ್ ಯಾದವ್ಗೆ ಧೋನಿ ತನ್ನ ಮಾತಿನಲ್ಲೇ ಸರಿಯಾಗಿ ಕ್ಲಾಸ್ ತೆಗೆದುಕೊಂಡಿದ್ದರು. ಪಂದ್ಯವೊಂದರಲ್ಲಿ ಧೋನಿ ಕುಲದೀಪ್ಗೆ ಸಲಹೆ ನೀಡುತ್ತಿದ್ದರು. ಆದ್ರೆ ಧೋನಿ ಹೇಳಿದಂತೆ ಕುಲದೀಪ್ ಬೌಲಿಂಗ್ ಮಾಡುತ್ತಿರಲಿಲ್ಲ. ಆಗ ಸಿಟ್ಟಿಗೊಂಡ ಧೋನಿ ಕುಲದೀಪ್ಗೆ ಹೇಳಿದ್ದು ಹೀಗೆ.. ನಾನೇನು ಹುಚ್ಚಾ ಅಂದುಕೊಂಡಿದ್ದೀಯಾ… 300ಕ್ಕೂ ಹೆಚ್ಚು ಪಂದ್ಯವನ್ನು ಆಡಿದ್ದೇನೆ ಎಂದು ಹೇಳಿದ್ದರು. ಈ ಮಾತಿನಿಂದ ಎಚ್ಚೆತ್ತುಕೊಂಡ ಯಾದವ್ ಧೋನಿ ಹೇಳಿದಂತೆ ಬೌಲಿಂಗ್ ಮಾಡಿ ಯಶ ಸಾಧಿಸಿದ್ದರು.
ಇನ್ನು ಯುಜುವೇಂದ್ರ ಚಾಹಲ್ಗೂ ಧೋನಿ ಪ್ರೇರಣಾ ಶಕ್ತಿಯಾಗಿದ್ದರು. 2017ರ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯ. ಆಸ್ಟ್ರೇಲಿಯಾದ ಗ್ಲೇನ್ ಮ್ಯಾಕ್ಸ್ ವೆಲ್ ವಿಕೆಟ್ ಉರುಳಿಸಲು ಧೋನಿ ಪ್ಲಾನ್ ಮಾಡಿಕೊಂಡಿದ್ದರು. ಅದಕ್ಕೆ ಚಾಹಲ್ಗೆ ಸಲಹೆ ನೀಡುತ್ತಾ ಇದ್ರು. ಆದ್ರೆ ಚಾಹಲ್ ಧೋನಿ ಹೇಳಿದಂತೆ ಬೌಲಿಂಗ್ ಮಾಡಲಿಲ್ಲ. ಸ್ಟಂಪ್ ಮೇಲೆ ಬೌಲಿಂಗ್ ಮಾಡು ಅಂತ ಹೇಳ್ತಾನೆ ಇದ್ರು. ಚಾಹಲ್ ಆ ರೀತಿ ಬೌಲಿಂಗ್ ಮಾಡುತ್ತಿರಲಿಲ್ಲ. ಆಗ ನೀನು ನನ್ನ ಮಾತನ್ನು ಕೇಳುತ್ತಿಲ್ಲ ಅನ್ನೋ ಕೂಗು ಕೇಳಿಬರುತ್ತಿದ್ದಂತೆ ಚಾಹಲ್ ಜಾಗ್ರತರಾದ್ರು. ಧೋನಿ ಹೇಳಿದಂತೆ ಬೌಲಿಂಗ್ ಮಾಡಿದಾಗ ಅದೇ ರೀತಿ ಮಾಡು ಅಂತ ಹೇಳುತ್ತಿದ್ದರು. ಕೊನೆಗೆ ಚಾಹಲ್ ಮ್ಯಾಕ್ಸ್ ವೆಲ್ ಅವರ ವಿಕೆಟ್ ಪಡೆಯುವಲ್ಲಿ ಚಾಹಲ್ ಯಶಸ್ವಿಯಾದ್ರು.
ಹೀಗೆ ಅನೇಕ ಪಂದ್ಯಗಳಲ್ಲಿ ಕುಲದೀಪ್ ಯಾದವ್ ಮತ್ತು ಚಾಹಲ್ ಅವರು ಧೋನಿಯ ಮಾರ್ಗದರ್ಶನಂತೆ ಬೌಲಿಂಗ್ ಮಾಡಿ ಯಶ ಸಾಧಿಸಿದ್ದಾರೆ. ಅಲ್ಲದೆ ಧೋನಿಯ ಸಲಹೆ ಮತ್ತು ಮಾರ್ಗದರ್ಶನವನ್ನು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಎಂದು ಹೇಳಿಕೊಂಡಿದ್ದರು. ಹಾಗೇ ಧೋನಿ ಮೈದಾನದಲ್ಲಿ ಬೈದಿರುವ ವಿಚಾರಗಳನ್ನು ಯಾವುದೇ ಸಂಕೋಚವಿಲ್ಲದೆ ಹೇಳಿದ್ದಾರೆ.
ಓಯ್… ಶ್ರೀ… ಅಲ್ಲಿ ನಿನ್ನ ಗರ್ಲ್ ಫ್ರೆಂಡ್ ಇಲ್ಲ.. ಸ್ವಲ್ಪ ಈ ಕಡೆ ಬಾ.. ಧೋನಿ
ಧೋನಿಯ ನಾಯಕತ್ವವನ್ನು ಮೆಚ್ಚಲೇಬೇಕಾಗಿರುವ ವಿಚಾರದಲ್ಲಿ ಇದು ಕೂಡ ಒಂದು. ಶ್ರೀಶಾಂತ್ ನಂತಹ ಪುಂಡಾಟ-ಹುಡುಗಾಟದ ಬೌಲರ್ ನನ್ನು ಕೂಡ ಧೋನಿ ತನ್ನ ಹಿಡಿತದಲ್ಲಿಟ್ಟುಕೊಂಡಿದ್ದರು. ಆಕ್ರಮಣಕಾರಿ ಪ್ರವೃತ್ತಿಯ ಬೌಲರ್ ಆಗಿದ್ದ ಶ್ರೀಶಾಂತ್ ತನ್ನ ಶ್ರೇಷ್ಠ ಬೌಲಿಂಗ್ ಜೊತೆಗೆ ತನ್ನ ವರ್ತನೆಯಿಂದ ಕುಖ್ಯಾತಿಯನ್ನೇ ಪಡೆದುಕೊಂಡಿದ್ದರು.
ಅದರಲ್ಲೂ ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಶ್ರೀಶಾಂತ್ ಸ್ವಲ್ಪ ಓವರ್ ಆಗಿಯೇ ವರ್ತಿಸುತ್ತಿದ್ದರು. ಮೈಮೇಲೆ ದೇವ್ವ ಬಂದಂತೆ ವರ್ತಿಸುತ್ತಿದ್ದ ಶ್ರೀಶಾಂತ್ರನ್ನು ಕಂಟ್ರೋಲ್ ಮಾಡೋದು ತುಂಬಾನೇ ಕಷ್ಟ. ಅಂತಹುದ್ದರಲ್ಲಿ ಧೋನಿ ಶ್ರೀಶಾಂತ್ಗೂ ಸರಿಯಾಗಿಯೇ ಕ್ಲಾಸ್ ತೆಗೆದುಕೊಳ್ಳುತ್ತಿದ್ದರು. ಜೊತೆಗೆ ಅಷ್ಟೇ ನಂಬಿಕಸ್ಥ ಬೌಲರ್ ಕೂಡ ಆಗಿದ್ದರು. ಶ್ರೀಶಾಂತ್ ಕೂಡ ಅಷ್ಟೇ.. ಧೋನಿಯ ಮೇಲೆ ಅಪಾರವಾದ ಗೌರವ, ಪ್ರೀತಿಯನ್ನಿಟ್ಟುಕೊಂಡಿದ್ದರು.
ಅದು ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ. ಅಹಮದಾಬಾದ್ನಲ್ಲಿ ಡ್ 5 ವಿಕೆಟ್ ನಷ್ಟಕ್ಕೆ 391 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿತ್ತು. ಕೇನ್ ವಿಲಿಯಮ್ಸ್ ಬ್ಯಾಟಿಂಗ್ ಮಾಡುತ್ತಿದ್ದರು. ಪ್ರಗ್ಯಾನ್ ಓಜ್ಹಾ ಅವರು ಬೌಲಿಂಗ್ ಮಾಡುತ್ತಿದ್ದಾಗ ಆಗ ಧೋನಿ ಫೀಲ್ಡಿಂಗ್ ಸೆಟ್ ಮಾಡುತ್ತಿದ್ದರು. ಸ್ಕ್ವೇರ್ ನಲ್ಲಿದ್ದಾಗ ಶ್ರೀಶಾಂತ್ಗೆ ಸ್ವಲ್ಪ ಮುಂದೆ ಬಾ ಅಂತ ಹೇಳಿದ್ದರು. ಆದ್ರೆ ನಾಯಕನ ಸೂಚನೆಯನ್ನು ಶ್ರೀ ಕಡೆಗಣಿಸಿದ್ದರು. ಆಗ ಶ್ರೀಶಾಂತ್ ಗೆ ಓಯ್ ಶ್ರೀ ಅಲ್ಲಿ ನಿನ್ನ ಗರ್ಲ್ ಫ್ರೆಂಡ್ ಇಲ್ಲ.. ಸ್ವಲ್ಪ ಈ ಕಡೆ ಬಾ ಎಂದು ಹೇಳಿದ್ದರು.
ಜಡ್ಡು, ಚಪ್ಪಾಳೆ ಹೊಡೆಯಲು ಪೂಜಾರ ಅಲ್ಲಿ ನಿಂತಿಲ್ಲ- ಎಮ್ಎಸ್ಡಿ
ರವೀಂದ್ರ ಜಡೇಜಾ.. ಟೀಮ್ ಇಂಡಿಯಾದ ಅದ್ಭುತ ಆಲ್ ರೌಂಡರ್. ಬ್ಯಾಟಿಂಗ್, ಫೀಲ್ಡಿಂಗ್ ಮತ್ತು ಬೌಲಿಂಗ್ ಹೀಗೆ ಸಮಯೋಜಿತವಾಗಿ ಆಡುವ ರವೀಂದ್ರ ಜಡೇಜಾ ಟೀಮ್ ಇಂಡಿಯಾಗೆ ಎಂಟ್ರಿಕೊಟ್ಟಿದ್ದು ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲೇ.
ಆದ್ರೆ ರವೀಂದ್ರ ಜಡೇಜಾ ತಂಡದ ಖಾಯಂ ಆಟಗಾರನಾಗಲೂ ವಿಫಲರಾದ್ರು. ಆಲ್ರೌಂಡರ್ ಆಗಿದ್ದರೂ ಕೂಡ ತಂಡಕ್ಕೆ ಬಂದು ಹೋಗುವ ಆತಿಥಿಯಂತಿದ್ದರು. ಹೆಚ್ಚಾಗಿ ಹನ್ನೇರಡನೇ ಆಟಗಾರನಾಗಿ ಫೀಲ್ಡಿಂಗ್ ಮಾಡುತ್ತಿದ್ದ ರವೀಂದ್ರ ಜಡೇಜಾ 19 ವಯೋಮಿತಿ ವಿಶ್ವಕಪ್ನ ಗೆಲುವಿನಲ್ಲೂ ಪ್ರಮುಖ ಪಾತ್ರ ವಹಿಸಿದ್ದರು. 2019ರ ವಿಶ್ವಕಪ್ ನಲ್ಲಿ ಧೋನಿ ಜೊತೆಸೇರಿಕೊಂಡು ತಂಡವನ್ನು ಗೆಲುವಿನ ದಡ ಸೇರಿಸಲು ಸಾಕಷ್ಟು ಪ್ರಯತ್ನ ಪಟ್ಟರು. ಆದ್ರೆ ಅದು ಕೊನೆಗೆ ಸಾಧ್ಯವಾಗಲಿಲ್ಲ. ಆದ್ರೆ ಈಗ ಧೋನಿಯ ಕಟ್ಟ ಕಡೆಯ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಕಡೆಯ ಜೊತೆಗಾರನಾಗಿ ಆಡಿದ್ದೇ ಎಂಬುದು ಜಡ್ಡುಗೆ ಹೆಮ್ಮೆಯ ವಿಷಯವಾಗಿದೆ.
ಧೋನಿಯ ನಾಯಕತ್ವದಲ್ಲಿ ಹಲವಾರು ಪಂದ್ಯಗಳನ್ನು ಆಡಿರುವ ಜಡೇಜಾ ಅವರ ಮಿಂಚಿನ ಕ್ಷೇತ್ರ ರಕ್ಷಣೆಯಿಂದಾಗಿ ಅನೇಕ ರನೌಟ್ ಗಳನ್ನು ಧೋನಿ ಮಾಡಿದ್ದಾರೆ. ಧೋನಿಗೆ ಜಡೇಜಾ ಸಾಮಥ್ರ್ಯ ಮತ್ತು ಪ್ರತಿಭೆಯ ಮೇಲೆ ನಂಬಿಕೆ ಇತ್ತು. ಅದಕ್ಕೆ ತಕ್ಕಂತೆ ಆಟವನ್ನಾಡಿಸುತ್ತಿದ್ದರು. ಹಾಗೇ ಧೋನಿ ಕೈಯಿಂದ ಸಾಕಷ್ಟು ಬಾರಿ ಬೈಸಿಕೊಂಡಿದ್ದು ಉಂಟು ಜಡೇಜಾ.
ಅದು 2014ರ ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್ ಪಂದ್ಯ. ಬ್ರೆಂಡನ್ ಮೆಕಲಂ ಮತ್ತು ಬಿಜೆ ವಾಟ್ಲಿಂಗ್ ಬ್ಯಾಟಿಂಗ್ ಮಾಡುತ್ತಿದ್ದರು. ರವೀಂದ್ರ ಜಡೇಜಾ ಬೌಲಿಂಗ್ ಗೆ ರೆಡಿಯಾಗುತ್ತಿದ್ದರು. ಆಗ ಧೋನಿ ಹೇಳಿದ್ದು ಹೀಗೆ.. ಜಡ್ಡು.. ಆಫ್ ಸ್ಟಂಪ್ ಕಡೆಗೆ ಬೌಲಿಂಗ್ ಮಾಡು. ಪೂಜಾರನನ್ನು ಅಲ್ಲಿ ನಾನು ಚಪ್ಪಾಳೆ ಹೊಡೆಯಲು ನಿಲ್ಲಿಸಿಲ್ಲ ಎಂದು ಹೇಳಿದ್ದರು. ಆಗ ಜಡೇಜಾ ತಕ್ಷಣವೇ ಬೌಲಿಂಗ್ ಲಯವನ್ನು ಬದಲಾವಣೆ ಮಾಡಿಕೊಂಡ್ರು. ಹಾಗೇ ಇನ್ನೊಂದು ಬಾರಿ ಜಡೇಜಾಗೆ ಧೋನಿ ವೀಕ್ಷಕ ವಿವರಣೆಕಾರನಂತೆ ಶಹಬ್ಬಾಸ್ ಗಿರಿ ನೀಡಿದ್ದು. ಭರ್ಪೂರ್ ಬೌಲಿಂಗ್ ಕಾ ಪ್ರದರ್ಶನ್ ಕರ್ತೆ ಹು ರವೀಂದ್ರ ಜಡೇಜಾ.. ಅದ್ಭುತ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಿಯಾ ಎಂದು ಉದ್ಗಾರ ಮಾಡಿದ್ದರು.
ಬೌಂಡರಿ ಹೋದ್ರೆ ಅದಕ್ಕೆ ನಾನು ಜವಾಬ್ದಾರ.. ನೀನು ಬೌಲಿಂಗ್ ಮಾಡು.. ಶ್ರೀಶಾಂತ್ಗೆ ಧೈರ್ಯ ತುಂಬಿದ್ದ ಮಾಹಿ..!
ಟೀಮ್ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಈಗ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ. ಆದ್ರೆ ಧೋನಿ ಒಬ್ಬ ಆಟಗಾರನಾಗಿ, ಬ್ಯಾಟ್ಸ್ ಮೆನ್ ಆಗಿ, ವಿಕೆಟ್ ಕೀಪರ್ ಆಗಿ ಹಾಗೂ ನಾಯಕನಾಗಿ, ಮಾಜಿ ನಾಯಕನಾಗಿ ಟೀಮ್ ಇಂಡಿಯಾಗೆ ಅನನ್ಯ ಕೊಡುಗೆ ನೀಡಿದ್ದಾರೆ.
ನಾಯಕನಾಗಿ ಎರಡು ವಿಶ್ವಕಪ್ ಮತ್ತು ಒಂದು ಚಾಂಪಿಯನ್ಸ್ ಟ್ರೋಫಿ ಗೆದ್ದಿರುವ ಧೋನಿ ಭಾರತ ಕ್ರಿಕೆಟ್ ತಂಡವನ್ನು ಉತ್ತುಂಗಕ್ಕೇರಿಸಿದ್ದರು. ನಾಯಕನಾಗಿ ಆಟಗರರಿಗೆ ಬೆಂಬಲ ನೀಡುತ್ತಾ, ಸಲಹೆ ಮಾರ್ಗದರ್ಶನದ ಮೂಲಕ ಅವರ ಪ್ರತಿಭೆ, ಸಾಮಥ್ರ್ಯಗಳನ್ನು ಉತ್ತೇಜಿಸುತ್ತಿದ್ದರು. ಹೀಗಾಗಿ ಧೋನಿ ಯಶಸ್ವಿ ನಾಯಕನಾಗಲು ಸಾಧ್ಯವಾಯ್ತು.
ಪಂದ್ಯದ ಪ್ರತಿ ಕ್ಷಣ ಕೂಡ ಏಕಾಗ್ರತೆ ಮತ್ತು ಕೂಲ್ ಆಗಿಯೇ
ಇರುತ್ತಿದ್ದ ಧೋನಿ ಕೆಲವೊಂದು ಬಾರಿ ಕುಪಿತಗೊಂಡಿದ್ದೂ ಇದೆ. ಬೌಲರ್ಗಳು ಮತ್ತು ಕ್ಷೇತ್ರ ರಕ್ಷಣೆ ಮಾಡುವಾಗ ಆಟಗಾರರು ಮಾತು ಕೇಳದಿದ್ದಾಗ ತನ್ನ ತಾಳ್ಮೆಯನ್ನು ಕಳೆದುಕೊಂಡಾಗ ಮಾತು ಅಷ್ಟೇ ಕಠೋರವಾಗಿರುತ್ತಿತ್ತು. ಹೀಗೆ ಹಲವಾರು ಘಟನೆಗಳು ನಡೆದಿವೆ.
ಈ ಘಟನೆ ನಡೆದಿರುವುದು 2012ರಲ್ಲಿ. ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನ. ಇಶಾಂತ್ ಶರ್ಮಾ ಬೌಲಿಂಗ್ ನಲ್ಲಿ ಲಯತಪ್ಪಿ ಹೋಗಿತ್ತು. ಶಾರ್ಟ್ ಬಾಲ್, ವೈಡ್ ಬಾಲ್ ಎಸೆಯುತ್ತಿದ್ದರು. ಇದನ್ನು ತಿಳಿದುಕೊಂಡ ಧೋನಿ ಇಶಾಂತ್ಗೆ ಸಲಹೆ ನೀಡಿದ್ದರು.
ಚೆಂಡು ಬೌಂಡರಿ ಗೆರೆ ದಾಟಿದ್ರೆ ಅದಕ್ಕೆ ನಾನೇ ಹೊಣೆ. ನೀನು ಬಿಂದಾಸ್ ಆಗಿ ಬೌಲಿಂಗ್ ಮಾಡು. ನಿನಗೆ ಬೇಕಿದ್ರೆ ಹೆಚ್ಚುವರಿ ಫೀಲ್ಡರ್ ನನ್ನು ಅಲ್ಲಿ ನಿಲ್ಲಿಸುತ್ತೇನೆ. ನೀನು ನಿನ್ನ ಸ್ಟೈಲ್ ನಲ್ಲೇ ಬೌಲಿಂಗ್ ಮಾಡು ಎಂದು ಇಶಾಂತ್ ಶರ್ಮಾಗೆ ಧೈರ್ಯ ತುಂಬಿದ್ದರು. ಈ ರೀತಿ ನಾಯಕ ಬೌಲರ್ಗೆ ಸಲಹೆ ನೀಡಿ ಬೆನ್ನುತಟ್ಟಿದಾಗ ಎಂಥಾ ಬೌಲರ್ಗೂ ಪ್ರೇರಣೆಯಾಗುವುದರಲ್ಲಿ ಸಂದೇಹವೇ ಇಲ್ಲ. ಈ ಪಂದ್ಯದಲ್ಲಿ ಶ್ರೀಶಾಂತ್ ಮೂರು ವಿಕೆಟ್ ಉರುಳಿಸಿದ್ರು.
ನಿನಗೆ ಏನೊ ಹೇಳಿದ್ದೇನೋ ಅದೇ ಮಾಡು..ಕೊಹ್ಲಿಗೆ ಕ್ಲಾಸ್ ತೆಗೆದುಕೊಂಡಿದ್ದ ಧೋನಿ..!
ಧೋನಿ ನನ್ನ ನಾಯಕ ಅಂತ ವಿರಾಟ್ ಕೊಹ್ಲಿ ಆಗಾಗ ಹೇಳಿಕೊಳ್ಳುತ್ತಾರೆ. ಕೆಲವರು ಧೋನಿ ಮತ್ತು ವಿರಾಟ್ ನಡುವಿನ ಸಂಬಂಧ ಚೆನ್ನಾಗಿಲ್ಲ ಅಂತ ಹೇಳುತ್ತಾರೆ. ಅದ್ರಲ್ಲೂ ಧೋನಿ ಟೆಸ್ಟ್ ಮತ್ತು ಏಕದಿನ ಕ್ರಿಕೆಟ್ ನ ನಾಯಕತ್ವ ತ್ಯಜಿಸಿದ್ದಾಗ ವಿರಾಟ್ ಜೊತೆಗಿನ ಸಂಬಂಧ ಚೆನ್ನಾಗಿಲ್ಲದ ಕಾರಣ ಧೋನಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ, ರವಿಶಾಸ್ತ್ರಿ ಮತ್ತು ಕೊಹ್ಲಿ ನಡುವಿನ ಬಾಂಧವ್ಯದಿಂದಾಗಿ ಧೋನಿ ಬೇಸರಗೊಂಡಿದ್ದಾರೆ ಎಂಬ ಮಾತುಗಳು ಕೇಳಿಬಂದಿದ್ದವು.
ಆದ್ರೆ ಧೋನಿ ಮತ್ತು ವಿರಾಟ್ ನಡುವಿನ ಬಾಂಧವ್ಯ ಚೆನ್ನಾಗಿಯೇ ಇತ್ತು. ವಿರಾಟ್ ಕೊಹ್ಲಿ ನಾಯಕನಾಗಿದ್ರೂ ಸಲಹೆಗಳನ್ನು ಧೋನಿ ಬಳಿಯಿಂದಲೇ ಪಡೆದುಕೊಳ್ಳುತ್ತಿದ್ದರು. ಇದೇನೂ ಗುಟ್ಟಾಗಿ ಉಳಿದಿಲ್ಲ. ಕೊಹ್ಲಿಯ ಪ್ರತಿ ಯಶಸ್ಸಿನ ಹಿಂದೆ ಧೋನಿಯ ಅಭಯವಿತ್ತು ಎಂಬುದನ್ನು ಮರೆಯುವ ಹಾಗಿಲ್ಲ. ತಂಡದ ಹಿರಿಯಣ್ಣನಾಗಿ ಧೋನಿ ಅನೇಕ ಬಾರಿ ವಿರಾಟ್ ಕೊಹ್ಲಿಗೆ ಸಾಥ್ ನೀಡಿದ್ದಾರೆ. ಈ ನಡುವೆ ಧೋನಿಯಿಂದಲೇ ವಿರಾಟ್ ಕೊಹ್ಲಿ ಫಿಟ್ನೆಸ್ ಕಡೆಗೆ ಹೆಚ್ಚಿನ ಗಮನಹರಿಸಲು ಪ್ರೇರಣೆಗೊಂಡಿದ್ದು ಎಂಬುದನ್ನು ಕೊಹ್ಲಿಯೇ ಹೇಳಿಕೊಂಡಿದ್ದರು.
ಈ ನಡುವೆ ವಿರಾಟ್ ಕೊಹ್ಲಿ ಟೀಮ್ ಇಂಡಿಯಾದಲ್ಲೇ ಎಷ್ಟೇ ಪ್ರಬುದ್ಧ ಬ್ಯಾಟ್ಸ್ ಮೆನ್ ಆಗಿ ರನ್ ದಾಖಲಿಸುತ್ತಿದ್ರು. ಧೋನಿ ನಾಯಕತ್ವದಲ್ಲೇ ಪಳಗಿರುವ ಕೊಹ್ಲಿ ಯಶಸ್ಸಿನ ಉತ್ತುಂಗದಲ್ಲಿದ್ರೂ ತಪ್ಪು ಮಾಡುತ್ತಿದ್ದಾಗ ಧೋನಿ ಸರಿಯಾಗಿಯೇ ಕ್ಲಾಸ್ ತೆಗೆದುಕೊಂಡಿದ್ದಾರೆ. ಅದಕ್ಕೆ ಇದೊಂದು ಸಣ್ಣ ಉದಾಹರಣೆ.
ಅದು 2016ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ. ಭಾರತ ಮತ್ತು ಇಂಗ್ಲೆಂಡ್ ನಡುವಿನ ಪಂದ್ಯ. ಭಾರತ ಈ ಪಂದ್ಯಕ್ಕೆ ಕೇವಲ ನಾಲ್ಕು ಬೌಲರ್ ಗಳನ್ನು ಕಣಕ್ಕಿಳಿಸಿತ್ತು. ಆ ಪಂದ್ಯದಲ್ಲಿ ವಿರಾಟ್ ಕೊಹ್ಲಿಗೂ ಬೌಲಿಂಗ್ ಮಾಡುವಂತೆ ಧೋನಿ ಚೆಂಡನ್ನು ನೀಡಿದ್ದರು.
ಇಂಗ್ಲೆಂಡ್ನ ಪ್ರಮುಖ ಬ್ಯಾಟ್ಸ್ ಮೆನ್ ಕೇವಿನ್ ಪೀರ್ಟಸನ್ ಅವರನ್ನು ಕೊಹ್ಲಿ ಔಟ್ ಮಾಡಿದ್ದರು. ವೈಡ್ ಯಾರ್ಕರ್ ಎಸೆತದ ಮೂಲಕ ಪೀಟರ್ಸನ್ ಅವರನ್ನು ಲಯತಪ್ಪುವಂತೆ ಮಾಡಿದ್ದರು ವಿರಾಟ್ ಕೊಹ್ಲಿ. ಅದೂ ಅಲ್ಲದೆ ವಿರಾಟ್ ಕೊಹ್ಲಿಯವರು ಮೊದಲ ಎಸೆತದಲ್ಲೇ ವಿಕೆಟ್ ಪಡೆದಿದ್ದರು.
ಇದ್ರಿಂದ ಆತ್ಮವಿಶ್ವಾಸ ಹೆಚ್ಚಿಸಿಕೊಂಡ ವಿರಾಟ್ ಬೌಲಿಂಗ್ ನಲ್ಲಿ ಪ್ರಯೋಗ ಮಾಡಲು ಶುರು ಮಾಡಿದ್ದರು. ಅದು ಥೇಟ್ ಪರಿಣತ ಬೌಲರ್ಗಳಂತೆ. ಅದರಲ್ಲಿ ಒಂದು ಎಸೆತ ಲೆಗ್ ಸೈಡ್ ವೈಡ್ ಆಗಿ ಬೈಸ್ ರನ್ ಆಗಿ ಇಂಗ್ಲೆಂಡ್ ಸ್ಕೋರ್ ಬೋರ್ಡ್ ಸೇರಿಕೊಂಡಿತ್ತು. ಆಗ ತಕ್ಷಣವೇ ಧೋನಿ ವಿರಾಟ್ ಕೊಹ್ಲಿಯ ಹತ್ತಿರಕ್ಕೆ ಬಂದು, ನಿನಗೆ ಏನು ಹೇಳಿದ್ದೇನೋ ಅದನ್ನು ಮಾಡು.. ಬೌಲರ್ಗಳ ರೀತಿಯಲ್ಲಿ ಪ್ರಯತ್ನ ಪಡಬೇಡ ಎಂದು ವಿರಾಟ್ಗೆ ಮಾತಿನಲ್ಲೇ ಛಾಟಿ ಬೀಸಿದ್ದರು.
ಹೀಗೆ ವಿಕೆಟ್ ಹಿಂದುಗಡೆಯ ಮಾಯಾವಿ ಮಹೇಂದ್ರ ಸಿಂಗ್ ಧೋನಿ ಮಾಡಿರುವ ಸಾಧನೆಗಳು ನೆನಪಿನ ಪುಟದಲ್ಲಿ ಅಚ್ಚಳಿಯದೇ ಉಳಿಯಲಿವೆ. ಧೋನಿ ಬಗ್ಗೆ ಎಷ್ಟೇ ಟೀಕೆ – ಆರೋಪಗಳಿದ್ರೂ ಅವರ ನಿಸ್ವಾರ್ಥ ಆಟ ಮತ್ತು ನಿರ್ಧಾರಗಳು ಟೀಮ್ ಇಂಡಿಯಾದ ಭವಿಷ್ಯಕ್ಕೆ ಮುನ್ನುಡಿ ಬರೆದಿದ್ದವು ಎಂಬುದು ಅಷ್ಟೇ ಸತ್ಯ.








