ಸಹ್ಯಾದ್ರಿ ಗಿರಿಶ್ರೇಣಿಯ ಕುಟುಂಬದ ನೂರಾರು ಮಕ್ಕಳಿಗೆ ಚೆಂದದ ಹೆಸರಿಟ್ಟವರು ಇಕ್ಕೇರಿ ನಾಯಕ ವಂಶಜರು Sahyadri Girishreni
1565ರ ತಾಳಿಕೋಟೆ ಯುದ್ಧದ ನಂತರ ವಿಜಯನಗರ ಸಾಮ್ರಾಜ್ಯದ ಹಲವಾರು ಸಾಮಂತರು ಕರ್ನಾಟಕ, ಆಂದ್ರಪ್ರದೇಶ ಮತ್ತು ತಮಿಳುನಾಡಿನಲ್ಲಿ ಸ್ವತಂತ್ರ ಆಗಲು ಪೂರಕವಾದ ಪರಿಸ್ಥಿತಿ ನಿರ್ವಾಣವಾಗಿದ್ದು ಅದನ್ನು ಕೆಲವರು ಸಮರ್ಥವಾಗಿ ಬಳಸಿ ಕೊಳ್ಳುತ್ತಾರೆ. ನಮ್ಮ ಕರ್ನಾಟಕದ ಮಲೆನಾಡಿನ ಇಕ್ಕೇರಿ ಇಂದ ಆಳ್ವಿಕೆ ಮಾಡುತ್ತಿದ್ದ ನಾಯಕರು ಈ ಹೊಸ ಅವಕಾಶವನ್ನು ಸಮರ್ಥವಾಗಿ ಬಳಸಿಕೊಂಡು ಒಂದು ಹೊಸ ಅಧ್ಯಾಯವನ್ನು ಸೃಷ್ಟಿಸುತ್ತಾರೆ.
ಇದನ್ನೂ ಓದಿ : ಇಂದು ವಿಶ್ವ ವಿದ್ಯಾರ್ಥಿ ದಿನ – ವಿದ್ಯಾರ್ಥಿಗಳ ಸ್ಫೂರ್ತಿಯ ಮೂಲ ಕಲಾಂ ಮೇಷ್ಟ್ರು ಅವರ ಜನ್ಮದಿನ
1586ರಿಂದ 1629ರ ವರೆಗೆ ಇಕ್ಕೇರಿ ಗದ್ದಿಗೆಯ ಮೇಲೆ ವಿರಾಜಮಾನ ಆಗಿದ್ದ ಹಿರಿಯ ವೆಂಕಟಪ್ಪ ನಾಯಕರು ಇಕ್ಕೇರಿ ರಾಜ್ಯದ ಗಡಿಯನ್ನು ಎಲ್ಲಾ ದಿಕ್ಕಿನಲ್ಲಿ ವಿಸ್ತರಿಸುತ್ತಾರೆ. ಪೋರ್ಚುಗೀಸ್ ಅವರ ಅಧೀನದಲ್ಲಿ ಇದ್ದ ಗೋವಾದ ದಕ್ಷಿಣದಿಂದ ಪ್ರಾರಂಭವಾದ ಕರಾವಳಿ ಕಡಲ ತೀರವನ್ನು ಕೇರಳದ ನೀಲೇಶ್ವರದ ವರೆಗೂ ಸ್ವಾಧೀನ ಪಡಿಸಿಕೊಂಡು “ಪಶ್ಚಿಮ ಸಾಗರದ ಒಡೆಯ” (Lord of the Western Sea) ಎಂದು ಬಿರುದು ಪಡೆದು ಇಕ್ಕೇರಿಯ ಬಾವುಟವನ್ನು ಪಶ್ಚಿಮ ಘಟ್ಟದ ಮೇಲೆ ಮತ್ತು ಕರಾವಳಿ ಪ್ರದೇಶಗಳಲ್ಲಿ ಹಾರಿಸಿ ಒಂದು ಹೊಸ ಇತಿಹಾಸಕ್ಕೆ ನಾಂದಿ ಹಾಡುತ್ತಾರೆ. 17ನೇ ಶತಮಾನದ ಹೊಸ್ತಿಲಲ್ಲಿ ಇಕ್ಕೇರಿ ಸಂಸ್ಥಾನ ಕರ್ನಾಟಕದ ಅತ್ಯಂತ ದೊಡ್ಡ, ಬಲಿಷ್ಠ ಮತ್ತು ಶ್ರೀಮಂತ ರಾಜ್ಯವಾಗಿ ಹೊರಹೊಮ್ಮುತ್ತದೆ. 17ನೇ ಶತಮಾನದಲ್ಲಿ ವಿದೇಶಿ ವ್ಯಾಪಾರಿಗಳ ಬಹು ಬೇಡಿಕೆಯ ಬಂದರೂ ಆಗಿದ್ದ ಹೊನ್ನಾವರ, ಬಸರೂರು, ಭಟ್ಕಳ ಮತ್ತು ಮಂಗಳೂರು ಎಲ್ಲವೂ ಇಕ್ಕೇರಿ ನಾಯಕರ ಆಳ್ವಿಕೆಗೆ ಒಳಪಟ್ಟ ನಂತರ ವೆಂಕಟಪ್ಪ ನಾಯಕರು ಕರ್ನಾಟಕದ ಸಮಸ್ತ ಕಾಳು ಮೆಣಸಿನ ವ್ಯಾಪಾರದ ಒಡೆಯನಾಗುತ್ತಾರೆ ಮತ್ತು ಇಡೀ ಪಶ್ಚಿಮ ಕರಾವಳಿಯ ಧಾನ್ಯವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳುತ್ತಾರೆ. ಇದರ ಪರಿಣಾಮವಾಗಿ ಹಿರಿಯ ವೆಂಕಟಪ್ಪ ನಾಯಕರು ಮತ್ತು ವಿಶೇಷವಾಗಿ ಇಕ್ಕೇರಿ ಸಂಸ್ಥಾನ ಒಂದು ಪ್ರಮುಖ ಶಕ್ತಿಶಾಲಿ ಕೇಂದ್ರ ಬಿಂದು ಆಗುತ್ತದೆ ಹಾಗಾಗಿ ಇದರ ಜೊತೆಗೆ ಸ್ನೇಹ ಮತ್ತು ವ್ಯಾಪಾರ ಸಂಬಂಧವನ್ನು ಬೆಳಸಲು ಐರೋಪ್ಯ ರಾಷ್ಟ್ರಗಳಾದ ಇಂಗ್ಲೀಷ್, ಡಚ್, ಪೋರ್ಚುಗೀಸ್ ಮತ್ತು ಫ್ರೆಂಚರು ಹಾತೊರೆಯುತ್ತಾರೆ.
1600 ರಿಂದ 1763ರ ವರೆಗೂ ಇಕ್ಕೇರಿ ರಾಜ್ಯದ ಕರಾವಳಿ ಮತ್ತು ಘಟ್ಟದ ಮೇಲಿನ ಮಲೆನಾಡು ಪ್ರದೇಶಗಳನ್ನು ಬೆಸುಗೆ ಹಾಕಿದ್ದು ಮಾತ್ರ ಸಹ್ಯಾದ್ರಿ ಪರ್ವತಗಳ ಶ್ರೇಣಿ (ಪಶ್ಚಿಮ ಘಟ್ಟಗಳು) Sahyadri Girishreni. ಅಂದಿನ ಕಾಲದಲ್ಲಿ ಕರಾವಳಿ ಪ್ರದೇಶಗಳು ಅದರಲ್ಲೂ ವಿಶೇಷವಾಗಿ ಮುಖ್ಯ ವ್ಯಾಪಾರಿ ಬಂದರೂ ಗಳಿಂದ ಘಟ್ಟದ ಮೇಲಿನ ಪ್ರದೇಶಗಳನ್ನು ಸಂಪರ್ಕಿಸಲು ಹಲವಾರು ರಸ್ತೆಗಳು ಇದ್ದು ಅವುಗಳಲ್ಲಿ ಕೆಲವು ವ್ಯಾಪಾರದ ದೃಷ್ಟಿಕೋನದಿಂದ ಬಹಳ ಮಹತ್ವದಾಗಿತ್ತು. ಇಂತಹ ರಸ್ತೆಗಳಲ್ಲಿ ವ್ಯಾಪಾರಿಗಳು ಮತ್ತು ಅವರ ಸಾಮಾನುಗಳಿಗೆ ರಕ್ಷಣೆ ನೀಡಲು ಮತ್ತು ಪ್ರವಾಸಿಗರ ಹಿತದೃಷ್ಟಿ ಗೋಸ್ಕರ ಇಕ್ಕೇರಿ ನಾಯಕರು ಆಯ್ದ ಪ್ರಮುಖ ಸ್ಥಳಗಳಲ್ಲಿ ಕೋಟೆಯನ್ನು ನಿರ್ಮಿಸುತ್ತಾರೆ. ಈ ಕೋಟೆಗಳನ್ನು ನಿರ್ಮಾಣ ಮಾಡಿದ ಪ್ರದೇಶ ಬೌಗೋಳಿಕವಾಗಿ ಎಷ್ಟು ಪ್ರಮುಖವಾಗಿತ್ತು ಅಂದರೆ ಇದು ಪಶ್ಚಿಮ ಘಟ್ಟದ ತಟ್ಟ ತುದಿಯಲ್ಲಿ ಇದ್ದು ಅಲ್ಲಿಂದ ಕರಾವಳಿಯನ್ನು ಸಂಪರ್ಕಿಸುವ ಘಟ್ಟದ ರಸ್ತೆಗೆ ಕಾವಲು ಕೊಡಲು ಸುಲಭವಾಗಿತ್ತು. ಇಕ್ಕೇರಿ ನಾಯಕರ ರಾಜ್ಯದ ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಪಶ್ಚಿಮ ಘಟ್ಟಗಳು ಕಾರವಾರದಿಂದ ಪ್ರಾರಂಭವಾಗಿ ಕೇರಳದ ಗಡಿಯವರೆಗು ಸಾಗುತ್ತದೆ ಮತ್ತು ಇಲ್ಲಿ ಗಮನಿಸ ಬೇಕಾದ ಅಂಶ ಏನೆಂದರೆ ಈ ಸಹ್ಯಾದ್ರಿ ಪರ್ವತ ಶ್ರೇಣಿಗಳಲ್ಲಿ ಹಲವಾರು ಗುಡ್ಡಗಳು ಇದ್ದು ನಮ್ಮ ಪೂರ್ವಜರು ಎಲ್ಲದಕ್ಕೂ ಹೆಸರನ್ನು ನೀಡಿದ್ದರು ಆದರೆ ಇಂದು ನಮಗೆ ಅದ್ಯಾವುದು ನೆನಪಿಲ್ಲ.

ಇದನ್ನೂ ಓದಿ : ಕಲ್ಪತರು ನಾಡಿನಲ್ಲಿರುವ ಮಧುಗಿರಿ ಬೆಟ್ಟದ ವೈಭವ..!
ಅಂದು ಇಕ್ಕೇರಿ ರಾಜ್ಯದ ಪ್ರಮುಖ ಭಾಗವಾಗಿದ್ದ ಈ ಸಹ್ಯಾದ್ರಿ ಪರ್ವತ ಶ್ರೇಣಿಯಲ್ಲಿ ಇರುವ ಗುಡ್ಡಗಳ ಹೆಸರನ್ನು ಒಮ್ಮೆ ಮೆಲುಕು ಹಾಕಿ ನೋಡೋಣ. ಸಹ್ಯಾದ್ರಿ ಶ್ರೇಣಿಯು ಕಾರವಾರದಿಂದ ಕೇರಳಕ್ಕೆ ಸಾಗುವಾಗ ಇದರಲ್ಲಿ ಇರುವ ಹಲವಾರು ಗುಡ್ಡಗಳಿಗೆ ಅಂದು ಇಕ್ಕೇರಿ ರಾಜ್ಯದಲ್ಲಿ ಕರೆಯುತ್ತಿದ್ದ ಹೆಸರುಗಳು ಕ್ರಮವಾಗಿ ಈ ತರ ಇರುತ್ತದೆ – ಸೂರ್ಯಕಲ್ಯಾಣಿ ಗುಡ್ಡ (Suryakalyani Gudda), ಕಲಾರ್ ಗುಡ್ಡ (Kalar Gudda), ಬಾಳೆಕಂತ್ ಗುಡ್ಡ (Balekant Gudda), ಬೆರೋಲಿ ಗುಡ್ಡ (Beroli Gudda), ತುಳಸಿ ಪರ್ವತ (Tulsi Parvat), ಬಿದ್ರಲ್ಲಿ ಗುಡ್ಡ (Bidralli Gudda), ಮಲಾಪುರ್ ಗುಡ್ಡ (Malapur Gudda), ಕುಂಬ್ರಿ ಗುಡ್ಡ (Kumbri Gudda), ದೇವಿತೋಟ್ ಗುಡ್ಡ (Devitot Gudda), ಬೈನ್ ಬೊಳೆ ಗುಡ್ಡ (Bainbole Gudda), ಮೆನ್ಸಿ ಗುಡ್ಡ (Mensi Gudda), ಕೋಟಾ ಗುಡ್ಡ (Kota Gudda), ದೊಡ್ಡಬೇಣಾ ಗುಡ್ಡ (Dodbena Gudda), ಅಚ್ಚುವಿಮೋಟಿ ಗುಡ್ಡ (Achuvimoti Gudda), ಹುಯ್ಸಿ ಗುಡ್ಡ (Huisi Gudda), ದೇವಿತ್ ಗುಡ್ಡ (Devit Gudda), ಕುಡ್ಲಿ ಗುಡ್ಡ (Kudli Gudda), ಸಂನ್ಯಾಸಿ ಗುಡ್ಡ (Sanyasi Gudda), ಕೋಟೆ ಗುಡ್ಡ (Kote Gudda), ಕಟಿ ಗುಡ್ಡ (Kati Gudda), ಹುಕಲಿ ಗುಡ್ಡ (Hukali Gudda), ಮಸ್ತಾನಿ ಗುಡ್ಡ (Mastani Gudda), ಹಿನ್ನಿಬರೆ ಗುಡ್ಡ (Hinnibare Gudda), ಚಂದ್ರಗಿರಿ ಬೆಟ್ಟ (Chandragiri Betta), ಕಲ್ಲರಕ್ಕು ಗುಡ್ಡ (Kallaraku Gudda), ಬಿದ್ರುಬನ ಗುಡ್ಡ (Bidrubana Gudda), ಕೆರೆ ಗುಡ್ಡ (Kere Gudda), ಹೀರೆ ಗುಡ್ಡ (Hire Gudda), ದೊಡ್ಡಕುಂಮ್ರಿ ಗುಡ್ಡ (Doddakumari Gudda), ಹೆದ್ದಿ ಗುಡ್ಡ (Hedi Gudda), ಕರೆ ಗುಡ್ಡ (Kare Gudda), ವಡಮಾಲೆ ಗುಡ್ಡ (Vadamale Gudda), ಗಲಿ ಗುಡ್ಡ (Gali Gudda), ಹುಲಿಕಲ್ ಬರೆ (Hullikal Bare), ಅತ್ತಿ ಗುಡ್ಡ (Atti Gudde), ಕೋರ್ಮಾನ್ ಕೊಟ್ಟೆ (Korman Kotte), ಕೊಡಚಾದ್ರಿ (Kodachadri), ಬೆಳಕಾಲು (Belakalu), ಸಂಸೆ (Samshe), ನಾಗನಕಲ್ ಬರೆ (Naganakal Bare), ಮುಲ್ ಗುಡ್ಡ (Mul Gudda), ಮೆಟ್ಟುಕಲ್ಲು ಗುಡ್ಡ (Mettukallu Gudda), ದುರ್ಗದ ಗುಡ್ಡೆ (Durgada Gudde), ಉಮ್ಮಿ ಗುಡ್ಡ (Umi Gudda), ಮುದ್ಕುಂಬ್ರಿ ಬರೆ (Mudkumbri Bare), ಹಂದಿನ್ಮನೆ ಬರೆ (Handinmane Bare), ದೊಡ್ ಗುಡ್ಡ (Dod Gudda), ಕೋಟೆ ಗುಡ್ಡ (Kote Gudda), ಎಲೆಹೊಳೆ ಗುಡ್ಡ (Yelehole Gudda), ಕುಂದದ ಗುಡ್ಡ (Kundada Gudda), ಸೋಮೇಶ್ವರ (Someshwar), ನಿಸಾನಿ ಗುಡ್ಡ (Nisani Gudda), ಕಟ್ಟೆ ಗುಡ್ಡ (Kate Gudda), ಭೀಮನಕಲ್ಲ್ ಗುಡ್ಡೆ (Bhimanakal Gudde), ನರಸಿಂಹಪರ್ವತ (Narasimparvata), ಮನಾಕ್ಕಿಬೆಲಾರ ( Manakkibelara), ಬಿಳಗಲ ಗುಡ್ಡೆ (Bilagal Gudde), ಬೇಗದ್ದ್ ಗುಡ್ಡೆ (Beged Gudde), ವಾಲ್ಕುಂಜಿ (Valkunji), ಆಣೆಕಲ್ಲ್ ಗುಡ್ಡೆ (Anekal Gudde), ತುಳಜಾನ್ಕಲ್ಲ್ ಮೊಟ್ಟಿ (Thulajankal Motte), ಗಂಗ್ರಿ ಕಲ್ (Gangri Kal), ಸೀತಾಭೂಮಿ (Sitabhumi), ಗಡ್ಡಿಕಲ್ ಗುಡ್ಡೆ (Gadikal Gudde), ಕಡಾಮಡ್ಡಿ ಕಲ್ಲು (Kadamadi Kallu), ಕುದುರೆಮುಖ (Kudremukha), ಬಂಗಾರಬಳಿಗ (Bangarabaliga), ನಗರ ಗುಡ್ಡೆ (Nagara Gudda), ಬಲ್ಲರಾಯನದರ್ಗ (Ballarayanadurga), ಬಿಳಿಕಲ್ ದುರ್ಗಡ (Bilikaldurgada), ನೆಡಗಂದ್ದಿ ಬೆಟ್ಟ (Nedagandi Betta), ಜೇನು ಗುಡ್ಡ (Jenu Gudda), ಬಿಳಿಗಲ್ಲು ಗುಡ್ಡ (Bilagalu Gudda), ಏರಿಕಲ್ ಗುಡ್ಡೆ (Yerikal Gudde), ಡೊಂಬ್ರ ಗುಡ್ಡ (Dombra Gudda), ಗಾಳಿ ಗುಡ್ಡ (Gali Gudda), ತೊಟ್ಟಿ ಗುಡ್ಡ (Totti Gudda) ಮತ್ತು ಕರಡಿ ಗುಡ್ಡೆ (Karadi Gudde).

ಕರ್ನಾಟಕದಲ್ಲಿ ಸಾಗುವಾಗ ಈ ಪಶ್ಚಿಮ ಘಟ್ಟಗಳು ಕೆಲವು ಕಡೆಗಳಲ್ಲಿ ಕವಲು ಒಡೆದು ಮತ್ತೆ ಸೇರಿಕೊಂಡು ಮುಂದೆ ಸಾಗುತ್ತವೆ. ಈ ಪಶ್ಚಿಮ ಘಟ್ಟಗಳು ಕವಲು ಒಡೆದು ಮತ್ತೆ ಸೇರಿಕೊಳ್ಳುವ ಮದ್ಯದಲ್ಲಿ ಇರುವ ಪ್ರದೇಶ ನಿಜಕ್ಕೂ ಒಂದು ವಿಸ್ಮಯ ಯಾಕೆಂದರೆ ಇವುಗಳ ಪೂರ್ವಕ್ಕೂ ಘಟ್ಟ ಮತ್ತು ಪಶ್ಚಿಮಕ್ಕೂ ಘಟ್ಟಗಳ ಸಂರಕ್ಷಣಾ ಗೋಡೆಯನ್ನು ಕಾಣಬಹುದು. ಇನ್ನೂ 1639ರಿಂದ 1763ರ ವರೆಗೂ ಇಕ್ಕೇರಿ ನಾಯಕರ ರಾಜಧಾನಿ ಹಾಗೂ ಕರ್ನಾಟಕದ ಕೇಂದ್ರ ಬಿಂದು ಆಗಿದ್ದ ಬಿದನೂರು (ಇಂದಿನ ನಗರ) ಹತ್ತಿರ ಇರುವ ಐತಿಹಾಸಿಕ ಪುರಾಣ ಪ್ರಸಿದ್ಧ ಇಕ್ಕೇರಿ ನಾಯಕರ ಇಷ್ಟ ದೇವತೆ ಶ್ರೀ ಮೂಕಾಂಬಿಕೆ ನೆಲೆಸಿದ ಕ್ಷೇತ್ರ ಕೊಲ್ಲೂರು ಸಹಾ ಮೇಲ್ಕಂಡ ವಿಸ್ಮಯವಾದ ಪ್ರದೇಶದಲ್ಲಿ ಇತ್ತು. ಕೊಲ್ಲೂರು ಕ್ಷೇತ್ರಕ್ಕೆ ಸುತ್ತಲೂ ಸಹ್ಯಾದ್ರಿ ಪರ್ವತ ಶ್ರೇಣಿಯ ಸರ್ಪಗಾವಲು ಮತ್ತು ಇಲ್ಲಿಂದ ಇಕ್ಕೇರಿ ನಾಯಕರ ರಾಜಧಾನಿ ಬಿದನೂರಿಗೆ ಸಂಪರ್ಕಿಸುವ ಘಟ್ಟದ ಮೇಲೆ ಒಂದು ಪ್ರಮುಖ ಕೋಟೆ ಇತ್ತು. ಇನ್ನೂ ಸರಿಸುಮಾರು 80 ಎಕರೆ ವಿಸ್ತೀರ್ಣದ ಈ ಕೋಟೆಯು ದುರ್ಗಮವಾದ ಕಾಡಿನಲ್ಲಿ ಇದ್ದು ಇದನ್ನು ಮುಟ್ಟಲು ಗುಡ್ಡವನ್ನು ಏರಬೇಕಿತ್ತು. ಈ ಕೋಟೆ ಸಮುದ್ರ ಮಟ್ಟದಿಂದ 815 ಮೀಟರ ಎತ್ತರದಲ್ಲಿ ಇದ್ದು ಇದರಲ್ಲಿ ಇಕ್ಕೇರಿ ನಾಯಕರು ಕಟ್ಟಿಸಿದ ಒಂದು ಅದ್ಭುತವಾದ ದೇವಾಲಯ ಇದೆ. ಇನ್ನೂ ಈ ಕೋಟೆ ಇಂದ ಘಟ್ಟದ ರಸ್ತೆ ಮತ್ತು ಶ್ರೀ ಕ್ಷೇತ್ರ ಕೊಲ್ಲೂರನ್ನು ಕಾಯಲು ಸರದಿಯ ಮೇಲೆ ಸೈನಿಕರನ್ನು ನಿಯೋಜನೆ ಮಾಡುತ್ತಿದ್ದರು. ಒಂದು ತುಕಡಿ ಏನಿಲ್ಲವೆಂದರೂ ಸುಮಾರು ಒಂದು ತಿಂಗಳ ಕಾಲ ಅಲ್ಲೆ ಮುಕ್ಕಾಂ ಹೂಡುತ್ತಿತ್ತು ಹಾಗಾಗಿ ಈ ಸೈನಿಕರಿಗೆ ನೀರನ್ನು ಒದಗಿಸಲು ಈ ಕೋಟೆಯಲ್ಲಿ ಸರಿ ಸುಮಾರು 30 ಬಾವಿಗಳ ವ್ಯವಸ್ಥೆ ಮಾಡಲಾಗಿತ್ತು. ಇನ್ನೂ 1800ರ ನಂತರದಿಂದ ಇಕ್ಕೇರಿ ನಾಯಕರು ಪಶ್ಚಿಮ ಘಟ್ಟದ ಉದ್ದಕ್ಕೂ ಕಟ್ಟಿಸಿರುವ ಇಂತಹ ಹಲವಾರು ಕೋಟೆಗಳು ತಮ್ಮ ಮಹತ್ವವನ್ನು ಕಳೆದುಕೊಂಡು ಜನರಿಂದ ಮತ್ತು ಅವರ ನೆನಪಿನ ಅಂಗಳದಿಂದ ಬಹು ದೂರ ಸಾಗಿ ಹೋಗಿದೆ. ಶ್ರೀ ಕ್ಷೇತ್ರ ಕೊಲ್ಲೂರನ್ನು ಬಿದನೂರಿಗೆ ಸಂಪರ್ಕಿಸುವ ಘಟ್ಟದ ತಟ್ಟ ತುದಿಯಲ್ಲಿ ಇರುವ ಈ ವಿಸ್ಮಯ ಕೋಟೆ ಇಂದು ಅರಣ್ಯದಲ್ಲಿ ಮುಚ್ಚಿ ಹೋಗಿದೆ ಅಂದು ಇಕ್ಕೇರಿ ಸೈನಿಕರ ನೆಲೆಯಾಗಿದ್ದ ಈ ಕೋಟೆ ಇಂದು ಹುಲಿ ಹಾಗು ಕರಡಿಯ ವಾಸ ಸ್ಥಾನವಾಗಿದೆ. ನಮ್ಮ ಹೆಮ್ಮೆಯ ಇಕ್ಕೇರಿ ನಾಯಕರು ಕಟ್ಟಿಸಿದ ಈ ಕೋಟೆ ಮತ್ತು ಇದರ ವಿಶೇಷತೆಯನ್ನು ಅಧ್ಯಯನ ಮಾಡಲು ಮತ್ತು ಈ ಕೋಟೆಯಿಂದ ಶ್ರೀ ಕ್ಷೇತ್ರ ಕೊಲ್ಲೂರು ಹಾಗೂ ಘಟ್ಟದ ರಸ್ತೆ ಹೇಗೆ ಕಾಣಿಸುತ್ತದೆ ಎಂದು ನೋಡಲು ಈ ಕ್ಷೇತ್ರ ಅಧ್ಯಯನ ತುಂಬಾ ಮಹತ್ವದಾಗಿದೆ.
ಇದನ್ನೂ ಓದಿ : ‘ಚಾರ್ಲೊಟ್ – ಜೋರ್ಡಿಯನ್ ರ ಸಮಯ ಯಾತ್ರೆಯ ವಿಸ್ಮಯ; ಒಂದು ಶತಮಾನ ಹಿಂದಕ್ಕೆ ಹೋಗಿ ಮರಳಿತಾ ಈ ಜೋಡಿ?
ಲೇಖನ ಮತ್ತು ಚಿತ್ರಗಳು :-
ಅಜಯ್ ಕುಮಾರ್ ಶರ್ಮಾ
ಇತಿಹಾಸ ಅಧ್ಯಯನಕಾರರು ಮತ್ತು ಪರಿಸರ ಹೋರಾಟಗಾರ
ಶಿವಮೊಗ್ಗ
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








