ಇಂದು ನಿರ್ಭಯಾ ಹಂತಕರಿಗೆ ಗಲ್ಲು ಶಿಕ್ಷೆಯಾಗಿದೆ. ಈ ಕ್ಷಣಕ್ಕಾಗಿ ಕೋಟ್ಯಾಂತರ ಭಾರತೀಯರು ಜಾತಕ ಪಕ್ಷಿಯಂತೆ ಕಾಯುತ್ತಿದ್ದರು. ಕೊನೆಗೂ ಇಂದು ಮುಂಜಾನೆ 5.30ಕ್ಕೆ ಕಾಮ ಪಿಚಾಚಿಗಳಿಗೆ ಗಲ್ಲು ಶಿಕ್ಷೆಯಾಗಿದ್ದು, 8 ವರ್ಷಗಳ ಸತತ ಹೋರಾಟಕ್ಕೆ ಕೊನೆಗೂ ವಿಜಯ ದೊರಕಿದಂತಾಗಿದೆ. ಅತ್ತ ನಿರ್ಭಯಾ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆಯಾಗುತ್ತಿದ್ದಂತೆಯೇ, ಇತ್ತ ಪಾಪಿಗಳ ಸಂಹಾರವಾಯಿತೆಂದು ದೇಶದಾದ್ಯಂತ ಸಂಭ್ರಮವನ್ನು ಆಚರಿಸಲಾಗುತ್ತಿದೆ.
ಇಲ್ಲಿ 7 ವರ್ಷ, 3 ತಿಂಗಳ ಸುದೀರ್ಘ ಕಾನೂನು ಹೋರಾಟ ನಡೆಸಿದ ನಿರ್ಭಯಾ ಪೋಷಕರನ್ನು ಮೆಚ್ಚಲೇಬೇಕು. ಆದ್ರೆ ಈ ಹೋರಾಟದಲ್ಲಿ ನಿರ್ಭಯಾ ಪೋಷಕರಿಗೆ ಬೆನ್ನೆಲುಬಾಗಿ ನಿಂತು ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ವಿಧಿಸುವಂತೆ ಮಾಡಿದ ವಕೀಲೆ ಕೂಡ ಓರ್ವ ಹೆಣ್ಣು ಎಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ.
ಹೌದು…! ಹೆಣ್ಣಿನ ಮೇಲೆ ಕನಿಷ್ಠ ಗೌರವ, ಅಭಿಮಾನ ಇಲ್ಲದ ಆರು ಜನ ಕಾಮಪೀಪಾಸುಗಳು 2012ರ ಡಿಸೆಂಬರ್ 16. ಆ ದಿನ ರಾತ್ರಿ ವೈದ್ಯಕೀಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ವಿಕೃತಿ ಮೆರೆದಿದ್ದರು. ಚಲಿಸುವ ಬಸ್ ನಲ್ಲಿ ಆರು ಜನ ಅತ್ಯಾಚಾರವೆಸಗಿ, ಆಕೆಯ ಗುಪ್ತಾಂಗಕ್ಕೆ ರಾಡಿನಿಂದ ಚುಚ್ಚಿ, ಬಸ್ ನಿಂದ ಹೊರಗೆ ದಬ್ಬಿದ್ದರು. ಆಕೆಯನ್ನು ಬದುಕಿಸಿಕೊಳ್ಳಲು ಮನೆಯವರು ಎಷ್ಟೇ ಪ್ರಯತ್ನ ನಡೆಸಿದರೂ ಜೀವನ್ಮರಣದ ನಡುವೆ ಹೋರಾಟ ನಡೆಸಿ ಆಕೆ ಕೊನೆಯುಸಿರೆಳೆದಳು. ಅದಾಗಿ 7 ವರ್ಷ, 3 ತಿಂಗಳ ನಂತರ ಆಕೆಯನ್ನು ಕೊಂದ ಹಂತಕರಿಗೆ ಶಿಕ್ಷೆ ಕೊಡಿಸಿದ್ದು, ಓರ್ವ ಹೆಣ್ಣು ಮಗಳೇ.. ಆಕೆಯ ಹೆಸರು ಸೀಮಾ ಸಮೃದ್ಧಿ ಕುಶ್ವಾಹ.
ಮೊದಲ ಪ್ರಕರಣದಲ್ಲೇ ಜಯ!
ಉತ್ತರ ಪ್ರದೇಶದ ಲಕ್ನೋದವರಾದ ಸೀಮಾ ಅವರಿಗೆ ಇದು ಮೊದಲ ಪ್ರಕರಣ. ಹಂತಕರ ಪರ ವಕೀಲ ಎ.ಪಿ. ಸಿಂಗ್ ಈಗಾಗಲೇ ಅನೇಕ ಕೇಸುಗಳಲ್ಲಿ ಜಯ ಸಾಧಿಸಿರುವ ಅನುಭವಿ . ಆದರೆ, ಅವರ ವಿರುದ್ಧ ನಿರ್ಭಯಾ ಕುಟುಂಬಸ್ಥರ ಪರವಾಗಿ ನಿಂತು, ಮನೆಯ ಮಗಳಂತೆ ನ್ಯಾಯಕ್ಕಾಗಿ ಹೋರಾಡಿದ ಸೀಮಾ ಈ ಕೇಸಿಗಾಗಿ ನಯಾಪೈಸೆ ಸಂಭಾವನೆಯನ್ನೂ ಪಡೆದಿಲ್ಲ. ಸುದೀರ್ಘ 7 ವರ್ಷಗಳ ಕಾಲ ಸಂಪೂರ್ಣ ಉಚಿತವಾಗಿ ನಿರ್ಭಯಾ ಕುಟುಂಬಸ್ಥರ ಪರವಾಗಿ ವಕಾಲತು ವಹಿಸಿರುವ ಸೀಮಾ ಸಮೃದ್ಧಿ ಕುಶ್ವಾಹ ಕೊನೆಗೂ ತಮ್ಮ ಪ್ರಯತ್ನದಲ್ಲಿ ಗೆಲುವು ಕಂಡಿದ್ದಾರೆ.
ನಿರ್ಭಯಾ ಪ್ರಕರಣ ವಿರೋಧಿ ಹೋರಾಡಿದ್ದ ಸೀಮಾ!
ನಿರ್ಭಯಾ ಪ್ರಕರಣ ನಡೆದ ಸಂದರ್ಭದಲ್ಲಿ ದೆಹಲಿ ಯೂನಿವರ್ಸಿಟಿಯಲ್ಲಿ ಕಾನೂನು ಪದವಿ ಪಡೆಯುತ್ತಿದ್ದ ಸೀಮಾ 2012ರಲ್ಲಿ ಕೋರ್ಟ್ ನಲ್ಲಿ ಟ್ರೈನಿಯಾಗಿ ಸೇರಿಕೊಂಡಿದ್ದರು. ನಿರ್ಭಯಾ ಅತ್ಯಾಚಾರ ಪ್ರಕರಣವನ್ನು ವಿರೋಧಿಸಿ ದೆಹಲಿಯಲ್ಲಿ ನಡೆದ ಹೋರಾಟದಲ್ಲಿ ಸೀಮಾ ಕುಶ್ವಾಹ ಕೂಡ ಭಾಗಿಯಾಗಿದ್ದರು. ಆ ವೇಳೆ ನಿರ್ಭಯಾಳ ತಾಯಿಯ ಮನೆಗೆ ಹೋಗಿ ಸಾಂತ್ವಾನ ಹೇಳಿದ ಸೀಮಾ, ತಾನು ಈ ಕೇಸನ್ನು ಉಚಿತವಾಗಿ ನಡೆಸುವುದಾಗಿ ಹೇಳಿದರು. ಸೀಮಾ ತನ್ನ ಮಗಳ ಸಾವಿಗೆ ನ್ಯಾಯ ಕೊಡಿಸುತ್ತಾರೆಂಬ ವಿಶ್ವಾಸದಲ್ಲಿ ನಿರ್ಭಯಾಳ ಕುಟುಂಬಸ್ಥರು ಈ ಕೇಸನ್ನು ಸೀಮಾಗೆ ಒಪ್ಪಿಸಿದರು. ಅದರಂತೆ ಸುದೀರ್ಘ ಕಾನೂನು ಹೋರಾಟದ ಬಳಿಕ ನಿರ್ಭಯಾ ಹಂತಕರಿಗೆ ಶಿಕ್ಷೆಯಾಗಿದೆ.
ಅಂದಹಾಗೆ, ಅನಿವಾರ್ಯವಾಗಿ ವಕೀಲಿ ವೃತ್ತಿಯತ್ತ ವಾಲಿದ ಸೀಮಾ ಈಗ ಐಎಎಸ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದಾರೆ. ಒಟ್ಟಾರೆ ನಿರ್ಭಯಾ ಹಂತಕರಿಗೆ ಶಿಕ್ಷೆ ಕೊಡಿಸುವ ಈ ಹೋರಾಟದಲ್ಲಿ ಸೀಮಾ ಅವರು ಪಟ್ಟ ಶ್ರಮವನ್ನು ನಾವು ಮೆಚ್ಚಲೇಬೇಕು..