ಜಗತ್ತಿನಾದ್ಯಂತ ಕೊರೋನಾ ವೈರಸ್ ತೀವ್ರವಾಗಿ ಹರಡುತ್ತಿದ್ದು, ಜಗತ್ತೇ ಸ್ತಬ್ಧವಾಗಿದೆ. ಬಹುತೇಕ ಎಲ್ಲಾ ಚಟುವಟಿಕೆಗಳು ನಿಂತಿದ್ದು, ಸಿನಿಮಾ ತಾರೆಯರು, ಆಟಗಾರರು ತಮ್ಮ ಮನೆಯಲ್ಲಿ ಪ್ರತ್ಯೇಕವಾಗಿ ಇರುವುದರೊಂದಿಗೆ ತಮ್ಮ ಅಭಿಮಾನಿಗಳಿಗೆ ಕೊರೊನಾ ವಿರುದ್ಧ ಹೋರಾಡಲು ಸಿದ್ಧರಾಗಿ ಎಂದು ಸಂದೇಶ ರವಾನಿಸುತ್ತಿದ್ದಾರೆ.
ಇಂಗ್ಲೆಂಡ್ ಮಾಜಿ ಸ್ಫೋಟಕ ಬ್ಯಾಟ್ಸ್ ಮ್ಯಾನ್ ಕೇವಿನ್ ಪೀಟರ್ಸನ್ ಜಗತ್ತಿನಾದ್ಯಂತ ವ್ಯಾಪಕವಾಗಿ ಹರಡುತ್ತಿರುವ ಕೊರೋನಾ ವೈರಸ್ ವಿರುದ್ಧ ಹೋರಾಡಲು ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಅವರ ದೇಶದ ಮೇಲಿನ ಕಾಳಜಿ ನೋಡಿ ಪ್ರಧಾನಿ ಮೋದಿ ರೀಟ್ವೀಟ್ ಮಾಡಿ ಸಂತಸ ವ್ಯಕ್ತಪಡಿಸಿದ್ದಾರೆ.
ಕೊರೋನಾ ಸೋಂಕಿನ ವಿರುದ್ಧ ಇಂಗ್ಲೆಂಡ್ ಮಾಜಿ ಕ್ರಿಕೆಟಿಗ ಕೇವಿನ್ ಪೀಟರ್ಸನ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ನಮಸ್ಕಾರ ಭಾರತ, ನಾವು ಕೊರೊನಾ ವೈರಸ್ ನ ವಿರುದ್ಧ ಹೋರಾಡಲು ಒಂದಾಗಬೇಕಿದೆ. ನಾವು ನಮ್ಮ ಸರ್ಕಾರ ನೀಡುವ ಆದೇಶದಂತೆ ಸ್ವಲ್ಪ ದಿನಗಳ ಕಾಲ ಮನೆಯಲ್ಲೇ ಇರಬೇಕು. ನಾವೂ ಜಾಗರೂಕತೆಯಿಂದ ಇರಬೇಕಾದ ಸಮಯವಿದು ಎಂದು ಬರೆದುಕೊಂಡಿದ್ದಾರೆ.
ಇಂಗ್ಲೆಂಡ್ ದೇಶದವರಾದ ಕೇವಿನ್ ಪೀಟರ್ಸನ್ ಅವರಿಗೆ ನಮ್ಮ ದೇಶದ ಮೇಲಿರುವ ಕಾಳಜಿ ನೋಡಿ ಮತ್ತು ಹಿಂದಿಯಲ್ಲಿ ಅವರು ಟ್ವೀಟ್ ಮಾಡಿದ್ದನ್ನು ನೋಡಿ ಖುಷಿಯಾದ ಪ್ರಧಾನಿ ಮೋದಿ, ಪೀಟರ್ಸನ್ ಟ್ವೀಟ್ ಗೆ ರೀಟ್ವೀಟ್ ಮಾಡಿದ್ದಾರೆ. ಹಲವು ಬಿಕ್ಕಟ್ಟುಗಳ ಸಮಯದಲ್ಲಿ ತಮ್ಮ ತಂಡವನ್ನು ನೋಡಿದ ಸ್ಫೋಟಕ ಬ್ಯಾಟ್ಸ್ ಮ್ಯಾನ್ ನಮಗಾಗಿ ಏನನ್ನೋ ಹೇಳುತ್ತಿದ್ದಾರೆ ಕೇಳಿ ಎಂದು ಬರೆದು, ನಾವೂ ಕೂಡ ಕೊರೊನಾ ವೈರಸ್ ವಿರುದ್ಧ ಹೋರಾಡಲು ಒಗ್ಗೂಡುತ್ತೇವೆ ಎಂದು ಮೋದಿ ರೀಟ್ವೀಟ್ ಮಾಡಿದ್ದಾರೆ. ಮೋದಿ ಅವರು ಟ್ವೀಟ್ಗೆ ಕೇವಿನ್ ಪೀಟರ್ಸನ್ ರೀಟ್ವೀಟ್ ಮಾಡಿದ್ದು, ಧನ್ಯವಾದಗಳು ಮೋದಿಜೀ, ನಿಮ್ಮ ನಾಯಕತ್ವ ಕೂಡ ಬಹಳ ಸ್ಫೋಟಕವಾಗಿದೆ ಎಂದು ಬರೆದು ಕೊಂಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗಾಗಲೇ ಕೊರೊನಾ ತಡೆಗಟ್ಟಲು ಹಲವಾರು ಕ್ರಮಗಳನ್ನು ಕೈಗೊಂಡಿದೆ. ಈ ಸಂಬಂಧ ಜನರಲ್ಲಿ, ಪ್ರಧಾನಿ ಮೋದಿ ಅವರು ಮಾರ್ಚ್ 22 ರ ಬೆಳಗ್ಗೆ 7 ಗಂಟೆಯಿಂದ ರಾತ್ರಿ 9 ಗಂಟೆಯವರೆಗೆ ಯಾರೂ ಹೊರಗಡೆ ಬರದೇ ಜನರೇ ಜನರಿಗಾಗಿ ಜನತಾ ಕರ್ಫ್ಯೂ ಆಚರಿಸುವಂತೆ ಮನವಿ ಮಾಡಿದ್ದಾರೆ. ನಾವು ಆರೋಗ್ಯವಾಗಿದ್ದರೆ ದೇಶ ಆರೋಗ್ಯದಲ್ಲಿರುತ್ತದೆ ಎಂದು ಕೇಳಿ ಕೊಂಡಿದ್ದಾರೆ.
ಈ ವಿಚಾರವಾಗಿ ಯುವರಾಜ್ ಸಿಂಗ್ ಅವರು ಕೂಡ ಟ್ವೀಟ್ ಮಾಡಿದ್ದು, ನಾವೆಲ್ಲರೂ ಸೇರಿ ನರೇಂದ್ರ ಮೋದಿ ಅವರ ಮನವಿಯನ್ನು ಪಾಲಿಸೋಣ. ನಾವು ಈಗ ಇರುವ ಪರಿಸ್ಥಿತಿ ಮತ್ತು ಕೊರೊನಾ ವೈರಸ್ ವಿರುದ್ಧ ಹೋರಾಡೋಣ. ಆರೋಗ್ಯಕರ ಜಾಗೃತಿ ಮೂಡಿಸಲು ಮತ್ತು ನಮ್ಮ ದೇಶವನ್ನು ಬೆಂಬಲಿಸಲು ಪ್ರತಿಯೊಬ್ಬ ಭಾರತೀಯನೂ ನನ್ನೊಂದಿಗೆ ಸೇರಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ ಎಂದು ಬರೆದುಕೊಂಡಿದ್ದರು.

ಭಾರತದ ಮಾಜಿ ಆಟಗಾರ ಮೊಹಮ್ಮದ್ ಕೈಫ್ ಅವರು ಕೂಡ, ನರೇಂದ್ರ ಮೋದಿ ಅವರು ನಮ್ಮ ದೇಶ ಕೊರೊನಾ ವೈರಸ್ ವಿರುದ್ಧ ಹೋರಾಡಲು ಒಳ್ಳೆಯ ಸಂದೇಶ ಕೊಟ್ಟಿದ್ದಾರೆ. ಮುಂಬರುವ ಸವಾಲುಗಳಿಗೆ ನಮ್ಮನ್ನು ಸಿದ್ಧಪಡಿಸಲು ಮೋದಿ ಜನತಾ ಕರ್ಫ್ಯೂಗೆ ಕರೆಕೊಟ್ಟಿದ್ದಾರೆ. ಅಗತ್ಯವಿರುವ ವಸ್ತುಗಳನ್ನು ಖರೀದಿ ಮಾಡಲು ಭಯಪಡಬೇಡಿ. ನಮ್ಮ ಪ್ರೀತಿ ಪಾತ್ರರು ಮತ್ತು ನಮ್ಮ ದೇಶದ ಜನರ ಯೋಗಕ್ಷೇಮದ ಜವಾಬ್ದಾರಿಯನ್ನು ನಾವು ತೆಗೆದುಕೊಳ್ಳುವ ಸಮಯವಿದು ಎಂದು ಟ್ವೀಟ್ ಮಾಡಿದ್ದಾರೆ.
ಯುವರಾಜ್ ಸಿಂಗ್ ಮತ್ತು ಮೊಹಮ್ಮದ್ ಕೈಫ್ ರವರ ಟ್ವೀಟ್ಗೆ ರೀಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಇಬ್ಬರು ಅತ್ಯುತ್ತಮ ಕ್ರಿಕೆಟಿಗರು ಇಲ್ಲಿದ್ದಾರೆ. ಅವರ ಜೊತೆಯಾಟವನ್ನು ನಾವು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇವೆ. ಈಗ ಅವರು ಹೇಳಿದಂತೆ ಇದು ಮತ್ತೊಂದು ಜೊತೆಯಾಟದ ಸಮಯ. ಈ ಬಾರಿ ಇಡೀ ಭಾರತವೇ ಒಂದು ಒಳ್ಳೆಯ ಜೊತೆಯಾಟವಾಗಿ ಕೊರೊನಾ ವೈರಸ್ ವಿರುದ್ಧದ ಹೋರಾಟ ಮಾಡಬೇಕು ಎಂದು ಹೇಳಿದ್ದಾರೆ.

ಶನಿವಾರ ಭಾರತದ ನಾಯಕ ವಿರಾಟ್ ಕೊಹ್ಲಿ ಮತ್ತು ಅವರ ಪತ್ನಿ ಅನುಷ್ಕಾ ಕೂಡ ವಿಡಿಯೋ ಮುಖಾಂತರ ತಮ್ಮ ಅಭಿಮಾನಿಗಳು ಸಂದೇಶ ನೀಡಿದ್ದರು. ಈಗ ನಾವೆಲ್ಲ ಬಹಳ ಕಠಿಣ ಪರಿಸ್ಥಿತಿಯಲ್ಲಿ ಇದ್ದೇವೆ. ನಾವೆಲ್ಲ ಸೇರಿ ಕೊರೊನಾ ವೈರಸ್ ಅನ್ನು ತಡೆ ಹಿಡಿಯಬೇಕಿದೆ. ನಾವು ನಮ್ಮ ಸುರಕ್ಷತೆಗಾಗಿ ಮನೆಯಲ್ಲಿ ಇದ್ದೇವೆ. ಹಾಗೇ ನೀವು ಕೂಡ ನಿಮ್ಮ ಸುರಕ್ಷತೆಗೆ ಮನೆಯಲ್ಲೇ ಇರಿ. ನಾವೆಲ್ಲರೂ ಸೇರಿ ಕೊರೊನಾ ಹರಡುವಿಕೆಯನ್ನು ತಡೆಯೋಣ. ನಾವಾಗಿಯೇ ಐಸೋಲೇಷನ್ನಲ್ಲಿ ಇರೋಣ ಎಂದು ವಿರುಷ್ಕಾ ಜೋಡಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.








