ಸರ್ಕಾರಕ್ಕೆ ಎಲ್ಲೋ ಏನೋ ಯಡವಟ್ಟಾಗಿದೆ: ಡಿಕೆಶಿ
ಬೆಂಗಳೂರು: ವಿದೇಶಗಳಿಂದ ಬಂದವರಿಂದ ಕೊರೊನಾ ಹರಡುತ್ತಿದೆಯೇ ಹೊರತು ನಮ್ಮ ರಾಜ್ಯದವರು ಎಲ್ಲೂ ಹೋಗಿ ಸೋಂಕು ಹರಡಿಸುತ್ತಿಲ್ಲ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಬೇಸಿಕ್ ಕಾಮನ್ಸೆನ್ಸ್ ಅನ್ನೋದೆ ಇಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ವಾಗ್ದಾಳಿ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಂಗ್ಲೆಂಡ್ ನಿಂದ ಬಂದವರಿಗೆ ರಾಜ್ಯದಲ್ಲಿ ವಿಳಾಸವಿದೆ. ವಿಮಾನ ನಿಲ್ದಾಣದಲ್ಲೇ ಅವರ ಪರೀಕ್ಷೆ ನಡೆಸಲು ಇವರಿಗೆ ಇದ್ದ ಕಷ್ಟವಾದರೂ ಏನು? ಆಡಳಿತದ ವಿಚಾರದಲ್ಲಿ ಈ ಸರ್ಕಾರ ಎಷ್ಟು ವಿಫಲವಾಗಿದೆ ಎಂಬುದಕ್ಕೆ ಇದೇ ಸಾಕ್ಷಿ. ದೇಶದಲ್ಲಿ ಕೊರೊನಾ ಸೋಂಕು ಹರಡಿಸಿದ್ದೇ ಕೇಂದ್ರ ಹಾಗೂ ರಾಜ್ಯದ ಬಿಜೆಪಿ ಸರ್ಕಾರಗಳು.
ಆರಂಭದಲ್ಲೇ ಇದನ್ನು ನಿಯಂತ್ರಿಸಿದ್ದರೆ ಈ ಪರಿಸ್ಥಿತಿ ಬರುತ್ತಿರಲಿಲ್ಲ. ನಮ್ಮ ರಾಜ್ಯದಿಂದ ಯಾರೂ ಕೂಡ ಹೊರಗಿನವರಿಗೆ ಸೋಂಕು ಹರಡಿಸಿಲ್ಲ. ಬೇರೆ ಭಾಗದಿಂದ ಬಂದವರಿಂದಲೇ ಸೋಂಕು ಹರಡಿದೆ. ಅವರನ್ನು ಮೊದಲೇ ಪರೀಕ್ಷಿಸಿ ನಿಯಂತ್ರಣ ಮಾಡಬೇಕಿತ್ತು ಎಂದು ಡಿಕೆಶಿ ಹೇಳಿದ್ದಾರೆ.
ಬಿಎಸ್ವೈ ಸ್ಪಷ್ಟತೆ ನೀಡುವ ಅಗತ್ಯ ಏನಿದೆ?
ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮಗೆ ತಾವೇ ಪ್ರಮಾಣ ಪತ್ರ ಕೊಟ್ಟುಕೊಳ್ಳುತ್ತಿರುವುದೇಕೆ ಎಂದು ಪ್ರಶ್ನಿಸಿರುವ ಡಿಕೆಶಿ `ಸಿಎಂ ಆದವರು ನಾನೇ ಇನ್ನು 2 ವರ್ಷ ಅಧಿಕಾರದಲ್ಲಿರುತ್ತೇನೆ ಎಂದು ಹೇಳುವ ಅಗತ್ಯವೇನಿದೆ. ಅವರ ಅಧಿಕಾರದ ಬಗ್ಗೆ ನಾವು ಪ್ರಶ್ನಿಸಿದ್ದೇವಾ? ಹಾಗಿದ್ದರೂ ಈ ಬಗ್ಗೆ ಸ್ಪಷ್ಟತೆ ನೀಡುವ ಅಗತ್ಯ ಏನಿದೆ?’ ಎಂದು ಡಿ.ಕೆ.ಶಿ ಕಿಡಿಕಾರಿದ್ದಾರೆ.
`ಬಿಜೆಪಿ ಶಾಸಕರೇ ಬೇರೆ ನಾಯಕತ್ವದ ಬಗ್ಗೆ ಮಾತನಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ತಮಗೆ ತಾವೇ ಪ್ರಮಾಣ ಪತ್ರ ಕೊಟ್ಟುಕೊಳ್ಳುವ ಸ್ಥಿತಿ ಎದುರಾಗಿದೆ ಎಂದರೆ, ಎಲ್ಲೋ ಏನೋ ಯಡವಟ್ಟಾಗಿದೆ, ಅಪಾಯ ಎದುರಾಗಿದೆ ಎಂಬ ಅನುಮಾನ ಮೂಡುತ್ತದೆ ಎಂದಿದ್ದಾರೆ.
ಗ್ರಾಮ ಪಂಚಾಯಿತಿ ಫಲಿತಾಂಶ ಸಮಾಧಾನ
ಗ್ರಾಮ ಪಂಚಾಯಿತಿ ಫಲಿತಾಂಶದಿಂದ ನಮಗೆ ಸಮಾಧಾನವಾಗಿದೆ. ಈ ಚುನಾವಣೆಯಲ್ಲಿ ಎಷ್ಟೇ ಹಣದ ದುರುಪಯೋಗವಾಗಿದ್ದರೂ, ಬೇರೆ ಒತ್ತಡವಿದ್ದರೂ ನಮ್ಮ ಪಕ್ಷದ ಕಾರ್ಯಕರ್ತರು ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದಾರೆ. ಇದು ಪಕ್ಷಾತೀತ ಚುನಾವಣೆಯಾದರೂ ಪಂಚಾಯ್ತಿಯಿಂದ ಸಂಸತ್ತಿನವರೆಗಿನ ಪಕ್ಷ ರಾಜಕಾರಣವನ್ನು ತಪ್ಪಿಸಲು ಯಾರಿಗೂ ಸಾಧ್ಯವಿಲ್ಲ. ಹೀಗಾಗಿ ಈ ಫಲಿತಾಂಶದಿಂದ ನಮಗೆ ಸಮಾಧಾನವಿದೆ. ಅಧಿಕಾರವಿದೆ ಎಂದು ಕೆಲವರು ನಮ್ಮವರನ್ನು ಕರೆದುಕೊಂಡು ಹೋಗಲು ಪ್ರಯತ್ನಿಸುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದರೂ ನಮಗೆ ಉತ್ತಮ ಫಲಿತಾಂಶ ಸಿಕ್ಕಿದೆ. ಹಳ್ಳಿ ಜನ ಆಪರೇಷನ್ ರಾಜಕಾರಣದ ಬಗ್ಗೆ ತಲೆ ಕೆಡಿಸಿಕೊಳ್ಳಲ್ಲ ಎಂದರು.
ಈ ತಿಂಗಳ 5ರಿಂದ 18ರವರೆಗೂ ಪ್ರವಾಸದಲ್ಲಿರುತ್ತೇನೆ. ಬ್ಲಾಕ್ ಅಧ್ಯಕ್ಷರನ್ನು ಭೇಟಿ ಮಾಡಿ ಅವರ ಧ್ವನಿಯನ್ನು ಆಲಿಸಲು ನಿರ್ಧರಿಸಿದ್ದೇನೆ. 2021ರ ವರ್ಷ ನಮ್ಮ ಪಕ್ಷಕ್ಕೆ ಸಂಘಟನೆಯ ವರ್ಷ. ಸ್ಥಳೀಯವಾಗಿ ಏನೇನು ಸಮಸ್ಯೆ ಇದೆ ಎಂದು ಗಮನದಲ್ಲಿಟ್ಟುಕೊಂಡು ನಾವು ಹೋರಾಟ ಮಾಡುತ್ತೇವೆ.
ಶಾಲೆ ಆರಂಭವಾಗಬೇಕು
ಶಾಲೆ ಮುಚ್ಚಬೇಕು ಎಂದು ನಾನು ಹೇಳುವುದಿಲ್ಲ. ಶಾಲೆ ತೆರೆಯಬೇಕು. ಕೋವಿಡ್ ನಿಯಮ ಪಾಲಿಸಲಿ. ಮಕ್ಕಳಿಗೆ ವಿದ್ಯಾಭ್ಯಾಸ ಅಂತರವಿದ್ದರೆ ಕಲಿಕೆ ಗುಣಮಟ್ಟ ಕುಗ್ಗುತ್ತದೆ. ಶಿಕ್ಷಣ ಮೂಲಭೂತ ಅಗತ್ಯ ಆಗಿರುವುದರಿಂದ ಸರ್ಕಾರ ಶಾಲೆ ಆರಂಭಿಸಿದರೆ ನಾವು ಅದನ್ನು ವಿರೋಧಿಸುವುದಿಲ್ಲ.
ಹೊಸ ವರ್ಷದ ಶುಭಾಶಯಗಳು
ಹೊಸ ವರ್ಷದ ಹಿನ್ನೆಲೆಯಲ್ಲಿ ರಾಜ್ಯದ ಮಹಾಜನತೆಗೆ ಶುಭಾಶಯಗಳು. ಕಳೆದ ವರ್ಷ ಕೋವಿಡ್ ನಿಂದ ಇಡೀ ದೇಶ ಹಾಗೂ ಪ್ರಪಂಚಕ್ಕೆ ಎದುರಾಗಲಗಿದ್ದ ಆರ್ಥಿಕ, ಆರೋಗ್ಯದ ವಿಘ್ನಗಳೆಲ್ಲವೂ ನಿವಾರಣೆ ಆಗಲಿ ಎಂದು ತಾಯಿ ಚಾಮುಂಡೇಶ್ವರಿ ಹಾಗೂ ರಾಜ್ಯದಲ್ಲಿರುವ ಎಲ್ಲ ಗ್ರಾಮ ದೇವತೆಗಳು ಹಾಗೂ ಎಲ್ಲ ಧರ್ಮ ಪೀಠಗಳು ಹಾಗೂ ಗುರು ಹಿರಿಯರಲ್ಲಿ ನಾನು ಪ್ರಾರ್ಥನೆ ಮಾಡುತ್ತೇನೆ ಡಿಕೆಶಿ ತಿಳಿಸಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








