ಇನ್ನೂ 20 ವರ್ಷ ದೇಶದಲ್ಲಿ ಬಿಜೆಪಿ ಅಧಿಕಾರದಲ್ಲಿರುತ್ತದೆ : ಪ್ರಹ್ಲಾದ್ ಜೋಶಿ
ಬೆಳಗಾವಿ : ದೇಶದಲ್ಲಿ ಮುಂದಿನ 20 ವರ್ಷ ಬಿಜೆಪಿ ಅಧಿಕಾರದಲ್ಲಿ ಇರುತ್ತದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಲೋಕಸಭಾ ಉಪಚುನಾವಣಾ ಪ್ರಚಾರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ಅಲ್ಲದೆ ರಾಹುಲ್ ಗಾಂಧಿ ಅವರು ಬೆಳಗಾವಿಯಲ್ಲಿ ಪ್ರಚಾರ ನಡೆಸಿದರೇ ಬಿಜೆಪಿ ಅಭ್ಯರ್ಥಿ ಐದಾರು ಲಕ್ಷ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದು ಹೇಳಿಕೆ ನೀಡಿದರು.
ಕಾಂಗ್ರೆಸ್ ಪಕ್ಷ ದೇಶದ ರಕ್ಷಣೆ, ಸಮಗ್ರತೆ ಪ್ರಶ್ನೆ ಬಂದಾಗ ವಿದೇಶಗಳೊಂದಿಗೆ ರಾಜಿ ಮಾಡಿಕೊಂಡ ಅನೇಕ ಉದಾಹರಣೆಗಳಿವೆ.
ದೇಶದ ಹಿತದ ವಿರುದ್ಧವಾದ ಒಂದು ಪಕ್ಷ ಇದ್ದರೆ ಅದು ಕಾಂಗ್ರೆಸ್ ಪಕ್ಷ ಮಾತ್ರ.
ದೇಶದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ಸರ್ಕಾರ ಬರಲು ಸಾಧ್ಯವೇ ಇಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಪ್ರಹ್ಲಾದ್ ಜೋಶಿ ವ್ಯಂಗ್ಯವಾಡಿದರು.
ಇನ್ನು ಸತೀಶ್ ಜಾರಕಿಹೊಳಿಯನ್ನ ಕಾಂಗ್ರೆಸ್ ಪಕ್ಷ ಒತ್ತಾಯಪೂರ್ವಕವಾಗಿ ಚುನಾವಣೆಗೆ ನಿಲ್ಲಿಸಿದೆ. ಸತೀಶ್ ಜಾರಕಿಹೊಳಿ ಗೆಲ್ಲುವ ಪ್ರಶ್ನೆ ಇಲ್ಲ.
ಒಂದು ವೇಳೆ ಗೆದ್ದರೆ, ಪಾರ್ಲಿಮೆಂಟ್ ನಲ್ಲಿ ಸದನದ ಬಾವಿಯೊಳಗಿಳಿದು ಮೋದಿ ವಿರುದ್ಧ ಧಿಕ್ಕಾರ ಎಂದು 51 ಜನ ಕೂಗುತ್ತಿರುತ್ತಾರೆ.
ಅವರೊಂದಿಗೆ ಇವರು 52ನೇಯವರಾಗಿ ಸೇರಿಕೊಳ್ಳುತ್ತಾರೆ ಎಂದು ಲೇವಡಿ ಮಾಡಿದರು.










