ಮಧ್ಯಪ್ರದೇಶದ ಹಿರಿಯ ಕಾಂಗ್ರೆಸ್ ನಾಯಕ ಅಜೀಜ್ ಖುರೇಷಿ ಅವರು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮುಸ್ಲಿಂರನ್ನು ಗುಲಾಮರಂತೆ ನೋಡಲಾಗುತ್ತಿದೆ ಎಂದು ತಮ್ಮದೇ ಪಕ್ಷದ ವಿರುದ್ಧ ಹರಿಹಾಯ್ದಿದ್ದಾರೆ. ಕಾಂಗ್ರೆಸ್ ಹಿಂದುತ್ವದ ಆಟ ಆಡುತ್ತಿದೆ ಎಂದು ಆರೋಪಿಸಿದ್ದಾರೆ. ಉತ್ತರ ಪ್ರದೇಶದ ರಾಜ್ಯಪಾಲರಾಗಿ, ಮಧ್ಯಪ್ರದೇಶದಲ್ಲಿ ಸಚಿವರಾಗಿ ಹಾಗೂ ಲೋಕಸಭಾ ಸಂಸದರಾಗಿ ಸೇವೆ ಸಲ್ಲಿಸಿರುವ 82 ವರ್ಷದ ಅಜೀಜ್ ಖುರೇಷಿ, ಮಾಜಿ ಪ್ರಧಾನಿ ರಾಜೀವ್ ಗಾಂಧಿ ಜನ್ಮದಿನೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಈ ರೀತಿ ಮಾತನಾಡಿದ್ದಾರೆ. ಅವವರ ಆದೇಶಗಳಿಗೆ ಅನುಗುಣವಾಗಿ ಕುಣಿಯಲು ಮುಸ್ಲಿಮರು ಗುಲಾಮರಲ್ಲ. ಅವರ ಅಪ್ಪಣೆಗೆ ಅನುಗುಣವಾಗಿ ಕೆಲಸ ಮಾಡುವಂತಹ ಜೀತದಾಳುಗಳಲ್ಲ ಎಂಬುದನ್ನು ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷಗಳೂ ಅರ್ಥಮಾಡಿಕೊಳ್ಳಬೇಕು ಎಂದು ಕಿಡಿಕಾರಿದ್ದಾರೆ.
ಮುಸ್ಲಿಂರ ಅಂಗಡಿಗಳು, ಪ್ರಾರ್ಥನಾ ಸ್ಥಳಗಳು ಮತ್ತು ಮನೆಗಳನ್ನು ಸುಟ್ಟು ಹಾಕಲಾಗುತ್ತಿದೆ. ಅವರ ಮಕ್ಕಳು ಅನಾಥರಾಗುತ್ತಿದ್ದಾರೆ. ಅವರು ಒಂದು ಹಂತದವರೆಗೂ ಇದನ್ನು ಸಹಿಸಿಕೊಳ್ಳಬಲ್ಲರು. ಅವರು ಹೇಡಿಗಳಲ್ಲ. ಇದು ಮಿತಿಯನ್ನು ಮೀರಿದರೆ, 22 ಕೋಟಿ ಮುಸ್ಲಿಮರಲ್ಲಿ ಒಂದು ಅಥವಾ ಎರಡು ಕೋಟಿ ಜನರು ತಮ್ಮ ಜೀವ ಕಳೆದುಕೊಳ್ಳುವುದರಲ್ಲಿ ಯಾವ ಸಮಸ್ಯೆಯೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.