ಚಿಕ್ಕಮಗಳೂರು: ಬಾಲಕಿಯೊಂದಿಗೆ ಸುತ್ತಾಡುತ್ತಿದ್ದ ಅನ್ಯ ಕೋಮಿನ ಯುವಕನನ್ನು ಥಳಿಸಿರುವ ಘಟನೆಯೊಂದು ನಡೆದಿದೆ.
ಭಜರಗಂದಳದ ಕಾರ್ಯಕರ್ತರು ಹಲ್ಲೆ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 7 ಜನರನ್ನು ಪೊಲೀಸರು ಬಂಧಿಸಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಲವ್ ಜಿಹಾದ್ (Love Jihad) ಸದ್ದು ಮಾಡುತ್ತಿದೆ. ಈ ಘಟನೆ ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹೀಗಾಗಿ ಪಟ್ಟಣದಲ್ಲಿ ಬಿಗಿ ಪೊಲೀಸ್ ಭದ್ರತೆ ವ್ಯವಸ್ಥೆ ಮಾಡಲಾಗಿದೆ. ಉಜಿರೆ ಖಾಸಗಿ ಕಾಲೇಜಿನಲ್ಲಿ ಡ್ಯಾನ್ಸ್ ಮಾಸ್ಟರ್ ಆಗಿರುವ ರೂಮನ್ ಆಲ್ದೂರು ಹತ್ತಿರದ ಗಾಳಿಗಂಡಿ ನಿವಾಸಿ. ಈತ ಅಪ್ರಾಪ್ತ ಬಾಲಕಿಯ ಜೊತೆ ಸುತ್ತಾಡುತ್ತಿದ್ದ ಎಂಬ ಆರೋಪ ಕೇಳಿ ಬಂದಿದೆ. ಈತನ ಫೋಟೋ ಹಾಗೂ ವಿಡಿಯೋ ಕೂಡ ವೈರಲ್ ಆಗಿದ್ದವು. ಇದರ ಬೆನ್ನಲ್ಲಿಯೇ ಭಜರಂಗದಳ ಕಾರ್ಯಕರ್ತರು ರೂಮನ್ನನ್ನು ಆಲ್ದೂರಿಗೆ ಕರೆಸಿ ಕಿಡ್ನಾಪ್ ಮಾಡಿ ಹಲ್ಲೆ ನಡೆಸಿದ್ದಾರೆ ಎಂದು ಆತ ದೂರು ದಾಖಲಿಸಿದ್ದಾನೆ.
ಇನ್ನೊಂದೆಡೆ ರೂಮನ್ ವಿರುದ್ಧ ಅಪ್ರಾಪ್ತ ಬಾಲಕಿಯ ಪೋಷಕರು ದೂರು ದಾಖಲಿಸಿದ್ದಾರೆ. ರೂಮನ್ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಹಲ್ಲೆ ನಡೆಸಿರುವ ಭಜರಂಗದಳ ಕಾರ್ಯಕರ್ತರನ್ನು ಬಂಧಿಸಿದ್ದಾರೆ. ಜಿಲ್ಲಾ ಸಂಚಾಲಕ ಸಿ.ಡಿ. ಶಿವಕುಮಾರ್, ಸ್ವರೂಪ್, ಕಾರ್ತಿಕ್, ಮಧು, ರಂಜಿತ್, ಪರೀಕ್ಷಿತ್, ಪ್ರಜ್ವಲ್ ಬಂಧಿತರು ಎನ್ನಲಾಗಿದೆ.