ಮೂವರು ದುಷ್ಕರ್ಮಿಗಳು ಕೋತಿಗೆ ಅಮಾನುಷವಾಗಿ ಕಲ್ಲಿನಿಂದ ಹೊಡೆದು ಕೊಂದಿದ್ದು , ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ನೆಟ್ಟಿಗರು ತೀವ್ರ ಆಕ್ರೋಶ ಹೊರಹಾಕಿದ್ದಾರೆ.. ಇದೀಗ ಮೂವರು ಆರೋಪಿಗಳನ್ನೂ ಬಂಧಿಸಲಾಗಿದೆ.. ಅಂದ್ಹಾಗೆ ಈ ಘಟನೆ ಉತ್ತರ ಪ್ರದೇಶದ ಅಮೇಥಿಯಲ್ಲಿ ನಡೆದಿದೆ..
ಸಂಗಮ್, ರಾಧೆ ಮತ್ತು ಸೂರಜ್ ಎಂಬ ಮೂವರು ಯುವಕರನ್ನು ಅರೆಸ್ಟ್ ಮಾಡಲಾಗಿದೆ.. ಪಿಪರ್ ಪುರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.. ಈ ಮೂವರು ಯುವಕರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 147, ಪೊಲೀಸ್ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಕ್ಕಾಗಿ ಸೆಕ್ಷನ್ 223 ಮತ್ತು ಪ್ರಾಣಿಯನ್ನು ಕೊಂದ ಅಥವಾ ಅಂಗವಿಕಲಗೊಳಿಸುವ ಮೂಲಕ ದುಷ್ಕೃತ್ಯ ಎಸಗಿದ್ದಕ್ಕಾಗಿ ಸೆಕ್ಷನ್ 429 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಕೋತಿಯನ್ನು ರಕ್ಷಿಸಲು ಯತ್ನಿಸಿದ ದೇವೇಂದ್ರ ಸಿಂಗ್ ಎಂಬಾತನ ದೂರಿನ ಮೇರೆಗೆ FIR ದಾಖಲಿಸಲಾಗಿದೆ. ಅಮೇಥಿಯ ಪಿಪರ್ ಪುರ ಪೊಲೀಸ್ ವೃತ್ತದ ವ್ಯಾಪ್ತಿಯ ದುರ್ಗಾಪುರ ಮಾರುಕಟ್ಟೆಯ ಬಿಯರ್ ಅಂಗಡಿಯ ಬಳಿ ಈ ಘಟನೆ ನಡೆದಿದೆ.
ಮದ್ಯದ ಅಮಲಿನಲ್ಲಿದ್ದ ಮೂವರು ಯುವಕರು ಬಿಯರ್ ಶಾಪ್ನಿಂದ ಹೊರ ಬಂದಾಗ ಕೋತಿ ಗಾಯಗೊಂಡು ಶಾಪ್ ಬಳಿ ರಸ್ತೆಬದಿಯಲ್ಲಿ ಕುಳಿತಿತ್ತು. ಗಾಯಗೊಂಡಿದ್ದ ಕೋತಿ ಚಲನರಹಿತವಾಗುವವರೆಗೂ ದಾಳಿ ಮಾಡುತ್ತಿದ್ದರು ಎಂದು ವರದಿಯಾಗಿದೆ. ಪೊಲೀಸರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಶವವನ್ನು ವಿಲೇವಾರಿ ಮಾಡಿದ್ದಾರೆ.