ರಾಜಕೀಯದಲ್ಲಿ ಯಾರು ಶತ್ರುಗಳಲ್ಲ, ಯಾರು ಮಿತ್ರರಲ್ಲ ಎಂಬ ಮಾತಿಗೆ ಮಧ್ಯಪ್ರದೇಶದ ಈಗಿನ ರಾಜಕೀಯ ಬೆಳವಣಿಗೆಗಳೇ ಸಾಕ್ಷಿ. ದಶಕಗಳಿಂದ ಬಿಜೆಪಿಯ ಕಡುವೈರಿಯಾಗಿದ್ದ ಕಾಂಗ್ರೆಸ್ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಅವರನ್ನು ಈಗ ಬಿಜೆಪಿ ನಾಯಕರು ಹಾಡಿ ಹೊಗಳುತ್ತಿದ್ದಾರೆ. ಅಷ್ಟೇ ಅಲ್ಲದೆ, ಬಿಜೆಪಿಗೆ ಬಂದರೆ ಅವರನ್ನು ರಾಜರಂತೆ ನಡೆಸಿಕೊಳ್ಳುತ್ತೇವೆ ಎಂಬ ಆಫರ್ ಕೂಡ ನೀಡುತ್ತಿದ್ದಾರೆ. ಈ ಹಠಾತ್ ಬದಲಾವಣೆಯ ಹಿಂದೆ ಕಾಂಗ್ರೆಸ್ ಮನೆಯೊಳಗಿನ ಬೆಂಕಿ ಮತ್ತು ಬಿಜೆಪಿಯ ಚಾಣಕ್ಯ ತಂತ್ರ ಅಡಗಿದೆ.
ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿಸಿದ ಸ್ವಪಕ್ಷದ ನಾಯಕನ ಹೇಳಿಕೆ
ಈ ಎಲ್ಲಾ ಗೊಂದಲಗಳಿಗೆ ನಾಂದಿ ಹಾಡಿದ್ದು ಮಧ್ಯಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಜಿತು ಪಟವಾರಿ ಅವರ ಒಂದು ಆರೋಪ. ಉಜ್ಜಯಿನಿಯ ವೀರ ಭಾರತ ನ್ಯಾಸ್ ಟ್ರಸ್ಟ್ ಗೆ ಸುಮಾರು 500 ಕೋಟಿ ರೂಪಾಯಿ ಮೌಲ್ಯದ ಸರ್ಕಾರಿ ಜಮೀನನ್ನು ಕೇವಲ 1 ರೂಪಾಯಿಗೆ ನೀಡುವ ಮೂಲಕ ಮುಖ್ಯಮಂತ್ರಿ ಮೋಹನ್ ಯಾದವ್ ಭ್ರಷ್ಟಾಚಾರ ಎಸಗಿದ್ದಾರೆ ಎಂದು ಪಟವಾರಿ ವಾಗ್ದಾಳಿ ನಡೆಸಿದ್ದರು. ಆದರೆ, ಪಕ್ಷದ ಅಧ್ಯಕ್ಷರ ಈ ಆರೋಪಕ್ಕೆ ಸ್ವತಃ ಕಾಂಗ್ರೆಸ್ ನ ಹಿರಿಯ ನಾಯಕ ದಿಗ್ವಿಜಯ್ ಸಿಂಗ್ ಟಾಂಗ್ ನೀಡಿದರು. ಆ ಜಮೀನನ್ನು ಖಾಸಗಿ ಟ್ರಸ್ಟ್ ಗೆ ನೀಡಿಲ್ಲ, ಅದು ಸರ್ಕಾರಿ ಟ್ರಸ್ಟ್ ಆಗಿದೆ. ಸರಿಯಾದ ದಾಖಲೆಗಳಿಲ್ಲದೆ ಮಾತನಾಡುವ ದಲ್ಲಾಳಿಗಳಿಗೆ ಕೊರತೆಯಿಲ್ಲ ಎಂದು ಹೇಳುವ ಮೂಲಕ ತಮ್ಮದೇ ಪಕ್ಷದ ಅಧ್ಯಕ್ಷರನ್ನು ಮುಜುಗರಕ್ಕೆ ಈಡುಮಾಡಿದರು.
ದಿಗ್ವಿಜಯ್ ಸಿಂಗ್ ನೀಡಿದ ಈ ಹೇಳಿಕೆಯನ್ನು ಬಿಜೆಪಿ ತಕ್ಷಣವೇ ಅಸ್ತ್ರವನ್ನಾಗಿ ಬಳಸಿಕೊಂಡಿತು. ಪ್ರತಿ ಬಾರಿ ದಿಗ್ವಿಜಯ್ ಸಿಂಗ್ ಅವರನ್ನು ಟೀಕಿಸುತ್ತಿದ್ದ ಬಿಜೆಪಿ ವಕ್ತಾರರು, ಈ ಬಾರಿ ಅವರ ಪ್ರಾಮಾಣಿಕತೆ ಮತ್ತು ದಾಖಲೆಗಳನ್ನು ಪರಿಶೀಲಿಸುವ ಗುಣವನ್ನು ಶ್ಲಾಘಿಸಿದರು. ಒಂದು ಹೆಜ್ಜೆ ಮುಂದೆ ಹೋದ ಬಿಜೆಪಿ ಶಾಸಕ ಪ್ರೀತಂ ಲೋಧಿ, ದಿಗ್ವಿಜಯ್ ಸಿಂಗ್ ಒಬ್ಬ ದೊಡ್ಡ ನಾಯಕ, ಅವರನ್ನು ಕಾಂಗ್ರೆಸ್ ನಲ್ಲಿ ಗೌರವಿಸುತ್ತಿಲ್ಲ. ಅವರು ಬಿಜೆಪಿಗೆ ಬಂದರೆ ನಾವು ಅವರನ್ನು ರಾಜರಂತೆ ನಡೆಸಿಕೊಳ್ಳುತ್ತೇವೆ ಎಂದು ಬಹಿರಂಗವಾಗಿ ಆಹ್ವಾನ ನೀಡಿದರು. ಇದು ರಾಜ್ಯ ರಾಜಕಾರಣದಲ್ಲಿ ದೊಡ್ಡ ಸಂಚಲನ ಮೂಡಿಸಿದೆ.
ಮಗನ ಭವಿಷ್ಯಕ್ಕಾಗಿ ಹೊಂದಾಣಿಕೆಯ ರಾಜಕಾರಣವೇ?
ಕಾಂಗ್ರೆಸ್ ವಲಯದಲ್ಲಿ ಕೇಳಿಬರುತ್ತಿರುವ ಮತ್ತೊಂದು ಗಂಭೀರ ಆರೋಪವೆಂದರೆ, ದಿಗ್ವಿಜಯ್ ಸಿಂಗ್ ಅವರು ತಮ್ಮ ಮಗನ ರಾಜಕೀಯ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಬಿಜೆಪಿ ಸರ್ಕಾರದ ವಿರುದ್ಧ ಮೃದು ಧೋರಣೆ ತಳೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಮುಖ್ಯಮಂತ್ರಿಗಳ ವಿರುದ್ಧದ ಭ್ರಷ್ಟಾಚಾರದ ಅಭಿಯಾನವನ್ನು ದಿಗ್ವಿಜಯ್ ಸಿಂಗ್ ಅವರೇ ಹಳ್ಳ ಹಿಡಿಸುತ್ತಿದ್ದಾರೆ ಎಂದು ಕೆಲವು ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಆಂತರಿಕ ಕಲಹ ಬಿಜೆಪಿಗೆ ವರದಾನವಾಗಿ ಪರಿಣಮಿಸಿದೆ.
ಡ್ಯಾಮೇಜ್ ಕಂಟ್ರೋಲ್ ಗೆ ಇಳಿದ ಕಾಂಗ್ರೆಸ್ ನಾಯಕರು
ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡ ಕಾಂಗ್ರೆಸ್ ಹೈಕಮಾಂಡ್ ತಕ್ಷಣ ಎಚ್ಚೆತ್ತುಕೊಂಡಿತು. ದಿಗ್ವಿಜಯ್ ಸಿಂಗ್ ಮತ್ತು ಜಿತು ಪಟವಾರಿ ಅವರನ್ನು ಒಂದೇ ವೇದಿಕೆಗೆ ಕರೆತಂದು ಒಗ್ಗಟ್ಟು ಪ್ರದರ್ಶಿಸಲು ಸೂಚಿಸಿತು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ದಿಗ್ವಿಜಯ್ ಸಿಂಗ್, ಜಿತು ಪಟವಾರಿ ನನಗೆ ಮಗನಿದ್ದಂತೆ, ನಾನು ಅವರ ವಿರುದ್ಧ ದಲ್ಲಾಳಿ ಎಂಬ ಪದ ಬಳಸಿಲ್ಲ ಎಂದು ಸ್ಪಷ್ಟನೆ ನೀಡುವ ಮೂಲಕ ಹತ್ತಿಕೊಂಡಿದ್ದ ಬೆಂಕಿಯನ್ನು ಆರಿಸುವ ಪ್ರಯತ್ನ ಮಾಡಿದರು.
ಒಟ್ಟಿನಲ್ಲಿ, ಕಾಂಗ್ರೆಸ್ ನೊಳಗಿನ ಭಿನ್ನಮತವನ್ನು ಬಳಸಿಕೊಂಡು ಬಿಜೆಪಿಯು ದಿಗ್ವಿಜಯ್ ಸಿಂಗ್ ಅವರಿಗೆ ರಾಜ ಮರ್ಯಾದೆಯ ಆಮಿಷವೊಡ್ಡುವ ಮೂಲಕ ಕಾಂಗ್ರೆಸ್ ಪಕ್ಷದ ವಿಶ್ವಾಸಾರ್ಹತೆಯನ್ನು ಕುಗ್ಗಿಸಲು ಯಶಸ್ವಿಯಾಗಿದೆ. ಶತ್ರುವಿನ ಶತ್ರು ಮಿತ್ರ ಎಂಬಂತೆ, ಈಗ ಬಿಜೆಪಿ ಮತ್ತು ದಿಗ್ವಿಜಯ್ ಸಿಂಗ್ ನಡುವಿನ ಈ ವಿಚಿತ್ರ ಸೌಹಾರ್ದತೆ ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆಯುತ್ತದೆ ಎಂಬುದನ್ನು ಕಾದು ನೋಡಬೇಕಿದೆ.







