ಮೈಸೂರು: ಇತ್ತೀಚೆಗೆ ಹುಲಿ, ಚಿರತೆಗಳ ದಾಳಿ ಹೆಚ್ಚಾಗುತ್ತಿದ್ದು, ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು ಜನ-ಜಾನುವಾರುಗಳ ಮೇಲೆ ದಾಳಿ ಮಾಡುತ್ತಿರುವುದು ಸಾಮಾನ್ಯವಾಗಿ ಬಿಟ್ಟಿದೆ. ಹೀಗಾಗಿ ಕಾಡಿನಂಚಿನಲ್ಲಿನ ಜನರು ಕೈಯಲ್ಲಿ ಜೀವ ಹಿಡಿದುಕೊಂಡು ಬದುಕು ಸಾಗಿಸುವಂತಾಗುತ್ತಿದೆ.
ದನ ಮೇಯಿಸಲು ಹೋಗಿದ್ದ ರೈತನೊಬ್ಬ ಹುಲಿ ದಾಳಿಗೆ ಬಲಿಯಾಗಿರುವ ಘಟನೆ ಜಿಲ್ಲೆಯ ಬಿ.ಮಟಕೆರೆ-ಹೊಸಕೋಟೆ ರಸ್ತೆಯಲ್ಲಿ ನಡೆದಿದೆ. ಬಾಲಾಜಿ ನಾಯಕ್ (42) ಸಾವನ್ನಪ್ಪಿದ ವ್ಯಕ್ತಿ ಎನ್ನಲಾಗಿದ್ದು, ಅರಣ್ಯ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಸಾವನ್ನಪ್ಪಿದ ವ್ಯಕ್ತಿಯು ದನ ಮೇಯಿಸಲು ತೆರಳಿದ್ದರು. ಈ ಸಂದರ್ಭದಲ್ಲಿ ಹುಲಿ ದನಗಳ ಮೇಲೆ ದಾಳಿ ನಡೆಸಿದೆ. ಆಗ ದನಗಳು ಹುಲಿಗೆ ಸಿಗದೆ ಓಡಿ ಹೋಗಿವೆ. ಆಗ ಹುಲಿ ಬಾಲಾಜಿ ಮೇಲೆಯೇ ದಾಳಿ ಮಾಡಿದೆ. ಇದನ್ನು ಗಮನಿಸಿದ ಅಕ್ಕ ಪಕ್ಕದ ಜಮೀನಿಲ್ಲಿದ್ದವರು ಕೂಗಾಡಿದ್ದಾರೆ. ಅಷ್ಟರಲ್ಲಿ ದೇಹದ ಕೆಲವು ಭಾಗ ತಿಂದು, ಓಡಿ ಹೋಗಿದೆ. ಸ್ಥಳಕ್ಕೆ ಪೊಲೀಸರು, ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ, ಹುಲಿಗಾಗಿ ಬಲೆ ಬೀಸಿದ್ದಾರೆ.