ದಾವಣಗೆರೆ: ಕ್ಷುಲ್ಲಕ ಕಾರಣಕ್ಕೆ ಮಕ್ಕಳ ಮೇಲೆ ದೊಣ್ಣೆಯಿಂದ ತಾಯಿ ಹಲ್ಲೆ ನಡೆಸಿ ಸಾವಿಗೆ ಕಾರಣವಾಗಿರುವ ಘಟನೆ ನಡೆದಿದೆ.
ಈ ಘಟನೆ ಜಿಲ್ಲೆಯ ಹರಪ್ಪನಹಳ್ಳಿ (Harapanahalli) ತಾಲ್ಲೂಕಿನ ಹುಲಿಕಟ್ಟೆಯಲ್ಲಿ ನಡೆದಿದೆ. ಮಗ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿದ್ದಾರೆ. ಮಗಳು ಸಾವನ್ನಪ್ಪಿದ್ದು, ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಹಲ್ಲೆ ನಡೆಸಿದ ನಂತರ ತಾಯಿ ಕೂಡ ಆತ್ಮಹತ್ಯೆಗೆ ಶರಣಾಗಿದ್ದಾಳೆ ಎನ್ನಲಾಗಿದೆ.
ಬೇಗಮ್ ಎಂಬ ಮಹಿಳೆಯೇ ಮಕ್ಕಳಾದ ಶಮಬಾನು ಹಾಗೂ ಮಗ ಅಮಾನುಲ್ಲಾ ಮೇಲೆ ಹಲ್ಲೆ ನಡೆಸಿದ್ದಾಳೆ. ಕೂಲಿ ಕೆಲಸ ಮಾಡುತ್ತಿದ್ದ ಬೇಗಮ್, ಕ್ಷುಲ್ಲಕ ಕಾರಣಕ್ಕೆ ಮಕ್ಕಳೊಂದಿಗೆ ಜಗಳ ಮಾಡಿದ್ದಾಳೆ. ಸಿಟ್ಟಿನಲ್ಲಿ ಮಲಗಿದ್ದ ಇಬ್ಬರ ಮೇಲೆಯೂ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾಳೆ. ಅಕ್ಕಪಕ್ಕದವರು ಈ ಮನೆಯಲ್ಲಿ ಪದೇ ಪದೇ ಜಗಳವಾಗುತ್ತಿರುವುದರಿಂದ ತಲೆ ಕೆಡಿಸಿಕೊಂಡಿರಲಿಲ್ಲ. ಬೆಳಿಗ್ಗೆ ಎಷ್ಟೇ ಹೊತ್ತಾದರೂ ಬಾಗಿಲು ತೆರೆಯದ ಹಿನ್ನೆಲೆಯಲ್ಲಿ ಸಂಬಂಧಿಕರು ಮನೆಯೊಳಗೆ ನೋಡಿದಾಗ ಈ ಸಂಗತಿ ಬೆಳಕಿಗೆ ಬಂದಿದೆ. ಗಾಯಗೊಂಡು ನರಳಾಡುತ್ತಿದ್ದ ಅಮಾನುಲ್ಲನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಕುರಿತು ಹರಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.