ಬಾಗಲಕೋಟೆ: ವಿಶ್ವಪಾರಂಪರಿಕ ತಾಣಗಳಲ್ಲಿ ಒಂದಾದ ಪಟ್ಟದಕಲ್ಲು, ಕಲೆ ಮತ್ತು ವಾಸ್ತುಶಿಲ್ಪಕ್ಕೆ ಹೆಸರಾಗಿದೆ. ಚಾಲುಕ್ಯರ ಆಳ್ವಿಕೆಯ ಕಾಲದಲ್ಲಿ ಉಚ್ಛಾಯ ಸ್ಥಿತಿಯಲ್ಲಿತ್ತು ಎಂಬುವುದಕ್ಕೆ ಇಲ್ಲಿ ಕೆತ್ತನೆಯಾದ ಕಲಾಕೃತಿಗಳೇ ಸಾಕ್ಷಿ. 7ನೇ ಶತಮಾನದಲ್ಲಿ ನಿರ್ಮಾಣವಾದ ಕಲಾಕೃತಿಗಳಲ್ಲಿ ಒಂದಾದ ಒಂದು ಕಲಾಕೃತಿ ಸದ್ಯ ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.
ಈ ಸಂಸತ್ ಭವನದಲ್ಲಿ ಪ್ರತಿಷ್ಠಾಪಿಸಲ್ಪಡುತ್ತಿರುವ ರಾಜದಂಡ (ಸೆಂಗೋಲ್) ಸದ್ಯ ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ. ಆದರೆ, ಇದೆಲ್ಲದರ ಮಧ್ಯೆ ಈ ಸೆಂಗೋಲ್ ನಂಟು ಬಾಗಲಕೋಟೆ ಜಿಲ್ಲೆಗೆ ವ್ಯಾಪಿಸಿದೆ. ಬಾದಾಮಿ ತಾಲೂಕಿನ ಪಟ್ಟದಕಲ್ಲು ಗ್ರಾಮದ ವಿರೂಪಾಕ್ಷ ದೇವಾಲಯದ ಬಲ ಗೋಡೆಯ ಮೇಲೆ ಇದೇ (ರಾಜದಂಡ) ಸೆಂಗೋಲ್ ಪ್ರತಿರೂಪದ ಕಲಾಕೃತಿ ಎಲ್ಲರ ಗಮನ ಸೆಳೆಯುತ್ತಿದೆ.ಇದನ್ನು ನೋಡುವುದಕ್ಕೆ ಸದ್ಯ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಹರಿದು ಬರುತ್ತಿದ್ದಾರೆ.
ವೀರೂಪಾಕ್ಷ ದೇವಾಲಯದ ಬಲ ಗೋಡೆಯ ಮೇಲೆ ಕಲಾವಿದನಿಂದ ಕೆತ್ತಲ್ಪಟ್ಟ ಶಿವನ ಎಡಗೈಯಲ್ಲಿನ (ರಾಜದಂಡ) ಸೆಂಗೋಲ್ಗೆ ಸಾಮ್ಯತೆ ಹೊಂದಿದೆ. ಕಲಾಕೃತಿಯಲ್ಲಿ ನಾಟ್ಯರೂಪದ ಚತುರ್ಭುಜದ ಶಿವನ ಎಡಗೈನಲ್ಲಿ ಸೆಂಗೋಲ್ ಕಾಣಿಸುತ್ತಿದೆ. (ರಾಜದಂಡ) ಸೆಂಗೋಲ್ ಮೇಲೆ ನಂದಿಯ ಕೆತ್ತನೆಯಾಗಿದೆ. ಅಜ್ಞಾನದ ಸಂಕೇತವಾಗಿರುವ ಅಪಸ್ಮಾರ ಮೂರ್ತಿಯನ್ನ ನಾಶಪಡಿಸಿ, ದುಷ್ಟಶಕ್ತಿಯನ್ನ ಕಾಲಿನಿಂದ ನಿರ್ನಾಮ ಮಾಡುವ ರೂಪದಲ್ಲಿ ಶಿವನ ಮೂರ್ತಿಯಲ್ಲಿ ಕಲಾಕೃತಿ ಕೆತ್ತನೆಯಾಗಿದೆ.
ಚಾಲುಕ್ಯರ ಅರಸ ಎರಡನೇ ವಿಕ್ರಮಾದಿತ್ಯನ ಕಾಲದಲ್ಲಿ ಇದನ್ನು ಕಟ್ಟಿಸಲಾಗಿದೆ. ಕಂಚಿಯ ಪಲ್ಲವರ ಜೊತೆ ಯುದ್ದ ಗೆದ್ದ ನೆನಪಿಗಾಗಿ 2 ನೇ ವಿಕ್ರಮಾದಿತ್ಯನ ಮಹಾರಾಣಿ ಲೋಕಮಹಾದೇವಿ ಈ ವಿರೂಪಾಕ್ಷ ದೇವಾಲಯ ಕಟ್ಟಿಸಿದ್ದು, ದೇವಾಲಯದಲ್ಲಿ ಈ ಕಲಾಕೃತಿ ಕಂಡು ಬಂದಿದೆ. ಈ ರಾಜದಂಡಕ್ಕೆ ನಂದಿಧ್ವಜ ಅಂತಲೂ ಕರೆಯುತ್ತಾರೆ. ಸೆಂಗೋಲ್ 7ನೇ ಶತಮಾನದಲ್ಲಿ ಚಾಲನೆಯಲ್ಲಿತ್ತು ಎನ್ನುವುದಕ್ಕೆ ಇದು ಸಾಕ್ಷಿಯಾಗಿದೆ. ಸಂಸತ್ ನೂತನ ಭವನದ ರಾಜದಂಡ ಈಗ ಎಲ್ಲೆಡೆ ಸದ್ದು ಮಾಡುತ್ತಿದೆ. ಅದರ ರೂಪ ಚಾಲುಕ್ಯರ ರಾಜದಂಡಕ್ಕೆ ಸಾಮ್ಯತೆಯಿದ್ದು, ಸ್ಥಳೀಯರ ಹೆಮ್ಮೆಗೆ ಕಾರಣವಾಗಿದೆ.