ಹಾವೇರಿ: ಪಾಗಲ್ ಪ್ರೇಮಿಯೊಬ್ಬ ಪ್ರೀತಿಸಲು ನಿರಾಕರಿಸಿದ್ದಕ್ಕೆ ವಿದ್ಯಾರ್ಥಿನಿಯನ್ನು ಅಪಹರಿಸಿರುವ ಘಟನೆ ನಡೆದಿದೆ.
ಅಪಹರಿಸಿದ ಕೆಲವೇ ಗಂಟೆಗಳಲ್ಲಿ ವಿದ್ಯಾರ್ಥಿನಿಯನ್ನು ರಕ್ಷಿಸಿ ಹಾವೇರಿ ಪೊಲೀಸರು ಕರೆತಂದಿದ್ದಾರೆ. ಈ ಕುರಿತು ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬೆಳಿಗ್ಗೆ ಕಾಲೇಜಿಗೆ ತೆರಳುತ್ತಿದ್ದ ಬಿ.ಇಡಿ ವಿದ್ಯಾರ್ಥಿನಿಯನ್ನು ಹಾವೇರಿಯ ಓಲ್ಡ್ ಪೋಸ್ಟ್ ಆಫೀಸ್ ಹತ್ತಿರ ನೆರೆಮನೆ ನಿವಾಸಿ ವಿಷ್ಣು ತಗಡಿನಮನಿ ಎಂಬಾತ ಅಪಹರಿಸಿದ್ದಾನೆ. ಕೂಡಲೇ ಪೋಷಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಚ್ಚೆತ್ತುಕೊಂಡ ಪೊಲೀಸರು, ಯುವತಿ ರಕ್ಷಿಸಿದ್ದಾರೆ.
ಆರೋಪಿಯು ಯುವತಿಯನ್ನು ಮೋಟೆಬೆನ್ನೂರು ಹತ್ತಿರ ಬಿಟ್ಟು ಪರಾರಿಯಾಗಿದ್ದಾನೆ. ಫೋನ್ ಟ್ರ್ಯಾಕ್ ಮಾಡಿ ಪೊಲೀಸರು ಯುವತಿ ಪತ್ತೆ ಹಚ್ಚಿ ಕರೆತಂದಿದ್ದಾರೆ. ಯುವತಿ ಗೋಳಾಡಿದ್ದಾಳೆ. ಈತ ಕಳೆದ ಒಂದು ವರ್ಷದಿಂದ ಯುವತಿ ಬೆನ್ನು ಬಿದ್ದಿದ್ದ. ಹಲವು ಬಾರಿ ರಾಜಿ ಪಂಚಾಯ್ತಿ ಕೂಡ ನಡೆದಿದೆ. ಆ ವೇಳೆ ನಿಮ್ಮ ಮಗಳ ತಂಟೆಗೆ ಬರುವುದಿಲ್ಲ ಎಂದು ಹೇಳಿದ್ದ. ಆದರೂ ಯುವತಿ ಅಪಹರಿಸಿದ್ದಾನೆ. ಇಂಥ ಪಾಪಿಗಳಿಗೆ ಶಿಕ್ಷೆಯಾಗಬೇಕೆಂದು ಜನರು ಆಗ್ರಹಿಸಿದ್ದಾರೆ.